ರಿಷಬ್ ಶೆಟ್ಟಿ ಆಕ್ರೋಶದ ನುಡಿಗೆ ದನಿಗೂಡಿಸಿದ ಪುನೀತ್ ರಾಜ್ಕುಮಾರ್
ಇತ್ತೀಚೆಗಷ್ಟೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪ್ರಕಟಿಸಿದ್ದ ರಿಷಬ್ ಶೆಟ್ಟಿ, ಪೈರಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ರಿಷಬ್ ಶೆಟ್ಟಿ ನಟಿಸಿ, ನಿರ್ಮಿಸಿರುವ 'ಹೀರೊ' ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿತ್ತು. ಆದರೆ ಬಿಡುಗಡೆ ಆದ ಒಂದೇ ದಿನಕ್ಕೆ ಸಿನಿಮಾದ ಪೈರಸಿ ಕಾಪಿಯ ಲಿಂಕ್ಗಳು ಅಂತರ್ಜಾಲದಲ್ಲಿ ಡೌನ್ಲೋಡ್ಗೆ ದೊರಕಿದ್ದವು. ಇದು ರಿಷಬ್ ಅವರು ಸಿಟ್ಟಿಗೇಳುವಂತೆ ಮಾಡಿತ್ತು.
ಇದೀಗ ಪುನೀತ್ ರಾಜ್ಕುಮಾರ್ ಸಹ ಪೈರಸಿ ವಿರುದ್ಧ ಮಾತನಾಡಿದ್ದಾರೆ. ತಮ್ಮ 'ಯುವರತ್ನ' ಸಿನಿಮಾದ ಪ್ರಚಾರ ಕಾರ್ಯದಲ್ಲಿ ಪುನೀತ್ ತೊಡಗಿಕೊಂಡಿದ್ದು, ಸಂದರ್ಶನವೊಂದರಲ್ಲಿ ಪೈರಸಿ ತಡೆ ಬಗ್ಗೆ ತನ್ನ ಅಭಿಪ್ರಾಯ ಹಂಚಿಕೊಂಡಿದ್ದಾರೆ.

'ತಂತ್ರಜ್ಞಾನದ ವಿರುದ್ಧ ಹೋರಾಟ ಸುಲಭವಲ್ಲ. ಪೈರಸಿ ನಿಲ್ಲುವಂತಾಗಲು ಮೊದಲು ನಾವು ಬದಲಾಗಬೇಕು. ಅಭಿಮಾನಿಗಳಲ್ಲಿ, ಸಿನಿಮಾ ಪ್ರೇಕ್ಷಕರಲ್ಲಿ ಕೇಳಿಕೊಳ್ಳುವುದೆಂದರೆ ಪೈರಸಿ ಎಲ್ಲಿಯಾದರೂ ಕಂಡುಬಂದರೆ ನೀವೆ ಅದನ್ನು ತಡೆಯಿರಿ. ಪೈರಸಿ ಕಾಪಿಗಳನ್ನು ನೋಡಬೇಡಿ' ಎಂದಿದ್ದಾರೆ ಪುನೀತ್.
'ಸೈಬರ್ ಕ್ರೈಂ ವಿಭಾಗ ಎಷ್ಟೇ ಬಲಗೊಂಡರು ಪೈರಸಿ ತಡೆಯುವುದು ಕಷ್ಟ. ತಂತ್ರಜ್ಞಾನ ಬಹಳ ಬದಲಾಗಿದೆ. ಮೊಬೈಲ್ ಕ್ಯಾಮೆರಾಗಳಲ್ಲಿ ಚಿತ್ರೀಕರಿಸಿ ಇಂಟರ್ನೆಟ್ನಲ್ಲಿ ಹರಿಬಿಡುತ್ತಿದ್ದಾರೆ. ಮೊದಲು ನಾವು ಬದಲಾಗಬೇಕು, ಆಗಷ್ಟೆ ಪೈರಸಿಯನ್ನು ಮಣಿಸಲು ಸಾಧ್ಯ' ಎಂದಿದ್ದಾರೆ ಪುನೀತ್ ರಾಜ್ಕುಮಾರ್.
'ಸಿನಿಮಾಕ್ಕೆ ಚಿತ್ರಮಂದಿರವೇ ವೇದಿಕೆ. ಸಿನಿಮಾವನ್ನು ಚಿತ್ರಮಂದಿರದಲ್ಲಿಯೇ ಬಂದು ನೋಡಿರಿ. ಪೈರಸಿ ಕಂಡು ಬಂದಲ್ಲಿ ನೀವೇ ಅದನ್ನು ತಡೆಯುವ ಪ್ರಯತ್ನ ಮಾಡಿ' ಎಂದಿದ್ದಾರೆ ಪುನೀತ್.
ಪುನೀತ್ ರಾಜ್ಕುಮಾರ್ ಅಭಿನಯದ 'ಯುವರತ್ನ' ಸಿನಿಮಾವು ಏಪ್ರಿಲ್ 1 ರಂದು ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಕಾರ್ಯದಲ್ಲಿ ಪುನೀತ್ ತೊಡಗಿಕೊಂಡಿದ್ದಾರೆ. ಸಿನಿಮಾದಲ್ಲಿ ಸಾಯೆಷಾ, ಡಾಲಿ ಧನಂಜಯ್, ಸೋನು ಗೌಡ, ಪ್ರಕಾಶ್ ರೈ ಇನ್ನೂ ಕೆಲವರು ನಟಿಸಿದ್ದಾರೆ. ಸಿನಿಮಾವನ್ನು ಸಂತೋಷ್ ಆನಂದ್ರಾಮ್ ನಿರ್ದೇಶಿಸಿದ್ದಾರೆ.


Click it and Unblock the Notifications











