ಅಪ್ಪು ಅಗಲಿ ಒಂದು ತಿಂಗಳು: ಕುಟುಂಬದಿಂದ ಪೂಜೆ
ಅಕ್ಟೋಬರ್ 29 ಕನ್ನಡ ಚಿತ್ರರಂಗದ ಪಾಲಿಗೆ ಅತ್ಯಂತ ಕರಾಳ ದಿನ. ಎಲ್ಲರ ಮೆಚ್ಚಿನ ಅಪ್ಪು ಸಣ್ಣ ಸುಳಿವೂ ನೀಡದೆ ಎಲ್ಲರನ್ನೂ ಅಗಲಿ ಹೋಗಿಬಿಟ್ಟರು. ಅಪ್ಪು ಅಗಲಿ ಇಂದಿಗೆ ಒಂದು ತಿಂಗಳು ಆದರೆ ಪುನೀತ್ ಸಾವನ್ನು ಇಂದಿಗೂ ಅರಗಿಸಿಕೊಳ್ಳಲಾಗಿಲ್ಲ.
ಪುನೀತ್ ಅಗಲಿ ಒಂದು ತಿಂಗಳಾದ ಕಾರಣ ಇಂದು ಕುಟುಂಬ ಸದಸ್ಯರು ಪುನೀತ್ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಮತ್ತು ಕುಟುಂಬ, ಶಿವರಾಜ್ ಕುಮಾರ್ ಮತ್ತು ಕುಟುಂಬದವರು ಪೂಜೆ ಸಲ್ಲಿಸಿದರು.
ಈ ಸಮಯ ಮಾಧ್ಯಮದವರೊಟ್ಟಿಗೆ ಮಾತನಾಡಿದ ರಾಘವೇಂದ್ರ ರಾಜ್ಕುಮಾರ್, ''ತಿಂಗಳ ಪೂಜೆ ಮಾಡಿದೆವು, ವರ್ಷದ ಪೂಜೆ, ಹತ್ತು ವರ್ಷದ ಪೂಜೆ ಹೀಗೆ ಮಾಡುತ್ತಲೇ ಇರಬೇಕಷ್ಟೆ. ಇಂದು ಕುಟುಂಬದವರಾದ ನಾವೆಲ್ಲ ಬಂದು ಪೂಜೆ ಮಾಡಿದೆವು. ಮನೆಗೆ ಹೋಗಿ ಅಲ್ಲಿ ಸಹ ಪೂಜೆ ಮಾಡುತ್ತೇವೆ'' ಎಂದರು.

''ಅವನು ಹೋಗಿ ನಾವೆಲ್ಲ ಹೇಗೆ ಇರಬೇಕು ಎಂದು ಹೇಳಿಕೊಟ್ಟಿದ್ದಾನೆ. ನಮಗೆ ಇರುವ ಕೆಲಸವೆಂದರೆ ಅವನು ಮಾಡಿರುವ ಒಳ್ಳೆಯ ಕೆಲಸವನ್ನು ಮುಂದುವರೆಸುವುದಷ್ಟೆ'' ಎಂದರು ರಾಘಣ್ಣ.
''ಯಾವ ರೀತಿಯ ಸೇವೆ ಮಾಡಲು ಯೋಜಿಸಿದ್ದೀರಿ?'' ಎಂಬ ಪ್ರಶ್ನೆಗೆ, ''ತಾನು ಮಾಡಿದ ಸಹಾಯ ಯಾರಿಗೂ ಗೊತ್ತಾಗಬಾರದು ಎಂಬುದು ಪುನೀತ್ ಆಸೆಯಾಗಿತ್ತು. ಈಗ ನಾವು ಸಹಾಯ ಮಾಡಿ ಅದನ್ನು ಹೇಳಿಕೊಂಡರೆ ಪುನೀತ್ಗೆ ದ್ರೋಹ ಬಗೆದಂತೆ ಆಗುತ್ತದೆ. ಕೆಲವೊಂದು ವಿಚಾರದಲ್ಲಿ ನಾವು ಸುಮ್ಮನೆ ಇದ್ದುಬಿಡಬೇಕು ಅಷ್ಟೆ'' ಎಂದರು.
ಪುನೀತ್ ಅಗಲಿ ಇಂದಿಗೆ ಒಂದು ತಿಂಗಳಾದ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಇಂದು ಪುನೀತ್ ಸಮಾಧಿಗೆ ಭೇಟಿ ನೀಡುತ್ತಿದ್ದಾರೆ. ಪುನೀತ್ ಅಗಲಿದ ದಿನದಿಂದ ಈವರೆಗೆ ಸಾವಿರಾರು ಮಂದಿ ಅಪ್ಪು ಸಮಾಧಿಗೆ ಭೇಟಿ ನೀಡಿ ಕೈಮುಗಿದಿದ್ದಾರೆ.
ಪುನೀತ್ ಅಗಲಿ ಇಂದಿಗೆ ಒಂದು ತಿಂಗಳಾದ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಪುನೀತ್ ಅಭಿಮಾನಿಗಳು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ರಕ್ತದಾನ, ನೇತ್ರದಾನ ಶಿಬಿರಗಳು ಜೊತೆಗೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಸಹ ಆಯೋಜಿಸಲಾಗಿದೆ.


Click it and Unblock the Notifications











