ನಿಲ್ಲದ ಸಾವಿನ ಸರಣಿ: ಹಾಸನದಲ್ಲಿ ಅಪ್ಪು ಅಭಿಮಾನಿ ನೇಣಿಗೆ ಶರಣು
ಪುನೀತ್ ರಾಜ್ಕುಮಾರ್ ಅಗಲಿ ತಿಂಗಳಾಗುತ್ತಾ ಬಂತು. ಆದರೆ ಅವರ ಅಗಲಿಕೆಯ ನೋವು ಮನದಲ್ಲಿನ್ನೂ ಮಡುಗಟ್ಟಿದೆ. ಪುನೀತ್ ಇನ್ನಿಲ್ಲ ಎಂಬ ಕಠುಸತ್ಯವನ್ನು ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವೇ ಆಗಿಲ್ಲ.
ಪುನೀತ್ ನಿಧನರಾದಾಗ ಹಲವು ಅಭಿಮಾನಿಗಳು ತಾವೂ ಈ ಲೋಕವನ್ನು ಬಿಟ್ಟು ಹೋಗುವುದಾಗಿ ನಿಶ್ಚಯಿಸಿ ಆತ್ಮಹತ್ಯೆ ಮಾಡಿಕೊಂಡರು. ದೊಡ್ಮನೆ ಕುಟುಂಬದವರು ಅಭಿಮಾನಿಗಳ ಬಳಿ ಕೈಮುಗಿದು ಕೇಳಿ ಕೊಂಡರೂ ಪ್ರಯೋಜನವಾಗಿಲ್ಲ. ಅಪ್ಪು ಅಭಿಮಾನಿಗಳ ಆತ್ಮಹತ್ಯೆ ಸರಣಿ ಇನ್ನೂ ನಿಂತಿಲ್ಲ.
ಹಾಸನದ ಅಪ್ಪು ಅಭಿಮಾನಿ ಮಯೂರ ಎಂಬುವರು ಇದೀಗ ನೇಣಿಗೆ ಶರಣಾಗಿದ್ದಾರೆ. ಮಯೂರ ಡಾ.ರಾಜ್ಕುಮಾರ್ ಅವರ ಅಭಿಮಾನಿಯಾಗಿದ್ದರು. ಅಂತೆಯೇ ಪುನೀತ್ ಅವರ ಅಭಿಮಾನಿಯೂ ಆಗಿದ್ದರು. ಹಲವು ಭಾರಿ ಪುನೀತ್ ರಾಜ್ಕುಮಾರ್ ಅವರನ್ನು ಭೇಟಿಯಾಗಿದ್ದರು. ಪುನೀತ್, ಶಿವಣ್ಣ ಹುಟ್ಟುಹಬ್ಬ ಆಚರಣೆ, ರಾಜ್ಕುಮಾರ್ ಹುಟ್ಟುಹಬ್ಬ, ಪುಣ್ಯಸ್ಮರಣೆಯನ್ನು ತಪ್ಪದೆ ಆಚರಿಸುತ್ತಿದ್ದರು. ರಾಜ್ಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷರೂ ಆಗಿದ್ದರು ಮಯೂರ.

ಅಪ್ಪು ನಿಧನದ ಬಳಿಕ ಮಯೂರ ಬಹಳ ಮನನೊಂದಿದ್ದರು. ತೀವ್ರ ಆಘಾತಕ್ಕೆ ಒಳಗಾಗಿದ್ದರು. ಪ್ರತಿ ದಿನವೂ ಸಾಮಾಜಿಕ ಜಾಲತಾಣಗಳಲ್ಲಿ ಪುನೀತ್ ರಾಜ್ಕುಮಾರ್ ಕುರಿತು ಚಿತ್ರಗಳು, ವಿಡಿಯೋಗಳು, ಸ್ಟೇಟಸ್ ಹಾಕುತ್ತಿದ್ದರು. ಕೊನೆಗೆ ನವೆಂಬರ್ 24 ರಂದು ರಾತ್ರಿ ತಮ್ಮ ನಿವಾಸದಲ್ಲಿ ನೇಣು ಕುಣಿಕೆಗೆ ಕೊರಳೊಡ್ಡಿದ್ದಾರೆ. ಘಟನೆಯು ಪೆನ್ಷನ್ ಮೊಹಲ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪುನೀತ್ ಸಾವಿನ ಬಳಿಕ ಸುಮಾರು 15 ಕ್ಕೂ ಹೆಚ್ಚು ಮಂದಿ ಅಪ್ಪು ಅಭಿಮಾನಿಗಳು ನಿಧನ ಹೊಂದಿದ್ದಾರೆ. ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪುನೀತ್ ರಾಜ್ಕುಮಾರ್ ನಿಧನ ಹೊಂದಿದ ದಿನ ಬೆಳಗಾವಿ ರಾಹುಲ್ ಗಡಿವಡ್ಡಾರ ಎಂಬ ಯುವಕ ಅಪ್ಪುಗೆ ಶ್ರದ್ಧಾಂಜಲಿ ಸಲ್ಲಿಸಿ ಬಳಿಕ ಆತ್ಮಹತ್ಯೆ ಮಾಡಿಕೊಂಡು ನಿಧನ ಹೊಂದಿದ್ದ. ಅದೇ ದಿನ ಹೊಸಪೇಟೆಯ ನಿವಾಸಿ ಸಾದಪ್ಪ ಎಂಬಾತ ಕಾಲುವೆಗೆ ಹಾರಿ ಪ್ರಾಣ ಬಿಟ್ಟ. ಚಿಕ್ಕಮಗಳೂರಿನಲ್ಲಿ ಶರತ್ ಎಂಬಾತ ಆತ್ಮಹತ್ಯೆಗೆ ಶರಣಾಗಿದ್ದರು.
ಚಾಮರಾಜನಗರ ಜಿಲ್ಲೆಯ ಹನೂರಿನ ಮುನಿಯಪ್ಪ ಎಂಬಾತ ಅಪ್ಪು ಇನ್ನಿಲ್ಲ ಎಂಬ ಸುದ್ದಿ ಕೇಳಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬೆಳಗಾವಿಯ ಶಿಂದೊಳ್ಳಿ ಗ್ರಾಮದ ಪರುಶಾರಾಮ್ ಎಂಬ ಪುನೀತ್ ಅಭಿಮಾನಿ ಸಹ ನಿಧನದ ಸುದ್ದಿ ಕೇಳಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕೊಪ್ಪಳದ ಚಿಕ್ಕ ಬನಿಗೋಳದಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದ ಜ್ಞಾನಮೂರ್ತಿ ಎಂಬುವರಿಗೂ ಪುನೀತ್ ನಿಧನದ ಸುದ್ದಿ ಕೇಳಿ ಹೃದಯಾಘಾತವಾಗಿದೆ.
ಮಂಡ್ಯದ ಕೆರೆಗೋಡು ಗ್ರಾಮದ ಕೆ.ಎಂ.ರಾಜೇಶ್ ಎಂಬುವರು ಅಪ್ಪು ನಿಧನದ ಸುದ್ದಿ ಕೇಳಿ ತೀವ್ರ ಆಘಾತಕ್ಕೆ ಒಳಗಾಗಿದ್ದರು. ಆಹಾರ, ನೀರು ಸೇವಿಸದೆ ಅಸ್ವಸ್ಥರಾಗಿದ್ದರು. ಕೊನೆಗೆ ಅಪ್ಪುವಿನ ಅಂತಿಮ ದರ್ಶನಕ್ಕೆ ಹೋಗುತ್ತೇನೆಂದು ಹೋಗಿ ತೀವ್ರ ಅಸ್ವಸ್ಥಗೊಂಡು ಮಂಡ್ಯದ ಪಾರ್ಕ್ ಒಂದರ ಬಳಿ ಕುಸಿದು ಬಿದ್ದಿದ್ದರು ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಯ್ತಾದರೂ ಅವರು ನಿಧನ ಹೊಂದಿದರು. ರಾಜ್ಕುಮಾರ್ ಕುಟುಂಬದ ಬಹುದೊಡ್ಡ ಅಭಿಮಾನಿ ಆಗಿದ್ದ ರಾಜೇಶ್, ರಾಜ್ಕುಮಾರ್ ಹೆಸರಿನ ಹೋಟೆಲ್ ನಡೆಸುತ್ತಿದ್ದರು.
ತುಮಕೂರಿನ ಭರತ್ ಎಂಬಾತ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ಗಾರೆ ಕೆಲಸ ಮಾಡಿಕೊಂಡಿದ್ದ ಭರತ್, ನಾನು ಅಪ್ಪುವಿನ ಅಭಿಮಾನಿ, ಅವರು ಇರುವ ಲೋಕಕ್ಕೆ ಹೋಗುತ್ತಿದ್ದೇನೆ. ಅವರಂತೆ ನಾನೂ ಕಣ್ಣು ದಾನ ಮಾಡಬೇಕು ಎಂದು ಪತ್ರದಲ್ಲಿ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಭರತ್ನ ಪೋಷಕರು ಅವನ ಆಸೆಯಂತೆ ಕಣ್ಣುಗಳನ್ನು ದಾನ ಮಾಡಿದ್ದಾರೆ.
ನವೆಂಬರ್ 04ರಂದು ರಾಮನಗರ ಜಿಲ್ಲೆ ಚನ್ನಪಟ್ಟಣದ ಎಲೆಕೆರೆಯಲ್ಲಿ ವೆಂಕಟೇಶ್ ಹೆಸರಿನ ಪುನೀತ್ ರಾಜ್ಕುಮಾರ್ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ. ಪುನೀತ್ ಅಗಲಿಕೆಯಿಂದ ಖಿನ್ನತೆಗೆ ಜಾರಿದ್ದ ವೆಂಕಟೇಶ್ ಊಟ ಬಿಟ್ಟು, ಊರೂರು ಅಲೆಯುತ್ತಿದ್ದ. ಕೊನೆಗೆ ಮನೆಗೆ ಬಂದು ನವೆಂಬರ್ 04ನೇ ತಾರೀಖು ಆತ್ಮಹತ್ಯೆಗೆ ಶರಣಾಗಿದ್ದ.


Click it and Unblock the Notifications











