ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
ದಾವಣಗೆರೆಯ ಪ್ರಸಿದ್ಧ ಹರಜಾತ್ರಾ ಮಹೋತ್ಸವದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಭಾಗಿಯಾಗಿದ್ದಾರೆ. ಮೂರು ದಿನಗಳ ಕಾಲ ಪಂಚಮಸಾಲಿ ಪೀಠದಲ್ಲಿ ನಡೆದ ಹರಜಾತ್ರೆಗೆ ಪವರ್ ಸ್ಟಾರ್ ಪುನೀತ್ ಹಾಜರಿ ಎಲ್ಲರ ಗಮನ ಸೆಳೆದಿದೆ.
ವೇದಿಕೆಯಲ್ಲಿ ನಿಂತು ಪವರ್ ಸ್ಟಾರ್ ಮಾತನಾಡುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಅಲ್ಲದೆ ವೇದಿಕೆಯಲ್ಲಿ ಅಪ್ಪು ಹಾಡು ಕೇಳಿ ನೆರೆದಿದ್ದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. 'ಮೊದಲು ನಮ್ಮ ತಂದೆ-ತಾಯಿಯ ಆಶೀರ್ವಾದ ಬೇಕು. ಆನಂತರ ನಮ್ಮನ್ನು ಮುಂದೆ ನಡೆಸಿಕೊಂಡು ಹೋಗುವಂತೆ ಗುರುಗಳ ಆಶೀರ್ವಾದ ಬೇಕು' ಎಂದಿದ್ದಾರೆ.
'ನಂಬಿಕೆ ಜೀವನದಲ್ಲಿ ಬಹಳ ಮುಖ್ಯ. ನಾವು ಮಾಡೋ ಕೆಲಸದಲ್ಲಿ ನಂಬಿಕೆ ಇಟ್ಟುಕೊಳ್ಳಬೇಕು. ಇದಲ್ಲಕ್ಕಿಂತ ಮೊದಲು ನಾವು ಚೆನ್ನಾಗಿರಬೇಕು. ನಾವು ಚೆನ್ನಾಗಿದ್ದರೆ, ನಮ್ಮ ಅಕ್ಕ- ಪಕ್ಕದಲ್ಲಿರುವವರು ಚೆನ್ನಗಿರ್ತಾರೆ' ಎಂದು ಪುನೀತ್ ಹೇಳಿದ್ದಾರೆ.

ಅಪ್ಪು ಮಾತು ಮುಗಿಸುತ್ತಿದ್ದಂತೆ ಅಭಿಮಾನಿಗಳು ಹಾಡು ಹೇಳುವಂತೆ ಮನವಿ ಮಾಡಿಕೊಂಡಿದ್ದಾರೆ. ಅಭಿಮಾನಿಗಳ ಮನವಿ ಮೇರೆಗೆ ರಾಜಕುಮಾರ ಸಿನಿಮಾದ ಪ್ರಸಿದ್ಧ ಹಾಡು 'ಬೊಂಬೆ ಹೇಳುತೈತೆ.. ಮತ್ತೆ ಹೇಳುತೈತೆ...' ಹಾಡನ್ನು ಹಾಡಿ ನೆರೆದಿದ್ದ ಜನರನ್ನು ಸಂತಸಪಡಿಸಿದ್ದಾರೆ.
ಇನ್ನು ಪಂಚಮಸಾಲಿ ಪೀಠದ ಸ್ವಾಮೀಜಿ ಪುನೀತ್ ರಾಜ್ ಕುಮಾರ್ ಅವರನ್ನು ಹಾಡಿಹೊಗಳಿದ್ದಾರೆ. 'ಹರಜಾತ್ರಾ ಮಹೋತ್ಸವಕ್ಕೆ ಬಂದಾಗ ಅವರ ಸಿಂಪ್ಲಿಸಿಟಿ ಕಂಡು ನಾವು ವಿಸ್ಮಿತರಾದೆವು. ಅವರಿಗಿರುವ ಅಭಿಮಾನಿ ಸಮೂಹ ಬಹಳ ದೊಡ್ಡದಿದೆ. ಹೇಳಬೇಕೆಂದರೆ ಡಾ. ರಾಜ್ ಕುಮಾರ್ ಅವರನ್ನೇ ಹೋಲುತ್ತಿದೆ ಪುನೀತ್ ಅವರ ವ್ಯಕ್ತಿತ್ವ. ನೀವು ನಮ್ಮ ಹರಜಾತ್ರಾ ಮಹೋತ್ಸವಕ್ಕೆ ಬಂದಿದ್ದು ನಮಗೆ ಅತೀವ ಖುಷಿ ನೀಡಿತು. ಘನತೆ ಹೆಚ್ಚಿಸಿತು. ಈ ಬಾಂಧವ್ಯ ಎಂದೆಂದಿಗೂ ಮುಂದುವರಿಯುತ್ತದೆ. ಶ್ರೀ ಪುನೀತ್ ರಾಜಕುಮಾರ್ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಒಳಿತಾಗಲಿ ಎಂದು ನಾವು ಹರಿಹರಾದಿ ಶರಣರಲ್ಲಿ ಪ್ರಾರ್ಥಿಸುತ್ತೇವೆ' ಎಂದು ಬರೆದುಕೊಂಡಿದ್ದಾರೆ.
ಹರ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದ ಪುನೀತ್ ಅವರನ್ನು ನೋಡಲು ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.


Click it and Unblock the Notifications











