ವಿಜಯ್ ರೆಡ್ಡಿ ನಿರ್ದೇಶನದ ಸಿನಿಮಾದಲ್ಲಿ ನಟಿಸಿರುವುದೇ ನನ್ನ ಭಾಗ್ಯ- ಪುನೀತ್ ರಾಜ್ ಕುಮಾರ್
ಮಯೂರ, ಶ್ರೀನಿವಾಸ ಕಲ್ಯಾಣ, ನಾ ನಿನ್ನ ಮರೆಯಲಾರೆ, ಸನಾದಿ ಅಪ್ಪಣ್ಣ, ಗಂಧದ ಗುಡಿ, ಬಡವರ ಬಂಧು, ಹುಲಿಯ ಹಾಲಿನ ಮೇವು, ನೀ ನನ್ನ ಗೆಲ್ಲಲಾರೆ, ಭಕ್ತ ಪ್ರಹ್ಲಾದ ಇಂಥ ಸದಾ ಸ್ಮರಣೀಯ ಚಿತ್ರಗಳನ್ನು ನೀಡಿದ ಖ್ಯಾತ ನಿರ್ದೇಶಕ ವಿಜಯ ರೆಡ್ಡಿ ನಿಧನರಾಗಿದ್ದಾರೆ. ಹಿರಿಯ ನಿರ್ದೇಶಕ ವಿಜಯ ರೆಡ್ಡಿ ನಿಧನಕ್ಕೆ ಇಡೀ ಚಿತ್ರರಂಗ ಕಂಬನಿ ಮಿಡಿದಿದೆ.
84 ವರ್ಷದ ವಿಜಯ್ ರೆಡ್ಡಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಬಹು ಅಂಗಾಂಗ ವೈಫಲ್ಯ ಕೊನೆಯುಸಿರೆಳೆದಿದ್ದಾರೆ.
ಡಾ.ರಾಜ್ ಕುಮಾರ್ ಅವರ ಅದ್ಭುತ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿರುವ ವಿಜಯ್ ರೆಡ್ಡಿ ಅವರನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನೆನಪಿಸಿಕೊಂಡಿದ್ದಾರೆ. ವಿಜಯ್ ರೆಡ್ಡಿ ನಿರ್ದೇಶನದ ಭಕ್ತ ಪ್ರಹ್ಲಾದ ಸಿನಿಮಾದಲ್ಲಿ ಪುನೀತ್ ರಾಜ್ ನಟಿಸಿದ್ದಾರೆ. ಅವರ ನಿರ್ದೇಶನದ ಸಿನಿಮಾದಲ್ಲಿ ನಟಿಸಿರುವುದೇ ನನ್ನ ಭಾಗ್ಯ ಎಂದು ಪುನೀತ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ವಿಜಯ್ ರೆಡ್ಡಿ ನಿಧನಕ್ಕೆ ಸಂತಾಪ ಸೂಚಿಸಿ ಪುನೀತ್ ಟ್ವೀಟ್ ಮಾಡಿದ್ದಾರೆ. "ತಂದೆಯವರ ಮರೆಯಲಾಗದ ಸಿನಿಮಾಗಳಾದ ಗಂಧದಗುಡಿ, ಮಯೂರ, ನಾ ನಿನ್ನ ಮರೆಯಲಾರೆ ಹಾಗು ಹಲವಾರು ಸಿನೆಮಾಗಳನ್ನು ನಿರ್ದೇಶಿಸಿರುವ ವಿಜಯ್ ರೆಡ್ಡಿ ಅವರು ನಿಧನರಾಗಿದ್ದಾರೆ. ಅವರ ನಿರ್ದೇಶನದ ಭಕ್ತ ಪ್ರಹ್ಲಾದ ಚಿತ್ರದಲ್ಲಿ ನಾನು ನಟಿಸಿರುವುದೆ ನನ್ನ ಭಾಗ್ಯ. ಅವರ ಆತ್ಮಕ್ಕೆ ಶಾಂತಿಸಿಗಲಿ." ಎಂದಿದ್ದಾರೆ.

1983ರಲ್ಲಿ ರಿಲೀಸ್ ಆಗಿದ್ದ ಭಕ್ತ ಪ್ರಹ್ಲಾದ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಬಾಲನಟನಾಗಿ ಮಿಂಚಿದ್ದಾರೆ. ಚಿತ್ರದಲ್ಲಿ ಪುನೀತ್ ಪ್ರಹ್ಲಾದನಾಗಿ ಬಣ್ಣಹಚ್ಚಿದ್ದಾರೆ. ಇಂಥ ಅಧ್ಬುತ ಚಿತ್ರ ನಿರ್ದೇಶನ ಮಾಡಿದ ವಿಜಯ್ ರೆಡ್ಡಿ ಇನ್ನು ನೆನಪು ಮಾತ್ರ. ಕನ್ನಡದಲ್ಲಿ ಸುಮಾರು 40 ಸಿನಿಮಾಗಳನ್ನು ವಿಜಯ ರೆಡ್ಡಿ ನಿರ್ದೇಶಿಸಿದ್ದಾರೆ. ತೆಲುಗು, ತಮಿಳುಗಳಲ್ಲಿ ಸಹ ಅವರು ಸಿನಿಮಾ ನಿರ್ದೇಶಿಸಿದ್ದರು.
1970 ರಲ್ಲಿ ತೆರೆಕಂಡಿದ್ದ ರಂಗಮಹಲ್ ರಹಸ್ಯ ವಿಜಯ ರೆಡ್ಡಿ ನಿರ್ದೇಶಿಸಿದ್ದ ಮೊದಲ ಸಿನಿಮಾ, ಆ ನಂತರ ಡಾ.ರಾಜ್ಕುಮಾರ್ ಅವರೊಂದಿಗೆ ಹಲವು ಸಿನಿಮಾಗಳಲ್ಲಿ ವಿಜಯ ರೆಡ್ಡಿ ಕೆಲಸ ಮಾಡಿದ್ದಾರೆ. 70 ರ ದಶಕದ ಸ್ಟಾರ್ ನಿರ್ದೇಶಕ ಎಂಬ ಹೆಸರು ಪಡೆದಿದ್ದರು ವಿಜಯ ರೆಡ್ಡಿ. ತಮ್ಮ ಇಳಿವಯಸ್ಸಿನಲ್ಲಿ ಧಾರಾವಾಹಿ ನಿರ್ದೇಶನವನ್ನೂ ಮಾಡಿದ ವಿಜಯ ರೆಡ್ಡಿ, ಶ್ರೀ ವೆಂಕಟೇಶ್ವರ ಮಹಿಮೆ ಎಂಬ ಧಾರಾವಾಹಿಯನ್ನು ತೆಲುಗು ಹಾಗೂ ಕನ್ನಡ ಏಕಕಾಲದಲ್ಲಿ ನಿರ್ದೇಶಿಸಿದ್ದರು.


Click it and Unblock the Notifications










