'ಯುವರತ್ನ' ಯಶಸ್ಸಿನ ಬೆನ್ನಲ್ಲೇ ಜಗ್ಗೇಶ್ ಜೊತೆ ರಾಯರ ದರ್ಶನಕ್ಕೆ ಹೊರಟ ಪುನೀತ್ ಮತ್ತು ತಂಡ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸದ್ಯ ಯುವರತ್ನ ಯಶಸ್ಸಿನ ಖುಷಿಯಲ್ಲಿದ್ದಾರೆ. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಬಹುತೇಕ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಕೊರೊನಾ ಹೊಸ ನಿಯಮದ ವಿರುದ್ಧ ಹೋರಾಡಿ ಗೆಲುವು ಸಾಧಿಸಿರುವ ಯುವರತ್ನ ತಂಡ ಈಗ ರಾಯರ ದರ್ಶನಕ್ಕೆಂದು ಮಂತ್ರಾಲಯದ ಕಡೆ ಹೊರಟಿದ್ದಾರೆ.
Recommended Video
ಪವರ್ ಸ್ಟಾರ್ ಮತ್ತು ತಂಡಕ್ಕೆ ನವರಸನಾಯಕ ಜಗ್ಗೇಶ್ ಸಾಥ್ ನೀಡಿದ್ದಾರೆ. ಜಗ್ಗೇಶ್ ರಾಯರ ಅಪ್ಪಟ್ಟ ಭಕ್ತ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಜಗ್ಗೇಶ್ ಆಗಾಗ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಮಾಡಿ ಧನ್ಯರಾಗುತ್ತಾರೆ.
ಇದೀಗ ಪವರ್ ಸ್ಟಾರ್ ಜೊತೆ ಹೊರಟ ಸಂತಸದಲ್ಲಿದ್ದಾರೆ. ಜಗ್ಗೇಶ್, ಪುನೀತ್ ರಾಜ್ ಕುಮಾರ್, ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತು ಕಾರ್ತಿಕ್ ಗೌಡ ಜೊತೆ ಪಯಣ ಮಾಡುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

'ಮಂತ್ರಾಲಯ ರಾಯರ ಬೃಂದಾವನದ ದರ್ಶನಕ್ಕೆ ಸಹೋದರ ಪುನೀತ, ಸಂತೋಷ ಆನಂದರಾಮ, ಕಾರ್ತಿಕ್ ಜೊತೆ ಹೊರಟೆ' ಎಂದು ಬರೆದುಕೊಂಡಿದ್ದಾರೆ. ಜಗ್ಗೇಶ್ ಫೋಟೋ ಶೇರ್ ಮಾಡುತ್ತಿದ್ದಂತೆ ಅಭಿಮಾನಿಗಳು ಒಳ್ಳೆಯದಾಗಲಿ ಎಂದು ವಿಶ್ ಮಾಡುತ್ತಿದ್ದಾರೆ.
ನಟ ಜಗ್ಗೇಶ್ ಪ್ರತಿವರ್ಷ ತಮ್ಮ ಹುಟ್ಟುಹಬ್ಬವನ್ನು ಮಂತ್ರಾಲಯದಲ್ಲಿ ಆಚರಣೆ ಮಾಡಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಹೋಗಿರಲಿಲ್ಲ. ಇದೀಗ ಪುನೀತ್ ಜೊತೆ ರಾಯರ ದರ್ಶನಕ್ಕೆ ಹೋಗುತ್ತಿದ್ದಾರೆ. ಇನ್ನು ಪವರ್ ಸ್ಟಾರ್ ಕೂಡ ಆಗಾಗ ಮಂತ್ರಾಲಯಕ್ಕೆ ಭೇಟಿ ನೀಡುತ್ತಿರುತ್ತಾರೆ. ಕಳೆದ ಬಾರಿ ಮಂತ್ರಾಲಯಕ್ಕೆ ಭೇಟಿ ನೀಡಿದ್ದ ಅಪ್ಪು ಡಾ.ರಾಜ್ ಕುಮಾರ್ ಹಾಡಿರುವ ರಾಯರ ಹಾಡು ಹಾಡಿ ಸಂತಸ ಪಟ್ಟಿದ್ದರು.
ಅಂದಹಾಗೆ ಇತ್ತೀಚಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಮಂತ್ರಾಲಯಕ್ಕೆ ಭೇಟಿ ನೀಡಿದ್ದರು. ರಾಬರ್ಟ್ ಸೂಪರ್ ಹಿಟ್ ಆದ ಖುಷಿಯಲ್ಲಿ ದರ್ಶನ್ ರಾಯರ ದರ್ಶನ ಮಾಡಿ ಧನ್ಯರಾಗಿದ್ದರು. ಇದೀಗ ಪುನೀತ್ ರಾಜ್ ಕುಮಾರ್ ಮತ್ತು ತಂಡ ಭೇಟಿ ನೀಡುತ್ತಿದೆ.
ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿರುವ ಕಾರಣ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಆಸನ ಭರ್ತಿಗೆ ಅನುಮತಿ ನೀಡಿದ್ದ ಸರ್ಕಾರ ಮತ್ತೆ ಚಿತ್ರರಂಗದ ಒತ್ತಡಕ್ಕೆ ಮಣಿದು ಶೇ.100ರಷ್ಟು ಆಸನ ಭರ್ತಿಗೆ ಅವಕಾಶ ಮಾಡಿಕೊಟ್ಟಿದೆ. ಈ ನಿಯಮ ಏಪ್ರಿಲ್ 7ರ ವರೆಗೂ ಜಾರಿಯಲ್ಲಿರಲಿದೆ.


Click it and Unblock the Notifications











