ಗಂಧದಗುಡಿ ಬಿಡುಗಡೆಗೆ ಅಭಿಮಾನಿ ದೇವರುಗಳ ಪ್ಲಾನ್; ಮುಖ್ಯ ಚಿತ್ರಮಂದಿರದ ಎದುರು 3 ಪ್ರಮುಖ ಕಟ್ಔಟ್

ಪುನೀತ್ ರಾಜ್ ಕುಮಾರ್ ಅಭಿನಯದ ಅಂತಿಮ ಚಿತ್ರವಾದ ಗಂಧದಗುಡಿ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ. ನಿರೀಕ್ಷೆಗಿಂತ ಹೆಚ್ಚಾಗಿ ಪುನೀತ್ ರಾಜ್ ಕುಮಾರ್ ಅವರನ್ನು ಕೊನೆಯ ಬಾರಿಗೆ ಬೆಳ್ಳಿ ತೆರೆ ಮೇಲೆ ನೋಡಲು ಇರುವ ಅಂತಿಮ ಅವಕಾಶ ಇದಾಗಿದೆ. ಪುನೀತ್ ರಾಜ್ ಕುಮಾರ್ ಹಾಗೂ ಅಮೋಘವರ್ಷ ಕರ್ನಾಟಕದ ಕಾಡುಮೇಡುಗಳಲ್ಲಿ ಅಲೆದು ಕರ್ನಾಟಕದ ವನ್ಯ ಸಂಪತ್ತಿನ ಕುರಿತು ಚಿತ್ರೀಕರಿಸಲಾಗಿರುವ ಡಾಕ್ಯುಮೆಂಟರಿ ಇದಾಗಿದ್ದು, ನಮ್ಮ ಮಣ್ಣಿನ ವಿಚಾರವನ್ನು ತೆರೆದಿಡಲಿದೆ. ಈ ಚಿತ್ರಕ್ಕೆ ಗಂಧದ ಗುಡಿ ಎಂದು ಹೆಸರು ಇಡಲಾಗಿದ್ದು, ಇದೇ ಶೀರ್ಷಿಕೆಯಡಿಯಲ್ಲಿ ಈಗಾಗಲೇ ರಾಜ್ ಕುಮಾರ್ ಹಾಗೂ ಶಿವರಾಜ್ ಕುಮಾರ್ ಚಿತ್ರಗಳನ್ನು ಮಾಡಿದ್ದು, ಇದೀಗ ಅಪ್ಪು ಕೂಡ ಈ ಟೈಟಲ್ ಅಡಿಯಲ್ಲಿ ಚಿತ್ರ ಮಾಡಿರುವುದು ವಿಶೇಷವಾಗಿದೆ.
ಇನ್ನು ಗಂಧದಗುಡಿ ಬಿಡುಗಡೆಗೆ ಇನ್ನೂ ತಿಂಗಳಿಗಿಂತ ಹೆಚ್ಚು ದಿನ ಬಾಕಿ ಇರುವಾಗಲೇ ಅಪ್ಪು ಅಭಿಮಾನಿಗಳು ಗಂಧದಗುಡಿ ಹಬ್ಬ ಎಂಬ ಹೆಸರಿನಲ್ಲಿ ಈಗಾಗಲೇ ಸಂಭ್ರಮಾಚರಣೆಯನ್ನು ಆಚರಿಸಿದ್ದು, ಭಾನುವಾರದಂದು ಅಪ್ಪು ಪೋಸ್ಟರ್ಗೆ ಮಂಗಳಾರತಿ ಮಾಡಿ, ಹಾಲಿನ ಅಭಿಷೇಕ ಮಾಡಿ ಜೈಕಾರ ಕೂಗಿ ಸಂಭ್ರಮಿಸಿದ್ದರು. ಇದೀಗ ಅಪ್ಪು ಫ್ಯಾನ್ಸ್ ಮತ್ತೊಂದು ತೀರ್ಮಾನವನ್ನು ತೆಗೆದುಕೊಂಡಿದ್ದು ಗಂಧದಗುಡಿ ಬಿಡುಗಡೆಗೆ ಚಿತ್ರ ಬಿಡುಗಡೆಯಾಗಲಿರುವ ಕೆಜಿ ರಸ್ತೆಯ ಪ್ರಮುಖ ಚಿತ್ರಮಂದಿರದ ಎದುರು ರಾಜ್ ಕುಮಾರ್, ಶಿವರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಈ ಮೂವರು ನಟರ ಕಟ್ ಔಟ್ ನಿಲ್ಲಿಸಲು ಯೋಜನೆ ರೂಪಿಸಲಾಗಿದೆ. ಮೂವರೂ ಸಹ ಗಂಧದಗುಡಿ ಶೀರ್ಷಿಕೆ ಅಡಿಯಲ್ಲಿ ಚಿತ್ರ ಮಾಡಿರುವ ಕಾರಣ ಈ ಚಿತ್ರದ ಕಟ್ ಔಟ್ ಗಳನ್ನೇ ನಿಲ್ಲಿಸುವ ಸಾಧ್ಯತೆಗಳು ಹೆಚ್ಚಿವೆ.


Click it and Unblock the Notifications











