ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ವಿಶೇಷ ಅಭಿಮಾನಿಯ ಆಸೆ ಈಡೇರಿಸಿದ ಪುನೀತ್ ರಾಜ್ ಕುಮಾರ್
ಅಭಿಮಾನಿಗಳ ಪ್ರೀತಿಯ ಅಪ್ಪು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇತ್ತೀಚಿಗೆ ವಿಶೇಷ ಅಭಿಮಾನಿಯನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ಅಭಿಮಾನಿಗಳೇ ದೇವರೆಂದು ಆರಾಧಿಸುವ ಅಪ್ಪು ಅವರು ಕಷ್ಟದಲ್ಲಿದ್ದಾರೆ ಎಂದು ಗೊತ್ತಾದರೆ ಸಾಕು ಸಹಾಯಕ್ಕೆ ನಿಲ್ಲುತ್ತಾರೆ.
ಇತ್ತೀಚಿಗೆ ಪವರ್ ಸ್ಟಾರ್ ಅಪ್ಪಟ ಅಭಿಮಾನಿಯೊಬ್ಬರನ್ನು ಭೇಟಿಯಾಗಿ ಅವರ ಆಸೆ ಈಡೇರಿಸಿದ್ದಾರೆ. ಹೌದು, ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ತೋವಿನಕೆರೆಯ ದೇವಿಪ್ರಿಯಾ ಎನ್ನುವ ಬಾಲಕಿಗೆ ಅಪ್ಪು ಎಂದರೆ ತುಂಬಾ ಪ್ರೀತಿ.
ಆದರೆ ಆ ದೇವರು ಎಲ್ಲಾ ಮಕ್ಕಳಂತೆ ಕುಣಿಯುವ, ಓಡುವ, ಹಾರಾಡುತ್ತಾ ಜೀವಿಸುವ ಬದುಕನ್ನು ಕಿತ್ತುಕೊಂಡಿದ್ದಾನೆ. ಸುಮಾರು ಎರಡು ವರ್ಷಗಳಿಂದ ದೇವಿಪ್ರಿಯಾ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಪುಟ್ಟ ಬಾಲಕಿ ಪ್ರತಿನಿತ್ಯ ಪವರ್ ಸ್ಟಾರ್ ನೋಡದೆ ಊಟ ಸಹ ಮಾಡುವುದಲ್ಲವಂತೆ.

ಜೀವನದಲ್ಲಿ ಒಮ್ಮೆಯಾದರೂ ಅಪ್ಪು ಭೇಟಿಯಾಗಬೇಕು, ಮಾತನಾಡಿಸಬೇಕು ಎನ್ನುವುದು ಆ ಬಾಲಕಿಯ ಆಸೆ. ಈ ಬಗ್ಗೆ ವಿಷಯ ತಿಳಿದುಕೊಂಡ ಪವರ್ ಸ್ಟಾರ್ ಪುಟ್ಟ ಬಾಲಕಿಯನ್ನು ಭೇಟಿಯಾಗಿದ್ದಾರೆ. ಅವರ ಜೊತೆ ಕೆಲ ಸಮಯ ಮಾತನಾಡಿ ಧೈರ್ಯ ತುಂಬಿದ್ದಾರೆ. ಪವರ್ ಸ್ಟಾರ್ ಭೇಟಿಯಿಂದ ದೇವಿಪ್ರಿಯಾ ಫುಲ್ ಖುಷ್ ಆಗಿದ್ದಾರೆ. ಅವರ ಕುಟುಂಬದವರು ಸಹ ಅಪ್ಪು ನೋಡಿ ಸಂತಸ ಪಟ್ಟಿದ್ದಾರೆ.
ಪುನೀತ್ ದೇವಿಪ್ರಿಯಾ ಮತ್ತು ಅವರ ಕುಟುಂಬದವರನ್ನು ಭೇಟಿಯಾಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಪ್ಪು ಮಾನವೀಯ ಕೆಲಸಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪುನೀತ್ ಸದ್ಯ ಜೇಮ್ಸ್ ಸಿನಿಮಾದಲ್ಲಿ ನಿರತರಾಗಿದ್ದಾರೆ. ಈಗಾಗಲೇ ಜೇಮ್ಸ್ ಸಿನಿಮಾದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಚಿತ್ರಕ್ಕೆ ಚೇತನ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನು ಪುನೀತ್ ನಟನೆಯ ಯುವರತ್ನ ಸಿನಿಮಾ ರಿಲೀಸ್ ಗೆ ರೆಡಿಯಾಗಿದ್ದು, ಏಪ್ರಿಲ್ 1ರಂದು ತೆರೆಗೆ ಬರುತ್ತಿದೆ. ಈ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.


Click it and Unblock the Notifications










