'ವಿಕ್ರಾಂತ್ ರೋಣ' ಸಿನಿಮಾ ವೀಕ್ಷಿಸುವಾಗ ಗಲಾಟೆ, ಮಚ್ಚಿನಿಂದ ಹಲ್ಲೆ
ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಬಿಡುಗಡೆ ಆಗಿದೆ. ರಾಜ್ಯದೆಲ್ಲೆಡೆ ಕಿಚ್ಚನ ಅಭಿಮಾನಿಗಳು ಸಂಭ್ರಮದಿಂದ ಸಿನಿಮಾವನ್ನು ಸ್ವಾಗತಿಸಿದ್ದಾರೆ. ಆದರೆ ಚಿಕ್ಕಮಗಳೂರು ಮಾತ್ರ 'ವಿಕ್ರಾಂತ್ ರೋಣ' ಸಿನಿಮಾ ಪ್ರದರ್ಶನದ ನಡುವೆ ಎರಡು ಗುಂಪುಗಳ ನಡುವೆ ಮಾರಾ-ಮಾರಿ ನಡೆದಿದೆ.
ಚಿಕ್ಕಮಗಳೂರು ಮಿಲನ್ ಚಿತ್ರಮಂದಿರದಲ್ಲಿ 'ವಿಕ್ರಾಂತ್ ರೋಣ' ಸಿನಿಮಾದ ಮ್ಯಾಟೆನಿ ಶೋ ವೀಕ್ಷಿಸುತ್ತಿದ್ದ ಸಮಯದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ಆಗಿದೆ. ವ್ಯಕ್ತಿಯೊಬ್ಬ ಪದೇ-ಪದೇ ಸೀಟಿನಿಂದ ಏಳುತ್ತಿದ್ದುದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಗಲಾಟೆ ಶುರುವಾಗಿದೆ.
ಗಲಾಟೆ ಜೋರಾಗಿ ನಡೆದಿದ್ದು ಎರಡು ಗುಂಪುಗಳವರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಭರತ್ ಎಂಬ ಯುವಕನ ಮೇಲೆ ಲಾಂಗ್ ಮಚ್ಚಿನಿಂದ ಹಲ್ಲೆ ನಡೆಸಿದ್ದು, ಚಾಕು ಇರಿತವೂ ನಡೆದಿದೆ. ರಕ್ತದ ಮಡುವಿನಲ್ಲಿದ್ದ ಭರತ್ ಅನ್ನು ಹಾಸನದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಭರತ್ಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು ಚೂರಿ ಇರಿತವಾಗಿದ್ದ ಜಾಗಕ್ಕೆ ಹೊಲಿಗೆ ಹಾಕಿದ್ದಾರೆ ವೈದ್ಯರು. ಭರತ್ನ ತಲೆ ಹಾಗೂ ಕೈಗೂ ಪೆಟ್ಟಾಗಿದ್ದು, ಚಿಕಿತ್ಸೆ ನೀಡಲಾಗಿದೆ.
ಆಸ್ಪತ್ರೆ ಬೆಡ್ ಮೇಲೆ ಮಲಗಿಕೊಂಡೆ ಮಾತನಾಡಿರುವ ಭರತ್, ತನ್ನ ಮೇಲೆ ಹಲ್ಲೆ ಮಾಡಿದವರ ಹೆಸರುಗಳನ್ನು ಹೇಳಿದ್ದಾನೆ. ಪ್ರೀತಂ, ಈಶ್ವರ್, ಜೀವನ್, ಪ್ರಜ್ವಲ್, ಪನ್ನು, ಸಚಿನ್ ಹಾಗೂ ಇನ್ನೂ ನಾಲ್ಕು ಜನ ಇದ್ದರು ಅವರೆಲ್ಲ ಒಟ್ಟಾಗಿ ನನ್ನ ಮೇಲೆ ಹಲ್ಲೆ ಮಾಡಿದರು. ಚಿತ್ರಮಂದಿರಕ್ಕೆ ಲಾಂಗ್, ಕತ್ರಿ, ಡ್ರ್ಯಾಗರ್, ಚಾಕು, ಚೂರಿಗಳನ್ನು ತಂದಿದ್ದಾರೆ, ನನ್ನನ್ನು ಕೊಲ್ಲುವ ಉದ್ದೇಶದಿಂದಲೇ ಮೊದಲೇ ಯೋಜನೆ ಹಾಕಿಕೊಂಡು ಬಂದಿದ್ದರು ಎಂದಿದ್ದಾರೆ.
'ಎಲ್ಲರೂ ಸೇರಿ ಚುಚ್ಚಿ, ಹೊಡೆದಿದ್ದಾರೆ, ತಲೆ ಫುಲ್ ಓಪನ್ ಆಗಿದೆ' ಎಂದು ಭರತ್ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಭರತ್ ಕಡೆಯ ಹುಡುಗರು ಕೂಡ ಆಸ್ಪತ್ರೆ ಮುಂಭಾಗ ಸೇರಿ ಆಕ್ರೋಶ ಹೊರಹಾಕಿದ್ದಾರೆ. ಆಸ್ಪತ್ರೆ ಮುಂಭಾಗ ಯುವಕರ ಗುಂಪನ್ನು ಕಂಡ ಪೊಲೀಸರು ಲಾಠಿ ಬೀಸಿ ಗುಂಪು ಚದುರಿಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಗೆ ಹಳೇ ವೈಷಮ್ಯವೇ ಕಾರಣ ಎಂಬ ಮಾತುಗಳು ಕೇಳಿ ಬಂದಿವೆ.


Click it and Unblock the Notifications











