12 ಕಿಮೀ ಉದ್ದದ ರಸ್ತೆಗೆ ಪುನೀತ್ ಹೆಸರಿಡಬೇಕೆಂದು ನೆನಪಿಸಿಕೊಳ್ಳುತ್ತಿದ್ದದ್ದು ಇವರೇ ಎಂದ ತೇಜಸ್ವಿ ಸೂರ್ಯ

ಬೆಂಗಳೂರಿನ ಬನ್ನೇರುಘಟ್ಟ ಮುಖ್ಯರಸ್ತೆ ಹಾಗೂ ಮೈಸೂರು ರಸ್ತೆಗಳನ್ನು ಸಂಪರ್ಕಿಸುವ ಹನ್ನೆರಡು ಕಿಲೊಮೀಟರ್ ಉದ್ದದ ರಿಂಗ್ ರಸ್ತೆಗೆ ಇಂದು ( ಫೆಬ್ರವರಿ 7 ) ಕನ್ನಡ ರಾಜರತ್ನ, ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ ಅವರ ಹೆಸರನ್ನು ಇಡಲಿದ್ದೇವೆ ಎಂದು ಈ ಹಿಂದೆಯೇ ಕರ್ನಾಟಕ ರಾಜ್ಯ ಸರ್ಕಾರ ಘೋಷಿಸಿತ್ತು. ಅದರಂತೆ ಈ ಉದ್ದದ ರಸ್ತೆಗೆ ಪುನೀತ್ ರಾಜ್ಕುಮಾರ್ ಅವರ ಹೆಸರನ್ನು ಇಟ್ಟಿರುವ ಸರ್ಕಾರ ಇಂದು ಉದ್ಘಾಟನೆಯನ್ನು ಮಾಡಿತು.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಈ ರಸ್ತೆಯನ್ನು ಉದ್ಘಾಟಿಸಿದ್ದು, ಸಂಜೆ ಕಾರ್ಯಕ್ರಮವೊಂದನ್ನು ಸಹ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಗಣ್ಯ ವ್ಯಕ್ತಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ವೇದಿಕೆ ಮೇಲೆ ಉಪಸ್ಥಿತರಿದ್ದ ಹಲವು ಗಣ್ಯರು ದಿವಂಗತ ನಟ ಪುನೀತ್ ರಾಜ್ಕುಮಾರ್ ಅವರನ್ನು ನೆನೆದು ಮಾತನಾಡಿದರು. ಪುನೀತ್ ರಾಜ್ಕುಮಾರ್ ಮಾಡಿದ ಸಹಾಯದ ಪಟ್ಟಿಗಳನ್ನು ಮೆಲುಕು ಹಾಕಿ, ಅವರ ಜತೆಗಿನ ಒಡನಾಟದ ಕ್ಷಣಗಳನ್ನು ನೆನಪಿಸಿಕೊಂಡರು.
ಇನ್ನು ಪುನೀತ್ ರಾಜ್ಕುಮಾರ್ ಅವರನ್ನು ವಿವಿಧ ಸಂದರ್ಭಗಳಲ್ಲಿ ಭೇಟಿಯಾದ ಅನುಭವಿರುವ ಸಂಸದ ತೇಜಸ್ವಿ ಸೂರ್ಯ ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಾವು ಪುನೀತ್ ಅವರ ಜತೆ ಕಳೆದ ಕ್ಷಣಗಳನ್ನು ಮೆಲುಕು ಹಾಕಿದರು ಹಾಗೂ ಈ ರಸ್ತೆಗೆ ಪುನೀತ್ ರಾಜ್ಕುಮಾರ್ ಅವರ ಹೆಸರನ್ನು ಇಡಬೇಕು ಎಂದು ಪದೇ ಪದೇ ಯೋಚಿಸುತ್ತಿದ್ದವರು ಯಾರು ಎಂಬುದನ್ನು ಸಹ ಹೇಳಿಕೊಂಡರು.
ಭಾರತ್ ಮಾತಾಕಿ ಜೈ ಎನ್ನುವ ಮೂಲಕ ತನ್ನ ಮಾತುಗಳನ್ನು ಆರಂಭಿಸಿದ ತೇಜಸ್ವಿ ಸೂರ್ಯ ಪುನೀತ್ ರಾಜ್ಕುಮಾರ್ ಅವರಿಗೂ ಸಹ ಜೈಕಾರ ಕೂಗಿದರು. ಬಹಳ ದಿನಗಳಿಂದ ಯಾವುದಾದರೂ ಕಾರ್ಯಕ್ರಮಕ್ಕೆ ಈ ರಸ್ತೆಯಲ್ಲಿ ಹೋಗುವಾಗಲೆಲ್ಲಾ ಆರ್ ಅಶೋಕ್ ಅವರು ಈ ಉದ್ದದ ರಸ್ತೆಗೆ ಪುನೀತ್ ರಾಜ್ಕುಮಾರ್ ರಸ್ತೆ ಎಂದು ಹೆಸರಿಡಬೇಕು ಎಂದು ಪದೇಪದೇ ನೆನಪಿಸಿಕೊಳ್ಳುತ್ತಿದ್ದರು ಎಂದು ಇದೇ ವೇಳೆ ತಿಳಿಸಿದರು. ಹಾಗೂ ಈ ರಸ್ತೆಗೆ ಪುನೀತ್ ರಾಜ್ಕುಮಾರ್ ಅವರ ಹೆಸರನ್ನು ಇಟ್ಟಿರುವ ಕಾರಣ ಅವರು ಮಾಡಿದ ಅಪಾರ ಸಮಾಜಸೇವೆಯನ್ನು ಮತ್ತು ಪುನೀತ್ ರಾಜ್ಕುಮಾರ್ ಅವರನ್ನು ಈ ರಸ್ತೆಯಲ್ಲಿ ಪ್ರತಿದಿನ ಓಡಾಡುವ ಲಕ್ಷಾಂತರ ಮಂದಿ ನೆನಪಿಸಿಕೊಳ್ಳಲಿದ್ದು, ಅಪ್ಪು ಹೆಸರು ಅಮರವಾಗಲಿದೆ ಎಂದೂ ಸಹ ಹೇಳಿದರು.


Click it and Unblock the Notifications











