PUCಯಲ್ಲಿ ಅಪ್ಪು ಬಾಡಿಗಾರ್ಡ್ ಮಗಳು ಡಿಸ್ಟಿಂಕ್ಷನ್; ಎಲ್ಲಾ ಯಜಮಾನ್ರ ಆಶೀರ್ವಾದ ಎಂದ ಚಲಪತಿ
2025ನೇ ಸಾಲಿನ ದ್ವೀತಿಯ ಪಿಯುಸಿ ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ. ವಾಣಿಜ್ಯ ವಿಭಾಗದಲ್ಲಿ ದೀಪಶ್ರೀ 599 ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇನ್ನು ವಾಣಿಜ್ಯ ವಿಭಾಗದಲ್ಲಿ ನಟ ಪುನೀತ್ ರಾಜ್ಕುಮಾರ್ ಅವರ ಬಾಡಿಗಾರ್ಡ್/ಗನ್ಮ್ಯಾನ್ ಆಗಿದ್ದ ಚಲಪತಿ ಅವರ ಮಗಳು ಅಮೂಲ್ಯ 94.33% ಅಂಕ ಪಡೆದು ಸಾಧನೆ ಮಾಡಿದ್ದಾರೆ.
11 ವರ್ಷಗಳ ಕಾಲ ಪುನೀತ್ ರಾಜ್ಕುಮಾರ್ ಅವರ ಬಳಿ ಚಲಪತಿ ಕೆಲಸ ಮಾಡಿಕೊಂಡು ಇದ್ದರು. ಅಪ್ಪು ಅಗಲಿಕೆ ಬಳಿಕ ಚಲಪತಿ ಕೆಲಸ ತೊರೆಯುವಂತಾಗಿತ್ತು. ಸದಾ ಪುನೀತ್ ಅಂಗರಕ್ಷಕರಾಗಿ ಅವರು ಮುಂದೆ ನಿಲ್ಲುತ್ತಿದ್ದರು. ಭಾರೀ ಜನಜಂಗುಳಿ ನಡುವೆಯೂ ಪುನೀತ್ ರಾಜ್ಕುಮಾರ್ ಯಾವುದೇ ಸಮಸ್ಯೆ ಇಲ್ಲದೇ ಓಡಾಡಲು ನೆರವಾಗುತ್ತಿದ್ದರು. ಇದೀಗ ಅವರ ಪುತ್ರಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಡಿಸ್ಟಿಂಕ್ಷನ್ನಲ್ಲಿ ಪಾಸ್ ಮಾಡಿರುವುದು ವಿಶೇಷ. ಆಕೆ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರ್ತಿದೆ.

ಚಲಪತಿ ಮಗಳು ಅಮೂಲ್ಯ ಸಿ. ಕನ್ನಡ ಭಾಷೆಯಲ್ಲಿ 98 ಅಂಕ ಗಳಿಸಿದ್ದಾರೆ. ಇನ್ನು ಎಕನಾಮಿಕ್ಸ್ನಲ್ಲಿ 97, ಇಂಗ್ಲೀಷ್ 90, ಬ್ಯುಸಿನೆಸ್ ಸ್ಟಡೀಸ್ 90, ಅಕೌಂಟೆನ್ಸಿಯಲ್ಲಿ 96 ಹಾಗೂ ಸ್ಟಾಟಿಸ್ಟಿಕ್ಸ್ನಲ್ಲಿ 95 ಅಂಕ ಸೇರಿ ಒಟ್ಟು 600 ಅಂಕಗಳಿಗೆ 566 ಅಂಕ ಗಳಿಸಿ ಗಮನ ಸೆಳೆದಿದ್ದಾರೆ. ಹುಲ್ಲಹಳ್ಳಿ ಕ್ರೈಸ್ಟ್ ಅಕಾಡೆಮಿಯಲ್ಲಿ ಆಕೆ ವ್ಯಾಸಂಗ ಮಾಡುತ್ತಿದ್ದಾರೆ. ಆಕೆಯ ಸಾಧನೆಗೆ ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಕೂಡ ಅಮೂಲ್ಯಗೆ ಅಭಿನಂದನೆ ತಿಳಿಸುತ್ತಿದ್ದಾರೆ.
ಮಗಳ ಸಾಧನೆ ಬಗ್ಗೆ ಚಲಪತಿ ಫಿಲ್ಮಿಬೀಟ್ ಕನ್ನಡಕ್ಕೆ ಪ್ರತಿಕ್ರಿಯಿಸಿದ್ದಾರೆ. ನನ್ನ ಮಗಳ ಸಾಧನೆಗೆ ಅಪ್ಪು ಸರ್ ಆಶೀರ್ವಾದವೇ ಕಾರಣ ಎಂದು ಹೇಳಿದ್ದಾರೆ. "ನನ್ನ ಮಗಳು ದ್ವಿತಯ ಪಿಯುಸಿಯಲ್ಲಿ 94.33% ಅಂಕ ಗಳಿಸಿ ಸಾಧನೆ ಮಾಡಿದ್ದಾಳೆ. ಆಕೆಯ ಶ್ರಮ ಅದಕ್ಕೆ ಕಾರಣ. ಎಲ್ಲದಕ್ಕಿಂತ ಮುಖ್ಯವಾಗಿ ನಮ್ಮ ಯಜಮಾನರ ಪ್ರೀತಿ, ಆಶೀರ್ವಾದ. ಪ್ರೈಮರಿ ಸ್ಕೂಲ್ನಿಂದಲೂ ನಮ್ಮ ಮಕ್ಕಳ ವಿದ್ಯಾಭ್ಯಾಸದ ಖರ್ಚನ್ನು ಅಪ್ಪು ಸರ್ ನೋಡಿಕೊಳ್ಳುತ್ತಿದ್ದರು" ಎಂದು ಚಲಪತಿ ತಿಳಿಸಿದ್ದಾರೆ.

2011ರವರೆಗೂ ನಮ್ಮ ಮಕ್ಕಳ ಶಾಲಾ ವಿದ್ಯಾಭ್ಯಾಸ ವೆಚ್ಚ ಪುನೀತ್ ರಾಜ್ಕುಮಾರ್ ಸರ್ ಭರಿಸುತ್ತಿದ್ದರು. ನಾನು ಕೆಲಸದ ನಿಮಿತ್ತ ಹೆಚ್ಚು ಹೊರಗಡೆ ಇರುತ್ತಿದ್ದೆ. ನಮ್ಮ ಮಡದಿ ಮಕ್ಕಳ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದರು. ಅವರ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಗಮನ ಕೊಡುಕೊಳ್ಳುತ್ತಿದ್ದರು ಚೆನ್ನಾಗಿ ಓದಿಸುತ್ತಿದ್ದಾರೆ. ನನ್ನ ಮಗಳ ಸಾಧನೆಯಲ್ಲಿ ಮಡದಿ ಪಾಲು ದೊಡ್ಡದಿದೆ. ಮಗ ಕೂಡ ಚೆನ್ನಾಗಿ ಓದುತ್ತಿದ್ದಾನೆ. ನನ್ನ ಸಂಪಾದನೆ, ನನ್ನ ಆಸ್ತಿ ಎಲ್ಲವೂ ನನ್ನ ಮಕ್ಕಳು" ಎಂದು ಚಲಪತಿ ಸಂತಸ ಹಂಚಿಕೊಂಡಿದ್ದಾರೆ.
ಚಲಪತಿ ಅವರ ಮಗಳು ಅಮೂಲ್ಯ ಮಾತನಾಡಿ ಪರೀಕ್ಷೆಯಲ್ಲಿ ಒಳ್ಳೆ ಅಂಕ ಗಳಿಸಿದ್ದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ. "ವಿಶೇಷವಾಗಿ ಯಾವುದೇ ರೀತಿಯ ಅಭ್ಯಾಸ ಮಾಡಲಿಲ್ಲ. ಮನೆಗೆ ಬಂದು ಓದುತ್ತಿದ್ದೆ. ಅಮ್ಮ ನಾನು ಓದಲು ನೆರವಾಗುತ್ತಿದ್ದರು. ಇನ್ನಷ್ಟು ಎಫರ್ಟ್ ಹಾಕಬೇಕಿತ್ತು ಎನಿಸುತ್ತದೆ. 10ನೇ ತರಗತಿಯಲ್ಲಿ 89% ಅಂಕ ಗಳಿಸಿದ್ದೆ. ಪುನೀತ್ ರಾಜ್ಕುಮಾರ್ ಸರ್ ನಮ್ಮನ್ನು ಓದಿಸಿದ್ದು. ಅವರ ಸಹಾಯಕ್ಕೆ ನನ್ನ ಓದಿನ ಮೂಲಕ ಧನ್ಯವಾದ ತಿಳಿಸುವ ಪ್ರಯತ್ನ ಮಾಡಿದ್ದೇನೆ ಅಷ್ಟೆ. ಮುಂದೆ ಬಿಕಾಂ ಮಾಡಿ ಸಿಎ ಮಾಡಬೇಕೆಂದುಕೊಂಡಿದ್ದೇನೆ" ಎಂದು ತಿಳಿಸಿದ್ದಾರೆ.


Click it and Unblock the Notifications











