PUCಯಲ್ಲಿ ಚಲಪತಿ ಮಗಳು, ಈಗ SSLCಯಲ್ಲಿ ಮಗ; ಅಪ್ಪು ಬಾಡಿಗಾರ್ಡ್ ಮಗನ ಉತ್ತಮ ಸಾಧನೆ
ಕರ್ನಾಟಕ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ 2025 ಪ್ರಕಟವಾಗಿದೆ. ಒಟ್ಟು 970 ವಿದ್ಯಾರ್ಥಿಗಳು ಈ ಬಾರಿ 625ಕ್ಕೆ 620ಕ್ಕಿಂತ ಹೆಚ್ಚಿನ ಅಂಕ ಗಳಿಸಿದ್ದಾರೆ. ಈ ಬಾರಿ ಕೂಡ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದರೆ ಕಲಬುರಗಿ ಜಿಲ್ಲೆ ಕೊನೆಯ ಸ್ಥಾನ ಗಳಿಸಿದೆ.
ದಿವಂಗತ ನಟ ಪುನೀತ್ ರಾಜ್ಕುಮಾರ್ ಬಳಿಕ ಬಾಡಿಗಾರ್ಡ್ ಆಗಿ ಸೇವೆ ಸಲ್ಲಿಸುತ್ತಿದ್ದ ಚಲಪತಿ ಅವರ ಮಗ ಹರ್ಷವರ್ಧನ್ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾನೆ. ಇತ್ತೀಚೆಗೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿತ್ತು. ಆಗ ಚಲಪತಿ ಅವರ ಮಗಳು ಡಿಸ್ಟಿಂಷನ್ನಲ್ಲಿ ಪಾಸ್ ಆಗಿ ಗಮನ ಸೆಳೆದಿದ್ದಳು. ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದರು. 600 ಅಂಕಗಳಿಗೆ 566 ಅಂಕ ಗಳಿಸಿ ಚಲಪತಿ ಅವರ ಮಗಳು ಅಮೂಲ್ಯ ಉತ್ತಮ ಸಾಧನೆ ತೋರಿದ್ದರು.

ಅಂದಹಾಗೆ ಚಲಪತಿ ಅವರ ಇಬ್ಬರೂ ಮಕ್ಕಳನ್ನು ಪುನೀತ್ ರಾಜ್ಕುಮಾರ್ ಓದಿಸುತ್ತಿದ್ದರು. 3 ವರ್ಷದ ಹಿಂದೆ ಕೂಡ ಇಬ್ಬರ ಶಾಲಾ ಶುಲ್ಕವನ್ನು ಪುನೀತ್ ರಾಜ್ಕುಮಾರ್ ಭರಿಸಿದ್ದನ್ನು ಚಲಪತಿ ಅವರು ನೆನಪು ಮಾಡಿಕೊಂಡಿದ್ದರು. ಅಪ್ಪು ಸರ್ ಆಸೆಯಂತೆ ಅಮೂಲ್ಯ ಹಾಗೂ ಹರ್ಷವರ್ಧನ್ ಇಬ್ಬರೂ ಚೆನ್ನಾಗಿ ಓದುತ್ತಿದ್ದರು.
ಕನ್ನಡದಲ್ಲಿ 125 ಅಂಕಗಳಿಗೆ 121, ಇಂಗ್ಲೀಷ್ನಲ್ಲಿ 100ಕ್ಕೆ 93, ಅದೇ ರೀತಿ ಹಿಂದಿಯಲ್ಲಿ 100ಕ್ಕೂ 100, ಗಣಿತದಲ್ಲಿ 97, ವಿಜ್ಞಾನದಲ್ಲಿ 86 ಹಾಗೂ ಸಮಾಜ ವಿಜ್ಞಾನದಲ್ಲಿ 98 ಅಂಕ ಸೇರಿ ಒಟ್ಟು 625 ಅಂಕಗಳಿಗೆ ಹರ್ಷವರ್ಧನ್ 595 ಅಂಕಗಳನ್ನು ಅತ್ಯುತ್ತಮ ಸಾಧನೆ ತೋರಿಸಿದ್ದಾನೆ. ಈ ಬಗ್ಗೆ ತಂದೆ ಚಲಪತಿ ಸಂತಸ ವ್ಯಕ್ತಪಡಿಸಿದ್ದಾರೆ. ಮಗ ಐಎಎಸ್ ಆಗುವ ಕನಸು ಕಾಣುತ್ತಿದ್ದಾನೆ. ಅವನನ್ನು ಸದ್ಯಕ್ಕೆ ಕಾಮರ್ಸ್ ವಿಭಾಗದಲ್ಲಿ ಪಿಯುಸಿ ವಿದ್ಯಾಭ್ಯಾಸಕ್ಕೆ ಸೇರಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ 11 ವರ್ಷಗಳ ಕಾಲ ಪುನೀತ್ ರಾಜ್ಕುಮಾರ್ ಬಳಿ ಚಲಪತಿ ಅವರು ಬಾಡಿಗಾರ್ಡ್/ಗನ್ಮ್ಯಾನ್ ಆಗಿ ಸೇವೆ ಸಲ್ಲಿಸುತ್ತಿದ್ದರು. ತಮ್ಮ ಸಹಾಯರಕನ್ನು ಅಪ್ಪು ಸ್ನೇಹಿತರಂತೆಯೇ ನೋಡಿಕೊಳ್ಳುತ್ತಿದ್ದರು. ಮಕ್ಕಳ ಓದಿನಲ್ಲಿ ಪತ್ನಿಯ ಶ್ರಮವನ್ನು ಚಲಪತಿ ಅವರು ಮೆಚ್ಚಿಕೊಳ್ಳುತ್ತಾರೆ. ಪುನೀತ್ ಹೋದಲ್ಲಿ ಬಂದಲ್ಲಿ ಚಲಪತಿ ಜೊತೆಗೆ ಇರುತ್ತಿದ್ದರು. ಎಷ್ಟೇ ಅಭಿಮಾನಿಗಳು ಜಮಾಯಿಸಿದರೂ ಅವರ ನಡುವೆ ಅಪ್ಪು ಸರಾಗಾಗಿ ಓಡಾಡಲು ಅನುವು ಮಾಡಿಕೊಡುತ್ತಿದ್ದರು.

ಅಪ್ಪು ಅಗಲಿಕೆ ಬಳಿಕ ದೊಡ್ಮನೆಯಿಂದ ಚಲಪತಿ ಹೊರ ಬಂದಿದ್ದರು. ಅಪ್ಪು ದೂರಾದ ದಿನ ಕೂಡ ಅವರೊಟ್ಟಿದೆ ಇದ್ದರು. ಮೂಲತಃ ಕೋಲಾರದವರಾದ ಚಲಪತಿ ಮಿಲಿಟರಿಯಲ್ಲಿದ್ದರಂತೆ. ಬಳಿಕ ಕೋರಮಂಗಲದಲ್ಲಿ ಉದ್ಯಮಿ ಒಬ್ಬರ ಬಳಿ ಗನ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಒಮ್ಮೆ ಏರ್ಪೋರ್ಟ್ನಲ್ಲಿ ಪುನೀತ್ ರಾಜ್ಕುಮಾರ್ ಅವರನ್ನು ಭೇಟಿ ಮಾಡಿದ್ದರು. ಅಭಿಮಾನಿ ಎಂದ ಫೋಟೊ ತೆಗೆಸಿಕೊಂಡಿದ್ದರು.
ಅದೇ ಸಮಯದಲ್ಲಿ ಚಲಪತಿ ಅವರ ವಿವರವನ್ನು ಅಪ್ಪು ಕೇಳಿ ತಿಳಿಸಿದ್ದರು. ಫೋನ್ ನಂಬರ್ ಪಡೆದುಕೊಂಡಿದ್ದರು. ಬಳಿಕ ಕರೆ ಮಾಡಿ ಕರೆದು ತಮ್ಮ ಬಳಿ ಕೆಲಸಕ್ಕೆ ಸೇರಿಸಿಕೊಂಡಿದ್ದರು. ಅಪ್ಪು ಯಾವುದೇ ಚಿತ್ರೀಕರಣ, ಕಾರ್ಯಕ್ರಮ ಹೀಗೆ ಎಲ್ಲೇ ಹೋದರೂ ಬಂದರೂ ಚಲಪತಿ ಜೊತೆಗೆ ಇರುತ್ತಿದ್ದರು. ಅಪ್ಪು ಸರಳತೆಗೆ ಮನಸೋತಿದ್ದರು.
ಲಾಕ್ಡೌನ್ ಸಮಯದಲ್ಲಿ ಚಲಪತಿ ಅವರಿಗೆ ಕೆಲಸ ಇರುತ್ತಿರಲಿಲ್ಲ. ಆದರೂ ತಪ್ಪದೇ ಸಂಬಳ ಸಿಗುತ್ತಿತ್ತು. ಮಾಮೂಲಿಗಿಂತ ಹೆಚ್ಚು ಹಣ ಬರುತ್ತಿತ್ತು. ಮನೆಗೆ ಲೀಸ್ ಹಣವನ್ನು ಕೂಡ ಅಪ್ಪು ಕೊಟ್ಟಿದ್ದರು ಎಂದು ಹಿಂದೆ ಸಂದರ್ಶನವೊಂದರಲ್ಲಿ ಚಲಪತಿ ಹೇಳಿಕೊಂಡಿದ್ದರು. ಪುನೀತ್ ರಾಜ್ಕುಮಾರ್ ಜೊತೆಗಿದ್ದ ದಿನಗಳನ್ನು ಸದಾ ಮೆಲುಕು ಹಾಕುತ್ತಿರುತ್ತಾರೆ.


Click it and Unblock the Notifications











