ಪುನೀತ್ ಆತ್ಮಕ್ಕೆ ಶಾಂತಿ ಕೋರಿ 3800 ಅಡಿ ಬೆಟ್ಟ ಏರಿದ ಅಭಿಮಾನಿಗಳು
ಪುನೀತ್ ರಾಜ್ಕುಮಾರ್ ಆತ್ಮಕ್ಕೆ ಶಾಂತಿ ಸಿಗಲಿ, ಅಶ್ವಿನಿ ಅಕ್ಕನಿಗೆ ಒಳ್ಳೆದಾಗಲಿ ಎಂದು ಚಿಕ್ಕಮಗಳೂರಿನ ಅಪ್ಪು ರವಿ ಹಾಗೂ ಅನಂತ್ ಎಂಬ ಇಬ್ಬರು ಸ್ನೇಹಿತರು ಹೆಗಲ ಮೇಲೆ ಸೌದೆಯನ್ನ ಹೊತ್ತುಕೊಂಡು ತಾಲೂಕಿನ ಮಲ್ಲೇನಹಳ್ಳಿಯಲ್ಲರುವ ಪಿರಮಿಡ್ ಆಕಾರದ ಸುಮಾರು 3800 ಅಡಿ ಎತ್ತರದ ಬೆಟ್ವವನ್ನ ಹತ್ತಿ ದೇವೀರಮ್ಮನಿಗೆ ಬೇಡಿಕೊಂಡಿದ್ದಾರೆ.
ಪುನೀತ್ ರಾಜ್ಕುಮಾರ್ ಹೃದಯಾಘಾತವಾಗಿದೆ ಎಂದು ವಿಷಯ ತಿಳಿಯುತ್ತಿದ್ದಂತೆ ಶಕ್ತಿದೇವತೆ ದೇವೀರಮ್ಮನ ದೇವಸ್ಥಾನಕ್ಕೆ ಹೋಗಿ ಪುನೀತ್ಗೆ ಏನೂ ಆಗಬಾರದು ಎಂದು, ಸೌದೆ ಹೊತ್ತುಕೊಂಡು ಬಂದು ಬೆಟ್ಟ ಹತ್ತಿ ದೀಪ ಹಚ್ಚುತ್ತೇನೆಂದು ರವಿ ದೇವೀರಮ್ಮನಿಗೆ ಹರಕೆ ಕಟ್ಟಿಕೊಂಡಿದ್ದರು. ಆದರೆ, ವಿಧಿಲಿಖಿತ ಬೇರೆಯೇ ಇತ್ತು ಪುನೀತ್ ನಮ್ಮನ್ನ ಅಗಲಿಯೇ ಬಿಟ್ಟರು. ಆದರೆ, ಪುನೀತ್ ಅಗಲಿಕೆಯ ನೋವಿನ ಮಧ್ಯೆಯೂ ರವಿ ಹಾಗೂ ಅನಂತ್ ಇಬ್ಬರೂ ಹೆಗಲ ಮೇಲೆ ಸೌದೆ ಹೊತ್ತುಕೊಂಡು ಬೆಟ್ಟ ಏರಿ ದೇವೀರಮ್ಮನಿಗೆ ಬೇಡಿಕೊಂಡಿದ್ದಾರೆ. ರವಿಗೆ ಚಿಕ್ಕಂದಿನಿಂದಲೂ ಪುನೀತ್ ರಾಜ್ ಕುಮಾರ್ ಬಗ್ಗೆ ಅಪಾರ ಪ್ರೀತಿ. ಅವರ ಪ್ರತಿಯೊಂದು ಸಿನಿಮಾಗಳನ್ನ ನೋಡಿಕೊಂಡು ಅವರಂತೆಯೇ ಡ್ಯಾನ್ಸ್ ಮಾಡಿ ಖುಷಿ ಪಡುತ್ತಿದ್ದರು.
ನಗರದ ಶ್ರೀಲೇಖಾ ಥಿಯೇಟರ್ ಬಳಿ ಕ್ಯಾಂಟೀನ್ ಇಟ್ಟುಕೊಂಡು ಜೀವನ ಸಾಗಿಸಿತ್ತಿರೊ ರವಿ ಇಷ್ಟು ದಿನ ಕ್ಯಾಂಟೀನ್ಗೆ ತನ್ನ ಮಗಳ ಹೆಸರನ್ನು ಇಟ್ಟಿದ್ದರು. ಇದೀಗ, ಮಗಳ ಹೆಸರನ್ನ ತೆಗೆದು ಅಪ್ಪು ಕ್ಯಾಂಟೀನ್ ಎಂದು ಮರುನಾಮಕರಣ ಮಾಡಲು ಮುಂದಾಗಿದ್ದಾರೆ. ರವಿಗೆ ಪುನೀತ್ ಮೇಲಿದ್ದ ಗೌರವ-ಪ್ರೀತಿ ಕಂಡು ರವಿ ಸ್ನೇಹಿತರು ರವಿಯನ್ನ ಅಪ್ಪುರವಿ ಎಂದೇ ಕರೆಯುತ್ತಿದ್ದಾರೆ. ಆರಂಭದಲ್ಲಿ ಆರ್ಕೆಸ್ಟ್ರಾದಲ್ಲಿ ಕೆಲಸ ಮಾಡುತ್ತಿದ್ದ ರವಿ, ಆರ್ಕೆಸ್ಟ್ರಾದ ಕೊನೆಯಲ್ಲಿ ಪುನೀತ್ ಹಾಡು ಹಾಡದೆ ವಾಪಸ್ ಬರುತ್ತಿರಲಿಲ್ಲ.

ಪುನೀತ್ ಡ್ಯಾನ್ಸ್ ಮಾಡಿದಂತೆ ನಾನೂ ಮಾಡಬೇಕೆಂದು ಡ್ಯಾನ್ಸ್ ಕ್ಲಾಸ್ ಸೇರಿ ಡ್ಯಾನ್ಸ್ ಕಾಂಪಿಟೇಷನ್ ಕಾರ್ಯಕ್ರಮಕ್ಕೂ ಹೋಗಿದ್ದರು. ಮನಸಲ್ಲಿ ಪುನೀತ್ ಅನ್ನು ಗುರುವೆಂದು ಭಾವಿಸಿ ಅವರ ಡ್ಯಾನ್ಸ್ ಸ್ಟೆಪ್ಗಳನ್ನು ನಕಲು ಮಾಡುತ್ತಿದ್ದರು. ಆದರೆ, ಇಂದು ಪುನೀತ್ ನಮ್ಮೊಂದಿಗೆ ಇಲ್ಲ. ನಾನು ಯಾರನ್ನು ಅನುಕರಣೆ ಮಾಡಲಿ, ಯಾರನ್ನ ಅಣ್ಣ ಎಂದು ಕರೆಯಲಿ ಎಂದು ಕಣ್ಣೀರಿಟ್ಟಿದ್ದಾರೆ. ಬೆಂಗಳೂರಿಗೆ ಹೋಗಿ ಪುನೀತ್ ಅಂತಿಮ ದರ್ಶನವನ್ನೂ ಮಾಡಿಕೊಂಡು ಬಂದಿದ್ದಾರೆ.
ಪುನೀತ್ ಅವರಂತೆ ನಾನು ಹಾಗೂ ನನ್ನ ಸಹೋದರ ಇಬ್ಬರೂ ನೇತ್ರದಾನ ಮಾಡುತ್ತೇವೆ ಎಂದಿದ್ದಾರೆ. ರಾಜ್ಕುಮಾರ್ ಮರಣ ಹೊಂದಿದಾಗಲೇ ನೇತ್ರದಾನಕ್ಕೆ ಹೋಗಿದ್ದೆ. ಮನೆಯವರ ಸಹಿ ಬೇಕು ಎಂದು ಹೇಳಿ ವಾಪಸ್ ಕಳಿಸಿದ್ದರು. ಈಗ ನೇತ್ರದಾನ ಮಾಡುತ್ತೇನೆ. ಜೊತೆಗೆ, ನನ್ನ ಕ್ಯಾಂಟೀನ್ಗೆ ಬರುವ 60 ವರ್ಷ ಮೇಲ್ಪಟ್ಟವರಿಗೆ ಅಪ್ಪು ನೆನಪಿಗಾಗಿ ಉಚಿತ ಊಟ-ತಿಂಡಿ, ಕಾಫಿ-ಟೀ ಕೊಡುತ್ತೇನೆ. ಅವರಂತೆ ನನ್ನ ಕೈಲಾದ ಸೇವೆ ಮಾಡುತ್ತೇನೆ ಎಂದು ರವಿ ಅಪ್ಪು ಹೆಸರನ್ನ ಜೀವಂತವಾಗಿರಿಸಲು ಮುಂದಾಗಿದ್ದಾರೆ. 'ಜೊತೆಗಿರದ ಜೀವ ಎಂದೆಂದೂ ಜೀವಂತ'. ಸೇವೆಯ ಹೆಸರಲ್ಲಿ ಅವರ ಹೆಸರನ್ನ ಅಜರಾಮರಗೊಳಿಸಲು ಮುಂದಾಗಿದ್ದಾರೆ. ತನ್ನ ಕ್ಯಾಂಟೀನ್ ಮುಂಭಾಗವೇ ಅಪ್ಪುವಿನ 11ನೇ ದಿನದ ಆರಾಧಾನೆ ಮಾಡಿ ಪುನೀತ್ ಆತ್ಮಕ್ಕೆ ಶಾಂತಿ ಕೋರಿದ್ದಾರೆ.


Click it and Unblock the Notifications











