ಸಂಜೆ ಮಗಳು ಧೃತಿ ಆಗಮನ: ಶನಿವಾರವೇ ಅಪ್ಪು ಅಂತ್ಯಸಂಸ್ಕಾರ
ನಟ ಪುನೀತ್ ರಾಜ್ಕುಮಾರ್ ನಿಧನದಿಂದಾಗಿ ಹಲವರು ಕುಗ್ಗಿ ಹೋಗಿದ್ದಾರೆ. ಅಂತ್ಯಸಂಸ್ಕಾರಕ್ಕೂ ಮುನ್ನ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬಂದು ಅಂತಿಮ ದರ್ಶನವನ್ನು ಪಡೆದುಕೊಳ್ಳುತ್ತಿದ್ದಾರೆ. ನಿನ್ನೆ ರಾತ್ರಿಯಿಂದಲೂ ಕಂಠೀರವ ಸ್ಟೇಡಿಯಂನತ್ತ ಲಕ್ಷಾಂತರ ಮಂದಿ ಆಗಮಿಸುತ್ತಿದ್ದಾರೆ. ಇನ್ನು ಪುನೀತ್ ಅವರ ಅಂತ್ಯಸಂಸ್ಕರಕ್ಕೂ ಮುನ್ನ ಮಗಳು ಧೃತಿ ಬರುವುದನ್ನು ಕುಟುಂಬ ಸದಸ್ಯರು ಎದುರು ನೋಡುತ್ತಿದ್ದಾರೆ.
ಎರಡು ತಿಂಗಳ ಹಿಂದೆಯಷ್ಟೇ ವಿಧ್ಯಾಭ್ಯಾಸಕ್ಕಾಗಿ ಅಮೇರಿಕಗೆ ತೆರಳಿದ್ದರು ಧೃತಿ. ಈಗ ಅಪ್ಪನ ಸಾವಿನ ಸುದ್ದಿ ಕೇಳಿ ಅಮೆರಿಕಾದ ನ್ಯೂಯಾರ್ಕ್ ನಿಂದ ಜರ್ಮನಿ ಮೂಲಕ ಆಗಮಿಸುತ್ತಿದ್ದಾರೆ. ಧೃತಿ ಬರುವುದು ತಡವಾಗಬಹುದು ಎಂಬ ಕಾರಣಕ್ಕೆ ಪುನೀತ್ ಅಂತ್ಯಸಸ್ಕಾರವನ್ನು ಭಾನುವಾರ ಮಾಡುವುದಾಗಿ ತಿಳಿಸಲಾಗಿತ್ತು. ಆದರೆ ಮಗಳು ಧೃತಿ ಇಂದು ಸಂಜೆಯೆ ಬೆಂಗಳೂರು ಬಂದು ತಲುಪುವ ಸಾಧ್ಯತೆ ಇದೆ. ಹೀಗಾಗಿ ಮಗಳನ್ನು ಬೇಗ ಕರೆತರಲು ಸಿದ್ಧತೆ ಮಾಡಲಾಗುತ್ತಿದೆ.
ಇಂದು ಮಧ್ಯಾಹ್ನ ದೆಹಲಿ ಏರ್ಪೋರ್ಟ್ಗೆ ಧೃತಿ ಆಗಮಿಸಲಿದ್ದಾರೆ. ದೆಹಲಿಯಿಂದ ಧೃತಿ ಅವರನ್ನು ಕರೆತರಲು ವಿಶೇಷ ವಿಮಾನದ ವ್ಯವಸ್ಥೆಮಾಡಲಾಗಿದೆ. ಹೀಗಾಗಿ ಸಂಜೆ 5.30ಕ್ಕೆ ಧೃತಿ ಕಂಠೀರವ ಸ್ಟೇಡಿಯಂಗೆ ಆಗಮಿಸಲಿದ್ದಾರೆ. ಹೀಗಾಗಿ ಇವತ್ತೆ ಅಂತ್ಯಸಂಸ್ಕಾರ ಮಾಡಲು ಕುಟುಂಬ ಸದಸ್ಯರು ತೀರ್ಮಾನಿಸಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಕೂಡ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಅಂತ್ಯಸಂಸ್ಕಾರಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಲಾಗುತ್ತಿದ್ದು, ಅಭಿಮಾನಿಗಳು ಸಹಕರಿಸಬೇಕು ಎಂದಿದ್ದಾರೆ.

ಇನ್ನು ಪುನೀತ್ ಅವರ ಅಂತ್ಯಸಂಸ್ಕಾರವನ್ನು ಡಾ ರಾಜ್ಕುಮಾರ್ ಸಮಾಧಿಯ ಪಕ್ಕದಲ್ಲೇ ಮಾಡಲು ತೀರ್ಮಾನಿಸಿದ್ದು ಅಲ್ಲೂ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಹಾಗೇ ಪುನೀತ್ ಅವರ ಅಂತಿಮ ಯಾತ್ರೆಗೆ ರೂಟ್ ಮ್ಯಾಪ್ ಕೂಡ ಈಗ ಸಿದ್ಧವಾಗಿದೆ. ಕಂಠೀರವ ಸ್ಟೇಡಿಯಂನಿಂದ ಕಾರ್ಪೋರೇಷನ್, ಮೈಸೂರುಬ್ಯಾಂಕ್ ಸರ್ಕಲ್, ಚಾಲುಕ್ಯ ಸರ್ಕಲ್, ವಿಂಡ್ಸನ್ ಮ್ಯಾನರ್,ಕಾವೇರಿ ಜಂಕ್ಷನ್, ಸ್ಯಾಂಕಿ ಕೆರೆ, ಸರ್ಕಲ್ ಮಾರಮ್ಮ, ಯಶವಂತಪುರ, ಗೋವರ್ಧನ್, ಆರ್ ಎಂ ಸಿ ವಾರ್ಡ್, ಗೊರಗುಂಟೆಪಾಳ್ಯ ಮೂಲಕ ಕಂಠೀರವ ಸ್ಟುಡಿಯೋಗೆ ಅಪ್ಪು ಅಂತಿಮ ಯಾತ್ರೆ ಬಂದು ತಲುಪಲಿದೆ.
ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಆಗದಿರಲು ಪೋಲಿಸರು ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ. ಕುಟುಂಬ ಸದಸ್ಯರಿಗೆ ಪ್ರತ್ಯೇಕ ವಾಹನದ ವ್ಯವಸ್ಥೆ ಹಾಗೂ ಪುನೀತ್ ಅಂತಿಮ ಯಾತ್ರೆಗೆ ವಿಶೇಷ ವಾಹನದ ವ್ಯವಸ್ಥೆ ಕೂಡ ಮಾಡಲಾಗುತ್ತಿದೆ. ಕಂಠೀರವ ಸ್ಟುಡಿಯೋಗೆ ಅಭಿಮಾನಿಗಳಿಗೆ ಅವಕಾಶ ಇರುವುದಿಲ್ಲ. ಕೇವಲ ಪುನೀತ್ ಕುಟುಂಬದವರು ಮತ್ತು ಚಿತ್ರರಂಗದವರಿಗೆ ಮಾತ್ರ ಅವಕಾಶ ಮಾಡಿಕೊಡಲಾಗುತ್ತದೆ ಎಂದು ತಿಳಿಸಲಾಗಿದೆ. ಹೀಗಾಗಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಂಠಿರವ ಸ್ಟೇಡಿಯಂನಲ್ಲಿ ಪುನೀತ್ ಅಂತಿಮ ದರ್ಶನ ಪಡೆಯುತ್ತಿದ್ದಾರೆ.


Click it and Unblock the Notifications











