ಪವರ್ ಸ್ಟಾರ್ ಕೈಯಲ್ಲಿದೆ 5 ಚಿತ್ರಗಳು, ಯಾವುದಕ್ಕೆ ಹೆಚ್ಚು ಕಾಯ್ತಿದ್ದೀರಾ?
'ಯುವರತ್ನ' ಬಳಿಕ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 'ಜೇಮ್ಸ್' ಸಿನಿಮಾ ಶುರು ಮಾಡಿದ್ದರು. ಭರ್ಜರಿ, ಬಹದ್ದೂರ್ ಅಂತಹ ಚಿತ್ರಗಳನ್ನು ನಿರ್ದೇಶಿಸಿದ್ದ ಚೇತನ್ ಕುಮಾರ್ ಜೇಮ್ಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು ಆರಂಭದಿಂದಲೂ ಕುತೂಹಲ ಹೆಚ್ಚಿಸುತ್ತಿದೆ. ಕಳೆದ ವರ್ಷ ಕೋವಿಡ್ಗು ಮೊದಲೇ ಮೊದಲ ಹಂತದ ಚಿತ್ರೀಕರಣ ಮುಗಿಸಿದ್ದ ಜೇಮ್ಸ್ ಈಗ ಮೂರನೇ ಅಲೆಯ ಭೀತಿಯ ನಡುವೆಯೂ ಶೂಟಿಂಗ್ ಮುಂದುವರಿಸಿದೆ.
ಜೇಮ್ಸ್ ಬಹುತೇಕ ಕೊನೆಯ ಹಂತದ ಶೂಟಿಂಗ್ ಮಾಡಲಾಗುತ್ತಿದೆ ಎಂಬ ಮಾಹಿತಿ ಇದೆ. ಬಹುದೊಡ್ಡ ತಾರಬಳಗ ಹೊಂದಿರುವ ಈ ಚಿತ್ರ ಬಹಳ ವಿಶೇಷವಾಗಿ ಗಮನ ಸೆಳೆಯುತ್ತಿದೆ. ಇನ್ನು ಜೇಮ್ಸ್ ಚಿತ್ರಕ್ಕೆ ದಕ್ಷಿಣ ಭಾರತದ ಖ್ಯಾತ ಫೈಟ್ ಮಾಸ್ಟರ್ಸ್ ರಾಮ್-ಲಕ್ಷ್ಮಣ್ ಸಾಹಸ ನಿರ್ದೇಶನ ಮಾಡ್ತಿದ್ದಾರೆ. ಜೇಮ್ಸ್ ಸಿನಿಮಾ ನಂತರ ಅಪ್ಪು ಕೈಯಲ್ಲಿ ಇನ್ನು ನಾಲ್ಕು ಚಿತ್ರಗಳಿವೆ. ಒಂದಕ್ಕಿಂತ ಇನ್ನೊಂದು ವಿಭಿನ್ನವಾಗಿರುವ ಪ್ರಾಜೆಕ್ಟ್ ಎನ್ನಲಾಗಿದೆ. ಅಷ್ಟಕ್ಕೂ, ಜೇಮ್ಸ್ ಆದ್ಮೇಲೆ ಅಪ್ಪು ಶುರು ಮಾಡಲಿರುವ ಚಿತ್ರ ಯಾವುದು? ಯಾವ ಚಿತ್ರ ಹೆಚ್ಚು ನಿರೀಕ್ಷೆ ಮೂಡಿಸಿದೆ. ಮುಂದೆ ಓದಿ...

ಪವನ್ ಜೊತೆ 'ದ್ವಿತ್ವ'
'ಜೇಮ್ಸ್' ಸಿನಿಮಾ ಮುಗಿಯುತ್ತಿದ್ದಂತೆ 'ಲೂಸಿಯಾ' ನಿರ್ದೇಶಕ ಪವನ್ ಕುಮಾರ್ ಜೊತೆ 'ದ್ವಿತ್ವ' ಚಿತ್ರ ಆರಂಭಿಸಲಿದ್ದಾರೆ. ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಈ ಚಿತ್ರ ತಯಾರಾಗಲಿದ್ದು, ಈ ಕಾಂಬಿನೇಷನ್ ಹೆಚ್ಚು ನಿರೀಕ್ಷೆ ಮೂಡಿಸಿದೆ. ತಮಿಳು ನಟಿ ತ್ರಿಷಾ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದಾಗಲೇ ಫಸ್ಟ್ ಲುಕ್ ಪೋಸ್ಟರ್ ಮೂಲಕ ಹೆಚ್ಚು ಗಮನ ಸೆಳೆದಿರುವ ಈ ಚಿತ್ರದಲ್ಲಿ ಅಪ್ಪು ಸಂಪೂರ್ಣ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲವಿದೆ. ಹಾಗಾಗಿ, ಪವನ್-ಪುನೀತ್ ಜೋಡಿಯ ಈ ಚಿತ್ರ ಹೆಚ್ಚು ಸದ್ದು ಮಾಡ್ತಿದೆ.

ದಿನಕರ್ ಜೊತೆ ಅಪ್ಪು ಚಿತ್ರ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹೋದರ ದಿನಕರ್ ತೂಗುದೀಪ್ ಜೊತೆ ಪುನೀತ್ ರಾಜ್ ಕುಮಾರ್ ಹೊಸ ಸಿನಿಮಾವೊಂದು ಮಾಡುವುದು ಈಗಾಗಲೇ ಖಚಿತವಾಗಿದೆ. ಜಯಣ್ಣ-ಭೋಗೇಂದ್ರ ಈ ಸಿನಿಮಾ ನಿರ್ಮಿಸುತ್ತಿದ್ದು, ಪ್ರಾಜೆಕ್ಟ್ ಓಕೆ ಆಗಿದೆ. ಜೊತೆ ಜೊತೆಯಲಿ, ನವಗ್ರಹ ಅಂತಹ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿರುವ ದಿನಕರ್ ಮೇಲೆ ಹೆಚ್ಚು ನಿರೀಕ್ಷೆಯಿದ್ದು, ಅಪ್ಪು ಅವರನ್ನು ಯಾವ ರೀತಿ ತೋರಿಸಲಿದ್ದಾರೆ ಎಂದು ಫ್ಯಾನ್ಸ್ ಕಾಯ್ತಿದ್ದಾರೆ.

'ಪೈಲ್ವಾನ್' ನಿರ್ದೇಶಕ ಕೃಷ್ಣ
ಹೆಬ್ಬುಲಿ, ಪೈಲ್ವಾನ್ ನಿರ್ದೇಶಕ ಕೃಷ್ಣ ಅವರು ಪವರ್ ಸ್ಟಾರ್ ಜೊತೆ ಸಿನಿಮಾ ಮಾಡುವುದು ಖಚಿತವಾಗಿದೆ. ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ವಿಶೇಷವಾಗಿ ಈ ಸುದ್ದಿಯನ್ನು ನಿರ್ದೇಶಕ ಕೃಷ್ಣ ಪ್ರಕಟಿಸಿದ್ದರು. ಪ್ರೊಡಕ್ಷನ್ ನಂ 2 ಹೆಸರಿನಲ್ಲಿ ಪೋಸ್ಟರ್ ರಿಲೀಸ್ ಮಾಡಿ ಹುಟ್ಟುಹಬ್ಬಕ್ಕೆ ಶುಭಕೋರಿದ್ದರು. ಇನ್ನುಳಿದಂತೆ ಈ ಚಿತ್ರ ಯಾವಾಗ ಆರಂಭ, ಹೆಸರೇನು ಎಂಬ ಮಾಹಿತಿ ನೀಡಿರಲಿಲ್ಲ. ಹಾಗಾಗಿ, ಅಪ್ಪು ಕೈಯಲ್ಲಿ ಈ ಚಿತ್ರವೂ ಇದ್ದು ಈ ಕಾಂಬಿನೇಷನ್ ಮೇಲೂ ಸಹ ನಿರೀಕ್ಷೆ ಹೆಚ್ಚಿದೆ.

ಸಂತೋಷ್-ಪುನೀತ್
ರಾಜಕುಮಾರ, ಯುವರತ್ನ ಚಿತ್ರಗಳ ನಂತರ ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತೊಮ್ಮೆ ಪುನೀತ್ ರಾಜ್ ಕುಮಾರ್ ಜೊತೆ ಸಿನಿಮಾ ಮಾಡುವುದಾಗಿ ಘೋಷಿಸಿದ್ದಾರೆ. ಇವರಿಬ್ಬರ ಹ್ಯಾಟ್ರಿಕ್ ಚಿತ್ರವನ್ನು ಸಹ ಹೊಂಬಾಳೆ ಫಿಲಂಸ್ ನಿರ್ಮಿಸಲಿದೆ. ಆದರೆ, ಈ ಚಿತ್ರ ಯಾವಾಗ ಆರಂಭವಾಗುತ್ತದೆ ಎನ್ನುವುದರ ಬಗ್ಗೆ ಸದ್ಯಕ್ಕೆ ಸ್ಪಷ್ಟ ಉತ್ತರ ಇಲ್ಲ. ಜೇಮ್ಸ್ ಟು ಸಂತೋಷ್ ಸಿನಿಮಾದಲ್ಲಿ ಯಾವ ಚಿತ್ರ ಪವರ್ ಸ್ಟಾರ್ ಅಭಿಮಾನಿಗಳಲ್ಲಿ ಥ್ರಿಲ್ ಹೆಚ್ಚಿಸಿದೆ ಎಂದು ಕಾಮೆಂಟ್ ಮಾಡಿ ತಿಳಿಸಿದೆ.

ಜೇಮ್ಸ್ ಚಿತ್ರದ ಬಗ್ಗೆ
ಜೇಮ್ಸ್ ಚಿತ್ರದಲ್ಲಿ ನಾಯಕಿಯಾಗಿ ಪ್ರಿಯಾ ಆನಂದ್ ಕಾಣಿಸಿಕೊಂಡಿದ್ದಾರೆ. ರಾಜಕುಮಾರ ಸಿನಿಮಾದ ನಂತರ ಅಪ್ಪು ಜೊತೆ ಮತ್ತೊಮ್ಮೆ ನಟಿಸುತ್ತಿದ್ದಾರೆ. ತಮಿಳು ನಟ ಶರತ್ ಕುಮಾರ್, ಅನು ಪ್ರಭಾಕರ್, ತೆಲುಗು ನಟ ಶ್ರೀಕಾಂತ್, ಆದಿತ್ಯ ಮೆನನ್ ಸಹ ಇರಲಿದ್ದಾರೆ. ಇವರ ಜೊತೆಗೆ ಕಾಮಿಡಿ ಸ್ಟಾರ್ ಚಿಕ್ಕಣ್ಣ, ನಟ ಹರ್ಷ, ರಂಗಾಯಣ ರಘು, ಶೈನ್ ಶೆಟ್ಟಿ, ಕಾವ್ಯ ಶಾಸ್ತ್ರಿ, ನಯನಾ ಚಿತ್ರದಲ್ಲಿ ಅಭಿನಯಿಸಿದ್ದಾರೆ ಎಂಬ ಮಾಹಿತಿ ಇದೆ.


Click it and Unblock the Notifications











