ಪುನೀತ್ ಜೊತೆಗೆ ಮತ್ತೊಂದು ಸಿನಿಮಾ ಘೋಷಿಸಿದ ಹೊಂಬಾಳೆ: ನಿರ್ದೇಶಕ ಯಾರು?
ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲಮ್ಸ್ ಯುಗಾದಿ ಹಬ್ಬದಂದು ಪುನೀತ್ ರಾಜ್ಕುಮಾರ್ ಅಭಿಮಾನಿಗಳಿಗೆ ಅನಿರೀಕ್ಷಿತ ಉಡುಗೊರೆಯೊಂದನ್ನು ನೀಡಿದೆ.
ಈಗಷ್ಟೆ ಪುನೀತ್ ರಾಜ್ಕುಮಾರ್ ಜೊತೆಗೆ 'ಯುವರತ್ನ' ಸಿನಿಮಾ ಮುಗಿಸಿ ಬಿಡುಗಡೆ ಮಾಡಿರುವ ಹೊಂಬಾಳೆ ಫಿಲಮ್ಸ್ ಮತ್ತೆ ಪುನೀತ್ ರಾಜ್ಕುಮಾರ್ ಜೊತೆಗೆ ಸಿನಿಮಾ ಘೋಷಿಸಿದೆ. ಯುಗಾದಿ ಹಬ್ಬದ ಸಂದರ್ಭದಲ್ಲಿ ಹೊಂಬಾಳೆ ಫಿಲಮ್ಸ್ ಈ ಅಧಿಕೃತ ಘೋಷಣೆಯನ್ನು ಟ್ವಿಟ್ಟರ್ ಮೂಲಕ ಮಾಡಿದೆ.
ಪುನೀತ್ ಜೊತೆಗೆ ಹೊಂಬಾಳೆ ನಿರ್ಮಿಸುತ್ತಿರುವ ಎರಡನೇ ಸಿನಿಮಾಕ್ಕೆ ಪ್ರತಿಭಾವಂತ ನಿರ್ದೇಶಕನ್ನು ಆರಿಸಲಾಗಿದೆ. 'ಲೂಸಿಯಾ', 'ಯು-ಟರ್ನ್' ಅಂಥಹಾ ಭಿನ್ನ, ತಾಂತ್ರಿಕವಾಗಿ ಅತ್ಯುತ್ತಮ ಸಿನಿಮಾಗಳನ್ನು ನೀಡಿರುವ ಪವನ್ ಕುಮಾರ್ ಅವರು ಪುನೀತ್ ಅವರ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ.

ಪುನೀತ್ ರಾಜ್ಕುಮಾರ್ ಹಾಗೂ ಪವನ್ ಕುಮಾರ್ ಸಿನಿಮಾಕ್ಕಾಗಿ ಒಂದಾಗುತ್ತಿದ್ದಾರೆ ಎಂಬ ಗಾಳಿ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿತ್ತು. ಆದರೆ ಆ ಸಿನಿಮಾವನ್ನು ಹೊಂಬಾಳೆ ಫಿಲಮ್ಸ್ ನಿರ್ಮಾಣ ಮಾಡುತ್ತದೆ ಎಂಬುದನ್ನು ನಿರೀಕ್ಷಿಸಿರಲಿಲ್ಲ.
ನಟ ಪುನೀತ್ ರಾಜ್ಕುಮಾರ್ ಅವರು ಸಹ ಹೊಸ ಸಿನಿಮಾದ ಘೋಷಣೆ ಬಗ್ಗೆ ಟ್ವೀಟ್ ಮಾಡಿದ್ದು, ಪವನ್ ಕುಮಾರ್, ನಿರ್ಮಾಪಕ ವಿಜಯ್ ಕಿರಗಂದೂರ್ ಹಾಗೂ ತಾವು ಒಟ್ಟಿಗೆ ಇರುವ ಚಿತ್ರವನ್ನು ಟ್ವಿಟ್ಟರ್ನಲ್ಲಿ ಪ್ರಕಟಿಸಿದ್ದಾರೆ. ಸಿನಿಮಾದ ಫೊಟೊಶೂಟ್ ಜುಲೈ ತಿಂಗಳಲ್ಲಿ ಪ್ರಾಂಭವಾಗಲಿದೆಯಂತೆ.
ಪುನೀತ್ ರಾಜ್ಕುಮಾರ್ ಪ್ರಸ್ತುತ 'ಜೇಮ್ಸ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದಾದ ಬಳಿಕ ದಿನಕರ್ ತೂಗುದೀಪ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ ಅದಾದ ಬಳಿಕ ಪವನ್ ನಿರ್ದೇಶನದ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲಿದ್ದಾರೆ.
Recommended Video
ಇನ್ನು ನಿರ್ದೇಶಕ ಪವನ್ ಅವರು ತೆಲುಗಿನಲ್ಲಿ 'ಕುಡಿ ಎಡಮೈತೆ' ಎಂಬ ವೆಬ್ ಸರಣಿ ನಿರ್ದೇಶಿಸಿದ್ದಾರೆ ಅದರ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಚಾಲ್ತಿಯಲ್ಲಿದೆ. 'ಯುವರತ್ನ' ಸಿನಿಮಾವನ್ನು ಈಗಷ್ಟೆ ಬಿಡುಗಡೆ ಮಾಡಿರುವ ಹೊಂಬಾಳೆ ಫಿಲಮ್ಸ್, ತೆಲುಗಿನಲ್ಲಿ ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ನಿರ್ಮಾಣ ಮಾಡುತ್ತಿದೆ. ಇದೇ ಪ್ರೊಡಕ್ಷನ್ ಸಂಸ್ಥೆಯ 'ಕೆಜಿಎಫ್ 2' ಸಿನಿಮಾ ಜುಲೈ 16ರಂದು ಬಿಡುಗಡೆ ಆಗಲಿದೆ.


Click it and Unblock the Notifications











