'ಪ್ಯಾಟೆ ಮಂದಿ ಕಾಡಿಗ್ ಬಂದ್ರು' ಖ್ಯಾತಿಯ ಪದ್ದು ಗೌಡ ನಿಧನದ ಬಗ್ಗೆ ಸಹ ಸ್ಪರ್ಧಿ ಕೊಟ್ಟ ಕಾರಣವೇನು?
ಕನ್ನಡದ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ 'ಪ್ಯಾಟೆ ಮಂದಿ ಕಾಡಿಗ್ ಬಂದ್ರು' ಕೂಡ ಒಂದು. ಈ ಶೋಗೆ ಕಿರುತೆರೆಗೆ ಸಿಕ್ಕಪಟ್ಟೆ ಫ್ಯಾನ್ ಫಾಲೋವಿಂಗ್ ಇತ್ತು. ಇದರ ಎರಡನೇ ಸೀಸನ್ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಪದ್ದು ಗೌಡ ಅಲಿಯಾಸ್ ಪದ್ಮನಾಭ ಗೌಡ ನಿಧನರಾಗಿದ್ದಾರೆ. ರಿಯಾಲಿಟಿ ಶೋ ಮೂಲಕ ಕರುನಾಡಿನ ಗಮನ ಸೆಳೆದಿದ್ದ ಪದ್ದು ಗೌಡ ಅಗಲಿಕೆ ಅವರ ಸ್ನೇಹಿತರಿಗೆ ದೊಡ್ಡ ಶಾಕ್ ಆಗಿದೆ.
'ಪ್ಯಾಟೆ ಮಂದಿ ಕಾಡಿಗ್ ಬಂದ್ರು' ಸೀಸನ್ 2ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಪದ್ದು ಗೌಡ ನಿರೂಪಕ ಕೂಡ ಹೌದು. ಅಲ್ಲದೆ ಮಾಡೆಲ್ ಆಗಿಯೂ ಗುರುತಿಸಿಕೊಂಡಿದ್ದರು. ಪದ್ದು ಗೌಡ ಅಲಿಯಾಸ್ ಪದ್ಮನಾಭ ಗೌಡ ಅವರು ಬ್ರೈನ್ ಟ್ಯೂಮರ್ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಅವರಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಆದರೆ, ಅದು ಫಲಕಾರಿಯಾಗದೇ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರಿಗೆ ಕೇವಲ 44 ವರ್ಷ ವಯಸ್ಸಾಗಿತ್ತು.

ಇದೇ ರಿಯಾಲಿಟಿ ಶೋನಲ್ಲಿ ಪದ್ದು ಗೌಡಗೆ ಒಳ್ಳೆಯ ಹೆಸರು ಕೂಡ ಸಿಕ್ಕಿತ್ತು. ಇದೇ ಶೋ ಭಾಗವಹಿಸಿದ್ದ ಭಾರತಿ ತನ್ನ ಸಹ ಸ್ಪರ್ಧಿ ಪದ್ದು ಗೌಡ ನಿಧನದ ಬಗ್ಗೆ ಮರುಗಿ ಭಾವುಕರಾಗಿದ್ದಾರೆ. ಟಿವಿ9 ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಪದ್ದು ಗೌಡ ಅವರೊಂದಿಗೆ ರಿಯಾಲಿಟಿ ಶೋನಲ್ಲಿ ಕಳೆದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ರಿಯಾಲಿಟಿ ಶೋ ಆದ್ಮೇಲೆ ಅವರವರ ಲೈಫ್ನಲ್ಲಿ ಅವರು ಬ್ಯುಸಿಯಾಗಿದ್ದರು. ಆದರೂ, ಕಳೆದ ವರ್ಷ ಅವರು ಅನಾರೋಗ್ಯದ ವಿಷಯ ತಿಳಿದು 'ಪ್ಯಾಟೆ ಮಂದಿ ಕಾಡಿಗ್ ಬಂದ್ರು' ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳೆಲ್ಲ ಮನೆಗೆ ಹೋಗಿದ್ದರು. ಆ ಕ್ಷಣವನ್ನು ಭಾರತಿಯವರು ನೆನಪಿಸಿಕೊಂಡಿದ್ದಾರೆ. "2025ರಲ್ಲಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದವರೆಲ್ಲ ಇಂತಹದ್ದೊಂದು ಸಮಸ್ಯೆಯಿದೆ ಬಾ ನೋಡಿಕೊಂಡು ಬರೋಣ ಅಂದಿದ್ರು. ಆಗ ಅವರ ಮನೆಗೆ ಹೋದಾಗಲೇ ನೋಡಿದ್ದು. 2011ರಲ್ಲಿ ಶೋ ನಡೆದಿದ್ದು, ಅದಾದ್ಮೇಲೆ ಅವನನ್ನು ಈ ರೀತಿ ನೋಡಿದ್ದು. ಅವನನ್ನು ನೋಡುವುದಕ್ಕೆ ಹೋದಾಗಲೂ ಚೆನ್ನಾಗಿ ಮಾತಾಡುತ್ತಿದ್ದ. ತಮಾಷೆ ಮಾಡುತ್ತಿದ್ದ." ಎಂದಿದ್ದಾರೆ.
ಇದೇ ಸಂದರ್ಶನದಲ್ಲಿ ಪದ್ದು ಗೌಡ ಅವರಿಂದಲೇ ರಿಯಾಲಿಟಿಗೆ ಎಂಟ್ರಿ ಕೊಟ್ಟಿದ್ದು ಎಂದು ಹೇಳಿಕೊಂಡಿದ್ದಾರೆ. "ನಾನು ಅವನು ಇಬ್ಬರೂ ಟೆಸ್ಕೋದಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡುತ್ತಿದ್ವಿ. ಅವನು ಹಾಕಿ ಪ್ಲೇಯರ್ ಅಂತ ಗೊತ್ತಾಯ್ತು. ನಾನು ಅಂತರಾಷ್ಟ್ರೀಯ ಮಟ್ಟದ ಅಥ್ಲೀಟ್ ಆಗಿದ್ದರಿಂದ ಕಾರ್ಪೊರೇಟ್ ಕಂಪನಿಯಲ್ಲಿ ಇದ್ದುಕೊಂಡು ಸ್ಪರ್ಧೆ ಮಾಡುತ್ತಿದ್ದೆ. ಹಾಗಾಗಿ ನಾನು ರಿಯಾಲಿಟಿ ಶೋಗೆ ಬರುವುದಕ್ಕೆ ಪದ್ದುನೇ ಕಾರಣ. ಭಾರತಿ ಈತರ ಒಂದು ಅವಕಾಶ ಇದೆ. ನೀನು ಸ್ಟೋರ್ಟ್ಸ್ನಲ್ಲಿ ಇದ್ದೀಯ ಖಂಡಿತಾ ಸೆಲೆಕ್ಟ್ ಆಗ್ತೀಯಾ ಅಂತ ಹೇಳಿದ್ದ. ನಾನು ಪ್ಯಾಟ್ ಮಂದಿ ಕಾಡಿಗ್ ಬರೋಕೆ ಅವನೇ ಕಾರಣ. ನೋಡಿದರೆ, ಫೈನಲ್ಗೂ ಬಂದಿದ್ದೆವು. ಅದು ಮರೆಯೋಕೆ ಆಗಲ್ಲ" ಎಂದು ಪ್ಯಾಟೆ ಮಂದಿ ಕಾಡಿಗ್ ಬಂದ್ರು ಖ್ಯಾತಿಯ ಭಾರತಿ ಹಳೆ ನೆನಪುಗಳನ್ನು ನೆನಪಿಸಿಕೊಂಡಿದ್ದಾರೆ.

ನಿನ್ನೆ (ಜುಲೈ 3) ಪದ್ದು ಗೌಡ ಅವರು ಅಗಲಿದ ವಿಷಯ ತಿಳಿದು ಅಂತಿಮ ದರ್ಶನ ಪಡೆದು ಬಂದಿದ್ದರು. ಆ ವೇಳೆ ಕೂಡ ಅವರು ಮಾಡಿ ಉಪಕಾರವನ್ನು ನೆನೆದು ಧನ್ಯವಾದಗಳನ್ನು ಹೇಳಿದ್ದಾರೆ. "ನಿನ್ನೆ ನೋಡುವುದಕ್ಕೆ ಹೋದಾಗಲೂ ಅದೇ ಹೇಳಿದ್ದು ಥ್ಯಾಂಕ್ಯೂ ಅಂತ. ಲೈಫ್ನಲ್ಲಿ ಒಂದು ಟರ್ನಿಂಗ್ ಪಾಯಿಂಟ್ ಸಿಕ್ಕಿದ್ದೇ ಪದ್ದುಯಿಂದ. ಅವರ ತಂದೆ-ತಾಯಿ, ಅವರ ಹೆಂಡ್ತಿ ಎಲ್ಲಾರಿಗೂ ದೇವರು ಶಕ್ತಿ ಕೊಡಲಿ." ಎಂದು ಭಾರತಿ ಹೇಳಿಕೊಂಡಿದ್ದಾರೆ.
'ಪ್ಯಾಟೆ ಮಂದಿ ಕಾಡಿಗ್ ಬಂದ್ರು' ಖ್ಯಾತಿಯ ಪದ್ದು ಗೌಡ ಕಳೆದ ಕೆಲವು ತಿಂಗಳುಗಳಿಂದ ಬ್ರೈನ್ ಟ್ಯೂಮರ್ ಸಮಸ್ಯೆಯಿಂದ ಬಳಲುತ್ತಿದ್ದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಇದಕ್ಕೆ ಚಿಕಿತ್ಸೆಯನ್ನೂ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಯಲಹಂಕದಲ್ಲಿ ಕೊನೆಯುಸಿರೆಳೆದಿದ್ದಾರೆ. ಪದ್ದು ಗೌಡ ಅವರು ಪತ್ನಿ ಅಶ್ವಿನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.


Click it and Unblock the Notifications