ಭಾನುವಾರ ಪುನೀತ್ ಅಂತ್ಯಕ್ರಿಯೆ: ಸಿಎಂ ಬೊಮ್ಮಾಯಿ
ಅಭಿಮಾನಿಗಳ ಸಂಖ್ಯೆ ಹೆಚ್ಚಿರುವ ಕಾರಣ ಎಲ್ಲರಿಗೂ ಪುನೀತ್ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡುವ ಕಾರಣದಿಂದ ಪುನೀತ್ ರಾಜ್ಕುಮಾರ್ ಅಂತ್ಯ ಸಂಸ್ಕಾರವನ್ನು ಭಾನುವಾರ ನಡೆಸಲು ತೀರ್ಮಾನಿಸಿರುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಾಧ್ಯಮಗಳೊಟ್ಟಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, ''ಇಲ್ಲಿ ಜನಸಂದಣಿ ಹೆಚ್ಚಿದೆ. ಬಹಳಷ್ಟು ಜನರಿಗೆ ಪುನೀತ್ ಅವರ ಅಂತಿಮ ದರ್ಶನ ಮಾಡಬೇಕೆಂಬ ಆಸೆಯಿದೆ. ಅಲ್ಲದೆ ಸಂಜೆ 6 ಗಂಟೆಗೆ ಕತ್ತಲಾಗುವುದರಿಂದ ಆ ವೇಳೆಗೆ ಕಂಠೀರವ ಸ್ಟುಡಿಯೋದಂಥಹಾ ಸಣ್ಣ ಜಾಗದಲ್ಲಿ ಅಂತಿಮ ಸಂಸ್ಕಾರ ಮಾಡುವುದು ಕಷ್ಟವಾಗಬಹುದು'' ಎಂದಿದ್ದಾರೆ ಬೊಮ್ಮಾಯಿ.
''ಪುನೀತ್ ರಾಜ್ಕುಮಾರ್ ಮಗಳು ಈಗಾಗಲೇ ದೆಹಲಿ ತಲುಪಿದ್ದು ಅವರು ಸಂಜೆ 6 ಅಥವಾ 7 ಗಂಟೆಗೆ ಬೆಂಗಳೂರಿಗೆ ತಲುಪಲಿದ್ದಾರೆ. ಸಂಜೆ ವೇಳೆ ಕತ್ತಲಾಗುವುದರಿಂದ ಈ ಜನಸಂದಣಿ ನಡುವೆ ಅಷ್ಟು ಕಡಿಮೆ ಜಾಗದಲ್ಲಿ ಅಂತ್ಯಸಂಸ್ಕಾರ ಮಾಡುವುದು ಕಷ್ಟವಾಗಬಹುದು ಹಾಗಾಗಿ ನಾವು ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ಕುಮಾರ್, ಪುನೀತ್ ರಾಜ್ಕುಮಾರ್ ಕುಟುಂಬದವರೊಟ್ಟಿಗೆ ಚರ್ಚೆ ನಡೆಸಿ ಅಂತಿಮ ಸಂಸ್ಕಾರವನ್ನು ಭಾನುವಾರ ನಡೆಸಲು ನಿಶ್ಚಯಿಸಿದ್ದೇವೆ'' ಎಂದಿದ್ದಾರೆ ಸಿಎಂ.

''ಅಭಿಮಾನಿಗಳಿಗೆ ಪುನೀತ್ ಅವರನ್ನು ಕಾಣಲು ನಾಳೆ ವರೆಗೆ ಅವಕಾಶವಿದೆ. ಯಾರೂ ಅವಸರ ಮಾಡುವುದು ಬೇಡ. ಪೊಲೀಸರ ಮೇಲೆ ಒತ್ತಡ ಹಾಕುವುದು ಬೇಡ. ಅವರು ನಮ್ಮ ಒಳಿತಿಗಾಗಿಯೇ ಕೆಲಸ ಮಾಡುತ್ತಿದ್ದಾರೆ. ಅವರೂ ಸಹ ಪುನೀತ್ ರಾಜ್ಕುಮಾರ್ ಅವರ ಅಭಿಮಾನಿಗಳೇ. ಎಲ್ಲರೂ ಶಾಂತಿಯಿಂದ ಆಗಮಿಸಿ ಅಪ್ಪು ಅವರ ಅಂತಿಮ ದರ್ಶನ ಪಡೆಯಿರಿ. ಶಾಂತಿ ಸುವ್ಯವಸ್ಥೆ ಕಾಪಾಡುತ್ತಾ ಅಂತಿಮ ದರ್ಶನ ಪಡೆಯಿರಿ'' ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಮೊದಲು ಇಂದೇ (ಶನಿವಾರ)ವೇ ಪುನೀತ್ ರಾಜ್ಕುಮಾರ್ ಅಂತ್ಯಕ್ರಿಯೆ ಮಾಡಲಾಗುತ್ತದೆ ಎನ್ನಲಾಗಿತ್ತು. ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ಸಹ ಆರಂಭಗೊಂಡಿದ್ದವು. ಆದರೆ ಈಗ ನಿರ್ಣಯ ಬದಲಿಸಲಾಗಿದ್ದು ಭಾನುವಾರ ಅಂತ್ಯಕ್ರಿಯೆ ನಡೆಯಲಿದೆ. ರಾಮನಗರದಲ್ಲಿನ ಪುನೀತ್ ರಾಜ್ಕುಮಾರ್ ಫಾರಂ ಹೌಸ್ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎನ್ನಲಾಗಿತ್ತು, ಆದರೆ ಕುಟುಂಬಸ್ಥರು ಕಂಠೀರವ ಸ್ಟುಡಿಯೋದಲ್ಲಿಯೇ ಅಂತ್ಯಕ್ರಿಯೆ ನಡೆಸಬೇಕು ಎಂದ ಕಾರಣ ಅಲ್ಲಿಯೇ ಅಂತ್ಯಕ್ರಿಯೆ ನಡೆಯುತ್ತಿದೆ.
ಪುನೀತ್ ರಾಜ್ಕುಮಾರ್ ಅಂತಿಮ ದರ್ಶನಕ್ಕೆ ಹಲವೆಡೆಗಳಿಂದ ಜನರು ಆಗಮಿಸುತ್ತಲೇ ಇದ್ದಾರೆ. ನಿನ್ನೆ ರಾತ್ರಿಯಿಂದಲೂ ಜನರ ಆಗಮನ ಕಡಿಮೆ ಆಗಿಯೇ ಇಲ್ಲ. ಇಂದೂ ಸಹ ದೇಶ-ವಿದೇಶಗಳಿಂದಲೂ ಅಭಿಮಾಣಿಗಳು, ಪುನೀತ್ ಗೆಳೆಯರು ರಾಜ್ಯಕ್ಕೆ ಬರುತ್ತಿದ್ದಾರೆ. ನಟಿ ರಮ್ಯಾ ಈಗಷ್ಟೆ ವಿದೇಶದಿಂದ ಆಗಮಿಸಿದ್ದಾರೆ. ನಟ ಅರ್ಜುನ್ ಸರ್ಜಾ ಸಹ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಾರೆ.
ಅಂತ್ಯಕ್ರಿಯೆ ಯಾವ ಸಮಯಕ್ಕೆ ಮಾಡಲಾಗುತ್ತದೆ ಎಂಬುದನ್ನು ಇನ್ನೂ ನಿಶ್ಚಯಿಸಲಾಗಿಲ್ಲ. ''ಜನಸಂದಣಿ ನೋಡಿಕೊಂಡು ಸಮಯ ತಿಳಿಸುತ್ತೇವೆ'' ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇನ್ನೂ ಸಾಗರೋಪಾದಿಯಲ್ಲಿ ಅಭಿಮಾನಿಗಳು ಅಂತಿಮ ದರ್ಶನಕ್ಕಾಗಿ ಬರುತ್ತಿದ್ದು ನಾಳೆಯೂ ಇದೇ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆ ಇರುವ ಕಾರಣ ನಾಳೆ ಸಂಜೆ ವೇಳೆ ಅಂತ್ಯಸಂಸ್ಕಾರ ನಡೆಯುವ ಸಾಧ್ಯತೆ ಇದೆ.


Click it and Unblock the Notifications











