ಪುನೀತ್ ಸ್ಮರಣಾರ್ಥ 2700 ಕಿ.ಮೀ ಸೈಕಲ್ ಪ್ರಯಾಣ ಮಾಡಲಿರುವ ಅಭಿಮಾನಿ!
ಪುನೀತ್ ರಾಜ್ಕುಮಾರ್ ನೆನಪಿನಲ್ಲಿ ಅಭಿಮಾನಿಗಳು ಹಲವು ರೀತಿಯ ಕಾರ್ಯಕ್ರಮಗಳನ್ನು ದೇಶದಾದ್ಯಂತ ಹಮ್ಮಿಕೊಂಡಿದ್ದಾರೆ. ಕೆಲವರು ರಕ್ತದಾನ ಶಿಬಿರ, ಕೆಲವರು ನೇತ್ರದಾನ ಶಿಬಿರ, ಅನ್ನದಾನ, ಅನಾಥಾಲಯಗಳಿಗೆ ದೇಣಿಗೆ ಹೀಗೆ ಭಿನ್ನ-ಭಿನ್ನ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ.
ಇದೀಗ ಅಪ್ಪು ಅಭಿಮಾನಿ ಒಬ್ಬ ಮೆಚ್ಚಿನ ನಟನ ಸ್ಮರಣಾರ್ಥವಾಗಿ ದೊಡ್ಡ ಸಾಹಸಕ್ಕೆ ಕೈ ಹಾಕಿದ್ದಾನೆ. ಅಭಿಮಾನಿ ಗುರುಪ್ರಕಾಶ್ ಪುನೀತ್ ರಾಜ್ಕುಮಾರ್ ನೆನಪಿಗಾಗಿ 2700 ಕಿ.ಮೀ ಸೈಕಲ್ ಯಾತ್ರೆ ಮಾಡಲಿದ್ದಾರೆ.
ಚಾರಣಿಗ ಗುರುಪ್ರಕಾಶ್ ಹಿಮಾಚಲ ಪ್ರದೇಶದ ಮಣಿಕರಣ್ ಇಂದ ಬೆಂಗಳೂರಿನ ಪುನೀತ್ ರಾಜ್ಕುಮಾರ್ ಸಮಾಧಿ ವರೆಗೆ 2700 ಕಿ.ಮೀ ಸೈಕಲ್ ತುಳಿದುಕೊಂಡು ಬರಲಿದ್ದಾರೆ. ಅಭಿಮಾನಿಯ ಮಾಡಲು ಹೊರಟಿಸಿರುವ ಈ ಸಾಹಸದ ಬಗ್ಗೆ ಅಪ್ಪು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗುರುಪ್ರಕಾಶ್ಗೆ ಆಲ್ ದಿ ಬೆಸ್ಟ್ ಸಹ ಹೇಳಿದ್ದಾರೆ.

ಈ ಅದ್ಭುತ ಸಾಹಸಯಾತ್ರೆ ಡಿಸೆಂಬರ್ 10 ಕ್ಕೆ ಆರಂಭವಾಗಲಿದೆ. ಪುನೀತ್ ರಾಜ್ಕುಮಾರ್ ಸಮಾಧಿಗೆ ತಲುಪಿದ ಬಳಿಕ ಗುರುಪ್ರಕಾಶ್ ನೇತ್ರದಾನಕ್ಕೆ ಸಹಿ ಮಾಡಲಿದ್ದಾರೆ. ತಮ್ಮ ಈ ಸಾಹಸಮಯ ಪ್ರಯಾಣಕ್ಕೆ ಶುಭ ಹಾರೈಸಿ ಎಂದು ಗುರುಪ್ರಕಾಶ್ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ.
ಇನ್ನು ಇದೇ ದಿನ (ಡಿಸೆಂಬರ್ 04)ರಂದು ಮೈಸೂರಿನ ಕೆಲ ಹವ್ಯಾಸಿ ಸೈಕ್ಲಿಸ್ಟ್ಗಳು ಮೈಸೂರಿನಿಂದ ಬೆಂಗಳೂರಿಗೆ ಸೈಕಲ್ನಲ್ಲಿ ಆಗಮಿಸಿದ್ದಾರೆ. ಈ ಬಗ್ಗೆ ರಾಘವೇಂದ್ರ ರಾಜ್ಕುಮಾರ್ ಅವರಿಗೆ ಪತ್ರೆ ಬರೆದಿದ್ದ ಸೈಕ್ಸಿಸ್ಟ್ಗಳು, ''ಪುನೀತ್ ಅವರ ಅಕಾಲಿಕ ಮರಣದಿಂದ ನಾವುಗಳು ದುಃಖಿತರಾಗಿದ್ದೇವೆ. ಸಮಯದ ಈ ಆಟದ ಮುಂದೆ ನಾವು ಅಸಹಾಯಕರಾಗಿದ್ದೇವೆ'' ಎಂದಿದ್ದಾರೆ.
''ನಾವು ಮೈಸೂರಿನಿಂದ ಅಪ್ಪು ಅವರ ಪುಣ್ಯಸ್ಥಳಕ್ಕೆ ಸೈಕಲ್ನಲ್ಲಿ ಆಗಮಿಸಲಿದ್ದೇವೆ. ನೀವು ಆ ಸಮಯದಲ್ಲಿ ಅಲ್ಲಿ ಹಾಜರಿದ್ದರೆ ನಮಗೆ ಸಂತಸವಾಗುತ್ತದೆ. ಜೊತೆಗೆ ನಾವುಗಳು ಸಣ್ಣ ಮೊತ್ತದ ಹಣವನ್ನು ದೇಣಿಗೆ ರೂಪದಲ್ಲಿ ನೀಡಬೇಕೆಂದಿದ್ದೇವೆ. ಅದನ್ನು ಅಪ್ಪು ಅವರು ಮಾಡುತ್ತಿದ್ದ ಸಾಮಾಜಿಕ ಕಾರ್ಯಕ್ಕೆ ಬಳಸಿಕೊಳ್ಳಬೇಕೆಂಬುದು ನಮ್ಮ ಕೋರಿಕೆ'' ಎಂದು ಪತ್ರದಲ್ಲಿ ಬರೆದಿದ್ದಾರೆ ಸೈಕ್ಲಿಸ್ಟ್ಗಳು.
ಕೆಲವು ದಿನಗಳ ಹಿಂದೆ ಧಾರಾವಾಡದ ಮನಗುಂಡಿ ಗ್ರಾಮದ ಮಹಿಳೆ ದಾಕ್ಷಾಯಿಣಿ, ತನ್ನ ಗ್ರಾಮದಿಂದ ಬೆಂಗಳೂರಿನ ಅಪ್ಪು ಸಮಾಧಿವರೆಗೆ 500 ಕಿ.ಮೀ ಓಡಿ ಗುರಿ ತಲುಪಲಿದ್ದಾರೆ. ದಾಕ್ಷಾಯಿಣಿ ತಮ್ಮ ಓಟವನ್ನು ನವೆಂಬರ್ 30ರಂದು ಪ್ರಾರಂಭ ಮಾಡಿದ್ದಾರೆ. ಎರಡು ಮಕ್ಕಳ ತಾಯಿಯಾಗಿದ್ದರೂ ಈ ಸಾಹಸಕ್ಕೆ ಮುಂದಾಗಿರುವುದು ವಿಶೇಷ.
ಇದರ ಹೊರತಾಗಿ ಪುನೀತ್ ನೆನಪಿನಲ್ಲಿ ಪೊಲೀಸ್ ಇಲಾಖೆ ವಿಶೇಷ ಸೈಕಲ್ ಜಾಥಾ ಹಮ್ಮಿಕೊಂಡಿತ್ತು. ಪುನೀತ್ ನೆನಪಿನಲ್ಲಿ ಮ್ಯಾರಾಥಾನ್ ಹಮ್ಮಿಕೊಳ್ಳುವ ಬಗ್ಗೆಯೂ ಯೋಜನೆ ಸಿದ್ಧವಾಗುತ್ತಿದೆ.


Click it and Unblock the Notifications











