ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳಲ್ಲಿ ಎರಡು ಮನವಿ ಮಾಡಿದ ಪುನೀತ್
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಇನ್ನೆರಡು ದಿನ ಮಾತ್ರ ಬಾಕಿಯಿದೆ. 'ದೊಡ್ಮನೆ ಹುಡ್ಗ'ನ ಉತ್ಸವಕ್ಕೆ ಈಗಾಗಲೇ ಅಭಿಮಾನಿಗಳು ಚಾಲನೆ ನೀಡಿದ್ದು, ಜೋರಾಗಿ ತಯಾರಿ ನಡೆಯುತ್ತಿದೆ. ನೆಚ್ಚಿನ ನಟನನ್ನ ನೋಡಿ ಶುಭಕೋರಬೇಕು ಎಂದು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯ್ತಿದ್ದಾರೆ.
ಪವರ್ ಸ್ಟಾರ್ ಹುಟ್ಟುಹಬ್ಬ ಅಂದ್ರೆ ಪ್ರತಿವರ್ಷ ಮಧ್ಯರಾತ್ರಿಯಿಂದಲೇ ದೂರದ ಊರುಗಳಿಂದ ಬರುವ ಅಭಿಮಾನಿಗಳು ಬ್ಯಾನರ್, ಫೋಟೋ, ಕೇಕ್, ಹಾರ, ಹೂ ಗುಚ್ಚಗಳನ್ನು ಹಿಡಿದು ಪುನೀತ್ ಮನೆಮುಂದೆ ಕ್ಯೂ ನಿಲ್ತಾರೆ. ತಾವು ತಂದ ಉಡುಗೊರೆಗಳನ್ನು ನೀಡಿ ಸಂತಸ ಪಡುತ್ತಾರೆ. ಆದ್ರೆ, ಈ ವರ್ಷ ಪುನೀತ್ ಅಭಿಮಾನಿಗಳಲ್ಲಿ ಎರಡು ಮನವಿ ಮಾಡಿಕೊಂಡಿದ್ದಾರೆ.
ಅದೇನೆಂದರೇ, 'ಪವರ್ ಸ್ಟಾರ್ ತಮ್ಮ ಹುಟ್ಟುಹಬ್ಬದ ದಿನದ (ಮಾರ್ಚ್ 16) ರಾತ್ರಿ ಮನೆಯಲ್ಲಿ ಇರುವುದಿಲ್ಲವಂತೆ. ಹಾಗಾಗಿ ರಾತ್ರಿಯಿಂದಲೇ ಮನೆ ಮುಂದೆ ನಿಂತು ನನಗಾಗಿ ಕಾಯಬೇಡಿ' ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅಪ್ಪು ಅವರ ಈ ಮಾತು ಕೆಲವು ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿದೆ.

ಪುನೀತ್ ಅಭಿಮಾನಿಗಳಲ್ಲಿ ಮತ್ತೊಂದು ಮನವಿ ಮಾಡಿದ್ದಾರೆ. ಅದೇನೆಂದರೇ, 'ಕೇಕ್, ಹಾರ, ಹೂ ಗುಚ್ಚ ಮುಂತಾದ ಗಿಫ್ಟ್ ಗಳನ್ನು ತರಬೇಡಿ. ಪ್ರೀತಿ, ವಿಶ್ವಾಸದಿಂದ ಹಣ ಖರ್ಚು ಮಾಡಿಕೊಂಡು ತರುವ ಉಡುಗೊರೆಗಳು ಜನರ ಮಧ್ಯೆ ಕಳೆದುಹೋಗುತ್ತೆ. ಇದರಿಂದ ನಿಮಗೂ ಬೇಸರ, ದೂರದ ಊರಿಂದ ಬಂದು ವಿಶ್ ಮಾಡುವುದೇ ನನಗೆ ದೊಡ್ಡ ಉಡುಗೊರೆ' ಎಂದು ಉಪ್ಪು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.
ಪುನೀತ್ ರಾಜ್ ಕುಮಾರ್ ಸದ್ಯ ಸಂತೋಷ್ ಆನಂದ್ ರಾಮ್ ನಿರ್ದೇಶನದ 'ಯುವರತ್ನ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರೀಕರಣದ ಕಾರಣ ಹೊರಗೆ ಹೋಗಿರುವ ಅಪ್ಪು ಮಾರ್ಚ್ 17ರ ಬೆಳಿಗ್ಗೆ ನಿವಾಸಕ್ಕೆ ವಾಪಸ್ ಆಗ್ತಾರೆ.


Click it and Unblock the Notifications











