"ಅವ್ಳು ಕೆಲಸಕ್ಕೆ ಬಾರದವಳು"; ದೀಪಿಕಾ ದಾಸ್ ಬಗ್ಗೆ ಕೇಳಿದ್ದಕ್ಕೆ ನಿರ್ಮಾಪಕಿ ಪುಷ್ಪಾ ಗರಂ
ನಟ ಯಶ್ ತಾಯಿ ಪುಷ್ಪಾ ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಪ್ರವೇಶಿಸಿದ್ದಾರೆ. 'ಕೊತ್ತಲವಾಡಿ' ಸಿನಿಮಾ ನಿರ್ಮಿಸಿ ಬಿಡುಗಡೆ ಮಾಡಿದ್ದಾರೆ. ತಮ್ಮ ನೇರಾನೇರ ಮಾತುಗಳಿಂದ ಅವರು ಗಮನ ಸೆಳೆಯುತ್ತಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ದೀಪಿಕಾ ದಾಸ್ ಬಗ್ಗೆ ಎದುರಾಗದ ಪ್ರಶ್ನೆಗೆ ಪುಷ್ಪಾ ಕೆಂಡಾಮಂಡಲವಾಗಿದ್ದಾರೆ. ಆ ವೀಡಿಯೋ ವೈರಲ್ ಆಗ್ತಿದೆ.
ನಟ ಯಶ್ ತಾಯಿ ಪುಷ್ಪಾ ಹಾಗೂ ನಟಿ ದೀಪಿಕಾ ದಾಸ್ ತಾಯಿ ಸಹೋದರಿಯರು. ಹಾಗಾಗಿ ಸಂಬಂಧದಲ್ಲಿ ಯಶ್ ಹಾಗೂ ದೀಪಿಕಾ ಅಣ್ಣ-ತಂಗಿ. ಆದರೆ ದೀಪಿಕಾ ಎಂದೂ ನಾನು ಯಶ್ ತಂಗಿ ಎಂದು ಹೇಳಿಕೊಳ್ಳುವುದಿಲ್ಲ. ಎರಡೂ ಕುಟುಂಬಗಳ ನಡುವೆ ಭಿನ್ನಾಭಿಪ್ರಾಯಗಳಿವೆ ಎನ್ನುವ ಊಹಾಪೋಹ ಇದೆ. ಅಶ್ವವೇಗ ವಾಹಿನಿ ಸಂದರ್ಶನದಲ್ಲಿ ಇತ್ತೀಚೆಗೆ ನಿರ್ಮಾಪಕಿ ಪುಷ್ಪಾ ಭಾಗಿ ಆಗಿದ್ದರು.

ಪಿಎ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಪುಷ್ಪಾ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡಲು ಮುಂದಾಗಿದ್ದಾರೆ. ಹೊಸ ನಟ, ನಟಿಯರು, ತಂತ್ರಜ್ಞರಿಗೆ ವೇದಿಕೆ ಕಲ್ಪಿಸುವ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ನಿಮ್ಮ ಚಿತ್ರದಲ್ಲಿ ದೀಪಿಕಾ ದಾಸ್ ಅವರಿಗೆ ಅವಕಾಶ ಕೊಡ್ತೀರಾ? ಎನ್ನುವ ಪ್ರಶ್ನೆಗೆ ಪುಷ್ಪಾ ಗರಂ ಆಗಿ ನಿರೂಪಕಿ ಮೇಲೆ ಅಸಮಾಧಾನ ಹೊರ ಹಾಕಿದ್ದಾರೆ. ಇಂತಹ ಪ್ರಶ್ನೆಗಳನ್ನು ಯಾಕೆ ಕೇಳ್ತೀರಾ? ಎಂದಿದ್ದಾರೆ.
"ದೀಪಿಕಾ ದಾಸ್ಗೂ ನಮಗೂ ಆಗಲ್ಲ. ಅವಳು ಯಾವ ದೊಡ್ಡ ಹೀರೊಯಿನ್ನು, ಆಯ್ಕೆ ಮಾಡಿಕೊಳ್ಳಲು, ಯಾವ ಸಾಧನೆ ಮಾಡಿದ್ದಾಳೆ ಎಂದು ಕರೆದು ಅವಕಾಶ ಕೊಡುವುದು. ಸಂಬಂಧ ಆದರೂ ಅವರನ್ನು ದೂರದಲ್ಲೇ ಇಟ್ಟಿದ್ದೀವಿ. ಅವರ ಬಗ್ಗೆ ಯಾಕೆ ಕೇಳ್ತೀರಾ? ನನ್ನ ಮಗ ಬೈಯಲ್ವಾ? ಇನ್ನು ಬಹಳ ಹೀರೊಯಿನ್ ಇದ್ದಾರೆ, ಅವರ ಬಗ್ಗೆ ಕೇಳಿ" ಎಂದು ಪುಷ್ಪಾ ಬೇಸರ ಹೊರಹಾಕಿದ್ದಾರೆ.
ಸಾಕಷ್ಟು ಜನ ಹೀರೊಯಿನ್ ಇದ್ದಾರೆ, ಎಲ್ಲರನ್ನು ಬಿಟ್ಟು ದೀಪಿಕಾ ದಾಸ್ ಹೆಸರು ಯಾಕೆ ತಗೋತ್ತೀರಾ? ಎಂದು ಪುಷ್ಪಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೀಪಿಕಾ ದಾಸ್ ಏನು ರಮ್ಯಾನಾ? ರಕ್ಷಿತಾನಾ? ಒಂದು ವೇಳೆ ದೊಡ್ಡದಾಗಿ ಸಾಧನೆ ಮಾಡಿದ್ದರೆ ಅವರ ಬಗ್ಗೆ ಕೇಳಿ ಅದು ಬಿಟ್ಟು ದೀಪಿಕಾ ದಾಸ್ ಕಥೆ ಯಾಕೆ?" ಎಂದು ನಿರ್ಮಾಪಕಿ ಪುಷ್ಪಾ ಪ್ರಶ್ನಿಸಿದ್ದಾರೆ.
ಇದೇ ಸಂದರ್ಶನದಲ್ಲಿ 'ಕೊತ್ತಲವಾಡಿ' ಸಿನಿಮಾ ಬಿಡುಗಡೆಗೆ ಕೆಲವರು ತೊಂದರೆ ಕೊಟ್ಟರು. ಮುಂದಿನ ದಿನಗಳಲ್ಲಿ ಈ ಬಗ್ಗೆ ದನಿ ಎತ್ತುತ್ತೇನೆ ಎಂದು ಪುಷ್ಪಾ ಹೇಳಿದ್ದಾರೆ. ನಮ್ಮ ಚಿತ್ರಕ್ಕೆ ಸರಿಯಾದ ಥಿಯೇಟರ್ ಕೊಡಲಿಲ್ಲ. ಕಾರ್ತಿಕ್ ಇದನ್ನೆಲ್ಲಾ ಮಾಡಿದ್ದು ಎಂದು ಬೇಸರ ಹೊರ ಹಾಕಿದ್ದಾರೆ. ನಮಗೆ ಒಳ್ಳೆ ಥಿಯೇಟರ್ ಸಿಗದೇ ಜನರಿಗೆ ಸಿನಿಮಾ ನೋಡಲು ಗೊಂದಲವಾಯಿತು ಎಂದಿದ್ದಾರೆ.
'ಕೊತ್ತಲವಾಡಿ' ಸಿನಿಮಾ ಬಾಕ್ಸಾಫೀಸ್ನಲ್ಲಿ ಗೆಲ್ಲದೇ ಇದ್ದರೂ ಮತ್ತಷ್ಟು ಸಿನಿಮಾಗಳನ್ನು ಮಾಡ್ತೀನಿ. ಕನ್ನಡ ಚಿತ್ರರಂಗಕ್ಕೆ ಒಳ್ಳೆ ಸಿನಿಮಾಗಳನ್ನು ಕೊಡುವುದು ನನ್ನ ಗುರಿ. ಶೀಘ್ರದಲ್ಲೇ ಮುಂದಿನ ಸಿನಿಮಾ ಬಗ್ಗೆ ಮಾಹಿತಿ ಕೊಡುತ್ತೇನೆ ಎಂದಿದ್ದಾರೆ. ತೆಲುಗಿ 'ಘಾಟಿ' ಚಿತ್ರವನ್ನು ಕರ್ನಾಟಕದಲ್ಲಿ ವಿತರಣೆ ಮಾಡಲು ನಿರ್ಮಾಪಕಿ ಪುಷ್ಪಾ ಮುಂದಾಗಿದ್ದಾರೆ. ಅನುಷ್ಕಾ ಶೆಟ್ಟಿ ನಟನೆಯ ಈ ಸಿನಿಮಾ ಸೆಪ್ಟೆಂಬರ್ 5ಕ್ಕೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ.
ಪಿಎ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣದ 2ನೇ ಚಿತ್ರದಲ್ಲಿ ನಟ ಶರಣ್ ನಾಯಕರಾಗಿ ನಟಿಸಲಿದ್ದಾರೆ. 'ಕೊತ್ತಲವಾಡಿ' ಚಿತ್ರಕ್ಕೆ ಕೆಲಸ ಮಾಡಿದ ತಂಡವೇ ಕೆಲಸ ಮಾಡುವ ಸಾಧ್ಯತೆಯಿದೆ.


Click it and Unblock the Notifications











