ಅಭಿಮಾನಿಗಳಿಗಾಗಿ ರಾಜಕುಮಾರ ಸಿನಿಮಾ ವಿಶೇಷ ಪ್ರದರ್ಶನ
ಪುನೀತ್ ರಾಜ್ಕುಮಾರ್ ಕರುನಾಡು ಕಂಡ ಅದ್ಭುತ ಪ್ರತಿಭೆ. ಅವರ ನಟನೆ, ನೃತ್ಯ, ಗಾಯನ ಮಾತ್ರವಲ್ಲದೆ ಅವರ ಸಮಾಜಮುಖಿ ಕಾರ್ಯಗಳಿಂದ ಇಡೀ ಪ್ರಪಂಚದಾದ್ಯಂತ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಯಶಸ್ಸಿನ ಉತ್ತುಂಗದಲ್ಲಿ ಇದ್ದ ಅಪ್ಪು ತಮ್ಮ ಬದುಕಿನ ಪಯಣವನ್ನ ಮುಗಿಸಿದ್ದಾರೆ. ಆದರೆ ಅವರ ನೆನಪು ಮಾತ್ರ ಎಲ್ಲಾ ಅಭಿಮಾನಿಗಳಲ್ಲಿ ಸದಾ ಅಜರಾಮರ. ಹೀಗೆ ಅವರ ಅಭಿಮಾನಿಗಳು ಅಪ್ಪು ನೆನಪನ್ನು ಬೇರೆ ಬೇರೆ ರೀತಿಯಲ್ಲಿ ವ್ಯಕ್ತ ಪಡಿಸುತ್ತಿದ್ದಾರೆ.
Recommended Video

ಅಪ್ಪು ಅಭಿಮಾನಿಗಳ ಪಾಲಿನ ದೇವರು. ಕರ್ನಾಟಕದ ಹೆಮ್ಮೆಯ ಸುಪುತ್ರ, ದಿವಗಂತ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಸ್ಮರಣಾರ್ಥ ಹಾಗೂ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಪುನೀತ್ ನಟನೆಯ ರಾಜಕುಮಾರ ಸಿನಿಮಾವನ್ನು ಪ್ರದರ್ಶನ ಮಾಡಲಾಗುತ್ತಿದೆ. ಬೆಂಗಳೂರಿನ ಗೌಡನಪಾಳ್ಯದ ಶ್ರೀನಿವಾಸ ಚಿತ್ರಮಂದಿರದಲ್ಲಿ ಪ್ರದರ್ಶನ ಮಾಡಲಾಗುತ್ತಿದೆ.
ಇಂದು ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ. ಹಾಗಾಗಿ ರಾಜ್ಯೋತ್ಸವದ ಪ್ರಯುಕ್ತ ಹಾಗೂ ಪುನೀತ್ ಸ್ಮರಣಾರ್ಥವಾಗಿ ಬೆಳಿಗ್ಗೆ 7 ಗಂಟೆಗೆಯಿಂದಲೇ ಶ್ರೀನಿವಾಸ ಚಿತ್ರ ಮಂದಿರದಲ್ಲಿ ವಿಶೇಷ ಪ್ರದರ್ಶನ ಆರಂಭ ಆಗಿದೆ. ರಾಜಕುಮಾರ ಚಲನಚಿತ್ರವನ್ನು ತೆರೆ ಮೇಲೆ ಬಿಡುಗಡೆ ಮಾಡಲಾಗಿದೆ. ಇನ್ನೂ ವಿಶೇಷ ಎಂಬಂತೆ ಉಚಿತವಾಗಿ ಚಿತ್ರ ಪ್ರದರ್ಶನ ನೀಡಲು ಥಿಯೇಟರ್ ಮಾಲಿಕರು ತೀರ್ಮಾನಿಸಿದ್ದಾರೆ. ಅಪ್ಪು ಅಭಿಮಾನಿಗಳು ಎಲ್ಲರು ಈ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದಾರೆ. ಪ್ರೀತಿಯ ಪುನೀತ್ ರಾಜಕುಮಾರ್ ರವರಿಗೆ ಶ್ರದ್ಧಾಂಜಲಿ ಅರ್ಪಿಸುವ ಮೂಲಕ ರಾಜಕುಮಾರ ಸಿನಿಮಾ ಪ್ರದರ್ಶನ ಮಾಡಲಾಗುತ್ತಿದೆ.

ಅಪ್ಪು ಇಲ್ಲ ಎನ್ನುವುದು ಅಭಿಮಾನಿಗಳಿಗೆ ಎಷ್ಟು ನೋವಾಗಿದೆ ಅನ್ನೋದನ್ನು ಮಾತಲ್ಲಿ ಹೇಳಲು ಸಾಧ್ಯವಿಲ್ಲ. ಅಪ್ಪು ಅನಾರೋಗ್ಯದ ಸುದ್ದಿ ತಿಳಿಯುತ್ತಲೆ, ಸಾಕಷ್ಟು ಜನ ಆಸ್ಪತ್ರೆ ಆವರಣಕ್ಕೆ ಬಂದು ಬಿಟ್ಟಿದ್ದರು. ಅವರ ಆರೋಗ್ಯ ಸ್ಥಿತಿ ಗಂಭೀರ ಎಂದಾಗಲೇ ಆಸ್ಪತ್ರೆ ಆವರಣದ ಮುಂದೆ ಅಭಿಮಾನಿಗಳು ಕಣ್ಣೀರು ಹಾಕಿದ್ದರು. ಆದರೆ ಅಪ್ಪು ಇಲ್ಲ ಎಂದಾದಾಗ ಅಭಿಮಾನಿಗಳ ಹೃದಯವೇ ಒಡೆದು ಹೋಯ್ತು.
ಅಪ್ಪು ಅಂತಿಮ ದರ್ಶನಕ್ಕೆ ಸಾಗರೋಪಾದಿಯಲ್ಲಿ ಅಭಿಮಾನಿ ಬಳಗ ಹರಿದು ಬಂತು. ಸುಮಾರು 10 ಲಕ್ಷ ಜನ ಅಪ್ಪು ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ಅಪ್ಪು ಪಾರ್ಥೀವ ಶರೀರವನ್ನ ನೋಡಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಈಗ ಅಪ್ಪು ಬರಿ ನೆನಪು ಮಾತ್ರ. ಹಾಗಾಗಿ ಅಪ್ಪು ನೆನಪುಗಳನ್ನ ಜೀವಂತವಾಗಿಡಲು ಅಭಿಮಾನಿಗಳು ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಸದ್ಯ ರಾಜಕುಮಾರ ಸಿನಿಮಾವನ್ನು ಅಭಿಮಾನಿಗಳಿಗಾಗಿ ಉಚಿತ ಪ್ರದರ್ಶನ ಏರ್ಪಡಿಸಲಾಗಿದೆ. ಶ್ರೀನಿವಾಸ ಚಿತ್ರಮಂದಿರದಲ್ಲಿ ಭಜರಂಗಿ2 ಸಿನಿಮಾ ರಿಲೀಸ್ ಆಗಿತ್ತು. ಇದೇ ಚಿತ್ರಮಂದಿರದಲ್ಲಿ ಈಗ ರಾಜಕುಮಾರ ವಿಶೇಷ ಪ್ರದರ್ಶನ ಏರ್ಪಡಿಸಿದೆ ಚಿತ್ರತಂಡ.
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಕ್ಟೋಬರ್ 29 ಶುಕ್ರವಾರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ವಿಕ್ರಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಇದು ಕೋಟ್ಯಾನು ಕೋಟಿ ಮನಸ್ಸುಗಳನ್ನ ಭಾರ ಮಾಡಿದೆ. ಆದರೀಗ ಅಪ್ಪು ನೆನಪು, ಆದರ್ಶಗಳನ್ನ ಜೀವಂತವಾಗಿ ಇಡುವುದು ಮಾತ್ರ ಎಲ್ಲರ ಕರ್ತವ್ಯವಾಗಿದೆ.


Click it and Unblock the Notifications











