ಅಪ್ಪುವನ್ನು ಲೋಹಿತ್ ಎನ್ನುತ್ತಿದ್ದೆ; ಅಪ್ಪುಗಿಂತ ನಾವು ಆ ನಟನ ಭಕ್ತರು ಎಂದ ಸುಧಾ ಮೂರ್ತಿ
ಇಂದು ( ಅಕ್ಟೋಬರ್ 21 ) ಅಪ್ಪು ಅಭಿಮಾನಿಗಳು ಹಲವಾರು ದಿನಗಳಿಂದ ಸಿದ್ಧತೆ ನಡೆಸಿಕೊಂಡು ಕಾಯುತ್ತಿದ್ದಂತಹ ದಿನ ಬಂದೇ ಬಿಟ್ಟಿದೆ. ತಮ್ಮ ನೆಚ್ಚಿನ ನಟ, ಆರಾಧ್ಯದೈವ ಪುನೀತ್ ರಾಜ್ ಕುಮಾರ್ ಅಭಿನಯದ ಅಂತಿಮ ಚಿತ್ರ ಗಂಧದಗುಡಿಯ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಭಾವುಕತೆ ಮತ್ತು ಸಂತಸದಿಂದ ಭಾಗವಹಿಸಿದ್ದಾರೆ.
ಈ ಗಂಧದ ಗುಡಿ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಪುನೀತ ಪರ್ವ ಎಂಬ ಹೆಸರನ್ನು ಇಡಲಾಗಿದ್ದು, ಸಾವಿರಾರು ಅಭಿಮಾನಿಗಳು ಬೆಂಗಳೂರಿನ ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಹಾಜರಾಗಿದ್ದಾರೆ.
ಚಿತ್ರರಂಗದ ಕಲಾವಿದರು, ರಾಜಕೀಯ ಕ್ಷೇತ್ರದ ನಾಯಕರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರು ಪುನೀತ ಪರ್ವ ಕಾರ್ಯಕ್ರಮಕ್ಕೆ ಆಗಮಿಸಿದ್ದು, ಒಬ್ಬೊಬ್ಬರಾಗಿಯೇ ವೇದಿಕೆಗೆ ಆಗಮಿಸಿ ಅಪ್ಪು ಅವರ ಜತೆಗಿನ ತಮ್ಮ ಒಡನಾಟದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಹೀಗೆ ಕಾರ್ಯಕ್ರಮಕ್ಕೆ ಹಾಜರಾಗಿದ್ದ ಇನ್ಫೋಸಿಸ್ ಸಂಸ್ಥೆಯ ಮುಖ್ಯಸ್ಥೆ, ಯುವ ಜನತೆಗೆ ಮಾದರಿಯಾಗಿರುವ ಸುಧಾಮೂರ್ತಿಯವರು ಯುವರತ್ನ ಪುನೀತ್ ರಾಜ್ ಕುಮಾರ್ ಕುರಿತು ಮಾತನಾಡಿದರು. ಹೆಚ್ಚು ಸಿನಿಮಾ ಕುರಿತು ಸುಧಾಮೂರ್ತಿ ಅವರು ಮಾತನಾಡಿರುವುದನ್ನು ಕಂಡಿರದ ಜನತೆ ಅಪ್ಪು ಕುರಿತಾಗಿ ಸುಧಾಮೂರ್ತಿ ಅವರು ಆಡಿದ ಮಾತುಗಳನ್ನು ಕೇಳಿ ಸಂತಸ ವ್ಯಕ್ತಪಡಿಸಿದ್ದಾರೆ.

ನಾನು ಪುನೀತ್ ಅವರನ್ನು ಎಂದಿಗೂ ಅಪ್ಪು, ಪುನೀತ್ ಎಂದಿಲ್ಲ
ನಾನು ಕಾರ್ಯಕ್ರಮವನ್ನು ನೋಡುವುದಕ್ಕಾಗಿ ಬಂದಿದ್ದೆ ಎಂದು ಸರಳತೆಯಿಂದಲೇ ಮಾತನ್ನು ಆಡಲು ಆರಂಭಿಸಿದ ಸುಧಾಮೂರ್ತಿ ಅವರು ಅಪ್ಪು ಅವರನ್ನು ನಾನು ಯಾವಾಗಲೂ ಲೋಹಿತ್ ಎಂದೇ ಕರೆಯುತ್ತಿದ್ದೆ ಏಕೆಂದರೆ ಆತನ ಚಿತ್ರಗಳನ್ನು ನಾನು ಲೋಹಿತ್ ಆಗಿದ್ದಾಗ ಹೆಚ್ಚಾಗಿ ನೋಡಿದ್ದೆ ಎಂದರು. ಹೀಗೆ ಬಾಲ್ಯದಲ್ಲಿ ಪುನೀತ್ ಅವರ ಚಿತ್ರಗಳನ್ನು ಹೆಚ್ಚಾಗಿ ವೀಕ್ಷಿಸಿದ್ದೆ ಎಂದ ಸುಧಾಮೂರ್ತಿ ಅವರು ಅಪ್ಪು ಅವರನ್ನು ಪುನೀತ್ ಎಂದಾಗಲಿ ಅಥವಾ ಅಪ್ಪು ಎಂದಾಗಲಿ ಕರೆಯಲು ನನಗೆ ಮನಸ್ಸು ಬರುವುದಿಲ್ಲ ಅವರು ಸಿಕ್ಕಾಗಲೆಲ್ಲ ಲೋಹಿತ್ ಎಂದೇ ಕರೆಯುತ್ತಿದ್ದೆ ಎಂದರು.

ಅಪ್ಪು ಅಭಿನಯದ ಚಿತ್ರಗಳನ್ನು ನೋಡಿದ್ದ ಸುಧಾಮೂರ್ತಿ
ಪುನೀತ್ ಬಾಲನಟನಾಗಿ, ಮಾಸ್ಟರ್ ಲೋಹಿತ್ ಆಗಿ ಬಣ್ಣ ಹಚ್ಚಿದ್ದ ಭಾಗ್ಯವಂತ, ಭಕ್ತ ಪ್ರಹ್ಲಾದ ಹಾಗೂ ಬೆಟ್ಟದ ಹೂ ಚಿತ್ರಗಳನ್ನು ನೋಡಿದ್ದೆ ಎಂಬ ತಮ್ಮ ಹಳೆ ನೆನಪುಗಳನ್ನು ಸುಧಾಮೂರ್ತಿ ಅವರು ಪುನೀತ ಪರ್ವ ವೇದಿಕೆ ಮೇಲೆ ಮೆಲುಕು ಹಾಕಿದರು. ಹಾಗೂ ಇತ್ತೀಚಿನ ದಿನಗಳಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯಿಸಿದ್ದ ರಾಜಕುಮಾರ ಚಿತ್ರವನ್ನು ವೀಕ್ಷಿಸಿದ್ದೆ ಎಂದು ಸುಧಾ ಮೂರ್ತಿ ತಿಳಿಸಿದರು.

ಓರ್ವ ಸಜ್ಜನನಾಗಿ ಅಪ್ಪು ಪರಿಚಯವಿತ್ತು
ಪುನೀತ್ ರಾಜ್ ಕುಮಾರ್ ತಮಗೆ ಹೇಗೆ ಪರಿಚಯ ಎಂಬುದನ್ನು ತಿಳಿಸಿದ ಸುಧಾಮೂರ್ತಿ ಅವರು ಓರ್ವ ನಟನಾಗಿ, ಓರ್ವ ಕನ್ನಡಿಗನಾಗಿ ಹಾಗೂ ಓರ್ವ ಸಜ್ಜನನಾಗಿ ಪುನೀತ್ ರಾಜ್ ಕುಮಾರ್ ಅವರ ಪರಿಚಯ ನನಗಿತ್ತು, ಅವರು ಸಿಕ್ಕಾಗಲೆಲ್ಲ ನಾನು ನಿಮ್ಮನ್ನು ಅಪ್ಪು ಅಥವಾ ಪುನೀತ್ ಎನ್ನಲಾರೆ ನಾನು ನಿಮ್ಮನ್ನು ಲೋಹಿತ್ ಎಂದೇ ಕರೆಯುತ್ತೇನೆ ಎನ್ನುತ್ತಿದ್ದೆ ಹಾಗೂ ಅದಕ್ಕೆ ಅವರು ನಗುತ್ತಿದ್ದರು ಎಂದೂ ಸಹ ಸುಧಾಮೂರ್ತಿ ಅಪ್ಪು ಜತೆ ಕಳೆದ ಕ್ಷಣಗಳನ್ನು ನೆನಪಿಸಿಕೊಂಡರು.

ಕೊಲಂಬೊ ವಿಮಾನ ನಿಲ್ದಾಣದಲ್ಲಿ ನಮಸ್ಕರಿಸಿದ್ದರು ಅಪ್ಪು
ಇನ್ನು ಪುನೀತ್ ರಾಜ್ ಕುಮಾರ್ ತಮ್ಮನ್ನು ಕೊಲಂಬೊದಲ್ಲಿ ಭೇಟಿಯಾಗಿದ್ದ ಸಂದರ್ಭವನ್ನು ಸುಧಾಮೂರ್ತಿ ನೆನೆದರು. ತಾವು ಕೊಲಂಬೊಗೆ ತೆರಳಿದ್ದಾಗ ಶೂಟಿಂಗ್ ಮುಗಿಸಿ ವಾಪಸ್ ಆಗುತ್ತಿದ್ದ ಅಪ್ಪು ತಮ್ಮನ್ನು ವಿಮಾನ ನಿಲ್ದಾಣದಲ್ಲಿ ಎಷ್ಟೇ ಜನರಿದ್ದರೂ ಸಹ ಬಂದು ನಮಸ್ಕರಿಸಿ ಮಾತನಾಡಿಸಿದ್ದರು ಎಂದರು. ಯಾಕೆ ಇಲ್ಲಿ ಈ ರೀತಿ ನಮಸ್ಕರಿಸುತ್ತಿದ್ದೀರ ಎಂದಿದ್ದೆ, ಸಜ್ಜನರು ಎಲ್ಲೇ ಸಿಕ್ಕರೂ ಸಹ ಅದೇ ರೀತಿ ನಮಸ್ಕರಿಸುತ್ತಿದ್ದರು, ಇದು ರಾಜ್ ಕುಟುಂಬದಲ್ಲಿ ಇರುವಂತಹ ಸರಳತೆ ಎಂದು ಸುಧಾಮೂರ್ತಿ ಹೊಗಳಿದರು.

ನಾವು ಹಳೇ ಕಾಲದವರು ರಾಜಕುಮಾರ್ ಭಕ್ತರು
ಇನ್ನೂ ಮುಂದುವರಿದು ಮಾತನಾಡಿದ ಸುಧಾಮೂರ್ತಿ ಅವರು ನಾವು ಅಪ್ಪು ಅವರಿಗಿಂತ ಅಣ್ಣಾವ್ರ ಚಿತ್ರಗಳನ್ನು ಹೆಚ್ಚಾಗಿ ನೋಡಿ ಬೆಳೆದವರು, ನಾವೆಲ್ಲರೂ ಅಣ್ಣಾವ್ರ ಭಕ್ತರು ಎಂದು ಸಂತಸದಿಂದ ಹೇಳಿಕೊಂಡರು. ಹೀಗೆ ಸುಧಾಮೂರ್ತಿ ಅವರು ತುಂಬು ಕಾರ್ಯಕ್ರಮದಲ್ಲಿ ಅಣ್ಣಾವ್ರನ್ನು ಹೊಗಳಿದ ಪರಿ ಕಂಡ ರಾಜ್ ಕುಟುಂಬದ ಅಭಿಮಾನಿಗಳು ಶಿಳ್ಳೆ ಹೊಡೆದು, ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು. ಅಪ್ಪು ತುಂಬ ಸಣ್ಣ ವಯಸ್ಸಿನಲ್ಲಿ ನಿಧನ ಹೊಂದಿದ್ದು ತುಂಬಾ ಬೇಸರದ ಸಂಗತಿ ಆದರೆ ಅವರು ಕನ್ನಡಿಗರ ಮನಸ್ಸಿನಲ್ಲಿ ಸದಾ ಅಮರರಾಗಿದ್ದಾರೆ ಎಂದು ಸುಧಾಮೂರ್ತಿ ಹೇಳಿದರು.


Click it and Unblock the Notifications











