ಮುಂದುವರೆದ ಸಾವಿನ ಸರಣಿ, ಮತ್ತೊಬ್ಬ ಅಪ್ಪು ಅಭಿಮಾನಿ ಆತ್ಮಹತ್ಯೆ
ಪುನೀತ್ ರಾಜ್ಕುಮಾರ್ ಅಭಿಮಾನಿಗಳ ಆತ್ಮಹತ್ಯೆ ಸರಣಿ ಮುಂದುವರೆದಿದೆ. ದೊಡ್ಮನೆ ಕುಟುಂಬ ಕೈಮುಗಿದು ಕೇಳಿಕೊಂಡರು ಅಭಿಮಾನದ ಪರಾಕಾಷ್ಠೆ ತಲುಪಿದ ಕೆಲವು ಹುಚ್ಚು ಅಭಿಮಾನಿಗಳು ಜೀವ ಹರಣ ಮಾಡಿಕೊಳ್ಳುತ್ತಿದ್ದಾರೆ.
ರಾಮನಗರ ಜಿಲ್ಲೆ ಚನ್ನಪಟ್ಟಣದ ಎಲೇಕೇರಿ ಬಡಾವಣೆಯಲ್ಲಿ ಪುನೀತ್ ರಾಜ್ಕುಮಾರ್ ಅಭಿಮಾನಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಚನ್ನಪಟ್ಟಣ ತಾಲ್ಲೂಕಿನ ಸವಿತಾ ಸಮಾಜದ ಗೌರವಾಧ್ಯಕ್ಷ ದಿವಂಗತ ಎಲೇಕೇರಿ ಕೃಷ್ಣಪ್ಪನವರ ಮಗ ವೆಂಕಟೇಶ್ (ಡಾಲಿವೆಂಕಿ) (25) ಅಪ್ಪುವಿನ ಅಭಿಮಾನಿಯಾಗಿದ್ದು ಇಂದು ಮರಣ ಹೊಂದಿದ್ದಾನೆ. ಅಪ್ಪುವಿನ ಅಭಿಮಾನಿಯಾಗಿದ್ದ ವೆಂಕಟೇಶ್ ಕೈಯ ಮೇಲೆ 'ಪವರ್' ಎಂದು ಹಚ್ಚೆ ಹಾಕಿಸಿಕೊಂಡಿದ್ದ. ಪುನೀತ್ ಹುಟ್ಟುಹಬ್ಬದ ವೇಳೆ ಅವರು ಎಲ್ಲಿದ್ದರೂ ಭೇಟಿ ಮಾಡಿ ಶುಭಾಶಯ ಕೋರುತ್ತಿದ್ದ ಪರಿಪಾಠ ಇಟ್ಟುಕೊಂಡಿದ್ದ.

ಪುನೀತ್ ರಾಜ್ ಕುಮಾರ್ ಅಪ್ಪಟ ಅಭಿಮಾನಿಯಾಗಿದ್ದ ವೆಂಕಟೇಶ್, ಅಪ್ಪು ನಿಧನದಿಂದ ಮನವೊಂದು ಕಳೆದ ಮೂರು ದಿನಗಳಿಂದ ಊಟ ಬಿಟ್ಟಿದ್ದ. ಅಪ್ಪು ಸಮಾಧಿ ನೋಡಲೇಬೇಕೆಂದು ತನ್ನ ಸ್ನೇಹಿತರ ಬಳಿ ಹೇಳಿಕೊಂಡಿದ್ದ. ಕಳೆದ ಕೆಲವು ದಿನಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಇಂದು ಮುಂಜಾನೆ ನೇಣಿಗೆ ಶರಣಾಗಿದ್ದಾನೆ.
ಅಪ್ಪು ಅಭಿಮಾನಿಯ ಆತ್ಮಹತ್ಯೆಯ ಬಗ್ಗೆ ಯಾರಿಗೂ ಮಾಹಿತಿ ನೀಡದೆ ಅಂತ್ಯಸಂಸ್ಕಾರಕ್ಕೆ ಮುಂದಾಗಿದ್ದರು. ಆದರೆ ಆತನ ಸ್ನೇಹಿತರ ಮೂಲಕ ಯುವಕ ಆತ್ಮಹತ್ಯೆ ಮಾಡಿಕೊಂಡಿರು ಬಗ್ಗೆ ಮಾಹಿತಿ ಪಡೆದ ಪೋಲಿಸರು ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆ ನಡೆಸಿ ನಂತರ ಪೋಷಕರಿಗೆ ಶವ ಹಸ್ತಾಂತರ ಮಾಡಿದ್ದಾರೆ.
ಸಾವಿನ ಬಳಿಕ ನೇತ್ರ ದಾನ ಮಾಡಿ ನಾಲ್ಕು ಮಂದಿಗೆ ದೃಷ್ಠಿ ನೀಡಿರುವ ಅಪ್ಪು ಅವರ ದಾರಿಯಲ್ಲೇ ಅಭಿಮಾನಿ ವೆಂಕಟೇಶ್ ಕುಟುಂಬದವರು ಮಗನ ಕಣ್ಣನ್ನು ದಾನ ಮಾಡಿ ಮಗನ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡು ಮೂಲಕ ದುಃಖದಲ್ಲೂ ಆದರ್ಶ ಮೆರೆದ್ದಿದ್ದಾರೆ.
ಅಪ್ಪು ನಿಧನದ ಬಳಿಕ ಈ ವರೆಗೆ ರಾಜ್ಯದಲ್ಲಿ 13 ಮಂದಿ ಅಭಿಮಾನಿಗಳು ನಿಧನ ಹೊಂದಿದ್ದಾರೆ. ಇದರಲ್ಲಿ ಹಲವರು ಆತ್ಮಹತ್ಯೆ ಮೂಲಕ, ಕೆಲವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಅಭಿಮಾನಿಗಳ ಈ ಸಾವಿನ ಸರಣಿ ದೊಡ್ಮನೆ ಕುಟುಂಬಕ್ಕೆ ತೀವ್ರ ದುಃಖ ಉಂಟುಮಾಡಿದೆ. ಇದೇ ವಿಷಯವಾಗಿ ಇಂದು ಮಾಧ್ಯಮಗಳ ಬಳಿ ಮಾತನಾಡಿದ ರಾಘವೇಂದ್ರ ರಾಜ್ಕುಮಾರ್, ''ನಾವೆಲ್ಲರೂ ನೋವಿನಲ್ಲಿದ್ದೇವೆ ಆ ನೋವನ್ನು ನಾವು ಇನ್ನೊಬ್ಬರಿಗೆ ಕೊಡಬಾರದು. ಪುನೀತ್ ಅಗಲಿಕೆಯಿಂದ ಮನನೊಂದು ಆತ್ಮಹತ್ಯೆ ಮಾಡುತ್ತಿರುವ ಘಟನೆಗಳು ನಡೆಯುತ್ತಿವೆ. ಈ ಸುದ್ದಿ ನಮಗೆ ಬಹಳ ಬೇಸರ ತರಿಸಿದೆ. ಒಬ್ಬರ ಹಿಂದೆ ಒಬ್ಬರು ಹೀಗೆ ಹೋಗುತ್ತಿದ್ದರೆ ಭೂಮಿ ಮೇಲೆ ಯಾರೂ ಇರುವುದಿಲ್ಲ. ನಮ್ಮ ನೋವನ್ನು ನಿಮ್ಮ ತಂದೆ-ತಾಯಿಗೆ ಕೊಡಬೇಡಿ. ಪುನೀತ್ ರಾಜ್ಕುಮಾರ್ ಅವರಿಗೆ ಈ ಥರಹದ ಗೌರವ ನೀವು ತೋರಿಸಬಾರದು. ನಿಮ್ಮ ಪಾದಕ್ಕೆ ನಮಸ್ಕಾರ ಮಾಡುತ್ತೇವೆ ಯಾರೂ ಆತ್ಮಹತ್ಯೆಯಂಥಹಾ ನಿರ್ಣಯ ಮಾಡಬೇಡಿ. ಈಗಾಗಲೇ ನೋವಿನಲ್ಲಿರುವ ನಮಗೆ ಇನ್ನಷ್ಟು ನೋವು ಕೊಡಬೇಡಿ'' ಎಂದು ಬೇಡಿಕೊಂಡಿದ್ದಾರೆ.
''ಅಪ್ಪಾಜಿಯವರು ಅಭಿಮಾನಿಗಳನ್ನು ದೇವರು ಎಂದು ಕರೆದಿದ್ದಾರೆ. ದೇವರೇ ಇಂಥಹಾ ಕೆಲಸ ಮಾಡಿದರೆ ಹೇಗೆ. ಅಭಿಮಾನಿಗಳು ದಯವಿಟ್ಟು ನಿಮ್ಮ-ನಿಮ್ಮ ತಂದೆ-ತಾಯಿಯರ ಬಗ್ಗೆ ಯೋಚನೆ ಮಾಡಿ. ಚಿಕ್ಕಮಕ್ಕಳಿಗೆ ಇದು ಮಾದರಿಯಾಗುವುದಿಲ್ಲ. ತಮ್ಮನ ಹೆಂಡತಿ, ಮಕ್ಕಳು ಈಗಾಗಲೇ ನೊಂದುಕೊಂಡಿದ್ದಾರೆ. ಹೀಗೆ ಮಾಡಿದರೆ ಅದು ಅವರಿಗೆ ಇನ್ನಷ್ಟು ನೋವು ನೀಡುತ್ತದೆ.ಅಪ್ಪು ಪತ್ನಿ ಬಹಳ ಬೇಸರ ಮಾಡಿಕೊಂಡಿದ್ದಾರೆ, ನನ್ನ ಪತಿ ಇಂಥಹುದ್ದಕ್ಕೆ ಕಾರಣ ಆಗಿಬಿಟ್ಟರಲ್ಲ ಎಂದು ಅವರು ಬೇಸರ ತೋಡಿಕೊಂಡಿದ್ದಾರೆ. ನಿಮ್ಮ ಪಾದಗಳಿಗೆ ನಮಸ್ಕಾರ ಮಾಡುವೆ ಹೀಗೆ ಮಾಡಬೇಡಿ'' ಎಂದು ಕೇಳಿಕೊಂಡಿದ್ದಾರೆ. ನಟ ಶಿವಣ್ಣ ಸಹ ಮಾಧ್ಯಮಗಳೊಟ್ಟಿಗೆ ಮಾತನಾಡಿ, ಅಭಿಮಾನಿಗಳು ಆತ್ಮಹತ್ಯೆಯಂತಹಾ ನಿರ್ಣಯಗಳಿಗೆ ಕೈ ಹಾಕಬಾರದು ಎಂದು ಬೇಡಿಕೊಂಡಿದ್ದಾರೆ.


Click it and Unblock the Notifications











