'ಜಾಕಿ' ರೀ-ರಿಲೀಸ್ ಆಗಿ ಸಕ್ಸಸ್; ಅಪ್ಪು ನಟನೆಯ ಮತ್ತೊಂದು ಸಿನಿಮಾ ತೆರೆಗಪ್ಪಳಿಸಲು ಸಜ್ಜು
ಇತ್ತೀಚೆಗೆ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಜಾಕಿ' ಸಿನಿಮಾ ರೀ-ರಿಲೀಸ್ ಸಕ್ಸಸ್ ಕಂಡಿತ್ತು. ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಹಳೇ ಸಿನಿಮಾ ಹೊಸ ರೂಪದಲ್ಲಿ ಪ್ರೇಕ್ಷಕರ ಮುಂದೆ ಬಂದು ರಂಜಿಸಿತ್ತು. ಆ ಬಳಿಕ ಅಪ್ಪು ನಟನೆಯ ಹಿಟ್ ಸಿನಿಮಾಗಳನ್ನು ಮುಂದಿನ ದಿನಗಳಲ್ಲಿ ಮತ್ತೆ ತೆರೆಗೆ ತರುವುದಾಗಿ ಕೆಆರ್ಜಿ ಸ್ಟುಡಿಯೋ ಸಂಸ್ಥೆ ಹೇಳಿತ್ತು.
ಪುನೀತ್ ರಾಜ್ಕುಮಾರ್ ಹೀರೊ ಆಗಿ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು. ಪವರ್ ಸ್ಟಾರ್ ಆಗಿ ತೆರೆಮೇಲೆ ಅಬ್ಬರಿಸಿದ್ದರು. ಸದ್ಯ ದೇಶದಲ್ಲಿ ಲೋಕಸಭೆ ಚುನಾವಣೆ, ಐಪಿಎಲ್ ಕಾವು ಜೋರಾಗಿದೆ. ಹಾಗಾಗಿ ದೊಡ್ಡ ಸಿನಿಮಾಗಳು ಬಿಡುಗಡೆ ಆಗುತ್ತಿಲ್ಲ. ಒಳ್ಳೆ ಸಿನಿಮಾಗಳಿಲ್ಲದೇ ಥಿಯೇಟರ್ಗಳು ಪ್ರೇಕ್ಷಕರ ಬರ ಎದುರಿಸುತ್ತಿವೆ.

ಮೇ 10ಕ್ಕೆ ಪುನೀತ್ ರಾಜ್ಕುಮಾರ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ಅಂಜನಿಪುತ್ರ' ಚಿತ್ರವನ್ನು ರೀ ರಿಲೀಸ್ ಮಾಡಲಾಗುತ್ತಿದೆ. ಈ ಬಗ್ಗೆ ಫಿಲ್ಮಿಬೀಟ್ಗೆ ಚಿತ್ರದ ನಿರ್ಮಾಪಕ ಎಂ.ಎನ್ ಕುಮಾರ್ ಮಾಹಿತಿ ನೀಡಿದ್ದಾರೆ. 7 ವರ್ಷಗಳ ಹಿಂದೆ ತೆರೆಕಂಡಿದ್ದ ಆಕ್ಷನ್ ಫ್ಯಾಮಿಲಿ ಡ್ರಾಮಾ ಚಿತ್ರವನ್ನು ಮತ್ತೆ ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ. ಅಭಿಮಾನಿಗಳು ಬಹಳ ದಿನಗಳಿಂದ 'ಅಂಜನಿಪುತ್ರ' ರೀ-ರಿಲೀಸ್ ಮಾಡುವಂತೆ ಕೇಳುತ್ತಿದ್ದರು. ಹಾಗಾಗಿ ಈ ಪ್ರಯತ್ನ ಎಂದಿದ್ದಾರೆ.
ತಮಿಳಿನ 'ಪೂಜೈ' ಸಿನಿಮಾ ರೀಮೇಕ್ ಇದು. ಎ. ಹರ್ಷ ನಿರ್ದೇಶನದ ಚಿತ್ರದಲ್ಲಿ ಘಟಾನುಘಟಿ ಕಲಾವಿದರು ನಟಿಸಿದ್ದರು. ಪುನೀತ್ ತಾಯಿ ಪಾತ್ರದಲ್ಲಿ ರಮ್ಯಾಕೃಷ್ಣ ನಟಿಸಿದ್ದರು. ಇನ್ನುಳಿದಂತೆ ಚಿಕ್ಕಣ್ಣ, ಆರ್ಮುಗ ರವಿಶಂಕರ್, ಮುಖೇಶ್ ತಿವಾರಿ, ಸಾಧುಕೋಕಿಲ ಚಿತ್ರದ ತಾರಾಗಣದಲ್ಲಿದ್ದರು. 'ಅಂಜನಿಪುತ್ರ' ಚಿತ್ರಕ್ಕೆ ರವಿ ಬಸ್ರೂರು ಮ್ಯೂಸಿಕ್ ಕಂಪೋಸ್ ಮಾಡಿದ್ದರು.
'ಬಾರಿ ಖುಷಿ ಮಾರೆ ನಂಗೆ' ಸೇರಿದಂತೆ ಚಿತ್ರದ ಎಲ್ಲಾ ಹಾಡುಗಳು ಹಿಟ್ ಆಗಿತ್ತು. ಮಕ್ಕಳಿಗೆ ಬೇಸಿಗೆ ರಜೆ ಕೂಡ ಇರುವುದರಿಂದ ಮೇ 10ಕ್ಕೆ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಮುಂದಾಗಿದೆ. ಅಪ್ಪು- ರಶ್ಮಿಕಾ ಜೋಡಿ ಜೋಡಿ ಪ್ರೇಕ್ಷಕರಿಗೆ ಮೋಡಿ ಮಾಡುವಂತಿದೆ. 50ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ 'ಅಂಜನಿಪುತ್ರ' ಸಿನಿಮಾ ಬಿಡುಗಡೆ ಮಾಡಲು ನಿರ್ಮಾಪಕರು ಮನಸ್ಸು ಮಾಡಿದ್ದಾರೆ. ಬೇಡಿಕೆಗೆ ತಕ್ಕಂತೆ ಸ್ಕ್ರೀನ್ಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ಹೇಳಿದ್ದಾರೆ.

ಅಂಜನಾ ದೇವಿಯ ತುಂಬು ಕುಟುಂಬದ ಕಥೆ ಈ ಚಿತ್ರದಲ್ಲಿದೆ. ಯಾವುದೋ ಕಾರಣಕ್ಕೆ ಆಕೆಯ ಮಗ ವಿರಾಜ್ ಕುಟುಂಬದಿಂದ ದೂರಾಗಿ ಬೆಂಗಳೂರಿನ ಮಾರ್ಕೆಟ್ವೊಂದರಲ್ಲಿ ವಾಸವಾಗಿರುತ್ತಾನೆ. ಅದಾಗಲೇ ಒಮ್ಮೆ ವಿರಾಜ್ ಕೈಲಿ ಒದೆ ತಿಂದ ಭೈರವ ಮತ್ತವನ ಗ್ಯಾಂಗ್ ಮತ್ತೆ ಆತನ ಕೈಗೆ ಸಿಕ್ಕಿ ಬೀಳುತ್ತಾರೆ. ತನ್ನ ಕುಟುಂಬದವರ ತಂಟೆಗೆ ಬಂದವರನ್ನು ವಿರಾಜ್ ಸುಮ್ನೆ ಬಿಡಲ್ಲ. ಈ ನಡುವೆ ಗೀತಾ ಜೊತೆ ಹಾಡು ಡ್ಯುಯೆಟ್ಟು ಇದೆ.
'ಅಂಜನಿಪುತ್ರ' ಬಿಡುಗಡೆ ಬೆನ್ನಲ್ಲೇ ಚಿತ್ರದ ಡೈಲಾಗ್ವೊಂದು ವಿವಾದ ಸೃಷ್ಟಿಸಿತ್ತು. ವಕೀಲರ ಕುರಿತು ಚಿತ್ರದಲ್ಲಿದ್ದ ಅವಹೇಳನಕಾರಿ ಸಂಭಾಷಣೆ ವಿರುದ್ಧ ವಕೀಲರಾದ ಜಿ. ನಾರಾಯಣಸ್ವಾಮಿ ಎಂಬುವವರು ದೂರು ದಾಖಲಿಸಿದ್ದರು. ಹಾಗಾಗಿ ಸಿನಿಮಾ ಪ್ರದರ್ಶನ ನಿಲ್ಲಿಸುವಂತೆ ಕೋರ್ಟ್ ಆದೇಶ ನೀಡಿತ್ತು. ಕೊನೆಗೆ ವಿವಾದ ಬಗೆಹರಿದು ವಿವಾದಿತ ಸಂಭಾಷಣೆಗೆ ಕತ್ತರಿ ಬಿದ್ದ ಬಳಿಕ ಸಿನಿಮಾ ಪ್ರದರ್ಶನ ಮುಂದುವರೆದಿತ್ತು.
ಆಗ ಸಿನಿಮಾ ಬಿಡುಗಡೆ ಆಗಿದ್ದಾಗ ನಮಗೆ ಕೊಂಚ ಹಿನ್ನೆಡೆ ಆಗಿತ್ತು. ಅಭಿಮಾನಿಗಳು ಕೂಡ ಕೇಳುತ್ತಿದ್ದರು. ರಮ್ಯಾಕೃಷ್ಣ, ಅಪ್ಪು ಸರ್, ರಶ್ಮಿಕಾ ಎಲ್ಲರೂ ನಟಿಸಿರುವ ಸಿನಿಮಾ. ಫ್ಯಾಮಿಲಿ ಎಂಟರ್ಟೈನರ್. ಹಾಗಾಗಿ ಈ ಸಿನಿಮಾ ರೀ ರಿಲೀಸ್ ಮಾಡುತ್ತಿದ್ದೇವೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.


Click it and Unblock the Notifications











