'ಕಬ್ಜ', 'ಕೆಜಿಎಫ್' ಅಂಥಹಾ ಸಿನಿಮಾ ಮಾಡಲು ತಾಕತ್ ಇರಬೇಕು: ಆರ್ ಚಂದ್ರು
'ಕೆಜಿಎಫ್ 2', 'ಕಾಂತಾರ' ಸಿನಿಮಾಗಳ ಬಳಿಕ ಆರ್ ಚಂದ್ರು ನಿರ್ದೇಶಿಸಿ, ಉಪೇಂದ್ರ ನಟಿಸಿರುವ 'ಕಬ್ಜ' ಸಿನಿಮಾ ಒಂದಷ್ಟು ನಿರೀಕ್ಷೆಗಳನ್ನು ಹುಟ್ಟಿಹಾಕಿದೆ.
ಭಾರಿ ಬಜೆಟ್ನಲ್ಲಿ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ನಿರ್ಮಾಣವಾಗುತ್ತಿರುವ 'ಕಬ್ಜ' ಸಿನಿಮಾದ ಟ್ರೈಲರ್ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾದ ಬಿಡುಗಡೆ ದಿನಾಂಕವನ್ನು ಸಹ ಈಗಾಗಲೇ ಘೋಷಿಸಿ ಆಗಿದೆ.
ಭಾರಿ ಬಜೆಟ್ನಲ್ಲಿ 'ಕಬ್ಜ' ಸಿನಿಮಾ ನಿರ್ಮಿಸಲಾಗಿದ್ದು, ಸಿನಿಮಾ ನಿರ್ದೇಶನ ಮಾಡಲು, ಚಿತ್ರೀಕರಣ ಮಾಡಲು ಪಟ್ಟ ಕಷ್ಟಗಳ ಬಗ್ಗೆ ನಿರ್ದೇಶಕ ಆರ್ ಚಂದ್ರು ಮಾತನಾಡಿದ್ದಾರೆ. ಇಂಥಹಾ ಸಿನಿಮಾ ಒಂದನ್ನು ಮಾಡಲು ಕೇವಲ ಪ್ರತಿಭೆ ಇದ್ದರೆ ಸಾಲದು ನಿರ್ದೇಶಕನಿಗೆ ತಾಕತ್ ಇರಬೇಕು ಎಂದು ಆರ್ ಚಂದ್ರು ಹೇಳಿದ್ದಾರೆ.
'ಕಬ್ಜ' ಸಿನಿಮಾ ಮಾಡಲು 'ಕೆಜಿಎಫ್' ಸಿನಿಮಾವೇ ನನಗೆ ಪ್ರೇರಣೆ ಎಂದಿರುವ ಆರ್.ಚಂದ್ರು, ಮಾಧ್ಯಮಗಳೊಟ್ಟಿಗೆ ಮಾತನಾಡುತ್ತಾ, ''ಕೆಜಿಎಫ್' ಸಿನಿಮಾ ನೋಡಿ ಬಂದ ಮೇಲೆ ನನಗೆ ನಿದ್ದೆ ಬರಲಿಲ್ಲ. ಇಂಥಹಾ ಸಿನಿಮಾವನ್ನು ನಾನು ಮಾಡಿಲ್ಲವಲ್ಲ, ಇಂಥಹಾ ಸಿನಿಮಾವನ್ನು ನಾನೂ ಮಾಡಬೇಕಲ್ಲ ಎಂದು ಬಹಳ ಯೋಚಿಸಿದೆ. ಆ ನಂತರ ಆ ಸಿನಿಮಾವನ್ನು ಹಲವು ಬಾರಿ ನೋಡಿ ಅಭ್ಯಾಸ ಮಾಡಿದೆ. ಅದೊಂದು ಬಹಳ ಭಿನ್ನವಾದ ಸಿನಿಮಾ. ಅದರಲ್ಲಿ ಕಾಣುವುದು ಹಾಲಿವುಡ್ ಮಾದರಿ ಟಿಂಟ್, ಅದನ್ನು ನಾವು ಮಾಡಬೇಕೆಂದರೆ ಬಹಳ ಕಷ್ಟ'' ಎಂದಿದ್ದಾರೆ ಆರ್.ಚಂದ್ರು.

'ನಿರ್ದೇಶಕನಿಗೆ ತಾಕತ್ ಇದ್ದರಷ್ಟೆ ಇಂಥಹಾ ಸಿನಿಮಾ ಸಾಧ್ಯ'
''ನಾವು ಎಲ್ಲಿಯೋ ಹೋಗಿ ಹೇಗೋ ಶೂಟ್ ಮಾಡಿಬಿಟ್ಟ ಕೂಡಲೇ ಆ ಟಿಂಟ್ ಬರಲು, ಆ ಲುಕ್ ಬರಲು ಸಾಧ್ಯವಿಲ್ಲ. ಆ ರೀತಿಯ ಸಿನಿಮಾ ಮಾಡುವುದು ಅಷ್ಟು ಸುಲಭವಲ್ಲ. 'ಕಬ್ಜ' ಸಿನಿಮಾದ ಟ್ರೈಲರ್ ನೋಡಿ ಖುಷಿ ಪಟ್ಟಿರಬಹುದು ಆದರೆ ಅದರ ಹಿಂದೆ ನಾವೆಷ್ಟು ಶ್ರಮ ಪಟ್ಟಿದ್ದೇವೆಂದು ನಮಗೆ ಗೊತ್ತು. ಅಂಥಹಾ ಒಂದು ಸಿನಿಮಾ ಮಾಡಲು ನಿರ್ದೇಶಕನಿಗೆ ತಾಕತ್ ಬೇಕು, ಒಂದು ಒಳ್ಳೆಯ ಟೀಂ ಬೇಕು. ಅದೆಲ್ಲದರ ಜೊತೆಗೆ ಬಹಳ ದೊಡ್ಡ ಬಜೆಟ್ ಬೇಕು. ಇದೇ ಕಾರಣಕ್ಕೆ ನಾನು 'ಕೆಜಿಎಫ್' ತಂಡಕ್ಕೆ ನಾನು ಹ್ಯಾಟ್ಸ್ ಆಫ್ ಹೇಳುತ್ತೇನೆ. ನನಗೆ 'ಕಬ್ಜ' ಸಿನಿಮಾ ಮಾಡಲು 'ಕೆಜಿಎಫ್' ಸಿನಿಮಾವೇ ಸ್ಪೂರ್ತಿ'' ಎಂದಿದ್ದಾರೆ ಆರ್ ಚಂದ್ರು.

'ಕೆಜಿಎಫ್' ಸಿನಿಮಾ ನನಗೆ ಸ್ಪೂರ್ತಿ
''ಕೆಜಿಎಫ್' ಸಿನಿಮಾ ನನಗೆ ಸ್ಪೂರ್ತಿ ಆಗಿದ್ದರೂ ಸಹ ನಮ್ಮ ಸಿನಿಮಾ 'ಕೆಜಿಎಫ್' ಥರ ಇಲ್ಲ, ನಮ್ಮದು ಬೇರೆಯದ್ದೇ ಕತೆ. ಹಾಲಿವುಡ್ ರೀತಿ 'ಕೆಜಿಎಫ್' ಮಾಡಿದರು. ನಾವು 'ಕೆಜಿಎಫ್' ರೀತಿ ಮಾಡಿದ್ದೇವೆ. 'ಕೆಜಿಎಫ್' ಬಂದಮೇಲೆ ಯಾರೂ 'ಕೆಜಿಎಫ್' ರೀತಿ ಮಾಡೋಕಾಗಲ್ಲ ಎಂದರು ಆಗ ನಾನು ಪ್ರಯತ್ನ ಮಾಡೋಣ ಎಂದು ಮುಂದೆ ಬಂದೆ, ಆ ನಂತರ 'ಮಾರ್ಟಿನ್' ಸಿನಿಮಾದವರೂ ಹಾಗೆಯೇ ಮಾಡುತ್ತಿದ್ದಾರೆ. ಉಪೇಂದ್ರ ಅವರು 'ಯುಐ' ಮಾಡುತ್ತಿದ್ದಾರೆ. ಇದೆಲ್ಲ ನೋಡಿದರೆ ಖುಷಿಯಾಗುತ್ತದೆ. 'ಕೆಜಿಎಫ್' ಒಂದು ಬೆಂಚ್ ಮಾರ್ಕ್ ಸಿನಿಮಾ. ಅದರಿಂದ ಸ್ಪೂರ್ತಿ ಪಡೆದು ನಾವು ಸಿನಿಮಾ ಮಾಡುತ್ತಿದ್ದೇವೆ'' ಎಂದಿದ್ದಾರೆ ಆರ್.ಚಂದ್ರು.

ರವಿ ಬಸ್ರೂರು ಅನ್ನು ಹೊಗಳಿದ ಆರ್.ಚಂದ್ರು
ಸಂಗೀತ ನಿರ್ದೇಶಕ ರವಿ ಬಸ್ರೂರು ಅವರನ್ನು ಹೊಗಳಿದ ಆರ್.ಚಂದ್ರು, ''ನಾನು ಈ ವರೆಗೆ ನೋಡಿರುವ ಸಂಗೀತ ನಿರ್ದೇಶಕರಲ್ಲಿ ರವಿ ಬಸ್ರೂರು ನಂಬರ್ ಒನ್. ಅವರು ಟೆಕ್ನಿಕಲಿ ಬಹಳ ಗಟ್ಟಿಯಾಗಿದ್ದಾರೆ. ಪ್ರತಿ ಕ್ಷಣವೂ ತಮ್ಮನ್ನು ತಾವು ಅಪ್ಡೇಟ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಯಾವುದೇ ಹೊಸ ತಂತ್ರಜ್ಞಾನ ಬಂದರೂ ಅದರ ಬಗ್ಗೆ ತಿಳಿದುಕೊಳ್ಳುತ್ತಾರೆ ಬಳಸುತ್ತಾರೆ. ಹೊಸ ಪ್ಲಗ್ ಇನ್ಗಳನ್ನು ಬಳಸುತ್ತಾರೆ, ಲಂಡನ್ನಲ್ಲಿ ರೀ ರೆಕಾರ್ಡಿಂಗ್ ಮಾಡೋಣ ಎನ್ನುತ್ತಾರೆ. ನಮ್ಮ ಟ್ರೈಲರ್ ಬಗ್ಗೆ ನನಗೆ ಖುಷಿ ಇತ್ತು, ಅದೆ ರವಿ ಬಸ್ರೂರು ಅವರು ಟ್ರೈಲರ್ಗೆ ಮ್ಯೂಸಿಕ್ ಕೊಟ್ಟ ಬಳಿಕ ನನಗೆ ಇದು ನಮ್ಮದೇ ಸಿನಿಮಾ ಟ್ರೈಲರ್ರಾ ಎಂದು ಆಶ್ಚರ್ಯವಾಗಿಬಿಟ್ಟಿತು'' ಎಂದಿದ್ದಾರೆ ಆರ್ ಚಂದ್ರು.

ಬಿಡುಗಡೆ ಯಾವಾಗ?
ಆರ್.ಚಂದ್ರು ನಿರ್ದೇಶಿಸಿ ಉಪೇಂದ್ರ ನಟಿಸಿರುವ 'ಕಬ್ಜ' ಸಿನಿಮಾ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದ ದಿನದಂದು ಅಂದರೆ 17 ಮಾರ್ಚ್ಗೆ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಉಪೇಂದ್ರ ಜೊತೆಗೆ ಸುದೀಪ್ ಸಹ ನಟಿಸಲಿದ್ದಾರೆ. ಸಿನಿಮಾದಲ್ಲಿ ಶ್ರಿಯಾ ಶರನ್ ನಾಯಕಿ. ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಸಿನಿಮಾವು ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದ್ದು, ಈ ಸಿನಿಮಾವು ಕನ್ನಡ ಸೇರಿದಂತೆ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ತೆರೆಗೆ ಬರಲಿದೆ.


Click it and Unblock the Notifications











