ದೀಪಾವಳಿ ಹಬ್ಬಕ್ಕೆ ಪಟಾಕಿ ಬೇಡ ಕ್ಯಾಲೋರಿ ಬರ್ನ್ ಮಾಡೋಣ-ಪುನೀತ್ ಹಳೆಯ ದೀಪಾವಳಿ ಸಂದೇಶ ವೀಡಿಯೋ ಈಗ ವೈರಲ್
ನಟ ಪುನೀತ್ ನಮ್ಮನ್ನೆಲ್ಲ ಅಗಲಿ ಇಂದಿಗೆ 6ನೇ ದಿನ. ಪುನೀತ್ ಅವರನ್ನು ಯಾರಿಂದಲೂ ಮರೆಯಲು ಸಾಧ್ಯವಾಗುತ್ತಿಲ್ಲ. ಮರೆಯಲು ಆಗುವುದೂ ಇಲ್ಲ. ಅವರ ನಗು ಮೊಗ, ಮಂದಹಾಸ, ಜೀವನ ಉತ್ಸಾಹ ಇವೆಲ್ಲವೂ ಸದಾ ಎಲ್ಲರನ್ನೂ ಕಾಡುತ್ತಲೇ ಇರುತ್ತವೆ. ಸಾಕಷ್ಟು ಅಭಿಮಾನಿಗಳು, ಪುನೀತ್ ನೆನಪಲ್ಲೇ ಇನ್ನೂ ಸಮಯ ಕಳೆಯುತ್ತಿದ್ದಾರೆ. ಕುಟುಂಬ ಸದಸ್ಯರು ಕೂಡ ಪುನೀತ್ನನ್ನು ಕಳೆದುಕೊಂಡು ದುಃಖಿಸುತ್ತಿದ್ದಾರೆ. ಈ ಬಾರಿ ಪುನೀತ್ ಇದ್ದಿದ್ದರೆ ದೊಡ್ಮನೆಯಲ್ಲಿ ದೀಪಾವಳಿ ಸಂಭ್ರಮ ಪ್ರತಿ ಬಾರಿಯಂತೆ ಈ ಸಲವೂ ಜೋರಾಗಿಯೇ ಇರುತ್ತಿತ್ತು. ಆದರೆ ಪುನೀತ್ ಇಲ್ಲದೆ ದೊಡ್ಮನೆಯಲ್ಲಿ ದೀಪಾವಳಿ ಸಂಭ್ರಮಕ್ಕೆ ಬ್ರೇಕ್ ಬಿದ್ದಿದೆ.
ಪುನೀತ್ ಇದ್ದಿದ್ದರೇ ದೀಪಾವಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗುತ್ತಿತ್ತು. ಖುಷಿ ಖುಷಿಯಾಗಿ ದೊಡ್ಮನೆಯ ಎಲ್ಲಾ ಸದಸ್ಯರು ಹಣತೆಗಳನ್ನ ಹಚ್ಚಿ ಸಂಭ್ರಮಿಸುತ್ತಿದ್ದರು. ಆದರೆ ಈ ಬಾರಿಯ ದೀಪಾವಳಿ ಸಂಭ್ರಮಾಚರಣೆಗೆ ಪುನೀತ್ ಇಲ್ಲದೇ ಇರೋದು ಕುಟುಂಬ ಸದಸ್ಯರಿಗೆ ನೋವು ತಂದಿದೆ. ಈ ಸಂದರ್ಭದಲ್ಲಿ ಅಭಿಮಾನಿಗಳು ಕೂಡ ದೀಪಾವಳಿ ಹಬ್ಬ ಆಚರಣೆಗೆ ಬ್ರೇಕ್ ಹಾಕಿದ್ದಾರೆ. ಪುನೀತ್ ಇಲ್ಲದ ಈ ದೀಪಾವಳಿ ನಮಗೂ ಬೇಡ ಎಂದು ತೀರ್ಮಾನಿಸಿದ್ದಾರೆ.
ಹೀಗಾಗಿ ಕಳೆದ ವರ್ಷ ಪುನೀತ್ ದೀಪಾವಳಿಗೆ ನೀಡಿದ್ದ ವೀಡಿಯೊ ಸಂದೇಶವನ್ನು ಈಗ ಅಭಿಮಾನಿಗಳು ತಮ್ಮ ವಾಟ್ಸ್ಆಪ್, ಇನ್ಸ್ಟಾಗ್ರಾಮ್, ಫೇಸ್ ಬುಕ್ಗಳಲ್ಲಿ ಹೆಚ್ಚೆಚ್ಚು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ದೀಪಾವಳಿಗೆ ಪುನೀತ್ ಅಭಿಮಾನಿಗಳಿಗೆ ವೀಡಿಯೋ ಸಂದೇಶ ನೀಡಿದ್ದರು. ಇದರಲ್ಲಿ ದೀಪಾವಳಿ ಗೋವಿಂದ ಲೀಲಾವಳಿ ಹಾಡನ್ನು ಹಾಡುತ್ತ ಆರಂಭಿಸಿದ ಪುನೀತ್ ಎಲ್ಲಾರಿಗೂ ದೀಪಾವಳಿ ಹಬ್ಬದ ಶುಭಾಷಯಗಳು. ಈ ದೀಪಾವಳಿ ಎಲ್ಲಾರಿಗೂ ಖುಷಿ ಸಂತೋಷ ನೆಮ್ಮದಿ ನೀಡಲಿ. ಈ ದೀಪಾವಳಿಗೆ ನಾವು ಪಟಾಕಿ ಹೊಡೆಯೋದು ಬೇಡ ಅದರ ಬದಲಾಗಿ ನಮ್ಮ ದೇಹದ ಕ್ಯಾಲೋರಿಯನ್ನು ಬರ್ನ್ ಮಾಡೋಣ ಎಂದಿದ್ದರು. ಈ ಮೂಲಕ ದೀಪಾವಳಿ ಹಬ್ಬದ ಸಂದರ್ಭದಲ್ಲಿ ತನ್ನೆಲ್ಲ ಅಭಿಮಾನಿಗಳಲ್ಲಿ ಪಟಾಕಿ ಸಿಡಿಸೋದು ಬೇಡ ಎಂದಿದ್ದ ಪುನೀತ್ ಮಾತನ್ನು ಸಾಕಷ್ಟು ಅಭಿಮಾನಿಗಳು ಅನುಸರಿದ್ದರು.

ಈ ವೀಡಿಯೋ ಈಗ ಸಾಕಷ್ಟು ವೈರಲ್ ಆಗುತ್ತಿದ್ದು, ಅಭಿಮಾನಿಗಳು ಇದನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ಪುನೀತ್ರನ್ನು ನೆನೆಸಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ಪುನೀತ್ ನೀಡಿದ್ದ ಸಂದೇಶ ಏನಿತ್ತು ಅದನ್ನು ಈ ಸಲವು ಅನುಸರಿಸಲು ಫ್ಯಾನ್ಸ್ ಮುಂದಾಗಿದ್ದಾರೆ. ಪುನೀತ್ ಹೇಳಿದಂತೆ ಈ ಸಲವು ಪಟಾಕಿ ಹೊಡೆಯದೇ ಇರಲು ಮುಂದಾಗಿದ್ದಾರೆ. ಇದೇ ರೀತಿ ಪುನೀತ್ ಅವರ ಆದರ್ಶಗಳು, ಅಭಿಮಾನಿಗಳಿಂದ ಅವರು ಏನು ಮಾಡಿಸಬೇಕು ಅಂದುಕೊಂಡಿದ್ದರು ಅದನ್ನೆಲ್ಲವನ್ನು ಈಗ ನಾವು ಮಾಡಿ ತೋರಿಸಬೇಕೆಂದು ಶಪಥ ಮಾಡಿರುವ ಅವರು ದೀಪಾವಳಿ ಸಂದೇಶವನ್ನು ಈಗ ಪಾಲಿಸುತ್ತಿದ್ದಾರೆ.
ನವೆಂಬರ್ 1 ಕನ್ನಡ ರಾಜ್ಯೋತ್ಸವಕ್ಕೂ ಪುನೀತ್ ಕಳೆದ ವರ್ಷ ಒಂದು ಹಾಡನ್ನು ಹಾಡಿದ್ದರು. ಈ ಬಾರಿಯ ಕನ್ನಡ ರಾಜ್ಯೋತ್ಸವಕ್ಕೆ ಅಭಿಮಾನಿಗಳು ಆ ವೀಡಿಯೋವನ್ನೇ ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡು ಪುನೀತ್ರನ್ನು ನೆನಪಿಸಿಕೊಂಡಿದ್ದರು. ಅವರಂತೆ ಕನ್ನಡ ಪ್ರೇಮವನ್ನು ಬೆಳೆಸಿಕೊಳ್ಳಲು ತೀರ್ಮಾನಿಸಿದ್ದರು. ಈಗ ದೀಪಾವಳಿ ಹಬ್ಬದ ಸಮಯದಲ್ಲಿ ಪುನೀತ್ ಅವರ ಮತ್ತೊಂದು ಹಳೆಯ ವೀಡಿಯೋ ವೈರಲ್ ಆಗುತ್ತಿದ್ದು, ದುಃಖದ ನಡುವೆಯೂ ಪುನೀತ್ ಸ್ಮರಣೆ ಮಾಡುತ್ತಿದ್ದಾರೆ ಅಭಿಮಾನಿಗಳು.

ಇನ್ನು ಪುನೀತ್ ನಿಧನರಾಗಿ ಇಂದಿಗೆ 6ನೇ ದಿನ. ಇವತ್ತಿನಿಂದ ಕಂಠೀರವ ಸ್ಟುಡಿಯೋಗೆ ಅಭಿಮಾನಿಗಳಿಗೆ ಅವಕಾಶ ಮಾಡಿಕೊಡಲಾಗಿದ್ದು, ಇಂದು ಬೆಳಗ್ಗೆಯಿಂದಲೇ ಕ್ಯೂನಲ್ಲಿ ನಿಂತು ಅಭಿಮಾನಿಗಳು ಪುನೀತ್ ಅವರ ಸಮಾಧಿಗೆ ನಮನ ಸಲ್ಲಿಸಲು ಆಗಮಿಸುತ್ತಿದ್ದಾರೆ. ಬೇರೆ ಬೇರೆ ರಾಜ್ಯದಿಂದಲೂ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಅಂತಿಮ ದರ್ಶನ ಪಡೆಯಲು ಸಾಧ್ಯವಾಗದೇ ಇದ್ದವರು, ಸಮಾಧಿಗೆ ತೆರಳಿ ಆದರೂ ಒಂದು ಬಾರಿ ನೊಡಬೇಕು ಅಂದುಕೊಂಡವರು ಅದೆಷ್ಟೊ ಮಂದಿ ಕಾದು ಕುಳಿತ್ತಿದ್ದರು. ಇಂದು ಅದು ಸಾಧ್ಯವಾಗಿದ್ದು, ಶಾಂತ ರೀತಿಯಲ್ಲಿ ಅಭಿಮಾನಿಗಳು ಪುನೀತ್ ಅವರಿಗೆ ನಮನ ಸಲ್ಲಿಸುತ್ತಿದ್ದಾರೆ. ಮಹಿಳೆಯರು, ಮಕ್ಕಳು, ವಯಸ್ಸಾದವರು ಹೀಗೆ ಸಾಕಷ್ಟು ಮಂದಿ ಇವತ್ತು ಕಂಠೀರವ ಸ್ಟುಡಿಯೋ ಬಳಿ ಆಗಮಿಸುತ್ತಿದ್ದಾರೆ.


Click it and Unblock the Notifications











