ಪುನೀತ ಪರ್ವ: ವೇದಿಕೆ ಮೇಲೆ ಅಪ್ಪು ಡೈಲಾಗ್ ಹೇಳಿದ ಧ್ರುವ; ಅಪ್ಪು ಬಗ್ಗೆ ದುನಿಯಾ ವಿಜಯ್ ಹೇಳಿದ್ದೇನು?
ಇಂದು ( ಅಕ್ಟೋಬರ್ 21 ) ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ಕೃಷ್ಣ ವಿಹಾರದಲ್ಲಿ ಬಹುನಿರೀಕ್ಷಿತ ಚಿತ್ರವಾದ ಗಂಧದ ಗುಡಿಯ ಪ್ರೀ ರಿಲೀಸ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತಿದೆ.
ಅಪ್ಪು ಅಭಿನಯದ ಅಂತಿಮ ಚಿತ್ರವಾದ ಗಂಧದಗುಡಿಯ ಈ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಪುನೀತ ಪರ್ವ ಎಂಬ ಶೀರ್ಷಿಕೆ ಇಡಲಾಗಿದ್ದು, ಚಂದನವನ, ಟಾಲಿವುಡ್ ಹಾಗೂ ಕಾಲಿವುಡ್ ಚಿತ್ರರಂಗಗಳ ಹಲವಾರು ತಾರೆಯರು ಕಾರ್ಯಕ್ರಮಕ್ಕೆ ಆಗಮಿಸಿ ಪುನೀತ್ ರಾಜ್ ಕುಮಾರ್ ಅವರನ್ನು ನೆನೆದಿದ್ದಾರೆ. ಇನ್ನು ಪುನೀತ್ ರಾಜ್ ಕುಮಾರ್ ಅವರ ಕುರಿತಾಗಿ ಕನ್ನಡ ಚಲನಚಿತ್ರರಂಗದ ನಟ ಧ್ರುವ ಸರ್ಜಾ ಹಾಗೂ ನಟ ಮತ್ತು ನಿರ್ದೇಶಕ ದುನಿಯಾ ವಿಜಯ್ ಇದೇ ವೇಳೆ ವೇದಿಕೆಯನ್ನೇರಿ ಮಾತನಾಡಿದರು.
ಪವರ್ ಹೌಸ್ಗೆ ನಮಸ್ಕಾರ ಎಂದು ಮಾತು ಆರಂಭಿಸಿದ ಧ್ರುವ ಸರ್ಜಾ ನನ್ನದೊಂದು ಮನವಿ, ಅಪ್ಪು ಸರ್ ಜೊತೆ ನಟಿಸಿದ ಹಲವಾರು ಕಲಾವಿದರು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ ಹೀಗಾಗಿ ಅವರಿಗೆ ಮಾತನಾಡುವ ಅವಕಾಶ ನೀಡುವ ಸಲುವಾಗಿ ನಾನು ಹೆಚ್ಚು ಸಮಯ ತೆಗೆದುಕೊಳ್ಳದೆ ಡೈಲಾಗ್ ಹೇಳುವ ಮೂಲಕ ನನ್ನ ಮಾತನ್ನು ಮುಗಿಸುತ್ತೇನೆ ಎಂದು ಅಪ್ಪು ಚಿತ್ರದ 'ನೀವು ಹೊಡೆದರೆ ಕೇಸು, ನಾನ್ ಹೊಡೆದರೆ ಹೆಡ್ ಲೈನ್ಸು' ಎಂಬ ಡೈಲಾಗ್ ಹೊಡೆದರು. ಮಾತು ಮುಂದುವರಿಸಿದ ಧ್ರುವ ಸರ್ಜಾ ಅಣ್ಣಾವ್ರ ಗಂಧದಗುಡಿ ನೋಡಿದ್ದೇವೆ, ಶಿವಣ್ಣ ಅವರ ಗಂಧದಗುಡಿ ನೋಡಿದ್ದೇವೆ ಹಾಗೂ ಇದೀಗ ಅಪ್ಪು ಅವರ ಗಂಧದ ಗುಡಿ ಚಿತ್ರವನ್ನು ಅಭಿಮಾನಿಯಾಗಿ ಅಭಿಮಾನಿಗಳ ಜೊತೆ ನೋಡುತ್ತೇನೆ ಎಂದರು ಹಾಗೂ ರಾಜ್ ಕುಟುಂಬಕ್ಕೆ ಧನ್ಯವಾದ ತಿಳಿಸಿದರು.

ಇನ್ನು ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್ ನಾನೂ ಸಹ ಗಂಧದಗುಡಿ ನೋಡಲು ಕಾಯುತ್ತಿದ್ದೇನೆ ಎಂದು ಮಾತನ್ನು ಆರಂಭಿಸಿ ಏನು ಮಾತನಾಡುವುದಕ್ಕೂ ಮನಸ್ಸಿಗೆ ಭಾರವಾಗುತ್ತಿದೆ ಎಂದು ಅಪ್ಪು ಅಗಲಿಕೆಯ ನೋವನ್ನು ವ್ಯಕ್ತಪಡಿಸಿದರು ಮತ್ತು ಗಂಧದಗುಡಿ ಚಿತ್ರವನ್ನು ಫಸ್ಟ್ ಡೇ ನೋಡುವುದಾಗಿ ತಿಳಿಸಿದರು. ಇನ್ನೂ ಮುಂದುವರಿದು ಮಾತನಾಡಿದ ದುನಿಯಾ ವಿಜಯ್ ಸೂರ್ಯ ಚಂದ್ರ ಇರುವವರೆಗೂ ಈ ಪುನೀತ ಪರ್ವ ನಡೆಯುತ್ತಲೇ ಇರುತ್ತದೆ, ಕರ್ನಾಟಕಕ್ಕೆ ಒಬ್ಬರೇ ರಾಜಕುಮಾರ ಅದು ಪುನೀತ್ ಸರ್ ಎಂದು ಘೋಷಿಸಿದರು. ಇನ್ನು ಯೋಜನೆಯಂತೆ ಬಿಳಿ ವಸ್ತ್ರ ಧರಿಸಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ದುನಿಯಾ ವಿಜಯ್ ತಮ್ಮ ಶರ್ಟ್ ಮೇಲೆ ಪುನೀತ್ ರಾಜ್ ಕುಮಾರ್ ಚಿತ್ರದ ಜತೆ ರಾಜಕುಮಾರ ಎಂದು ಬರೆಸಿದ್ದದ್ದು ಅಪ್ಪು ಅಭಿಮಾನಿಗಳ ಮನ ಗೆದ್ದಿದೆ.


Click it and Unblock the Notifications











