ಪುನೀತ್ ರಾಜ್ಕುಮಾರ್ ಅಭಿಮಾನಿಗಳಿಗೆ ಎರಡೆರೆಡು ಬೇಸರದ ಸುದ್ದಿ
ಪುನೀತ್ ರಾಜ್ಕುಮಾರ್ ಅಭಿಮಾನಿಗಳಿಗೆ ಎರಡೆರಡು ಬೇಸರದ ಸುದ್ದಿ ಇಂದು ಅಪ್ಪಳಿಸಿದೆ. ಸ್ವತಃ ಪುನೀತ್ ಅವರು ಇಂದು ಫೇಸ್ಬುಕ್ನಲ್ಲಿ ಲೈವ್ ಬಂದು ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಮಾರ್ಚ್ 17 ರಂದು ಪುನೀತ್ ರಾಜ್ಕುಮಾರ್ ಅವರ ಹುಟ್ಟುಹಬ್ಬ. ಕಳೆದ ವರ್ಷ ಕೊರೊನಾ ಕಾರಣದಿಂದಾಗಿ ಹುಟ್ಟುಹಬ್ಬ ಆಚರಣೆಯನ್ನು ರದ್ದು ಮಾಡಿದ್ದ ಪುನೀತ್, ಯಾವ ಅಭಿಮಾನಿಗಳೂ ಸಹ ಮನೆಯ ಬಳಿ ಬರಬಾರದೆಂದು ಮನವಿ ಮಾಡಿದ್ದರು. ಈ ವರ್ಷವೂ ಸಹ ಮನೆಯ ಬಳಿ ಹುಟ್ಟುಹಬ್ಬ ಆಚರಣೆ ಇರುವುದಿಲ್ಲ ಎಂದು ಹೇಳಿದ್ದಾರೆ ಪುನೀತ್ ರಾಜ್ಕುಮಾರ್.
'ಈ ವರ್ಷವೂ ಮನೆಯ ಬಳಿ ಹುಟ್ಟುಹಬ್ಬ ಆಚರಣೆ ಇರುವುದಿಲ್ಲ. ನಾನು, ನನ್ನ ಕುಟುಂಬ ಸದಸ್ಯರ ಜೊತೆಗೆ ಕೆಲವು ದೇವಸ್ಥಾನಗಳಿಗೆ ಹೋಗುತ್ತಿದ್ದೇನೆ ಹಾಗಾಗಿ ಯಾರೂ ಸಹ ನನಗೆ ಶುಭಾಶಯ ತಿಳಿಸಲು ಮನೆಯ ಬಳಿ ಬರಬೇಡಿ' ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ ಪುನೀತ್ ರಾಜ್ಕುಮಾರ್.

ಮೈಸೂರಿನಲ್ಲಿ ಆಯೋಜಿಸಿದ್ದ 'ಯುವ ಸಂಭ್ರಮ' ರದ್ದು
ಇದರ ಜೊತೆಗೆ 'ಯುವರತ್ನ' ಸಿನಿಮಾಕ್ಕೆ ಸಂಬಂಧಿಸಿದಂತೆ ಮಾರ್ಚ್ 20 ರಂದು ಮೈಸೂರಿನಲ್ಲಿ ನಡೆಸಲು ತೀರ್ಮಾನಿಸಿದ್ದ 'ಯುವಸಂಭ್ರಮ' ಕಾರ್ಯಕ್ರಮ ಸಹ ರದ್ದಾಗಿದೆ ಎಂದಿದ್ದಾರೆ ಪುನೀತ್ ರಾಜ್ಕುಮಾರ್.

ಪ್ರತಿ ಜಿಲ್ಲೆಯಲ್ಲೂ 'ಯುವ ಸಂಭ್ರಮ'
'ಯುವ ಸಂಭ್ರಮ' ಕಾರ್ಯಕ್ರಮವನ್ನು ಮೈಸೂರಿನಲ್ಲಿ ನಡೆಸಲು ಎಲ್ಲ ತಯಾರಿಯೂ ನಡೆಸಿಯಾಗಿತ್ತು, ಆದರೆ ಆ ವೇಳೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಹಲವರು ಸಂದೇಶ ಕಳುಹಿಸಿ ನಮ್ಮ ಜಿಲ್ಲೆಗೆ ಯಾಕೆ ಬರತ್ತಿಲ್ಲ ಎಂದು ಕೇಳಲು ಆರಂಭಿಸಿದರು. ಹಾಗಾಗಿ ನಾನು ಮತ್ತು ನಮ್ಮ ಚಿತ್ರತಂಡ ಎಲ್ಲ ಜಿಲ್ಲೆಗಳಿಗೆ ನಾವೇ ಖುದ್ದಾಗಿ ಬರೋಣ ಎಂದು ತೀರ್ಮಾನಿಸಿ ಮೈಸೂರಿನ ಕಾರ್ಯಕ್ರಮ ರದ್ದು ಮಾಡಿ ಎಲ್ಲ ಜಿಲ್ಲೆಗಳಲ್ಲಿಯೂ 'ಯುವ ಸಂಭ್ರಮ' ಆಚರಿಸಲು ನಿರ್ಧರಿಸಿದ್ದೇವೆ ಎಂದರು ಪುನೀತ್ ರಾಜ್ಕುಮಾರ್.

ಕೆಲವೇ ದಿನಗಳಲ್ಲಿ ವೇಳಾಪಟ್ಟಿ ಬಿಡುಗಡೆ
ಯಾವ ದಿನದಂದು, ಯಾವ ಜಿಲ್ಲೆಯ, ಯಾವ ಸ್ಥಳಕ್ಕೆ 'ಯುವರತ್ನ' ತಂಡ ಬರಲಿದೆ ಎಂಬುದರ ಮಾಹಿತಿಯನ್ನು ಕೆಲವೇ ದಿನಗಳಲ್ಲಿ ಹಂಚಿಕೊಳ್ಳಲಿದೆ ಚಿತ್ರತಂಡ. ಮಾರ್ಚ್ 21 ರಿಂದ ಪುನೀತ್ ಅವರ ಜಿಲ್ಲಾ ಪ್ರವಾಸ ಆರಂಭವಾಗಲಿದೆ.

ಏಪ್ರಿಲ್ 1 ರಂದು ಸಿನಿಮಾ ಬಿಡುಗಡೆ
ಪುನೀತ್ ರಾಜ್ಕುಮಾರ್ ನಟನೆಯ 'ಯುವರತ್ನ' ಸಿನಿಮಾವು ಏಪ್ರಿಲ್ 1 ರಂದು ರಾಜ್ಯದಾದ್ಯಂತ ಬಿಡುಗಡೆ ಆಗಲಿದೆ. ತೆಲುಗಿನಲ್ಲಿಯೂ ಈ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಸಾಯೆಷಾ, ಸೋನು ಗೌಡ, ಡಾಲಿ ಧನಂಜಯ್, ಪ್ರಕಾಶ್ ರೈ, ದಿಗಂತ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾವನ್ನು ಸಂತೋಶ್ ಆನಂದ್ ರಾಮ್ ನಿರ್ದೇಶನ ಮಾಡಿದ್ದರೆ ವಿಜಯ್ ಕಿರಗಂದೂರು ಬಂಡವಾಳ ಹೂಡಿದ್ದಾರೆ.


Click it and Unblock the Notifications











