ದಾವಣಗೆರೆ: ಸಾವಿನಲ್ಲೂ ಸಾರ್ಥಕತೆ ಮೆರೆದ ಪುನೀತ್ ಅಭಿಮಾನಿ
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕೋಟ್ಯಂತರ ಜನರ ಆರಾಧ್ಯ ದೈವ. ಅಪ್ಪು ಸಾವಿನ ಬಳಿಕ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದರು. ಅವರ ಪ್ರೇರಣೆಯಿಂದ ನೇತ್ರದಾನ ಮಾಡುವವರ ಸಂಖ್ಯೆ ರಾಜ್ಯದಲ್ಲಿ ಹೆಚ್ಚಾಯಿತು.
ದಾವಣಗೆರೆಯ ಯುವಕ ರವಿ ಪುನೀತ್ ರಾಜಕುಮಾರ್ ಅಪ್ಪಟ ಅಭಿಮಾನಿಯಾಗಿದ್ದರು. ಪುನೀತ್ ನಿಧನ ನಂತರ ನೇತ್ರದಾನ ಮಾಡಲು ಒಪ್ಪಿ ನೋಂದಣಿ ಕೂಡ ಮಾಡಿಸಿದ್ದರು. ನಿನ್ನೆ ರಾತ್ರಿ ರವಿ ಹೃದಯಘಾತಕ್ಕೆ ಒಳಗಾಗಿ ಮೃತಪಟ್ಟಿದ್ದು ಅವರ ಇಚ್ಛೆಯಂತೆ ಅವರ ಕಣ್ಣುಗಳನ್ನು ಸಂರಕ್ಷಿಸಿಸಲಾಗಿದೆ.
ಬಡಕುಟುಂಬದಲ್ಲಿ ಜನಿಸಿದ್ದ ರವಿ, ಎಸ್.ಎಂ.ಕೃಷ್ಣ ನಗರದ ವಾಸಿ. ರವಿ ಅವರು ಮಾರ್ಕೆಟ್ ರವಿ ಅಂತಾನೇ ಎಲ್ಲರೂ ಪ್ರೀತಿಯಿಂದ ಕರೆಯುತ್ತಿದ್ದರು. ತರಕಾರಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದ ರವಿ, ಕನ್ನಡ ರಾಜ್ಯೋತ್ಸವ ಹಾಗೂ ಅಪ್ಪು ಜನುಮದಿನದಂದು ಜ್ಯೂನಿಯರ್ ರಾಜಕುಮಾರ್ ಅವರನ್ನು ಕರೆಯಿಸಿ ಕಾರ್ಯಕ್ರಮ ನಡೆಸುತ್ತಿದ್ದರು.

ಕೇವಲ 31 ವರ್ಷದ ರವಿ ಈ ಹಿಂದೆ ಯಾವುದೋ ಕಾರಣಕ್ಕೆ ಆತ್ಮಹತ್ಯೆಗೆ ಯತ್ನ ಮಾಡಿದ್ದರು. ಆಗ ಹಿರಿಯರು, ಸ್ನೇಹಿತರೆಲ್ಲರೂ ಕೂರಿಸಿಕೊಂಡು ಬುದ್ದಿವಾದ ಹೇಳಿದ್ದರು. ಮೊದಲಿನಿಂದಲೂ ಅಪ್ಪು ಅಂದರೆ ರವಿ ಪಂಚಪ್ರಾಣ. ಹುಟ್ಟುಹಬ್ಬ ಬಂದರೆ, ಸಿನಿಮಾ ಬಿಡುಗಡೆಯಾದರೆ ರವಿಗೆ ಎಲ್ಲಿಲ್ಲದ ಖುಷಿ. ಅಪ್ಪು ಬರ್ತ್ ಡೇ ಅನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದರು. ಮಾತ್ರವಲ್ಲ, ಅಪ್ಪು ಅಂದರೆ ತುಂಬಾನೇ ಇಷ್ಟ. ಹಾಗಾಗಿ ಅಪ್ಪು ಅವರು ಅಭಿಮಾನಿಗಳಿಗೆ ತೋರಿಸಿಕೊಟ್ಟ ದಾರಿಯಲ್ಲೇ ನಡೆಯುತ್ತೇನೆ ಎಂದು ಸ್ನೇಹಿತರಲ್ಲಿ ಹೇಳಿಕೊಳ್ಳುತ್ತಿದ್ದರು.
ಅಪ್ಪು ನಿಧನ ಹೊಂದಿದಾಗ ತಾನೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರವಿ ಹೇಳುತ್ತಿದ್ದ ಆದರೆ ಹಿರಿಯರು ಆತನ ಮನಃ ಪರಿವರ್ತನೆ ಮಾಡಿದ್ದರು. ಬಳಿಕ ಜಯದೇವ ಜಗದ್ಗುರು ಮುರುಘರಾಜೇಂದ್ರ ವೈದ್ಯಕೀಯ ಮಹಾವಿದ್ಯಾಲಯಕ್ಕೆ ನೇತ್ರದಾನ ಮಾಡಲು ತನ್ನ ಹೆಸರು ನೋಂದಾಯಿಸಿದ್ದ ರವಿ. ಇದೀಗ ಹೃದಯಾಘಾತಕ್ಕೆ ಒಳಗಾಗಿ ಕೊನೆಯುಸಿರೆಳೆದ ಮಾರ್ಕೆಟ್ ರವಿ ಕಣ್ಣುಗಳನ್ನು ಕುಟುಂಬದವರು ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಹಸ್ತಾಂತರ ಮಾಡಲಾಯಿತು.
ಇನ್ನು ಸುದ್ದಿ ತಿಳಿಯುತ್ತಿದ್ದಂತೆ ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಸೇರಿದಂತೆ ಹಲವರು ಭೇಟಿ ನೀಡಿ ರವಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಈ ವೇಳೆ ಮಾತನಾಡಿದ ಅವರು, ರವಿ ತುಂಬಾ ಸ್ನೇಹ ಜೀವಿ. ಆತನ ಸಾವು ನಮಗೆಲ್ಲರಿಗೂ ದಿಗ್ಭ್ರಮೆ ತಂದಿದೆ. ಕೇವಲ 31 ವರ್ಷ. 9 ತಿಂಗಳ ಮಗು ಇದೆ. ಪತ್ನಿ ಮತ್ತು ಮಗುವಿನ ಪರಿಸ್ಥಿತಿ ನೆನೆದರೆ ಮನಸ್ಸಿಗೆ ತುಂಬಾನೇ ಬೇಸರವಾಗುತ್ತದೆ ಎಂದರು.
ಆತ ಪುನೀತ್ ರ ಅಪ್ಪಟ ಅಭಿಮಾನಿ. ಪುನೀತ್ ರಾಜಕುಮಾರ್ ಅವರು ನಿಧನ ಹೊಂದಿದಾಗ ನಾನೇ ಸಾಯುತ್ತೇನೆ ಎಂದು ಬಡಾಬಡಾಯಿಸುತ್ತಿದ್ದ. ನಾವೆಲ್ಲರೂ ಸಮಾಧಾನ ಮಾಡಿದ್ವಿ. ಪುನೀತ್ ರಂತೆ ಕಣ್ಣು ದಾನ ಮಾಡುವ ಸಂಕಲ್ಪ ತೊಟ್ಟಿದ್ದ. ದಾನಪತ್ರಕ್ಕೆ ಸಹಿ ಹಾಕಿದ್ದ. ಆತನ ಆಸೆ ಪ್ರಕಾರ ಕಣ್ಣು ದಾನ ಮಾಡಲಾಗಿದೆ. ಇಂಥ ಒಳ್ಳೆಯ ವ್ಯಕ್ತಿತ್ವ ಇರುವವರು ಸಿಗುವುದು ತುಂಬಾನೇ ವಿರಳ. ಯಾರೇ ಕಷ್ಟ ಅಂತಾ ಬಂದರೂ ಸಹಾಯ ಮಾಡುತ್ತಿದ್ದ. ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಯಾರಿಗೂ ನೋವು ಕೊಡದ ವ್ಯಕ್ತಿ. ಸಾವಿರಾರು ಸಂಖ್ಯೆಯ ಸ್ನೇಹಿತರನ್ನು ಅಗಲಿದ್ದು, ಆತ್ಮಕ್ಕೆ ಚಿರಶಾಂತಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.


Click it and Unblock the Notifications











