'ಜೇಮ್ಸ್' ಚಿತ್ರ ಎತ್ತಂಗಡಿ ಖಂಡಿಸಿ ಮೈಸೂರಿನಲ್ಲಿ ಅಪ್ಪು ಅಭಿಮಾನಿಗಳ ಪ್ರತಿಭಟನೆ
ಪುನೀತ್ ರಾಜ್ಕುಮಾರ್ ನಟನೆಯ ಕೊನೆಯ ಕಮರ್ಶಿಯಲ್ ಸಿನಿಮಾ 'ಜೇಮ್ಸ್' ಅನ್ನು ವಿವಿಧ ಕಾರಣಗಳಿಗೆ ಚಿತ್ರಮಂದಿರದಿಂದ ಎತ್ತಂಗಡಿ ಮಾಡುತ್ತಿರುವುದರ ವಿರುದ್ಧ ಅಪ್ಪು ಅಭಿಮಾನಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಅವರ ಕೊನೆ ಚಿತ್ರ 'ಜೇಮ್ಸ್' ಅನ್ನು ಚಿತ್ರಮಂದಿರಗಳಿಂದ ಎತ್ತಂಗಡಿ ಮಾಡುತ್ತಿರುವುದನ್ನು ಖಂಡಿಸಿ ಮೈಸೂರಿನಲ್ಲಿ ಇಂದು (ಮಾರ್ಚ್ 23) ಅಭಿಮಾನಿಗಳು ಪ್ರತಿಭಟನೆ ನಡೆಸಿದರು.
ನಗರದ ರಾಮಸ್ವಾಮಿ ವೃತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಶಾಸಕ ಎಸ್.ಟಿ.ಸೋಮಶೇಖರ್, ಕರ್ನಾಟಕ ರತ್ನ, ಪವರ್ ಸ್ಟಾರ್ ಡಾ.ದಿ.ಪುನೀತ್ ರಾಜಕುಮಾರ್ ಅವರ ನಿಧನದಲ್ಲಿ ಇಡೀ ದೇಶವೇ ಶೋಕ ವ್ಯಕ್ತಪಡಿಸಿದೆ. ಅಂತಹ ಕನ್ನಡದ ಪ್ರಖ್ಯಾತ ಕಲಾವಿದನ ಪ್ರತಿಭೆ ಮತ್ತು ಸಾಮಾಜಿಕ ಸೇವೆಗೆ ಮೈಸೂರು ವಿವಿ ಡಾಕ್ಟರೇಟ್ ಪದವಿಯನ್ನು ನೀಡಿದೆ. ಅಂತಹ ಮೇರು ವ್ಯಕ್ತಿಯ "ಜೇಮ್ಸ್"ಚಿತ್ರವನ್ನು ಇಡೀ ದೇಶದೆಲ್ಲೆಡೆ ಕೊನೆಯ ಚಿತ್ರವೆಂದು ಭಾವನಾತ್ಮಕವಾಗಿ ತೆಗೆದುಕೊಂಡು ಪ್ರತಿಯೊಂದು ಕುಟುಂಬಗಳು ತುದಿಗಾಲಲ್ಲಿ ನಿಂತು ವೀಕ್ಷಿಸುತ್ತಿದ್ದು ಯಶಸ್ವಿಯಾಗುತ್ತಿರುವುದನ್ನು ಸಹಿಸದೆ ಜೇಮ್ಸ್ ಚಿತ್ರವನ್ನು ಚಿತ್ರಮಂದಿರಗಳಲ್ಲಿ ತೆಗೆದುಹಾಕಲಾಗುತ್ತಿದೆ ಎಂದು ಆರೋಪಿಸಿದರು.
Recommended Video

''ಅಪ್ಪುಗೆ ಗೌರವ ಕೊಡಬೇಕೆಂಬ ಕನಿಷ್ಠ ಜ್ಞಾನ ಬಿಜೆಪಿ ಸರ್ಕಾರಕ್ಕಿಲ್ಲ''
ನಂತರ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್, ''ರಾಜ್ ಕುಟುಂಬದ ಅಗ್ರಮಾನ್ಯ ನಟ ಪುನೀತ್ ರಾಜ್ ಕುಮಾರ್ ರವರ ನಿಧನವಾಗಿ ತಿಂಗಳುಗಳೇ ಕಳೆದಿದ್ದರು ಅಭಿಮಾನಿಗಳ ನೋವು ಮಾಸಿಲ್ಲ ಆಗಲೇ ಮತ್ತೆ ಅವಮಾನ ಮಾಡಲು ಹೊರಟಿರುವ ಬಿಜೆಪಿಯವರ ಮನಸ್ಥಿತಿಗೆ ಏನು ಹೇಳಬೇಕು ಅರ್ಥ ಆಗ್ತಿಲ್ಲ. ಅವರ ಸಮಾಧಿಯ ಬಳಿ ಇವತ್ತಿಗೂ ಜನಸಾಗರ ಬರುತ್ತಲೇ ಇದೆ ಕನ್ನಡಿಗರಷ್ಟೇ ಅಲ್ಲದೆ ನೆರೆಹೊರೆಯ ರಾಜ್ಯಗಳಲ್ಲೂ ಅವರ ಸಾವಿಗೆ ಕಂಬನಿ ಮಿಡಿದಿದ್ದಾರೆ. ಅದನ್ನು ಮೀರಿ ತಮಿಳುನಾಡಿನ ಅಧಿವೇಶನವೊಂದರಲ್ಲಿ ಪುನೀತ್ ರ ಮಾನವೀಯ ಕಾರ್ಯಗಳನ್ನು ಕೊಂಡಾಡಿದ್ದಾರೆ.ಆದರೆ ಅವರ ಮಾನವೀಯತೆ, ಸಮಾಜ ಸೇವೆಗೆ ಯಾವ ಗೌರವ ಕೊಡಬೇಕು ಎಂಬ ಕನಿಷ್ಠ ಜ್ಞಾನ ಬಿಜೆಪಿ ಸರ್ಕಾರಕ್ಕಿಲ್ಲ'' ಎಂದರು.

''ಪುನೀತ್ ರಾಜ್ಕುಮಾರ್ಗೆ ಅಪಮಾನ ಮಾಡಲಾಗುತ್ತಿದೆ''
''ಇಡೀ ದೇಶದೆಲ್ಲೆಡೆ ಅವರ ಕೊನೆಯ ಜೇಮ್ಸ್ ಚಿತ್ರವನ್ನು ಕುಟುಂಬ ಸಮೇತ ಭಾವನಾತ್ಮಕವಾಗಿ ತೆಗೆದುಕೊಂಡು ತುದಿಗಾಲಲ್ಲಿ ನಿಂತು ಕಾಯುತ್ತಿದ್ದು, ಯಶಸ್ವಿಯ ನಾಗಲೋಟದಲ್ಲಿ ಸಾಗುತ್ತಿದೆ. ಆದರೆ ಇದನ್ನು ಸಹಿಸದ ಬಿಜೆಪಿಯ ಹೀನ ಮನಸ್ಸಿನ ಕೆಲವರು ದುರುದ್ದೇಶದಿಂದ ಜೇಮ್ಸ್ ಚಿತ್ರವನ್ನು ತೆಗೆಯುವ ಹುನ್ನಾರ ಮಾಡುತ್ತಿರುವುದು ಪುನೀತ್ ರಾಜ್ ಕುಮಾರವರಿಗೆ ಮಾಡುತ್ತಿರುವ ಉದ್ದೇಶಿತ ಅವಮಾನವೆಂದೇ ಬಿಂಬಿಸಬಹುದಾಗಿದೆ.ಆ ನಿಟ್ಟಿನಲ್ಲಿ ಈ ದಿನ ಪ್ರತಿಭಟಿಸಿದ್ದೇವೆ'' ಎಂದರು.

ಪುನೀತ್ ಅವರನ್ನು ಅವಮಾನಿಸಬೇಡಿ: ಮಾಜಿ ಶಾಸಕ
''ಬಿಜೆಪಿ ಸರ್ಕಾರವೇ ಪುನೀತ್ ರಾಜ್ ಕುಮಾರ್ ರವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದ್ದಾರೆ. ಆ ಪ್ರಶಸ್ತಿ ನೀಡಿದ್ದಕ್ಕೆ ಹಾಗೂ ಮೈಸೂರು ವಿವಿ ನೀಡಿರುವ ಮರಣೋತ್ತರ ಗೌರವ ಡಾಕ್ಟರೇಟ್ಗೆ ಗೌರವ ಸಿಗಬೇಕೆಂದರೆ ಪ್ರತಿಭಾವಂತ ನಟನನ್ನು ಅವಮಾನಿಸಬಾರದು ಬದಲಾಗಿ ಅವರ ಚಿತ್ರಕ್ಕೂ ತೆರಿಗೆ ವಿನಾಯಿತಿಯನ್ನು ನೀಡಬೇಕೆಂದು ಆಗ್ರಹಿಸುತ್ತೇನೆ. ಇಂತಹ ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಾಂತ ಪ್ರತಿಭಟನೆ ಮುಂದಾಗುತ್ತೇವೆ'' ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ರಸ್ತೆ ತಡೆ ನಡೆಸಿದ ಅಭಿಮಾನಿಗಳು
ಅಭಿಮಾನಿಗಳು ರಸ್ತೆ ತಡೆದು ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು. ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಜಿ ಸೋಮಶೇಖರ್, ಶ್ರೀಧರ್, ಕೆಪಿಸಿಸಿ ಸದಸ್ಯರುಗಳಾದ ವೀಣಾ, ಶ್ರೀನಾಥ್ ಬಾಬು, ಬ್ಲಾಕ್ ಅಧ್ಯಕ್ಷೆ ವಿದ್ಯಾ, ಶಿವರಾಜಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷರಾದ ರವಿಚಂದ್ರ, ಗಿರೀಶ್, ಮುಖಂಡರುಗಳಾದ ವಿಜಯ್ ಕುಮಾರ್, ಹರೀಶ್ ನಾಯ್ಡು, ವಿನಯ್ ಕುಮಾರ್ ಜೆ, ಡೈರಿ ವೆಂಕಟೇಶ್, ಗುಣಶೇಖರ್, ನವೀನ್ ಎಂ ಕೆಂಪಿ, ಇರ್ಫಾನ್, ಫಾರುಖ್, ಶಾದಿಖ್ ಉಲ್ಲಾ ರೆಹಮಾನ್, ನಾಸೀರ್, ಸುರೇಶ್, ಅಭಿಷೇಕ್ ಶಿವಣ್ಣ ಹಾಗೂ ನೂರಾರು ಜನ ಪಾಲ್ಗೊಂಡಿದ್ದರು.


Click it and Unblock the Notifications











