ಪುನೀತ್ ರಾಜ್ಕುಮಾರ್ ಒಂದನೇ ವರ್ಷದ ಪುಣ್ಯ ಸ್ಮರಣೆ
ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಿಧನ ಹೊಂದಿ ಇಂದಿಗೆ ( ಅಕ್ಟೋಬರ್ 29 ) ಒಂದು ವರ್ಷ ಕಳೆದಿದೆ. ಕಳೆದ ವರ್ಷ ಬೆಳಗ್ಗೆ ಚೆನ್ನಾಗಿಯೇ ಜಿಮ್ ವರ್ಕ್ ಔಟ್ ಮುಗಿಸಿದ್ದ ಪುನೀತ್ ರಾಜ್ಕುಮಾರ್ ಇದ್ದಕ್ಕಿದ್ದಂತೆ ಸುಸ್ತಿನ ಅನುಭವವಾಗಿ ಎದೆ ನೋವು ಕಾಣಿಸಿಕೊಂಡಿದ್ದ ಕಾರಣ ಆಸ್ಪತ್ರೆಗೆ ದಾವಿಸಿದ್ದರು. ಆದರೆ ವಿಕ್ರಮ್ ಆಸ್ಪತ್ರೆ ತಲುಪುವ ಮುನ್ನವೇ ಪುನೀತ್ ರಾಜ್ಕುಮಾರ್ ತಮ್ಮ ಅಪಾರ ಅಭಿಮಾನಿ ಬಳಗ ಹಾಗೂ ಪ್ರೀತಿಯ ಕುಟುಂಬವನ್ನು ಬಿಟ್ಟು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದರು.
ಅಂದು ಪುನೀತ್ ರಾಜ್ಕುಮಾರ್ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಯಾರೋ ಗಾಳಿ ಸುದ್ದಿ ಹಬ್ಬಿಸುತ್ತಿದ್ದಾರೆ ಬಿಡಿ ಎಂದು ಮೊದಲಿಗೆ ನಿರ್ಲಕ್ಷಿಸಿದವರೇ ಹೆಚ್ಚು. ಆದರೆ ಪುನೀತ್ ಇನ್ನಿಲ್ಲ ಎಂಬ ಸುದ್ದಿ ನಿಜ ಎಂದು ತಿಳಿದ ಕೂಡಲೇ ಲಕ್ಷಾಂತರ ಅಭಿಮಾನಿಗಳು ಕಣ್ಣೀರು ಹಾಕಿದ್ದರು. ಅಂದು ಬಿಡುಗಡೆಯಾಗಿದ್ದ ಶಿವ ರಾಜ್ಕುಮಾರ್ ಅಭಿನಯದ ಭಜರಂಗಿ 2 ಚಿತ್ರ ವೀಕ್ಷಿಸಲು ಹೋಗಿದ್ದ ಅದೆಷ್ಟೋ ರಾಜವಂಶ ಅಭಿಮಾನಿಗಳು ಮಧ್ಯಂತರದ ವೇಳೆಗೆ ವಿಷಯ ತಿಳಿದು ಚಿತ್ರಮಂದಿರಗಳಲ್ಲಿಯೇ ಗೋಳಾಡಿದ್ದರು.
ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಅಪ್ಪು ಇನ್ನಿಲ್ಲ ಎಂಬ ಸುದ್ದಿಯನ್ನು ಯಾರೂ ಸಹ ಅರಗಿಸಿಕೊಳ್ಳಲು ತಯಾರಿರಲಿಲ್ಲ. ಹೀಗೆ ಪುನೀತ್ ಅಕಾಲಿಕ ಮರಣಕ್ಕೊಳಗಾಗಿ ವರ್ಷ ಕಳೆದಿದ್ದರೂ ಸಹ ಇನ್ನೂ ಅಪ್ಪು ಅವರ ನೆನಪು ಮರೆಯಾಗಿಲ್ಲ. ಒಂದು ವರ್ಷದಲ್ಲಿ ಅವರ ಬಗ್ಗೆ ಚರ್ಚಿಸದ, ಅವರನ್ನು ನೆನೆಯದ, ಅವರ ಫೋಟೊವನ್ನು ಒಮ್ಮೆಯಾದರೂ ನೋಡದ ದಿನವೇ ಇಲ್ಲ ಎನ್ನಬಹುದು.

ಹೀಗೆ ದಿನನಿತ್ಯ ಜನರ ಮನಸ್ಸಿನಲ್ಲಿ ಸ್ಮರಿಸಲ್ಪಡುತ್ತಿರುವ ಪುನೀತ್ ರಾಜ್ಕುಮಾರ್ ಅವರ ಒಂದನೇ ವರ್ಷದ ಪುಣ್ಯ ಸ್ಮರಣೆ ಇಂದು ನಡೆಯಲಿದೆ. ಪುನೀತ್ ರಾಜ್ಕುಮಾರ್ ಕುಟುಂಬಸ್ಥರು ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ ಹಾಗೂ ಅವರ ಅಪಾರ ಅಭಿಮಾನಿಗಳು ಸಮಾಧಿಗೆ ಭೇಟಿ ನೀಡಿ ಅಪ್ಪುಗೆ ನಮನ ಸಲ್ಲಿಸಲಿದ್ದಾರೆ.


Click it and Unblock the Notifications











