ಪುನೀತ್ ರಾಜ್ಕುಮಾರ್ ಸರಳತೆಗೆ ಈ ಚಿತ್ರಕ್ಕಿಂತಲೂ ಸಾಕ್ಷಿ ಬೇಕೆ
ಕನ್ನಡ ಚಿತ್ರರಂಗದ ದೊಡ್ಡ ಸ್ಟಾರ್ ಆಗಿರುವ ಪುನೀತ್ ರಾಜ್ಕುಮಾರ್, ತೆರೆಯ ಹೊರಗೆ ಬಹಳ ಸರಳ ಮನುಷ್ಯ. ಎಲ್ಲರನ್ನೂ ಪ್ರೀತಿಯಿಂದ ಕಾಣುವ, ಪ್ರೀತಿಯಿಂದ ಮಾತನಾಡಿಸಿ, ಅವರೊಟ್ಟಿಗೆ ಅವರಂತೆ ಬೆರೆವ ಮನುಷ್ಯ.
Recommended Video

ಪುನೀತ್ ರಾಜ್ಕುಮಾರ್ ಸರಳತೆಗೆ, ಮಾನವೀಯತೆಗೆ, ಅಭಿಮಾನಿಗಳ ಮೇಲಿನ ಪ್ರೀತಿಗೆ ಈಗಾಗಳೇ ಸಾಕಷ್ಟು ಉದಾಹರಣೆಗಳಿವೆ. ಅವುಗಳ ಸಾಲಿಗೆ ಹೊಸದಾಗಿ ಸೇರ್ಪಡೆ ಆಗಿದೆ ಒಂದು ಘಟನೆ.
ಪ್ರವಾಸ ಪ್ರಿಯರೂ ಆಗಿರುವ ಪುನೀತ್ ರಾಜ್ಕುಮಾರ್ ಭಾನುವಾರ ಗಂಗಾವತಿ ಸಮೀಪದ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ್ದರು. ಆದರೆ ಕೋವಿಡ್ ಕಾರಣದಿಂದ ಅವರಿಗೆ ದೇವರ ದರ್ಶನ ಸಿಗಲಿಲ್ಲ. ಇದರಿಂದ ಬೇಸರಗೊಳ್ಳದ ಪುನೀತ್ ಗಂಗಾವತಿ ಸಮೀಪದ ಹಳ್ಳಿಗಳಲ್ಲಿ ಸುತ್ತಾಡಿ ಜನರನ್ನು ಭೇಟಿಯಾಗಿ ಅವರೊಟ್ಟಿಗೆ ಕಾಲ ಕಳೆದರು.

ಕುರಿಗಾಹಿಗಳ ಆತಿಥ್ಯ ಸ್ವೀಕರಿಸಿದ ಪುನೀತ್
ದಾರಿಯಲ್ಲಿ ಕುರಿಗಾಹಿಗಳ ಕುಟುಂಬಗಳ ಮನೆಗಳಿದ್ದ ಸ್ಥಳಕ್ಕೆ ತೆರಳಿದ ಪುನೀತ್ ರಾಜ್ಕುಮಾರ್, ಕುಟುಂಬದ ಜೊತೆ ಸಮಯ ಕಳೆದರು. ಅವರು ನೆಲದ ಮೇಲೆ ಹಾಸಿದ ಕಂಬಳಿ ಮೇಲೆ ಕೂತು, ಕುರಿಗಾಹಿಗಳು ನೀಡಿದ ಸಂಗಟಿ, ಹಾಲು ಊಟ ಮಾಡಿ ಕೈಮುಗಿದರು. ಕುರಿಗಾಹಿಗಳ ಮಕ್ಕಳನ್ನು ಎತ್ತಿಕೊಂಡು ಮುದ್ದಾಡಿದರು. ಕುರಿಗಾಹಿ ಕುಟುಂಬ ಸದಸ್ಯರೊಟ್ಟಿಗೆ ಚಿತ್ರಗಳನ್ನು ತೆಗೆದುಕೊಂಡರು.

ಕೋವಿಡ್ ಕಾರಣದಿಂದ ದರ್ಶನ ಸಿಗಲಿಲ್ಲ
ಪುನೀತ್ ರಾಜ್ಕುಮಾರ್ ಅಂಜನಾದ್ರಿ ಬೆಟ್ಟದ ಆಂಜನೇಯ ಸ್ವಾಮಿಯ ದರ್ಶನಕ್ಕೆಂದು ಹೋಗಿದ್ದರು. ಆದರೆ ಕೊರೊನಾ ಕಾರಣದಿಂದ ದೇವಸ್ಥಾನಕ್ಕೆ ಯಾರಿಗೂ ಪ್ರವೇಶವಿರಲಿಲ್ಲ. ಕೋವಿಡ್ ನಿಯಮ ಗೌರವಿಸಿ ಪುನೀತ್ ಸುಮ್ಮನೆ ವಾಪಸ್ಸಾದರು.

ಸಕ್ರೆಬೈಲು ಆನೆ ಬಿಡಾರಕ್ಕೆ ಪುನೀತ್ ಭೇಟಿ
ಸೆಪ್ಟೆಂಬರ್ 01ರಂದು ಪುನೀತ್ ರಾಜ್ಕುಮಾರ್ ಅವರು ಸಕ್ರೆಬೈಲು ಆನೆ ಬಿಡಾರಕ್ಕೆ ಭೇಟಿ ನೀಡಿದ್ದರು. ಅಲ್ಲಿ ಮಾವುತರೊಟ್ಟಿಗೆ, ಅವರ ಕುಟುಂಬದೊಂದಿಗೆ ಬೆರೆತು ಮಾತುಕತೆ ನಡೆಸಿದರು. ಅವರೊಟ್ಟಿಗೆ ಚಿತ್ರಗಳನ್ನು ತೆಗೆಸಿಕೊಂಡರು. ಸಾಕ್ಷ್ಯ ಚಿತ್ರದ ಚಿತ್ರೀಕರಣಕ್ಕಾಗಿ ಪುನೀತ್ ಸಕ್ರೆಬೈಲುಗೆ ತೆರಳಿದ್ದರು.

ಸ್ಥಳೀಯ ಕಲಾವಿದರ ಸಂಗೀತಕ್ಕೆ ತಲೆದೂಗಿದ ಪುನೀತ್
ಕೊಪ್ಪಳ ತಾಲ್ಲೂಕಿನ ನಾರಾಯಣ ಪೇಟೆಯ ಲೀ ವುಡ್ಸ್ ರೆಸಾರ್ಟ್ನಲ್ಲಿ ತಂಗಿದ್ದ ಪುನೀತ್ ರಾಜ್ಕುಮಾರ್ ಸ್ಥಳೀಯರು ನುಡಿಸಿದ ಸಂಗೀತ ಕೇಳಿ ಮನಸೋತಿದ್ದಾರೆ. ಇಬ್ಬರು ಯುವಕರು ಕಾಂಗೊ ಮಾದರಿಯ ಡ್ರಮ್ ಭಾರಿಸಿದರೆ ಇನ್ನಿಬ್ಬರು ವಿನೂತನವಾದ ವಾದ್ಯಗಳನ್ನು ಭಾರಿಸಿ ಪುನೀತ್ರನ್ನು ಮನರಂಜಿಸಿದರು. ಕಲಾವಿದರ ಸಂಗೀತ ಕಛೇರಿಯಲ್ಲಿ ಪುನೀತ್ ರಾಜ್ಕುಮಾರ್ ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದುಕೊಂಡರು. ನಂತರ ಕಲಾವಿದರೊಟ್ಟಿಗೆ ಫೊಟೊ ತೆಗೆಸಿಕೊಂಡಿದ್ದಲ್ಲದೆ ಅವರ ಸಂಗೀತವನ್ನು ಹೊಗಳಿ ಉತ್ಸಾಹದ ಮಾತುಗಳನ್ನಾಡಿದರು.

ಸರಳತೆಗೆ ಖ್ಯಾತರು ದೊಡ್ಮನೆ ಮಕ್ಕಳು
ತಿಂಗಳ ಹಿಂದೆ ಹುಟ್ಟೂರು ಗಾಜನೂರಿಗೆ ಕುಟುಂಬದ ಜೊತೆ ತೆರಳಿದ್ದ ಪುನೀತ್ ರಾಜ್ಕುಮಾರ್ ಅಲ್ಲಿಯೂ ತಮ್ಮ ಬಾಲ್ಯ ಸ್ನೇಹಿತರೊಟ್ಟಿಗೆ ಚಿತ್ರಗಳನ್ನು ಕ್ಲಿಕ್ಕಿಸಿಕೊಂಡಿದ್ದರು. ತಮ್ಮನ್ನು ಎತ್ತಿ ಆಡಿಸಿದ ಅಜ್ಜನೊಟ್ಟಿಗೆ ಚಿತ್ರಗಳನ್ನು ಕ್ಲಿಕ್ಕಿಸಿಕೊಂಡಿದ್ದರು. ಶಿವರಾಜ್ ಕುಮಾರ್ ಸಹ ಇದೇ ರೀತಿ ತಮ್ಮ ಸರಳತೆಗೆ ಬಹಳ ಖ್ಯಾತರು. ರಸ್ತೆ ಬದಿ ಟೀ ಕುಡಿಯುವ, ತಮ್ಮನ್ನು ಕಾಣಲು ಬರುವ ಬಡ ಅಭಿಮಾನಿಗಳೊಟ್ಟಿಗೆ ಚಿತ್ರ ತೆಗೆಸಿಕೊಳ್ಳುವ ಹಲವಾರು ಫೊಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಡಾ.ರಾಜ್ಕುಮಾರ್ ಸಹ ಸರಳತೆಗೆ ಬಹಳ ಖ್ಯಾತರಾಗಿದ್ದವರು. ಅವರ ಗುಣವೇ ಮಕ್ಕಳಿಗೂ ಬಂದಿದೆ. ದೊಡ್ಮನೆ ಕುಟುಂಬವಾದರೂ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬೆರೆತು ಸರಳತೆಯನ್ನು ಮೆರೆಯುತ್ತಾರೆ ಕುಟುಂಬದ ಮಂದಿ.

ಹಲವು ಸಿನಿಮಾಗಳಲ್ಲಿ ಪುನೀತ್ ಬ್ಯುಸಿ
ಪುನೀತ್ ರಾಜ್ಕುಮಾರ್ ಪ್ರಸ್ತುತ 'ಜೇಮ್ಸ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಬಳಿಕ 'ದ್ವಿತ್ವ' ಹೆಸರಿನ ಭಿನ್ನ ಕತೆಯುಳ್ಳ ಸಿನಿಮಾದಲ್ಲಿ ನಟಿಸಲಿದ್ದಾರೆ. ಸಿನಿಮಾವನ್ನು 'ಲೂಸಿಯಾ' ಖ್ಯಾತಿಯ ಪವನ್ ಕುಮಾರ್ ನಿರ್ದೇಶನ ಮಾಡಲಿದ್ದಾರೆ. ಅದರ ಬಳಿಕ ದಿನಕರ್ ತೂಗುದೀಪ್ ನಿರ್ದೇಶನದ ಸಿನಿಮಾ, ಅದರ ಬಳಿಕ 'ರಾಮಾ ರಾಮಾ ರೇ' ಖ್ಯಾತಿಯ ಸತ್ಯ ನಿರ್ದೇಶನದ ಸಿನಿಮಾದಲ್ಲಿ ಪುನೀತ್ ರಾಜ್ಕುಮಾರ್ ನಟಿಸಲಿದ್ದಾರೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣದ ಸಿನಿಮಾದಲ್ಲಿಯೂ ಪುನೀತ್ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ.


Click it and Unblock the Notifications











