ಇದಕ್ಕೆ ನೋಡಿ 'ದೊಡ್ಮನೆ ಹುಡ್ಗ' ಪುನೀತ್ ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು.!
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸ್ಯಾಂಡಲ್ ವುಡ್ ನ ಗೆಲ್ಲುವ ಕುದುರೆ. ಬಾಕ್ಸ್ ಆಫೀಸ್ ಲೂಟಿ ಮಾಡುವ ಅಣ್ಣಾವ್ರ ಮಗನ ಅಭಿನಯ, ಡ್ಯಾನ್ಸ್, ಸ್ಟೈಲ್ ಅಂದ್ರೆ ಎಲ್ಲರಿಗೂ ಇಷ್ಟ. ಇವೆಲ್ಲದರ ಜೊತೆಗೆ 'ದೊಡ್ಮನೆ ಹುಡ್ಗ'ನ ದೊಡ್ಡಗುಣ ಕೂಡ ಎಲ್ಲರಿಗೂ ಅಚ್ಚುಮೆಚ್ಚು.
ಈಗಾಗಲೇ ಸಮಾಜದ ಉದ್ಧಾರಕ್ಕಾಗಿ ಹಲವು ಕೆಲಸ ಕಾರ್ಯಗಳಲ್ಲಿ ಅಪ್ಪು ತೊಡಗಿದ್ದಾರೆ. ಇದರ ಜೊತೆಗೆ ತಮ್ಮ ಅಭಿಮಾನಿಗಳಿಗೆ ಪುನೀತ್ ರಾಜ್ ಕುಮಾರ್ ಒಂದು ಸಂದೇಶ ನೀಡಿದ್ದಾರೆ.

ಸಾಮಾನ್ಯವಾಗಿ ಪವರ್ ಸ್ಟಾರ್ ಸಿನಿಮಾ ತೆರೆಗೆ ಬರುತ್ತೆ ಅಂದ್ರೆ 'ಪವರ್ ಹೌಸ್'ನಲ್ಲಿ ಸಂಭ್ರಮ, ಸಡಗರ ಮನೆ ಮಾಡಿರುತ್ತದೆ. ಅಭಿಮಾನಿಗಳ ಎದೆಬಡಿತ ಜೋರಾಗಿರುತ್ತದೆ. ಅಪ್ಪು ಚಿತ್ರವನ್ನ ಪಟಾಕಿ ಸಿಡಿಸಿ ಸಂಭ್ರಮದಿಂದ ಅಭಿಮಾನಿಗಳು ಬರಮಾಡಿಕೊಳ್ಳುತ್ತಾರೆ. ಅಪ್ಪು ಕಟೌಟ್ ಗೆ ಬೃಹತ್ ಹೂವಿನ ಹಾರ ಹಾಕಿ, ಲೀಟರ್ ಗಟ್ಟಲೆ ಹಾಲಿನ ಅಭಿಷೇಕ ಮಾಡಿ 'ಪವರ್ ಸ್ಟಾರ್'ನ ಅಭಿಮಾನಿಗಳು ಆರಾಧಿಸುತ್ತಾರೆ. ಹೀಗಿರುವಾಗ, ಇದಾವುದೂ ಬೇಡ ಎಂದಿದ್ದಾರೆ ಪುನೀತ್ ರಾಜ್ ಕುಮಾರ್.
'ಅಂಜನಿಪುತ್ರ' ಬಿಡುಗಡೆಗೆ ಕ್ಷಣಗಣನೆ ಶುರು ಆಗಿರುವುದರಿಂದ, ''ಕಟೌಟ್ ಗಳ ಮೇಲೆ ಹೂವಿನ ಹಾರ ಹಾಕಿ, ಹಾಲಿನ ಅಭಿಷೇಕ ಮಾಡಿ ದುರುಪಯೋಗ ಮಾಡುವ ಬದಲು ಹಸಿದ ಮಕ್ಕಳಿಗೆ ಅಥವಾ ವೃದ್ಧರಿಗೆ ಕೊಡಿ'' ಎಂಬ ಸಂದೇಶವನ್ನ ಪುನೀತ್ ನೀಡಿದ್ದಾರೆ.
''ಸಿನಿಮಾ ಇಷ್ಟ ಆದರೆ ನಿಮ್ಮ ಸ್ನೇಹಿತ ಅಥವಾ ನಿಮ್ಮ ಅಪ್ಪ-ಅಮ್ಮ ಜೊತೆಗೆ ಇರುವ ಫೋಟೋ ಕಳುಹಿಸಿ, ನನಗೆ ಅದೇ ಖುಷಿ ಕೊಡುತ್ತದೆ'' ಎಂದು ಟ್ವಿಟ್ಟರ್ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್.
ಅಪ್ಪು ಆಡಿರುವ ಮಾತುಗಳಲ್ಲಿಯೂ ಅರ್ಥ ಇದೆ. ಅಭಿಮಾನದ ಹೆಸರಿನಲ್ಲಿ ಅಭಿಮಾನದ ಪರಾಕಾಷ್ಟೆ ಮೆರೆಯುವ ಸಲುವಾಗಿ ಕಟೌಟ್ ಗೆ ಹೂವಿನ ಹಾರ, ಹಾಲಿನ ಅಭಿಷೇಕ ಮಾಡುವ ಬದಲು ಅದನ್ನೇ ಹಸಿದವರಿಗೆ ನೀಡಿದರೆ ಸಿಗುವ ಖುಷಿ ದುಪ್ಪಟ್ಟು. ಅಪ್ಪು ಅಭಿಮಾನಿಗಳಾಗಿ ನೀವು ಅಪ್ಪು ಹೇಳಿದಂತೆಯೇ ಮಾಡ್ತೀರಾ ತಾನೆ.?


Click it and Unblock the Notifications










