6ನೇ ಸಿನಿಮಾ ಘೋಷಿಸಿದ ಆರ್. ಚಂದ್ರು; ಹಿಟ್ ಕಾಂಬಿನೇಷನ್ನಲ್ಲಿ ಮತ್ತೆ ಸಾಹಸ
'ಕಬ್ಜ' ಸಿನಿಮಾ ಬಳಿ ನಿರ್ದೇಶಕ ಆರ್. ಚಂದ್ರು ತಮ್ಮದೇ ಬ್ಯಾನರ್ನಲ್ಲಿ 5 ಸಿನಿಮಾ ಘೋಷಣೆ ಮಾಡಿದ್ದಾರೆ. ಬೇರೆ ಬೇರೆ ಕಲಾವಿದರು, ತಂತ್ರಜ್ಞರ ತಂಡ ಕಟ್ಟಿಕೊಂಡು 5 ಸಿನಿಮಾಗಳ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದೀಗ ತಮ್ಮ ಬ್ಯಾನರ್ನಲ್ಲಿ 6ನೇ ಸಿನಿಮಾ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ.
ಆರ್. ಸಿ ಸ್ಟುಡಿಯೋಸ್ ಬ್ಯಾನರ್ನಲ್ಲಿ 'ಕಬ್ಜ'- 2, 'ಶ್ರೀರಾಮ ಬಾಣ ಚರಿತ', 'ಫಾದರ್', 'DOG', 'POK' ಸಿನಿಮಾಗಳನ್ನು ತೆರೆಗೆ ತರಲು ಸಜ್ಜಾಗಿದ್ದಾರೆ. ಆರ್. ಚಂದ್ರು ಕನಸಿಗೆ ಆನಂದ್ ಪಂಡಿತ್, ಅಲಂಕಾರ್ ಪಾಂಡಿಯನ್ ಜೊತೆಯಾಗಿ ಸಾಥ್ ಕೊಡುತ್ತಿದ್ದಾರೆ. ಇದೀಗ ಆರ್. ಚಂದ್ರು ಮತ್ತೊಂದು ಸಿನಿಮಾ ಘೋಷಣೆ ಮಾಡುವುದಕ್ಕೂ ಒಂದು ಕಾರಣವಿದೆ. ಅದು ಸೂಪರ್ ಹಿಟ್ 'ಮೈಲಾರಿ' ಸಿನಿಮಾ ಮುಹೂರ್ತ ನೆರವೇರಿ 14 ವರ್ಷ ಪೂರೈಸಿರುವುದು.

ಹೌದು. ಶಿವಣ್ಣ ಹಾಗೂ ಆರ್. ಚಂದ್ರು ಕಾಂಬಿನೇಷನ್ನಲ್ಲಿ ಬಂದಿದ್ದ 'ಮೈಲಾರಿ' ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. 2010, ಏಪ್ರಿಲ್ 1ರಂದು ಈ ಸಿನಿಮಾ ಸೆಟ್ಟೇರಿತ್ತು. ಸರಿಯಾಗಿ 14 ವರ್ಷಗಳ ಬಳಿಕ ಶಿವಣ್ಣನ ಜೊತೆ ಆರ್. ಚಂದ್ರು ಹೊಸ ಸಿನಿಮಾ ಘೋಷಿಸಿದ್ದಾರೆ.ಕಳೆದ ವರ್ಷ ಬಂದಿದ್ದ 'ಕಬ್ಜ' ಚಿತ್ರದಲ್ಲಿ ಸೆಂಚುರಿ ಸ್ಟಾರ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಶಿವಣ್ಣನನ್ನು ಭೇಟಿ ಮಾಡಿ ಮಾತನಾಡಿರುವ ಫೋಟೊಗಳನ್ನು ನಿರ್ದೇಶಕ ಆರ್. ಚಂದ್ರು ಹಂಚಿಕೊಂಡಿದ್ದಾರೆ. 'ಕಬ್ಜ' ಸಿನಿಮಾ ವಿತರಕರಿಗೆ ನಷ್ಟ ಮಾಡಿತ್ತು ಎನ್ನುವ ವಾದವೂ ಇದೆ. ಭಾರೀ ನಿರೀಕ್ಷೆ ಹುಟ್ಟಾಕ್ಕಿದ್ದ ಸಿನಿಮಾ ನಿರೀಕ್ಷಿತ ಮಟ್ಟ ತಲುಪಲಿಲ್ಲ. ಈ ಬಗ್ಗೆ ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೂ ಚಂದ್ರು ತಮ್ಮದೇ ಬ್ಯಾನರ್ ಶುರು ಮಾಡಿ ಏಕಕಾಲಕ್ಕೆ 5 ಸಿನಿಮಾ ಘೋಷಿಸಿ ಶಾಕ್ ಕೊಟ್ಟಿದ್ದರು. ಖಾಸಗಿ ಹೋಟೆಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಆರ್. ಸಿ ಸ್ಟುಡಿಯೋಸ್ ಬ್ಯಾನರ್ ಲೋಕಾರ್ಪಣೆ ಮಾಡಿದ್ದರು. ನಟ, ನಿರ್ದೇಶಕ ಉಪೇಂದ್ರ ಕೂಡ ಆ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. 2 ತಿಂಗಳ ಅಂತರದಲ್ಲಿ ಮತ್ತೊಂದು ಸಿನಿಮಾ ಘೋಷಿಸಿ ಎಲ್ಲರ ಹುಬ್ಬೇರಿಸಿದ್ದಾರೆ.
ನಿರ್ದೇಶಕ ಆರ್. ಚಂದ್ರು ಬಗ್ಗೆ 'ಘೋಸ್ಟ್' ಸಿನಿಮಾ ಪ್ರಚಾರದ ವೇಳೆ ಶಿವಣ್ಣ ಬೇಸರ ವ್ಯಕ್ತಪಡಿಸಿದ್ದರು. "ನಿಜ ಹೇಳಬೇಕು ಅಂದ್ರೆ 'ಕಬ್ಜ' ಬಳಿಕ ನಮ್ಮ ಸಿನಿಮಾ ಹಿಂದಿಗೆ ತೆಗೆದುಕೊಂಡು ಹೋಗುವುದು ತುಸು ಕಷ್ಟವಾಗುತ್ತಿದೆ. ಚಂದ್ರು ಮೇಲೆ ದೂರು ಎಂದಲ್ಲ, ನನಗೆ ಅವರ ಬಗ್ಗೆ ಗೌರವ ಇದೆ. ಆದರೆ 'ಜೈಲರ್' ಚಿತ್ರದಲ್ಲಿ ಅತಿಥಿ ಪಾತ್ರಗಳನ್ನು ಎಷ್ಟು ಬೇಕೋ ಹೇಗೆ ಬೇಕೋ ಹಾಗೆ ಬಳಸಿಕೊಂಡರು. ಬಹಳ ಜಾಣತನದಿಂದ ಅತಿಥಿ ಪಾತ್ರಗಳನ್ನು ಬಳಸಿಕೊಂಡರು. ಆದರೆ 'ಕಬ್ಜ'ನಲ್ಲಿ ಹಾಗಾಗಲಿಲ್ಲ. ಅತಿಥಿ ಪಾತ್ರಗಳನ್ನೇ ಹೈಲೆಟ್ ಮಾಡಿಬಿಟ್ಟರು. ಅದು ಸರಿಯಾದ ಕ್ರಮವಲ್ಲ" ಎಂದು ಶಿವಣ್ಣ ಹೇಳಿದ್ದರು.
ಇದೀಗ ಮತ್ತೆ ಶಿವಣ್ಣನ ಕಾಲ್ಶೀಟ್ ಪಡೆದು ಆರ್. ಚಂದ್ರು ಹೊಸ ಸಿನಿಮಾ ಘೋಷಿಸಿರುವುದು ನೋಡಿ ಅವರ ಧೈರ್ಯ ಮೆಚ್ಚಲೇಬೇಕು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

ನಿರ್ದೇಶಕ, ನಿರ್ಮಾಪಕ ಆರ್. ಚಂದ್ರು ಟ್ವೀಟ್ ಮಾಡಿ "ಕನ್ನಡದ ಸೂಪರ್ ಹಿಟ್ ಚಿತ್ರ ಮೈಲಾರಿ ಮುಹೂರ್ತಕ್ಕೆ 14 ವರ್ಷಗಳು ತುಂಬಿದ ಈ ಶುಭ ಸಂದರ್ಭದಲ್ಲಿ, ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ರವರಿಗೆ ಹೊಸ ಚಿತ್ರ ಆರಂಭಿಸುತ್ತಿರುವುದು ಮತ್ತಷ್ಟು ಖುಷಿ ತಂದಿದೆ. ತಮ್ಮೆಲ್ಲರ ಆಶೀರ್ವಾದ ಇರಲಿ
ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ. ಆದರೆ ಯಾವ ಸಿನಿಮಾ? ಯಾವಾಗ? ಸೆಟ್ಟೇರುತ್ತದೆ ಎನ್ನುವ ಮಾಹಿತಿ ಇನ್ನು ಬಹಿರಂಗವಾಗಿತ್ತು. ಆದಷ್ಟು ಬೇಗ ಚಿತ್ರೀಕರಣ ಎಂದು ಪೋಸ್ಟರ್ನಲ್ಲಿ ತಿಳಿಸಿದ್ದಾರೆ.


Click it and Unblock the Notifications











