'ಪುನೀತ್ ನಮನ' ಕಾರ್ಯಕ್ರಮದಲ್ಲಿ ಪುನೀತ್ಗೆ ಇಷ್ಟವಿದ್ದ ತಿಂಡಿಗಳು ತಯಾರು
ಪುನೀತ್ ನಮನ ಕಾರ್ಯಕ್ರಮಕ್ಕೆ ಈಗಾಗಲೇ ಸಾಕಷ್ಟು ಗಣ್ಯರು ಆಗಮಿಸುತ್ತಿದ್ದಾರೆ. ಕೇವಲ ಗಣ್ಯರಿಗಷ್ಟೇ ಇಲ್ಲಿ ಅವಕಾಶವನ್ನು ಮಾಡಿಕೊಡಲಾಗಿದ್ದು, ಪಾಸ್ ಇಲ್ಲದ ಹೊರತಾಗಿ ಯಾರಿಗೂ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಅವಕಾಶ ಇಲ್ಲ. ಕಾರ್ಯಕ್ರಮಕ್ಕೆ ಎಲ್ಲಾ ರಿತೀಯ ಸಿದ್ಧತೆಗಳು ನಡೆದಿದ್ದು, ಮಧ್ಯಾಹ್ನ 3 ಗಂಟೆಯಿಂದ ಪುನೀತ್ ನಮನ ಕಾರ್ಯಕ್ರಮ ಆರಂಭವಾಗಲಿದೆ. ಸಂಜೆ 6 ಗಂಟೆಯವರೆಗೂ ಈ ಕಾರ್ಯಕ್ರಮ ನೆರವೇರಲಿದ್ದು, ನುಡಿ ನಮನ ಸಂಗೀತ ನಮನ ಕಾರ್ಯಕ್ರಮಗಳು ನೆರವೇರಲಿದೆ. ಈ ಕಾರ್ಯಕ್ರಮಕ್ಕೆ ಬರುವಂತಹ ಅತಿಥಿಗಳಿಗೆ ಉಪಹಾರದ ವ್ಯವಸ್ಥೆಯನ್ನು ಕೂಡ ಇದೀಗ ಮಾಡಲಾಗಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಈ ಪುನೀತ್ ನಮನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸುಮಾರು 2000 ಅತಿಥಿಗಳಿಗೆ ಲಘು ಉಪಹಾರದ ವ್ಯವಸ್ಥೆಯನ್ನು ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ತಯಾರು ಮಾಡಲಾಗುತ್ತಿದೆ. ಪುನೀತ್ 11ನೇ ದಿನದ ಕಾರ್ಯಕ್ಕೆ ಅಡುಗೆ ಸಿದ್ದಪಡಿಸಿದ ತಂಡವೇ ಇವತ್ತು ಕೂಡ ಅಡುಗೆ ಜವಬ್ದಾರಿಯನ್ನು ಹೊತ್ತುಕೊಂಡಿದೆ. ಪುನೀತ್ಗೆ ಪ್ರಿಯವಾದ ತಿನಿಸುಗಳನ್ನು ತಯಾರು ಮಾಡುತ್ತಿದ್ದು, ಸಾಕಷ್ಟು ಮೆನ್ಯುಗಳು ಇವತ್ತಿನ ಉಪಹಾರದಲ್ಲಿ ಇರಲಿದೆ.
ಪುನೀತ್ ಇಷ್ಟ ಪಟ್ಟು ಸೇವಿಸುತ್ತಿದ್ದ ಬಳ್ಳಾರಿ ಮಿರ್ಚಿ ಬಜ್ಜಿ, ಚಂಪಾಕಲಿ ಸ್ವೀಟ್, ಮದ್ದೂರು ವಡೆ, ಮೊಸರನ್ನ ಹಾಗೂ ಬರುವಂತಹ ಅತಿಥಿಗಳಿಗೆ ಟಿ, ಕಾಫಿ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಬರುವಂತಹ ಎಲ್ಲಾ ಗಣ್ಯಾತಿ ಗಣ್ಯರಿಗೂ ಲಘು ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದ್ದು, 6 ಗಂಟೆಯ ನಂತರ ಅಂದರೆ ಕಾರ್ಯಕ್ರಮ ಮುಗಿದ ಬಳಿಕ ಅತಿಥಿ ಗಣ್ಯರಿಗೆ ಉಪಹಾರ ಆಯೋಜನೆ ಮಾಡಲಾಗುತ್ತದೆ ಎಂದು ನಿರ್ಮಾಪಕ ಸಾರಾ ಗೋವಿಂದು ತಿಳಿಸಿದ್ದಾರೆ.

ಹಾಗೇ ವಿವಿಐಪಿ, ವಿಐಪಿ, ಅತಿಥಿಗಳಿಗೆ ಒಟ್ಟು ಮೂರು ಕೌಂಟರ್ಗಳನ್ನು ಮಾಡಲಾಗಿದ್ದು, ಈ ಮೂಲಕವೇ ಲಘು ಉಪಹಾರ ನೀಡಲು ತಯಾರಿ ಮಾಡಿಕೊಳ್ಳಲಾಗಿದೆ. ಜೊತೆಗೆ ಗಾಯತ್ರಿ ವಿಹಾರದ ಅಡುಗೆ ಮಾಡುವ ಸ್ಥಳದಲ್ಲಿ ಮಿನಿ ಉಪಹಾರವನ್ನು ಅಡುಗೆ ಭಟ್ಟರು ತಯಾರು ಮಾಡುತ್ತಿದ್ದು, ಸುಮಾರು 50ಕ್ಕೂ ಹೆಚ್ಚು ಅಡುಗೆ ಬಾಣಸಿಗರು ಇವತ್ತು ಅಡುಗೆ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಇನ್ನೂ ಇವತ್ತಿನ ಕಾರ್ಯಕ್ರಮದಲ್ಲಿ ಈಡೀ ದೊಡ್ಮನೆ ಕುಟುಂಬ ಭಾಗಿಯಾಗಲಿದೆ. ಇದರ ಜೊತೆಗೆ 2000 ಗಣ್ಯರು ಆಗಮಿಸುವ ಅಂದಾಜು ಮಾಡಲಾಗಿದ್ದು, ಕಾರ್ಯಕ್ರಮ ಮೊದಲಿಗೆ ಸ್ಯಾಕ್ಸೋಫೋನ್ ಮೂಲಕ ಆರಂಭವಾಗುತ್ತೆ. ನಂತರ ನಾಗೇಂದ್ರ ಪ್ರಸಾದ್ ಅವರು ಬರೆದಿರುವ ಹಾಡು ಪ್ರಸಾರವಾಗುತ್ತೆ. ಬಳಿಕ ಪುನೀತ್ ಜೀವನದ ಕುರಿತಾದ 10 ನಿಮಿಷಗಳ ವೀಡಿಯೋ ಪ್ಲೇ ಆಗಲಿದೆ. ತದನಂತರದಲ್ಲಿ ಗುರುಕಿರಣ್ ಅವರಿಂದ ಸಂಗೀತ ನಮನ ಕಾರ್ಯಕ್ರಮ ಆರಂಭವಾಗಲಿದ್ದು, ಬಳಿಕ ನೆರೆದಂತಹ ಎಲ್ಲರೂ ಕ್ಯಾಂಡಲ್ ಬೆಳಗಿ ಬೆಳಕಿನ ನಮನವನ್ನು ಮಾಡಲಿದ್ದಾರೆ. ಹಾಗೇ ಪುನೀತ್ ಪುತ್ಥಳಿಗೆ ಗಣ್ಯರು ಪುಷ್ಪನಮನ ನೆರವೇರಿಸಲಿದ್ದಾರೆ.


Click it and Unblock the Notifications











