ಲೈವ್ ಡ್ಯಾನ್ಸ್ ಪರ್ಫಾರ್ಮೆನ್ಸ್.. ದಿಗ್ಗಜರಿಂದ ಅಪ್ಪು ನೆನಪು.. ಅಭಿಮಾನಿಗಳ ಹಬ್ಬ..ಕಲರ್ಫುಲ್ 'ಪುನೀತ ಪರ್ವ'
ಬೆಂಗಳೂರಿನ ಅರಮನೆ ಮೈದಾನದಲ್ಲಿ 'ಪುನೀತ ಪರ್ವ' ಕಾರ್ಯಕ್ರಮಕ್ಕೆ ಕ್ಷಣಗಣನೆ ಶುರುವಾಗಿದೆ. ಲಕ್ಷಾಂತರ ಅಭಿಮಾನಿಗಳು ಈ ಅದ್ಧೂರಿ ಸಮಾರಂಭಕ್ಕೆ ಸಾಕ್ಷಿ ಆಗಲಿದ್ದು, ಸ್ವತಃ ಅಶ್ವಿನಿ ಪುನೀತ್ ರಾಜ್ಕುಮಾರ್ ಮುಂದೆ ನಿಂತು ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಪುನೀತ್ ರಾಜ್ಕುಮಾರ್ ಕಾಣಿಸಿಕೊಂಡಿರುವ ಡಾಕ್ಯುಡ್ರಾಮಾ ಸಿನಿಮಾ 'ಗಂಧದಗುಡಿ' ಪ್ರೀ ರಿಲೀಸ್ ಈವೆಂಟ್ 'ಪುನೀತ ಪರ್ವ' ಹೆಸರಿನಲ್ಲಿ ಕಳೆಗಟ್ಟಲಿದೆ. ಕನ್ನಡ ಚಿತ್ರರಂಗದ ತಾರೆಯರ ಜೊತೆಗೆ ಅಕ್ಕಪಕ್ಕದ ಚಿತ್ರರಂಗದ ಸ್ಟಾರ್ಗಳು ಕಾರ್ಯಕ್ರಮಕ್ಕೆ ಹಾಜರಾಗಲಿದ್ದಾರೆ.
ಬೆಳಗ್ಗೆಯೇ ಅರಮನೆ ಮೈದಾನಕ್ಕೆ ಆಗಮಿಸಿ ಕೊನೆ ಕ್ಷಣದ ತಯಾರಿ ಬಗ್ಗೆ ಅಶ್ವಿನಿ ಪುನೀತ್ ರಾಜ್ಕುಮಾರ್ ಪರಿಶೀಲನೆ ನಡೆಸಿದರು. ನಂತರ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜ್ಕುಮಾರ್ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ ಪಕ್ಕದಲ್ಲೇ ಡಾ. ರಾಜ್ಕುಮಾರ್ ಹಾಗೂ ಪಾರ್ವತಮ್ಮ ರಾಜ್ಕುಮಾರ್ ಸಮಾಧಿಗಳಿಗೂ ಪೂಜೆ ಸಲ್ಲಿಸಿ ಪ್ರದಕ್ಷಿಣೆ ಹಾಕಿದರು. ರಾಜ್ಯದ ಮೂಲೆ ಮೂಲೆಯಿಂದ ಅಭಿಮಾನಿಗಳು 'ಪುನೀತ ಪರ್ವ' ಕಾರ್ಯಕ್ರಮಕ್ಕೆ ಹೊರಟು ಬೆಂಗಳೂರಿಗೆ ಬರ್ತಿದ್ದಾರೆ.
ಸಂಜೆ 6.30ಕ್ಕೆ 'ಪುನೀತ ಪರ್ವ' ಕಾರ್ಯಕ್ರಮ ಆರಂಭವಾಗಲಿದೆ. ಕನ್ನಡ ಚಿತ್ರರಂಗದ ಎಲ್ಲಾ ನಟ- ನಟಿಯರಿಗೆ ಆಹ್ವಾನ ನೀಡಿರುವುದಾಗಿ ರಾಘವೇಂದ್ರ ರಾಜ್ಕುಮಾರ್ ಮಾಹಿತಿ ನೀಡಿದ್ದಾರೆ. "ಅಭಿಮಾನಿಗಳಿಗಾಗಿ ಮಾಡುತ್ತಿರುವ ಕಾರ್ಯಕ್ರಮ. ನಿಮ್ಮ ಕಾರ್ಯಕ್ರಮ. ಯಾವುದೇ ಸಮಸ್ಯೆ ಆಗದಂತೆ ಎಲ್ಲರೂ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಎಂದು ರಾಘಣ್ಣ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಅಪ್ಪು ಅವರಾಗಿಯೇ ಕಾಣಿಸಿಕೊಂಡಿರುವ 'ಗಂಧದಗುಡಿ'
ಪುನೀತ್ ರಾಜ್ಕುಮಾರ್ ವಿಭಿನ್ನ ಪ್ರಯತ್ನ 'ಗಂಧದಗುಡಿ'. ವೈಲ್ಡ್ ಲೈಫ್ ಫೋಟೊಗ್ರಫರ್ ಅಮೋಘ ವರ್ಷ ಜೊತೆ ಸೇರಿ ಹಲವು ತಿಂಗಳು ಈ ಚಿತ್ರಕ್ಕಾಗಿ ಅಪ್ಪು ಕಾಡು ಮೇಡು ಸುತ್ತಾಡಿದ್ದಾರೆ. ಕರ್ನಾಟಕದ ಅರಣ್ಯ ಸಂಪತ್ತು, ವನ್ಯ ಜೀವಿ ಸಂಕುಲ, ಪ್ರಕೃತಿ ವೈಭವವನ್ನು ಪ್ರಪಂಚಕ್ಕೆ ಪರಿಚಯಿಸಲು ಪುನೀತ್ ಈ ಡಾಕ್ಯುಡ್ರಾಮ ಸಿನಿಮಾ ಮಾಡಿದ್ದಾರೆ. ಅಪ್ಪು ಅವರಾಗಿಯೇ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮದೇ ಪಿಆರ್ಕೆ ಪ್ರೊಡಕ್ಷನ್ ಬ್ಯಾನರ್ನಲ್ಲಿ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಟ್ರೈಲರ್ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ಒಂದರ್ಥದಲ್ಲಿ ಇದು ಅಪ್ಪು ಕೊನೆ ಸಿನಿಮಾ. ಇದನ್ನು ಸೆಲೆಬ್ರೇಟ್ ಮಾಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಪ್ರೀ ರಿಲೀಸ್ ಇವೆಂಟ್ನಲ್ಲಿ ಭಾಗಿಯಾಗಿ ಅಪ್ಪುಗೆ ನಮನ ಸಲ್ಲಿಸಲು ತಾರೆಯಲು ಮನಸ್ಸು ಮಾಡಿದ್ದಾರೆ.

ಶಿವಣ್ಣ, ರಮ್ಯಾ ಡ್ಯಾನ್ಸ್ ಪರ್ಫಾರ್ಮೆನ್ಸ್
ಮೆಗಾಸ್ಟಾರ್ ಚಿರಂಜೀವಿ, ಕಮಲ್ ಹಾಸನ್, ರಜನಿಕಾಂತ್, ಸೂರ್ಯ ಸೇರಿದಂತೆ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ಗಳು ಕಾರ್ಯಕ್ರಮದಲ್ಲಿ ಭಾಗಿ ಆಗುವ ಸಾಧ್ಯತೆಯಿದೆ. ಅವರಿಗೆಲ್ಲಾ ಆಹ್ವಾನ ನೀಡಲಾಗಿದೆ. ರಾಕಿಂಗ್ ಸ್ಟಾರ್ ಯಶ್, ಧ್ರುವ ಸರ್ಜಾ, ಉಪೇಂದ್ರ, ದರ್ಶನ್ ಸೇರಿದಂತೆ ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ಗಳು ಹಾಜರಾಗಲಿದ್ದಾರೆ. ಕಾರ್ಯಕ್ರಮದಲ್ಲಿ ಕಲರ್ಫುಲ್ ಲೈವ್ ಡ್ಯಾನ್ಸ್ ಫರ್ಫಾರ್ಮೆನ್ಸ್ಗಳು ಹಾಗೂ ಅರ್ಮಾನ್ ಮಲ್ಲಿಕ್ , ವಿಜಯ ಪ್ರಕಾಶ್ , ಟಿಪ್ಪು , ಕುನಾಲ್ ಗಾಂಜವಾಲ ಹಾಗೂ ಗುರು ಕಿರಣ್ ವೇದಿಕೆಯಲ್ಲಿ ಹಾಡುಗಳನ್ನು ಹಾಡಿ ರಂಜಿಸಲಿದ್ದಾರೆ. ಡ್ರಾಮ ಜೂನಿಯರ್ ಮಕ್ಕಳಿಂದ ಸ್ಕಿಟ್, ಮುಂಬೈ, ಡೆಲ್ಲಿ ಡ್ಯಾನ್ಸ್ ತಂಡಗಳಿಂದ ಡ್ಯಾನ್ಸ್ ಪರ್ಫಾರ್ಮೆನ್ಸ್ ಇರಲಿದೆ. ಶಿವಣ್ಣ, ರಮ್ಯಾ, ಪ್ರಭುದೇವಾ ಡ್ಯಾನ್ಸ್ ಮಾಡಿ ರಂಜಿಸಲಿದ್ದಾರೆ.

ಪುನೀತ್ ಅಭಿಮಾನಿಗಳ ಹಬ್ಬ
ಅರಮನೆ ಮೈದಾನದ 'ಕೃಷ್ಣ ವಿಹಾರ'ದಲ್ಲಿ 'ಪುನೀತ ಪರ್ವ' ಕಾರ್ಯಕ್ರಮಕ್ಕೆ ವೇದಿಕೆ ನಿರ್ಮಾಣವಾಗಿದೆ. 5 ಎಕರೆ ವಿಶಾಲವಾದ ಸ್ಥಳದಲ್ಲಿ ಕಾರ್ಯಕ್ರಮಕ್ಕೆ ಸಕಲ ತಯಾರಿ ನಡೀತಿದೆ. ಈವೆಂಟ್ಗೆ ವೈಟ್ ಡ್ರೆಸ್ ಕೋಡ್ ಹೇಳಿರುವುದರಿಂದ ಗಣ್ಯರು, ಅಭಿಮಾನಿಗಳು ವೈಟ್ ಕಲರ್ ಡ್ರೆಸ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 750 ಅಡಿ ಎಲ್ಇಡಿ ಸ್ಕ್ರೀನ್ ಅಳವಡಿಸಲಾಗಿದೆ. 30 ಸಾವಿರಕ್ಕೂ ಅಧಿಕ ಆಸನದ ವ್ಯವಸ್ಥೆ ಆಗಿದೆ. 500 ಜನ ವಿವಿಐಪಿಗಳು, 5000 ವಿಐಪಿಗಳು ಭಾಗಿಯಾಗಲಿದ್ದು, ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಸಾವಿರಾರು ಅಭಿಮಾನಿಗಳು ಭಾಗಿಯಾಗುವ ಸಾಧ್ಯತೆ ಇರುವುದರಿಂದ ಸಂಚಾರ ದಟ್ಟಣೆ ಆಗದಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದಾರೆ. ವೈಟ್ ಪೆಟಲ್ಸ್ ಮಾರ್ಗವಾಗಿ ಅಭಿಮಾನಿಗಳಿಗೆ ಕಾರ್ಯಕ್ರಮಕ್ಕೆ ಪ್ರವೇಶ ಇರಲಿದೆ.

ಕಾರ್ಯಕ್ರಮಕ್ಕೆ ಪೊಲೀಸ್ ಸರ್ಪಗಾವಲು
ಸಾವಿರಾರು ಜನ ಕಾರ್ಯಕ್ರಮಕ್ಕೆ ಹಾಜರಾಗುತ್ತಿರುವುದರಿಂದ ನಗರ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿಕೊಳ್ಳಲಾಗುತ್ತಿದೆ. 1400 ಪೊಲೀಸ್ ಕಾನ್ಸ್ಸ್ಟೇಬಲ್, 180 ಪಿಎಸ್.ಐ, 60 ಇನ್ಸೆಪೆಕ್ಟರ್, 14 ಎಸಿಪಿ ಹಾಗೂ 3 ಮಂದಿ ಡಿಸಿಪಿಗಳನ್ನು ನಿಯೋಜಿಸಲಾಗಿದೆ. ಅಷ್ಟೇ ಅಲ್ಲದೇ, 20 ಕೆಎಸ್ಆರ್ಪಿ ತುಕಡಿ ಕೂಡ ಕೃಷ್ಣ ವಿಹಾರದಲ್ಲಿ ಇರಲಿದೆ. ಬರುವ ಅಭಿಮಾನಿಗಳಿಗೆ ಪ್ರತ್ಯೇಕ ಪಾಸ್ ವ್ಯವಸ್ಥೆ ಕೂಡ ಮಾಡಲಾಗಿದ್ದು, ಪಾಸ್ ಇದ್ದವರಿಗೆ ಪ್ರವೇಶವನ್ನು ಕಲ್ಪಿಸಲಾಗಿದೆ. ಅರಮನೆ ಮೈದಾನದಲ್ಲಿ 'ಪುನೀತ ಪರ್ವ' ಕಾರ್ಯಕ್ರಮ ನಡೆಯುವುದರಿಂದ ವಾಹನ ಸವಾರರು ಮಧ್ಯಾಹ್ನ 3.30ರಿಂದ ಮೇಕ್ರಿ ವೃತ್ತದ ಕಡೆ ಬಳ್ಳಾರಿ ರಸ್ತೆ ಮತ್ತು ಜಯಮಹಲ್ ರಸ್ತೆ ಬಳಸದೇ, ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಜಂಟಿ ಪೊಲೀಸ್ ಆಯುಕ್ತರಾದ ಬಿ. ಆರ್ ರವಿಕಾಂತೇ ಗೌಡ ಮನವಿ ಮಾಡಿದ್ದಾರೆ.

ಅಭಿಮಾನಿಗಳಿಗೆ ಕೇಸರಿ ಬಾತ್, ಉಪ್ಪಿಟ್ಟು
ಸಂಜೆ 6 ಗಂಟೆಗೆ ಶುರುವಾಗುವ ಕಾರ್ಯಕ್ರಮ ಮಧ್ಯರಾತ್ರಿಯವರೆಗೂ ನಡೆಯಲಿದೆ. ಅಷ್ಟು ಹೊತ್ತು ಅಭಿಮಾನಿಗಳು ಕೂತು ಕಾರ್ಯಕ್ರಮ ವೀಕ್ಷಿಸಲಿದ್ದಾರೆ. ಹಾಗಾಗಿ ಅಭಿಮಾನಿಗಳಿಗೆ ಕೇಸರಿ ಬಾತ್ ಹಾಗೂ ಉಪ್ಪಿಟ್ಟು ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ. ಇನ್ನು ಪೊಲೀಸ್ ಸಿಬ್ಬಂದಿ ಮತ್ತು ಕಾರ್ಯಕ್ರಮದ ಸಿಬ್ಬಂದಿಗೆ ಮೊಸರನ್ನ, ಬಿಸಿಬೇಳೆ ಬಾತ್ ಮತ್ತು ಬೊಂಡಾ ನೀಡಲಾಗುತ್ತಿದೆ. ಇನ್ನು ಕಾರ್ಯಕ್ರಮಕ್ಕೆ ಮಳೆಯ ಭೀತಿಯೂ ಎದುರಾಗಿದೆ.


Click it and Unblock the Notifications











