ಪುನೀತ್ ನಟಿಸಬೇಕಿದ್ದ 'ದ್ವಿತ್ವ' ಸಿನಿಮಾದ ಬಗ್ಗೆ ನಿರ್ದೇಶಕ ಪವನ್ ಮಾತು
ಪುನೀತ್ ರಾಜ್ಕುಮಾರ್ ನಿಧನ ನಿಜ ಅರ್ಥದಲ್ಲಿ ಸಿನಿಮಾ ರಂಗಕ್ಕೆ ತುಂಬಲಾರದ ನಷ್ಟ. ಪುನೀತ್ ರಾಜ್ಕುಮಾರ್ ಅವರು ಇನ್ನೂ ನೂರಾರು ಸಿನಿಮಾಗಳಲ್ಲಿ ನಟಿಸಬೇಕಿತ್ತು, ನರ್ತಿಸಬೇಕಿತ್ತು, ಹಾಡಿ ರಂಜಿಸಬೇಕಿತ್ತು. ಆದರೆ ಬಹು ಬೇಗನೆ ಹೊರಟುಬಿಟ್ಟರು.
ಪುನೀತ್ ರಾಜ್ಕುಮಾರ್ಗಾಗಿಯೆಂದೇ ಹಲವಾರು ಕತೆಗಳನ್ನು ಹಲವು ನಿರ್ದೇಶಕರು ರಚಿಸಿ ಇಟ್ಟುಕೊಂಡಿದ್ದರು. ಪ್ರತಿ ಕ್ಷಣವೂ ಸಿನಿಮಾವನ್ನೇ ಕನವರಿಸುತ್ತಿದ್ದ ಪುನೀತ್ ರಾಜ್ಕುಮಾರ್ ಈಗಾಗಲೇ ಹಲವು ಕತೆಗಳನ್ನು ಕೇಳಿ ಒಪ್ಪಿದ್ದರು, ಕೆಲವು ಪ್ರಾರಂಭವಾಗುವ ಹಂತದಲ್ಲಿದ್ದವು.
ಪುನೀತ್ ರಾಜ್ಕುಮಾರ್ ಅವರ ಮುಂಬರಲಿದ್ದ ಸಿನಿಮಾಗಳ ಪೈಕಿ 'ದ್ವಿತ್ವ' ಸಿನಿಮಾ ಬಹಳ ಕುತೂಹಲ ಮೂಡಿಸಿತ್ತು. ಪುನೀತ್ ರಾಜ್ಕುಮಾರ್ ಕತೆಯ ಆಯ್ಕೆಯ ವಿಷಯದಲ್ಲಿ ಹೊಳಹು ಹಾದಿಯಲ್ಲಿದ್ದಾರೆ ಎಂಬುದಕ್ಕೆ ಈ ಸಿನಿಮಾ ಉದಾಹರಣೆ.

'ಗಾಂಧಿನಗರ ಸಿದ್ಧ ಮಾದರಿ' ನಿರ್ದೇಶಕರ ಸಾಲಿಗೆ ಸೇರದ, ಕಂಟೆಂಟ್ ಓರಿಯಂಟ್ ಸಿನಿಮಾಗಳನ್ನು ಮಾಡುತ್ತಾ ಬಂದಿರುವ ನಿರ್ದೇಶಕ ಪವನ್ ಕುಮಾರ್ ಜೊತೆ ಬಯಸಿ-ಬಯಸಿ ಕೈ ಜೋಡಿಸಿದ್ದರು ಪುನೀತ್ ರಾಜ್ಕುಮಾರ್. ಈ ಸಿನಿಮಾದ ಮೂಲಕ ತಮ್ಮ ವೃತ್ತಿ ಜೀವನಕ್ಕೆ ಅದರಲ್ಲಿಯೂ ಕತೆಯ ಆಯ್ಕೆಯ ವಿಷಯದಲ್ಲಿ ದೊಡ್ಡ ತಿರುವೊಂದನ್ನು ನೀಡುವ ಯತ್ನದಲ್ಲಿದ್ದರು. ಪುನೀತ್ ಅಭಿಮಾನಿಗಳು ಮಾತ್ರವೇ ಅಲ್ಲದೆ ಒಳ್ಳೆಯ ಕನ್ನಡ ಸಿನಿಮಾ ನಿರೀಕ್ಷಿಸುವ ಸಿನಿಪ್ರೇಮಿಗಳಿಗೂ ಈ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಿಗೆ ಇತ್ತು. ಆದರೆ ಈಗ ಎಲ್ಲವೂ ಶೂನ್ಯವಾಗಿದೆ.
ಆದರೆ ಎಷ್ಟೇ ದೊಡ್ಡ ಸ್ಟಾರ್ ನಟರು ಹೋದರು 'ದಿ ಶೋ ಮಸ್ಟ್ ಗೋ ಆನ್' (ಸಿನಿಮಾ ಮುಂದುವರೆಯಲೇ ಬೇಕು). ಹಾಗಾಗಿ ಈಗ 'ದ್ವಿತ್ವ' ಸಿನಿಮಾ ಏನಾಗುತ್ತದೆ, ಅದಕ್ಕೆ ನಾಯಕ ಯಾರಾಗುತ್ತಾರೆ ಎಂಬ ಕುತೂಹಲ ಹಲವರಲ್ಲಿದೆ. ಈ ಬಗ್ಗೆ ಪವನ್ ಕುಮಾರ್ ಮಾಧ್ಯಮದೊಟ್ಟಿಗೆ ಮಾತನಾಡಿದ್ದಾರೆ.
''ಪುನೀತ್ ರಾಜ್ಕುಮಾರ್ ಅಗಲಿಕೆ ನೋವಿನಿಂದ ನಾವು ಇನ್ನೂ ಹೊರಬಂದಿಲ್ಲ. 'ದ್ವಿತ್ವ' ಸಿನಿಮಾವನ್ನು ಏನು ಮಾಡುವುದುಎಂದು ನಮಗೂ ಈ ಸದ್ಯಕ್ಕೆ ಸ್ಪಷ್ಟತೆ ಇಲ್ಲ. ಸಿನಿಮಾ ನಿರ್ಮಾಣ ಮಾಡಲಿದ್ದ ಹೊಂಬಾಳೆ ಫಿಲಮ್ಸ್ಗು ಪುನೀತ್ಗೂ ಇದ್ದ ಅನುಭಂದ ಬಹಳ ಗಾಢವಾದುದ್ದು. ಹಾಗಾಗಿ ಅವರ ಬಳಿ ಸಿನಿಮಾ ಬಗ್ಗೆ ಮಾತನಾಡಲು ಇದು ಸೂಕ್ತ ಸಮಯವಲ್ಲ. ಹನ್ನೊಂದು ದಿನಗಳ ನಂತರ ಈ ಬಗ್ಗೆ ಮಾತುಕತೆ ಮಾಡೋಣ ಎಂದುಕೊಂಡಿದ್ದೇವೆ'' ಎಂದಿದ್ದಾರೆ ಪವನ್ ಕುಮಾರ್.
ಪುನೀತ್ ರಾಜ್ಕುಮಾರ್ ನಿಧನವಾದ ದಿನವೇ ಪವನ್ ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ ಭೇಟಿಯಾಗಬೇಕಿತ್ತು. ಅಂದು ಸಿನಿಮಾದಲ್ಲಿ ಪುನೀತ್ ರಾಜ್ಕುಮಾರ್ ಅವರ ಕಾಸ್ಟ್ಯೂಮ್ ಡಿಸೈನ್ ಅನ್ನು ಅಂತಿಮಗೊಳಿಸಬೇಕಿತ್ತು ಹಾಗೂ ಸಂಭಾಷಣೆಯನ್ನು ಅವರಿಗೆ ಆಡಿಯೋ ರೂಪದಲ್ಲಿ ಒಪ್ಪಿಸಬೇಕಿತ್ತು. ಆದರೆ ಅಷ್ಟರಲ್ಲೇ ಪುನೀತ್ ನಿಧನ ಹೊಂದಿದರು.
ಪುನೀತ್ ನಿಧನ ಹೊಂದಿದ ಮಾರನೇಯ ದಿನ ಪವನ್ ಕುಮಾರ್ ಹಾಗೂ 'ದ್ವಿತ್ವ' ತಂಡದ ಇತರರೆಲ್ಲ ಸೇರಿ 'ದ್ವಿತ್ವ' ಸಿನಿಮಾದ ಸಂಭಾಷಣೆ, ಚಿತ್ರಕತೆ ರೀಡಿಂಗ್ ಮಾಡಿ ಪುನೀತ್ ಅಗಲಿದ ನೋವಿನಿಂದ ಹೊರಬರುವ ಯತ್ನ ಮಾಡಿದರು. ಆ ಚಿತ್ರವನ್ನು ಪವನ್ ಕುಮಾರ್ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದರು. ಅಂದಹಾಗೆ ಪುನೀತ್ ನಿಧನದ ದಿನ ಪವನ್ ಕುಮಾರ್ ಹುಟ್ಟುಹಬ್ಬ ಸಹ.
ಪುನೀತ್ ರಾಜ್ಕುಮಾರ್ ನಟಿಸಬೇಕಿದ್ದ 'ದ್ವಿತ್ವ' ಸಿನಿಮಾವನ್ನು ವಿಜಯ್ ಕಿರಗಂದೂರ್ ನಿರ್ಮಾಣ ಮಾಡಲಿದ್ದರು. ಸಿನಿಮಾದ ಚಿತ್ರೀಕರಣ ಇದೇ ನವೆಂಬರ್ನಲ್ಲಿ ಪ್ರಾರಂಭವಾಗುತ್ತಿತ್ತು. ಬೆಂಗಳೂರು ಹಾಗೂ ಹೈದರಾಬಾದ್ನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯುವುದರಲ್ಲಿತ್ತು. ಸಿನಿಮಾದಲ್ಲಿ ನಾಯಕಿಯಾಗಿ ನಟಿ ತ್ರಿಷಾ ಆಯ್ಕೆಯಾಗಿದ್ದರು ಮತ್ತೊಬ್ಬ ನಾಯಕಿಯಾಗಿ ಆಶಿಕಾ ರಂಗನಾಥ್ ಆಯ್ಕೆ ಆಗಿದ್ದರು. ''ನನಗೆ 'ದ್ವಿತ್ವ' ಸಿನಿಮಾದ ಆಫರ್ ಬಂದಾಗ ಕನಸು ನನಸಾದ ಅನುಭವ ಆಗಿತ್ತು. ಆದರೆ ಅದು ಈಡೇರಲಿಲ್ಲ'' ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
'ದ್ವಿತ್ವ' ಸಿನಿಮಾದ ಹೊರತಾಗಿ ದರ್ಶನ್ ಸಹೋದರ ದಿನಕರ್ ತೂಗುದೀಪ ನಿರ್ದೇಶನದ ಸಿನಿಮಾದಲ್ಲಿ ಪುನೀತ್ ರಾಜ್ಕುಮಾರ್ ನಟಿಸಲಿದ್ದರು. ಆ ನಂತರ ಮತ್ತೆ ಸಂತೋಶ್ ಆನಂದ್ರಾಮ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದರು. ಬಳಿಕ 'ರಾಮಾ ರಾಮಾ ರೇ' ಸಿನಿಮಾ ಖ್ಯಾತಿಯ ಸತ್ಯ ನಿರ್ದೇಶಿಸಲಿರುವ ಸಿನಿಮಾದಲ್ಲಿಯೂ ನಟಿಸಲಿದ್ದರು ಪುನೀತ್. ಆದರೆ ಯಾವುದೂ ಈಡೇರಲಿಲ್ಲ.
ಪುನೀತ್ ನಿಧನದ ಮುನ್ನ 'ಜೇಮ್ಸ್' ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಬಿಡುಗಡೆ ಆಗುತ್ತದೆ ಎಂದು ನಿರ್ದೇಶಕ ಚೇತನ್ ಹೇಳಿದ್ದಾರೆ. ಸಿನಿಮಾದ ಡಬ್ಬಿಂಗ್ ಹಾಗೂ ಒಂದು ಹಾಡು ಮಾತ್ರ ಬಾಕಿ ಇತ್ತು. ಹಾಡು ಕೈ ಬಿಟ್ಟು ಸಿನಿಮಾದ ಡಬ್ಬಿಂಗ್ ಅನ್ನು ಬೇರೆ ಕಲಾವಿದರಿಂದ ಮಾಡಿಸುವುದಾಗಿ ನಿರ್ದೇಶಕ ಹೇಳಿದ್ದಾರೆ. ಶಿವರಾಜ್ ಕುಮಾರ್ ಅವರು ಸಿನಿಮಾದ ಡಬ್ಬಿಂಗ್ ಮಾಡುವ ಸಾಧ್ಯತೆ ಇದೆ.


Click it and Unblock the Notifications











