'ಮತ್ತೊಬ್ಬ ಸರಸ್ವತಿ ಪುತ್ರರನ್ನ ಕಳೆದುಕೊಂಡ್ವಿ': ರಾಜನ್ ನಿಧನಕ್ಕೆ ಪುನೀತ್ ಸಂತಾಪ
ಕನ್ನಡ ಚಿತ್ರರಂಗದ ದಿಗ್ಗಜ ಸಂಗೀತ ನಿರ್ದೇಶಕ ರಾಜನ್ ಅವರು ಭಾನುವಾರ ರಾತ್ರಿ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕನ ಸಾವಿಗೆ ಇಡೀ ಚಿತ್ರರಂಗ ಮರುಗಿದೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಟ್ವಿಟ್ಟರ್ ಮೂಲಕ ಸಂತಾಪ ಸೂಚಿಸಿದ್ದಾರೆ. ''ಮತ್ತೊಬ್ಬ ಸರಸ್ವತಿ ಪುತ್ರರನ್ನ ನಾವೆಲ್ಲ ಕಳೆದುಕೊಂಡಿದ್ದೀವಿ, ನಮ್ಮ ಭಾಗ್ಯವೇನೆಂದರೆ ನಾವು ಪಿ.ಆರ್.ಕೆ ಆಡಿಯೋ ಲಾಂಚ್ ಮಾಡಿದಾಗ ರಾಜನ್ ಸರ್ ಅವರು ಬಂದು ಆಶೀರ್ವಾದ ಮಾಡಿದ್ದರು. ಅವರು ಸಂಯೋಜಿಸಿದ ಹಾಡುಗಳು ಕರ್ನಾಟಕದಲ್ಲಿ ಯಾರು ಮರಿಯೋದಕ್ಕಾಗಲ್ಲ. ಅವರ ಆತ್ಮಕ್ಕೆ ಶಾಂತಿಸಿಗಲಿ'' ಎಂದು ಪ್ರಾರ್ಥಿಸಿದ್ದಾರೆ.
ರಾಜನ್ ಮತ್ತು ನಾಗೇಂದ್ರ ಸಹೋದರರು. ರಾಜನ್-ನಾಗೇಂದ್ರ ಜೋಡಿ ಐದು ದಶಕಗಳ ಕಾಲ ಚಿತ್ರರಂಗದಲ್ಲಿ ಯಶಸ್ವಿ ಸಂಗೀತ ನಿರ್ದೇಶಕರು ಎನಿಸಿಕೊಂಡಿದ್ದರು. ಕನ್ನಡ-ತೆಲುಗಿನಲ್ಲಿ ಇವರಿಬ್ಬರು ಸುಮಾರು 375ಕ್ಕೂ ಅಧಿಕ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಕನ್ನಡದಲ್ಲಿಯೇ 200ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಒದಗಿಸಿದ್ದಾರೆ.

ಮೈಸೂರಿನ ಶಿವರಂಪೇಟೆನ ಮಧ್ಯಮ ವರ್ಗದ ಸಂಗೀತ ಕುಟುಂಬದಲ್ಲಿ ರಾಜನ್ ಮತ್ತು ನಾಗೇಂದ್ರ ಜನಿಸಿದರು. ಅವರ ತಂದೆ ರಾಜಪ್ಪ ಹಾರ್ಮೋನಿಯಂ ಮತ್ತು ಕೊಳಲು ವಾದಕರಾಗಿದ್ದರು. ಮೂಕ ಚಲನಚಿತ್ರಗಳಿಗೆ ಅವರು ಹಿನ್ನೆಲೆ ಸಂಗೀತ ನೀಡುತ್ತಿದ್ದರು.
ನ್ಯಾಯವೇ ದೇವರು, ಗಂಧದ ಗುಡಿ, ದೇವರ ಗುಡಿ, ಭಾಗ್ಯವಂತರು, ಎರಡು ಕನಸು, ನಾ ನಿನ್ನಾ ಮರೆಯಲಾರೆ, ನಾ ನಿನ್ನಾ ಬಿಡಲಾರೆ, ಹೊಂಬಿಸಿಲು, ಬಯಲು ದಾರಿ, ಪಾವನಾ ಗಂಗಾ, ಗಿರಿ ಕನ್ಯೆ ಅಂತಹ ಚಿತ್ರಗಳಿಗೆ ರಾಜನ್-ನಾಗೇಂದ್ರ ಅವರೇ ಸಂಗೀತ ನೀಡಿದ್ದಾರೆ.


Click it and Unblock the Notifications











