ನವೆಂಬರ್ 1 ರಂದು ಪುನೀತ್ ರಾಜ್ ಕುಮಾರ್ಗೆ 'ಕರ್ನಾಟಕ ರತ್ನ' ಪ್ರಶಸ್ತಿ ಪ್ರದಾನ: ಸಿಎಂ ಬೊಮ್ಮಾಯಿ
ಚಿತ್ರನಟ ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನವೆಂಬರ್ 1 ರಂದು ಪ್ರದಾನ ಮಾಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾ ಸಂಘದ ವತಿಯಿಂದ ಲಾಲ್ಬಾಗ್ನ ಗಾಜಿನ ಮನೆಯಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಿದ ಮಾಧ್ಯಮದವರೊಂದಿಗೆ ಮಾತನಾಡಿದರು.
ಪ್ರಶಸ್ತಿ ಕೊಡಮಾಡಲು ಸಿದ್ಧತೆಗಳನ್ನು ಕೈಗೊಳ್ಳಲು ಸಮಿತಿಯನ್ನು ರಚಿಸಲಾಗುವುದು. ರಾಜ್ ಕುಮಾರ್ ಅವರ ಕುಟುಂಬದ ಸದಸ್ಯರು ಸಹ ಸಮಿತಿಯಲ್ಲಿ ಇರುತ್ತಾರೆ. ಎಲ್ಲರೂ ಸೇರಿ ಗೌರವಯುತವಾಗಿ ಪುನೀತ್ ಅವರಿಗೆ ಮರಣೋತ್ತರವಾಗಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಫಲಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡಿ
1922 ರಿಂದ ಫಲಪುಷ್ಪ ಪ್ರದರ್ಶನ ನಿರಂತರವಾಗಿ ನಡೆಯುತ್ತಿದೆ. ಪ್ರತಿ ವರ್ಷ ಅತಿ ಹೆಚ್ವು ಜನರನ್ನು ಆಕರ್ಷಿಸುತ್ತಿದೆ. ಈ ಬಾರಿ ಸ್ವಾತಂತ್ರ್ಯೋತ್ಸವದ ಅಮೃತ ವರ್ಷಾಚರಣೆಯ ಅಂಗವಾಗಿ ಸಂಭ್ರಮ ತುಂಬಿದೆ. ಫಲಪುಷ್ಪ ಪ್ರದರ್ಶನಕ್ಕೆ ವಿಶೇಷ ಕಳೆ ಬಂದಿದೆ. ಮುಂದಿನ 10 ದಿನಗಳ ಕಾಲ ಪ್ರತಿ ದಿನ ಲಕ್ಷಾಂತರ ಜನ ಬರುವ ನಿರೀಕ್ಷೆ ಇದೆ. ಈ ಬಾರಿ ಡಾ: ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಅವರ ಸ್ಮರಣಾರ್ಥ ವಿಶೇಷವಾದ ಪ್ರದರ್ಶನ ಏರ್ಪಟ್ಟಿದೆ. ಹಾಗಾಗಿ ಇನ್ನಷ್ಟು ಜನರನ್ನು ಪ್ರದರ್ಶನ ಆಕರ್ಷಿಸುವ ನಿರೀಕ್ಷೆ ಇದೆ. ತೋಟಗಾರಿಕಾ ಇಲಾಖೆ ಸಚಿವ ಮುನಿರತ್ನ ಅವರ ನೇತೃತ್ವದಲ್ಲಿ ಅಧಿಕಾರಿಗಳು ಉತ್ತಮವಾಗಿ ವ್ಯವಸ್ಥೆ ಮಾಡಿದ್ದಾರೆ. ಸಾರ್ವಜನಿಕರು ಇಲ್ಲಿಗೆ ಭೇಟಿ ನೀಡಿ ಆನಂದಿಸಬೇಕೆಂದು ತಿಳಿಸಿದರು.

ಅಪ್ಪು-ರಾಜ್ ಥೀಮ್ನಲ್ಲಿ ಫಲಪುಷ್ಪ ಪ್ರದರ್ಶನ
ಅಪ್ಪು ಮತ್ತು ಡಾ.ರಾಜ್ ಕುಮಾರ್ ಥೀಮ್ ನಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ, ಲಾಲ್ ಬಾಗ್ ನಲ್ಲಿ ಚಿನ್ನ ಲೇಪಿತ ಅಪ್ಪು ಪ್ರತಿಮೆ ನಿರ್ಮಿಸಲಾಗಿದೆ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಅಪ್ಪು ಪುಣ್ಯ ಭೂಮಿಯಿಂದ ಜ್ಯೋತಿ ತೆಗೆದುಕೊಂಡು ಹೊರಟು ಅಪ್ಪು ಸಮಾಧಿಗೆ ತಂದು ಪೂಜೆ ಸಲ್ಲಿಸಿ ಜ್ಯೋತಿಯನ್ನು ಬೆಳ್ಳಿ ರಥದ ಮೂಲಕ ಲಾಲ್ ಬಾಗ್ ವರೆಗೂ ಮೆರವಣಿಗೆ ತರಲಾಯಿತು. ಜ್ಯೋತಿಯಲ್ಲಿ ತೋಟಗಾರಿಕಾ ಸಚಿವ ಮುನಿರತ್ನ ಸ್ವೀಕರಿಸಿದರು.

ಸೈಕಲ್ ಜಾತಾ ಹಮ್ಮಿಕೊಳ್ಳಲಾಗಿತ್ತು
ಬೆಳ್ಳಿರಥದ ಜೊತೆಗೆ ಸೈಕಲ್ ಜಾತಾ ಹಮ್ಮಿಕೊಳ್ಳಲಾಗಿತ್ತು, ತೋಟಗಾರಿಕೆ ಇಲಾಖೆ, ಸಚಿವ ಮುನಿರತ್ನ ನೇತೃತ್ವದಲ್ಲಿ ನಡೆಯಲಿರುವ ಕಾರ್ಯಕ್ರಮ ಜರುಗಿತು. ಜಾಲಹಳ್ಳಿ, ಯಶವಂತಪುರ, ಹೆಬ್ಬಾಳ, ಗೋರಗುಂಟೆಪಾಳ್ಯ, ಸಾಂಕಿ ಟ್ಯಾಂಕಿ, ಭಾಷ್ಯಂ ಸರ್ಕಲ್, ಮೇಖ್ರಿ ಸರ್ಕಲ್, ಜಯಮಾಲ್ ಪ್ಯಾಲೇಸ್, ರಿಚ್ ಮಂಡ್ ಟೌನ್, ಲಾಲ್ ಬಾಗ್ ಗೆ ಜಾಥ ಸೇರಲಿದೆ. ಲಾಲ್ ಬಾಗ್ ಫಲಪುಷ್ಪ ಪ್ರದರ್ಶನ್ ಸ್ಥಳಕ್ಕೆ ಡಾ.ರಾಜ್ ಕುಮಾರ್ ಕುಟುಂಬ ಬರಲಿದೆ.

ತಂಡೋಪತಂಡವಾಗಿ ಬರುತ್ತಿರುವ ಜನ
ಅಪ್ಪು ಹೆಸರಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನ ಕಣ್ತುಂಬಿಕೊಳ್ಳಲು ಭಾರಿ ಸಂಖ್ಯೆಯ ಜನ ಸೇರುತ್ತಿದ್ದಾರೆ. ಆಗಸ್ಟ್ 15 ರ ಬಳಿಕವೂ ಕೆಲವು ದಿನ ಪುಷ್ಪ ಪ್ರದರ್ಶನವನ್ನು ಹಾಗೆಯೇ ಉಳಿಸಿಕೊಳ್ಳಲಾಗುವುದು ಎಂದು ಮುನಿರತ್ನ ಈಗಾಗಲೇ ಹೇಳಿದ್ದಾರೆ. ಮಳೆಯ ನಡುವೆಯೂ ಹಲವು ಮಂದಿ ತಂಡೋಪತಂಡವಾಗಿ ಬಂದು ಪುಷ್ಪ ಪ್ರದರ್ಶನ ಕಣ್ತುಂಬಿಕೊಳ್ಳುತ್ತಿದ್ದಾರೆ.


Click it and Unblock the Notifications











