ಪುನೀತ್ ನಮನ ಕಾರ್ಯಕ್ರಮದಲ್ಲಿ ಅನಾವರಣಗೊಂಡ ಪ್ರತಿಮೆ ವಿಶೇಷತೆ ಏನು
ಪುನೀತ್ ರಾಜ್ಕುಮಾರ್ ಸಾವು ಈಗಲೂ ಎಲ್ಲರನ್ನೂ ಕಾಡುತ್ತಿದೆ. ಮೊನ್ನೆವರೆಗೂ ನಮ್ಮೊಂದಿಗಿದ್ದ ಪುನೀತ್ ಈಗ ಇಲ್ಲ ಅನ್ನೋದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ನೋವಿನ ನಡುವೆಯೇ ಪುನೀತ್ ರಾಜ್ಕುಮಾರ್ಗೆ ಮಾಡಬೇಕಾದ ಎಲ್ಲಾ ಕಾರ್ಯಗಳನ್ನು ಕುಟುಂಬ ಸದಸ್ಯರು, ಹಾಗೂ ಅಭಿಮಾನಿಗಳು ಮಾಡಿದ್ದಾರೆ. ಇವತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿ ಕಡೆಯಿಂದ ಪುನೀತ್ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಗಣ್ಯಾತಿ ಗಣ್ಯರು ಈ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ.
ಪುನೀತ್ ನಮನ ಕಾರ್ಯಕ್ರಮದಲ್ಲಿ ವಿಶೇಷವಾಗಿ ತಯಾರಾಗಿರುವ ಪ್ರತಿಮೆಯೊಂದು ಅನಾವರಣ ಗೊಂಡಿದೆ. ಈ ಪ್ರತಿಮೆ ಸಾಕಷ್ಟು ವಿಶೇಷತೆಯಿಂದ ಕೂಡಿದೆ. ಈ ಪ್ರತಿಮೆಯನ್ನು ಹೆಸರಾಂತ ಕಲಾವಿದ ಹಾಗೂ ಅದೆಷ್ಟೋ ಸಿನಿಮಾಗಳಿಗೆ ಅದ್ಧೂರಿಯಾಗಿ ಸೆಟ್ ಹಾಕಿ ಹೆಸರುವಾಸಿ ಆಗಿರುವ ಮೋಹನ್ ಬಿ ಕೆರೆಯವರು ತಯಾರು ಮಾಡಿದ್ದಾರೆ. ಸುಮಾರು 10 ದಿನಗಳಿಂದಲೂ ಈ ಪ್ರತಿಮೆಗಾಗಿ ಕೆಲಸಮಾಡುತ್ತಿರುವ ಮೋಹನ್ ಬಿ ಕೆರೆಯವರು ಬಹಳ ಸುಂದರವಾಗಿ ಪುನೀತ್ ರೂಪವನ್ನು ಪುತ್ಥಳಿಯಲ್ಲಿ ಮೂಡಿಸಿದ್ದಾರೆ.
ಇದು ಅಂತಿಂತ ಪ್ರತಿಮೆಯಲ್ಲ. ಬದಲಿಗೆ 4 ಅಡಿಯಲ್ಲಿ ಮೂಡಿಬಂದಿರುವ ಪ್ರತಿಮೆ. ಪುನೀತ್ ನಮನ ಕಾರ್ಯಕ್ರಮದಲ್ಲಿ ಈ ಪುತ್ಥಳಿ ಅನಾವರಣ ಗೊಂಡಿದೆ. ಇಂದು ಬೆಳಗ್ಗೆಯೇ ಈ ಪ್ರತಿಮೆ ಅರಮನೆ ಮೈದಾನ ಪ್ರವೇಶಿಸಿದ್ದು, ಜಾಗರೂಕತೆಯಿಂದ ಇಡಲಾಗಿತ್ತು. ಪುನೀತ್ ಅವರ ಈ ಪ್ರತಿಮೆಯು 4 ಅಡಿ ಅಗಲ, 4 ಅಡಿ ಎತ್ತರ ಹಾಗೂ 40 ಕೆಜಿ ತೂಕದ್ದಾಗಿದ್ದು, ಬಹಳ ವಿಶೇಷವಾಗಿ ಮೂಡಿಬಂದಿದೆ.

ಪುನೀತ್ ನಿಧನ ಬಳಿಕ ಅವರ ಪ್ರತಿಮೆಗಾಗಿ ಸಾಕಷ್ಟು ಆರ್ಡರ್ಗಳು ಬರುತ್ತಿವೆಯಂತೆ. ಇದರ ನಡುವೇ ಪುನೀತ್ ನಮನ ಕಾರ್ಯಕ್ರಮಕ್ಕಾಗಿಯೇ ಈ ವಿಶೇಷ ಪ್ರತಿಮೆಯನ್ನು ಮೋಹನ್ ಬಿ ಕೆರೆ ಯವರು ತಯಾರಿ ಮಾಡಿದ್ದಾರೆ.
ಇನ್ನು ಪುನೀತ್ ನಮನ ಕಾರ್ಯಕ್ರಮ ಈಗಾಗಲೇ ಆರಂಭವಾಗಿದ್ದು, ಸಾಕಷ್ಟು ಗಣ್ಯರು ಆಗಮಿಸುತ್ತಿದ್ದಾರೆ. ಸ್ಯಾಂಡಲ್ವುಡ್ ಸೇರಿದಂತೆ ಪರ ಭಾಷಾ ಕಲಾವಿದರು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ನುಡಿ ನಮನ, ಸಂಗೀತ ನಮನ, ದೀಪ ಬೆಳಗೋ ಮೂಲಕ ಪುನೀತ್ಗೆ ಈ ಕಾರ್ಯಕ್ರಮದಲ್ಲಿ ಗಣ್ಯಾತಿ ಗಣ್ಯರು ನಮನ ಸಲ್ಲಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಅಭಿಮಾನಿಗಳಿಗೆ ಅವಕಾಶ ಇಲ್ಲ. ಕೇವಲ ಅತಿಥಿಗಳಿಗಷ್ಟೆ ಅವಕಾಶ ಇದ್ದು, ಪುನೀತ್ ಅಭಿಮಾನಿಗಳು ಇದರಿಂದ ಕೊಂಚ ಬೇಸರಗೊಂಡಿದ್ದಾರೆ. ಇದಕ್ಕೆ ಪ್ರತಿಕ್ರೀಯಿಸಿದ ನಿರ್ಮಾಪಕ ಸಾ ರಾ ಗೋವಿಂದು ಅಭಿಮಾನಿಗಳಿಗೂ ಪುನೀತ್ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತೆ, ಈ ತಿಂಗಳು ಅದು ಸಾಧ್ಯವಾಗೋದಿಲ್ಲ. ಮುಂದಿನ ತಿಂಗಳು ಒಳ್ಳೆ ದಿನ ಹಾಗೂ ಜಾಗ ನೋಡಿ ಮಾಡೋಣ ಎಂದಿದ್ದಾರೆ. ಈ ಸುದ್ದಿ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ.


Click it and Unblock the Notifications











