ಬಾಳೆ ಎಲೆ ಮುಂದೆ ವಿಮರ್ಶಕ, ವೇದಾಂತಿ ಆದ ಪುನೀತ್ ರಾಜ್ಕುಮಾರ್
ನಟ ಪುನೀತ್ ರಾಜ್ಕುಮಾರ್ ಭೋಜನ ಪ್ರಿಯ ಎಂಬುದು ಅಭಿಮಾನಿಗಳಿಗೆ ಹೊಸ ವಿಷಯವಲ್ಲ. ಯಾವುದೇ ಊರಿಗೆ ಹೊದರು ಅಲ್ಲಿನ ಸ್ಥಳೀಯ, ಹಳೆಯ ಹೊಟೆಲ್ಗಳನ್ನು ಹುಡುಕಿ ಊಟ ಸವಿದು ಬರುವುದು ಅವರ ಹವ್ಯಾಸ.
Recommended Video
ಇದೀಗ ಯುವರತ್ನ ಸಿನಿಮಾದ ಬಿಡುಗಡೆಯ ಬ್ಯುಸಿಯಲ್ಲಿರುವ ಪುನೀತ್ ರಾಜ್ಕುಮಾರ್, ಖ್ಯಾತ ಫುಡ್ ರಿವ್ಯೂವರ್ ಕೃಪಾಲ್ ಅಮನ್ನ ಜೊತೆಗೆ ಊಟ ಸವಿದಿದ್ದಾರೆ. ಊಟ ಸವಿಯುವ ಜೊತೆಗೆ ಪುನೀತ್ ಅವರು ತಮ್ಮ ಆಹಾರ ಜ್ಞಾನವನ್ನು ವೀಕ್ಷಕರೊಂದಿಗೆ ಹಂಚಿಕೊಂಡಿದ್ದಾರೆ. ಜೊತೆಗೆ 'ಯುವರತ್ನ' ಸಿನಿಮಾದ ಬಗ್ಗೆಯೂ ಒಂದಷ್ಟು ಮಾತನಾಡಿದ್ದಾರೆ.
'ಕರ್ನಾಟಕದಲ್ಲಿ ಪ್ರತಿ 50 ಕಿ.ಮೀಗೆ ಆಹಾರ ಪದ್ಧತಿ ಬದಲಾಗುತ್ತದೆ. ಒಂದೊಂದು ಕಡೆ ಒಂದೊಂದು ಪ್ರಕಾರದ ಊಟ ರುಚಿಯಾಗಿರುತ್ತದೆ. ನಾನಂತೂ ಊಟ ಸವಿಯಲೆಂದೇ ಪ್ರವಾಸ ಹೋಗಿದ್ದೂ ಸಹ ಇದೆ' ಎಂದಿದ್ದಾರೆ ಪುನೀತ್.
ಪುನೀತ್ ಅವರಿಗೆ ಈ ಭೋಜನ ಪ್ರೀಯತೆ ಬಂದಿದ್ದು ತಂದೆ ರಾಜ್ಕುಮಾರ್ ಅವರಿಂದವಂತೆ. 'ಅಪ್ಪನಿಗೆ ಊಟವೆಂದರೆ ಬಹಳ ಪ್ರೀತಿ ಮತ್ತು ಅಷ್ಟೇ ಗೌರವ. ಅವರು ಒಂದು ಅಗುಳು ಸಹ ವ್ಯರ್ಥ ಮಾಡುತ್ತಿರಲಿಲ್ಲ. ಅವರು ನಾಟಕಗಳಲ್ಲಿ ನಟಿಸುವಾಗ ರಾಜ್ಯದ ವಿವಿಧ ಜಿಲ್ಲೆಗಳಿಗೆ ಹೋಗುತ್ತಿದ್ದರು. ಸಿನಿಮಾಗಳಲ್ಲಿ ನಟಿಸುವಾಗಲೂ ಅಷ್ಟೆ ವಿವಿಧ ಕಡೆಗಳಲ್ಲಿ ಹೋಗುತ್ತಿದ್ದರು ನಾವೂ ಅವರೊಟ್ಟಿಗೆ ಹೋಗಿ ಅಲ್ಲಿನ ಸ್ಥಳೀಯ ಆಹಾರ ಸವಿಯುತ್ತಿದ್ದೆವು. ಅದೇ ಅಭ್ಯಾಸ ಈಗಲೂ ಮುಂದುವರೆದಿದೆ' ಎಂದರು ಪುನೀತ್.

'ಅಣ್ಣಾವ್ರ ನಮ್ಮಲ್ಲಿ ಊಟ ಮಾಡಿದ್ದರೆಂದು ಹೆಮ್ಮೆಯಿಂದ ಹೇಳುತ್ತಾರೆ'
ಪುನೀತ್ ಅವರ ಮಾತಿಗೆ ಪೂರಕವಾಗಿ, 'ನಾನು ಸಾಕಷ್ಟು ಹಳೆಯ ಹೋಟೆಲ್ಗಳಿಗೆ ಹೋಗಿದ್ದೇನೆ. ಅಲ್ಲೆಲ್ಲ ನಿಮ್ಮ ತಂದೆಯವರ (ಅಣ್ಣಾವ್ರ) ಚಿತ್ರವನ್ನು ಹಾಕಿರುತ್ತಾರೆ. ''ಅಣ್ಣಾವ್ರು ನಮ್ಮ ಹೋಟೆಲ್ಗೆ ಬಂದಿದ್ದರು. ಇಲ್ಲಿ ಊಟ ಮಾಡಿದ್ದರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಆಹಾರ ವ್ಯವಹಾರದಲ್ಲಿರುವವರು ಅಣ್ಣಾವ್ರನ್ನು ದೇವರಂತೆ ಕಾಣುತ್ತಾರೆ. ಅವರನ್ನು ಸಂತನಂತೆ ಕಾಣುತ್ತಾರೆ. ಅವರಿಗೆ ನಿಮ್ಮ ಕುಟುಂಬದ ಬಗ್ಗೆ ಅಪಾರ ಪ್ರೀತಿ, ಗೌರವ ಇದೆ' ಎಂದರು ಕೃಪಾಲ್ ಅಮನ್ನ.

ಊಟದ ಸುತ್ತಾ ಪುನೀತ್ ಮಾತು
ಬಾಳೆ ಎಲೆಯಲ್ಲಿ ಜೋಳದ ರೊಟ್ಟಿ ಊಟ ಸವಿದ ಪುನೀತ್ ರಾಜ್ಕುಮಾರ್ ಉತ್ತರ ಕರ್ನಾಟಕ ವಿಶೇಷ ತಿನಿಸು ಜುಣಕವನ್ನು ಬಹುವಾಗಿ ಮೆಚ್ಚಿಕೊಂಡು ಎರಡೆರಡು ಬಾರಿ ಹಾಕಿಸಿಕೊಂಡರು. ಪುನೀತ್ ಹಾಗೂ ಕೃಪಾಲ್ ಮಾತು ಊಟದ ರುಚಿ, ಊಟದ ವೈವಿಧ್ಯತೆ, ಹಳೆಯ ಹೋಟೆಲ್ಗಳ ವೈಬ್ ಹೀಗೆ ಸಾಗಿತ್ತು. ಅದೊಂದು ಸಂದರ್ಶನದಂತಿರದೆ ಗೆಳೆಯರಿಬ್ಬರು ತಾವು ಪ್ರೀತಿಸುವ ವಿಷಯದ ಬಗ್ಗೆ ಚರ್ಚಿಸಿದಂತಿತ್ತು. ಕೃಪಾಲ್ ಅವರಂತೂ 'ನೀವು ನನ್ನ ಹಳೆಯ ಆಪ್ತ ಗೆಳೆಯ ಎನಿಸುತ್ತಿದೆ. ಬಹುವರ್ಷದ ಬಳಿಕ ನಿಮ್ಮನ್ನು ಭೇಟಿ ಆಗಿ ಮಾತನಾಡಿದಂತೆ ಭಾಸವಾಗುತ್ತಿದೆ. ಅಷ್ಟು ಆತ್ಮೀಯ ಭಾವ ಮೂಡುತ್ತಿದೆ' ಎಂದರು. 'ಯುವರತ್ನ' ಸಂತೋಶ್ ಆನಂದ್ರಾಮ್ ಸಹ ಜೊತೆಗಿದ್ದರು.

ಯಾವ-ಯಾವ ಅಡುಗೆ ಮಾಡ್ತಾರೆ ಪುನೀತ್ ರಾಜ್ಕುಮಾರ್?
ಮಾತಿನ ನಡುವೆ, ಈ ಲಾಕ್ಡೌನ್ನಲ್ಲಿ ತಾವೂ ಸಹ ಅಡುಗೆ ಮಾಡುವುದು ಕಲಿತುಕೊಂಡಿದ್ದಾಗಿ ಹೇಳಿದ ಪುನೀತ್, ಮಸಾಲಾ ಚಿತ್ರಾನ್ನ, ಬೇಳೆ ಸಾರು, ಟೊಮ್ಯಾಟೊ ಗೊಜ್ಜು, ಮಟನ್ ಸಾರು, ಮಟನ್ ಚುಕ್ಕಾ ಇನ್ನೂ ಕೆಲವಾರು ಅಡುಗೆಗಳನ್ನು ಮಾಡುವುದು ಕಲಿತೆ ಎಂದರು. 'ಎಷ್ಟೇ ಊಟ ಮಾಡಿದರೂ ವ್ಯಾಯಾಮ ಮಾಡುವುದು ಮರೆಯುವುದಿಲ್ಲ. ಚೆನ್ನಾಗಿ ಊಟ ಮಾಡಲೆಂದೇ ವ್ಯಾಯಾಮ ಮಾಡಿದ್ದೂ ಇದೆ' ಎಂದು ನಕ್ಕರು ಅಪ್ಪು.

ಕೃಪಾಲ್ ಅಮನ್ನ ಬಗ್ಗೆಯೂ ಕೇಳಿ ತಿಳಿದುಕೊಂಡರು ಪುನೀತ್
ತಮ್ಮ ನಾನ್ವೆಜ್ ಪ್ರೀತಿಯ ಬಗ್ಗೆಯೂ ಮಾತನಾಡಿದ ಪುನೀತ್. ಮುಂದಿನ ಎಪಿಸೋಡ್ ಮಾಡಿದಲ್ಲಿ ಮಾಂಸಾಹಾರ ಖಾದ್ಯಗಳನ್ನು ಸವಿಯೋಣ ಎಂದರು. ಅಲ್ಲದೆ ತಾವು ಸೋಮವಾರ, ಬುಧವಾರ ಹಾಗೂ ಗುರುವಾರ ಮಾಂಸಾಹಾರ ಸೇವಿಸುವುದಿಲ್ಲ ಎಂದರು ಸಹ. ಜೊತೆಗೆ ಕೃಪಾಲ್ ಅಮನ್ನ ಅವರ ಆಹಾರ ಪ್ರೀತಿಯ ಬಗ್ಗೆ, ಫಿಟ್ನೆಸ್ ಬಗ್ಗೆ ಇನ್ನೂ ಕೆಲವು ವಿಷಯಗಳ ಬಗ್ಗೆ ಆಸಕ್ತಿಯಿಂದ ಕೇಳಿ ತಿಳಿದುಕೊಂಡರು ಪುನೀತ್. ಕೊನೆಯಲ್ಲಿ ಏಪ್ರಿಲ್ 1 ರಂದು ಬಿಡುಗಡೆ ಆಗಲಿರುವ 'ಯುವರತ್ನ' ಸಿನಿಮಾ ನೋಡುವುದು ಮರೆಯಬೇಡಿ ಎನ್ನಲು ಮರೆಯಲಿಲ್ಲ.


Click it and Unblock the Notifications











