ನಾಲ್ವರ ಬಾಳಿಗೆ ಬೆಳಕು ತಂದ ಪುನೀತ್ ಕಣ್ಣುಗಳು: ವೈದ್ಯ ಭುಜಂಗಶೆಟ್ಟಿ ಮಾಹಿತಿ
ನಟ ಪುನೀತ್ ರಾಜ್ಕುಮಾರ್ ನೇತ್ರದಾನ ಮಾಡಿದ್ದು ಪುನೀತ್ ನಿಧನರಾದ ದಿನ ಅವರ ಕುಟುಂಬದವರ ಒಪ್ಪಿಗೆ ಮೇರೆಗೆ ಪುನೀತ್ ಕಣ್ಣುಗಳನ್ನು ನಾರಾಯಣ ನೇತ್ರಾಲಯ ಆಸ್ಪತ್ರೆ ತಂಡ ಸಂಸ್ಕರಿಸಿ ತೆಗೆದುಕೊಂಡು ಹೋಗಿದ್ದರು.
ಪುನೀತ್ ಅವರಿಂದ ಪಡೆದಿದ್ದ ಕಣ್ಣುಗಳನ್ನು ತಂತ್ರಜ್ಞಾನ ಉಪಯೋಗಿಸಿ ನಾಲ್ವರಿಗೆ ದೃಷ್ಟಿದಾನ ಮಾಡಲಾಗಿದೆ ಎಂದು ನಾರಾಯಣ ನೇತ್ರಾಲಯ ಹಿರಿಯ ವೈದ್ಯ ಡಾ.ಭುಜಂಗಶೆಟ್ಟಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
''ಶುಕ್ರವಾರ ಮಧ್ಯಾಹ್ನ 2:30 ವೇಳೆಗೆ ನಾವು ಪುನೀತ್ ಅವರ ಕಣ್ಣುಗಳನ್ನು ಸಂಗ್ರಹಿಸಿಕೊಂಡು ನಾರಾಯಣ ನೇತ್ರಾಲಯಕ್ಕೆ ತಂದೆವು. ಅವರ ಕಣ್ಣುಗಳು ಬಹಳ ಒಳ್ಳೆಯ ಸ್ಥಿತಿಯಲ್ಲಿದ್ದವು. ಅವರ ಕಣ್ಣುಗಳನ್ನು ಪರಿಷ್ಕರಣೆ ಮಾಡಿ, ಅದರ ಮರುದಿನ ಅಂದರೆ ಶನಿವಾರ ಕಣ್ಣುಗಳ ಅವಶ್ಯಕತೆ ಇರುವ ರೋಗಿಗಳನ್ನು ಕರೆದು ಶಸ್ತ್ರಚಿಕಿತ್ಸೆ ಮೂಲಕ ಜೋಡಣೆ ಮಾಡಲಾಯಿತು'' ಎಂದು ಮಾಹಿತಿ ನೀಡಿದರು ನೇತ್ರ ತಜ್ಞ ಭುಜಂಗಶೆಟ್ಟಿ.
ವೈದ್ಯ ಯತೀಶ್, ವೈದ್ಯ ಶರಣ್, ಡಾ ರತ್ನ, ಹರ್ಷ ಮತ್ತು ಗೈರಕ್ ಹಾಗೂ ಸಿಇಒ ಮಿತ್ತಲ್ ಅವರ ತಂಡ ಶನಿವಾರ ಇಡೀ ದಿವಸ ಆಪರೇಷನ್ ಮಾಡಿದರು. ಈ ಶಸ್ತ್ರಚಿಕಿತ್ಸೆ ಬಹಳ ವಿಭಿನ್ನವಾಗಿತ್ತು. ಸಾಮಾನ್ಯವಾಗಿ ಯಾರಾದರೂ ಕಣ್ಣು ದಾನ ಮಾಡಿದರೆ ಅದರಿಂದ ಇಬ್ಬರು ದೃಷ್ಟಿ ವಿಕಲಚೇತನರಿಗೆ ದೃಷ್ಟಿ ನೀಡಲಾಗುತ್ತದೆ. ಆದರೆ ಅಪ್ಪುವಿನ ಕಣ್ಣುಗಳನ್ನು ನಾಲ್ಕು ಜನಕ್ಕೆ ನಾವು ನೀಡಿದ್ದೇವೆ. ಇದು ಸಾಮಾನ್ಯವಾದ ಕಾರ್ಯವಲ್ಲ, ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ನಾವು ಈ ಕಾರ್ಯ ಮಾಡಿದ್ದೇವೆ'' ಎಂದಿದ್ದಾರೆ ವೈದ್ಯ ಭುಜಂಗಶೆಟ್ಟಿ.

ಅಪ್ಪು ಕಣ್ಣುಗಳು ಆರೋಗ್ಯವಂತವಾಗಿದ್ದವು: ಭುಜಂಗಶೆಟ್ಟಿ
''ಅಪ್ಪುವರ ಕಣ್ಣುಗಳು ಆರೋಗ್ಯವಂತವಾಗಿದ್ದವು. ಹಾಗಾಗಿ ತಂತ್ರಜ್ಞಾನ ಬಳಸಿ ಅವರ ಎರಡು ಕಾರ್ನಿಯಾಗಳನ್ನು ವಿಂಗಡಿಸಿದೆವು. ಕಾರ್ನಿಯಾದ ಮುಂದಿನ ಭಾಗವನ್ನು ಮುಂದಿನ ಭಾಗದ ಕಾರ್ನಿಯಾ ಕಳೆದುಕೊಂಡಿದ್ದ ಇಬ್ಬರು ರೋಗಿಗಳಿಗೆ, ಕಾರ್ನಿಯಾದ ಹಿಂದಿನ ಭಾಗವನ್ನು ಹಿಂದಿನ ಭಾಗ ಕಳೆದುಕೊಂಡು ದೃಷ್ಟಿ ನಷ್ಟ ಅನುಭವಿಸಿದ್ದ ರೋಗಿಗಳಿಗೆ ಒಂದೇ ದಿನ ಜೋಡಿಸಿದೆವು. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಡೆದಿದ್ದು, ನಾಲ್ಕು ಜನರು ಆರಾಮದಿಂದ ಇದ್ದಾರೆ'' ಎಂದರು ಭುಜಂಗಶೆಟ್ಟಿ.

ಶಸ್ತ್ರಚಿಕಿತ್ಸೆ ಸುಲಭವಾಗಿರಲಿಲ್ಲ: ವೈದ್ಯ ಭುಜಂಗಶೆಟ್ಟಿ
''ಅಪ್ಪು ಕಣ್ಣುಗಳು ಆರೋಗ್ಯವಾಗಿದ್ದಿದ್ದರಿಂದ ಇದು ಸಾಧ್ಯವಾಯಿತು. ನಮ್ಮ ತಂಡ ಸಹ ಬಹಳ ಶ್ರಮವಹಿಸಿ, ಮುತುವರ್ಜಿ ವಹಿಸಿ ಒಂದೇ ದಿನದಲ್ಲಿ ಶಸ್ತ್ರಚಿಕಿತ್ಸೆಯನ್ನು ಪೂರ್ಣಗೊಳಿಸಿತು. ಒಂದೇ ದಿನ ನಾಲ್ಕು ರೋಗಿಗಳನ್ನು ಗುರುತಿಸಿ ಅವರ ಕಣ್ಣಿನ ಹಾಗೂ ಇತರೆ ಆರೋಗ್ಯ ಸಮಸ್ಯೆಗಳನ್ನು ಪರಾಮರ್ಶಿಸಿ ಅವರನ್ನು ಅಷ್ಟು ಕಡಿಮೆ ಸಮಯದಲ್ಲಿ ಶಸ್ತ್ರ ಚಿಕಿತ್ಸೆಗೆ ಸಜ್ಜುಗೊಳಿಸುವುದು ಸುಲಭದ ಕಾರ್ಯವಲ್ಲ. ಈ ಕಾರ್ಯ ಮಾಡಿದ ನಮ್ಮ ವೈದ್ಯರ ತಂಡಕ್ಕೆ ಅಭಿನಂದನೆಗಳು'' ಎಂದು ಶಸ್ತ್ರಚಿಕಿತ್ಸೆಯ ಸವಾಲುಗಳು ಹಾಗೂ ಅದನ್ನು ಮೆಟ್ಟಿನಿಂತ ಬಗೆಯನ್ನು ಹಿರಿಯ ನೇತೃತಜ್ಞ ಭುಜಂಗಶೆಟ್ಟಿ ವಿವರಿಸಿದರು.

ಶೋಕದ ನಡುವೆಯೂ ನೇತ್ರದಾನ ಮಾಡಿದ ಕುಟುಂಬ: ಭುಜಂಗ ಶೆಟ್ಟಿ
''1994 ರಲ್ಲಿ ನಮ್ಮ ಆಸ್ಪತ್ರೆಯಲ್ಲಿ ಡಾ.ರಾಜ್ಕುಮಾರ್ ಹಾಗೂ ಪಾರ್ವತಮ್ಮ ರಾಜ್ಕುಮಾರ್ ಅವರು ನೇತ್ರದಾನ ವಿಭಾಗ ಉದ್ಘಾಟನೆ ಮಾಡಿದರು. 2006 ರಲ್ಲಿ ಅಣ್ಣಾವ್ರು ತೀರಿ ಹೋದಾಗ ಅವರ ಕಣ್ಣುಗಳನ್ನು ದಾನ ಮಾಡಲಾಗಿತ್ತು. 2017 ರಲ್ಲಿ ಪಾರ್ವತಮ್ಮನವರು ತೀರಿಕೊಂಡಾಗ ಅವರ ಕಣ್ಣು ದಾನ ಮಾಡಲಾಯ್ತು. ಕೆಲವು ದಿನದ ಹಿಂದೆ ಪುನೀತ್ ರಾಜ್ಕುಮಾರ್ ಆಘಾತಕಾರಿಯಾಗಿ ತೀರಿಹೋದಾಗ ಆ ಕುಟುಂಬ ತಮ್ಮ ಶೋಕದ ನಡುವೆ ಕೂಡ ನೇತ್ರದಾನ ಮರೆತಿಲ್ಲ. ನಮ್ಮನ್ನು ಸಂಪರ್ಕಿಸಿ ಕಣ್ಣು ಸಂಸ್ಕರಿಸಿಕೊಳ್ಳುವಂತೆ ಹೇಳಿದರು. ಆ ಕುಟುಂಬಕ್ಕೆ ನಾನು ಧನ್ಯವಾದ ಹೇಳುತ್ತೇನೆ'' ಎಂದರು ಭುಜಂಗಶೆಟ್ಟಿ.

''ವಿಷಮ ಸ್ಥಿತಿಯಲ್ಲಿಯೂ ಕುಟುಂಬದವರು ನಮ್ಮನ್ನು ಸಂಪರ್ಕಿಸಿದರು''
ಡಾ.ರಾಜ್ಕುಮಾರ್ ನಿಧನ ಹೊಂದಿದಾಗ ಅವರ ಕಣ್ಣುಗಳನ್ನು ಇಬ್ಬರಿಗೆ ಹಾಕಲಾಗಿತ್ತು, ಪಾರ್ವತಮ್ಮನವರ ಕಣ್ಣುಗಳನ್ನು ಸಹ ಇಬ್ಬರಿಗೆ ಹಾಕಲಾಗಿತ್ತು. ರಾಜ್ಕುಮಾರ್ ತೀರಿಕೊಂಡ ಬಳಿಕ ರಾಜ್ಯದಲ್ಲಿ ನೇತ್ರದಾನ ಬಹಳ ದೊಡ್ಡ ಪ್ರಮಾಣದಲ್ಲಿ ಆಯಿತು. ರಾಜ್ಕುಮಾರ್ ಹಾದಿಯನ್ನೇ ಅನುಸರಿಸಿ ಲಕ್ಷಾಂತರ ಮಂದಿ ನೇತ್ರದಾನಕ್ಕೆ ತಮ್ಮ ಹೆಸರು ನೊಂದಾಯಿಸಿಕೊಂಡರು. ರಾಜ್ಯದಲ್ಲಿ ಆದ ನೇತ್ರದಾನ ಅಭಿಯಾನಕ್ಕೆ ಕಾರಣ ಡಾ.ರಾಜ್ಕುಮಾರ್ ಹಾಗೂ ಅವರ ಕುಟುಂಬದವರು ಎಂದು ರಾಜ್ಯದ ಹಿರಿಯ ನೇತ್ರತಜ್ಞರಾಗಿರುವ ಭುಜಂಗಶೆಟ್ಟಿಯವರು ಹಲವು ಸಂದರ್ಭಗಳಲ್ಲಿ ನೆನಪಿಸಿಕೊಂಡಿದ್ದಾರೆ. ಪುನೀತ್ ನಿಧನದ ಸಂದರ್ಭದಲ್ಲಿ ಖಾಸಗಿ ಚಾನೆಲ್ನೊಂದಿಗೆ ಮಾತನಾಡಿದ್ದ ಭುಜಂಗಶೆಟ್ಟರು, ''ಇಂಥಹಾ ವಿಷಮ ಸ್ಥಿತಿಯಲ್ಲಿಯೂ ಅವರ ಕುಟುಂಬದವರು ನಮ್ಮನ್ನು ಸಂಪರ್ಕಿಸಿದರು. ಅಲ್ಲಿ ಟ್ರಾಫಿಕ್ ಇರುತ್ತದೆ, ಹೀಗೆ ಬನ್ನಿ ಎಂದು ನಮ್ಮ ಸಿಬ್ಬಂದಿಗೆ ಮಾರ್ಗದರ್ಶನ ಮಾಡಿದರು. ಸಹಕಾರ ನೀಡಿ ನೇತ್ರದಾನ ಯಶಸ್ವಿಯಾಗುವಂತೆ ಮಾಡಿದರು'' ಎಂದು ಭಾವುಕರಾಗಿ ಹೇಳಿದ್ದರು.


Click it and Unblock the Notifications











