ಡೆವಿಲ್ ಚಿತ್ರದ ನಾಯಕಿ ರಚನಾ ರೈ ಕನಸು ನುಚ್ಚು ನೂರು...!
ರಚನಾ ರೈ ಗೊತ್ತಲ್ಲವಾ..? ಮಂಗಳೂರಿನ ಮೀನು. ಪತ್ರಿಕೋದ್ಯಮದಲ್ಲಿ ಪದವಿ ಪಡೆದಿರುವ ರಚನಾ ಮಾಡೆಲ್ ಹಾಗೂ ಉತ್ತಮ ಭರತನಾಟ್ಯ ಕಲಾವಿದೆ ಕೂಡ ಹೌದು. ರೂಪೇಶ್ ಶೆಟ್ಟಿ ನಟನೆಯ ಸರ್ಕಸ್ ಎಂಬ ತುಳು ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕೋಸ್ಟಲ್ವುಡ್ನಲ್ಲಿ ಖಾತೆ ತೆರೆದ ರಚನಾ, ಧನ್ವೀರ್ ಗೌಡ ಅಭಿನಯದ ವಾಮನ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೂ ಬಂದರು. ಭುವನಂ ಗಗನಂ ಚಿತ್ರಕ್ಕೂ ನಾಯಕಿಯಾದರು.
ಆದರೆ.. ಅದೃಷ್ಟ- ದುರಾದೃಷ್ಟಗಳೆಲ್ಲಾ ಅವರವರ ನಂಬಿಕೆಗೆ ಬಿಟ್ಟಿದ್ದಾದರೂ ಇವೆರಡು ಸಿನಿಮಾ ಇಲ್ಲಿಯವರೆಗೆ ಬಿಡುಗಡೆಯಾಗಲಿಲ್ಲ. ಈ ಕಾರಣಕ್ಕೆ ಒಂದು ದೊಡ್ಡ ಚಿತ್ರ-ಅತ್ಯುತ್ತಮ ಪಾತ್ರ ಇವೆರಡನ್ನೂ ಎದುರು ನೋಡ್ತಿದ್ದ ರಚನಾಗೆ ಸುವರ್ಣ ಅವಕಾಶ ಸಿಕ್ಕಿತ್ತು. ಡೆವಿಲ್ ಚಿತ್ರದಲ್ಲಿ ದರ್ಶನ್ಗೆ ನಾಯಕಿಯಾಗುವ ಯೋಗಾಯೋಗ ಕೂಡ ಕೂಡಿ ಬಂದಿತ್ತು.

ಬಂದ ಈ ಅವಕಾಶದಿಂದ ಸಹಜವಾಗಿ ರಚನಾ ರೈ ಸಂಭ್ರಮದ ಅಲೆಯಲ್ಲಿದ್ದರು. ಡೆವಿಲ್ ಮೂಲಕ ಬದುಕು ಮತ್ತೊಂದು ಮಗ್ಗಲಿನತ್ತ ಹೊರಳುತ್ತೆ ಎಂಬ ಕನಸನ್ನೂ ಕಂಡಿದ್ದರು. ಆದರೆ ಕಂಡ ಎಲ್ಲ ಕನಸುಗಳು ನನಸಾದರೆ ಜೀವನಕ್ಕೆ ಅರ್ಥವೇ ಇರುವುದಿಲ್ಲ. ಯಾಕೆಂದರೆ ಇಲ್ಲಿ ಯಾವುದೂ ಪೂರ್ವನಿರ್ಧಾರಿತವಲ್ಲ. ಎಲ್ಲವೂ ಆಕಸ್ಮಿಕ. ಯಾರ ಬದುಕಲ್ಲಿ ಏನು ಬೇಕಾದರೂ ಘಟಿಸಬಹುದು. ಇದಕ್ಕೆ ಕೈಗನ್ನಡಿ ಎಂಬಂತೆ ದ್ವೀತಿಯ ಹಂತದ ಚಿತ್ರೀಕರಣ ಇನ್ನೇನು ಆರಂಭವಾಗಬೇಕು ಎನ್ನುವಷ್ಟರಲ್ಲಿ ರೇಣುಕಾ ಸ್ವಾಮಿಯ ಕೊಲೆ ಕೇಸಿನಲ್ಲಿ ಈ ಚಿತ್ರದ ಕಥಾನಾಯಕ ದರ್ಶನ್ ಜೈಲು ಪಾಲಾದ.
ಇನ್ನೂ ನಿಮಗೆ ಗೊತ್ತು .. ಕೇವಲ ಕರುನಾಡಿನಲ್ಲಿ ಅಷ್ಟೇ ಅಲ್ಲ, ಇಡೀ ಭಾರತದೆಲ್ಲೆಡೆ ಈ ಪ್ರಕರಣ ಚರ್ಚೆಗೀಡಾಗಿದೆ. ಎಲ್ಲರ ಕಣ್ಣಿಗ ನ್ಯಾಯಾಲಯದ ಮೇಲಿದೆ. ತೀರ್ಪಿನ ಕುರಿತು ಕುತೂಹಲ ಇದೆ. ಇನ್ನೂ ಹೇಗೆ ಕೂಡಿ ಕಳೆದರೂ ದರ್ಶನ್ ಹೊರಬರುವುದಕ್ಕೆ ಮೂರ್ನಾಲ್ಕು ತಿಂಗಳಾದರೂ ಬೇಕು ಎನ್ನುವ ಮಾತು ಕೇಳಿ ಬರುತ್ತಿದೆ. ಬಂದ ನಂತರವೂ ಸಹಜವಾಗಿಯೇ ಮನಸ್ಥಿತಿ ಹಾಳಾಗಿಯೇ ಇರುತ್ತೆ. ಇದೆಲ್ಲದರಿಂದ ಹೊರ ಬರಲು ಸಮಯ ಬೇಕೆ ಬೇಕು. ಯಾರಿಗೆ ಗೊತ್ತು.. ಚಿತ್ರ ನಿಂತು ಹೋದರೂ ಹೋಗಬಹುದು.

ಹೀಗಾಗಿ ವೃತ್ತಿ ಜೀವನಕ್ಕೆ ಡೆವಿಲ್ ಮೂಲಕ ವೃತ್ತಿ ಜೀವನಕ್ಕೆ ಕಿಕ್ ಸ್ಟಾರ್ಟ್ ಸಿಗುತ್ತೆ ಎಂದುಕೊಂಡಿದ್ದ ರಚನಾ ರೈಗೆ ಈಗ ನಿರಾಸೆಯಾಗಿಯೇ ಆಗಿರುತ್ತೆ. ಭಗ್ನವಾದ ಭ್ರಮೆಗಳು ಚೂರಾದ ಅನುಭವ ಆಗಿರುತ್ತೆ. ಡೆವಿಲ್ ಕನಸನ್ನ ಮರೆತು ರಚನಾ ರೈ ಬೇರೆ ಚಿತ್ರಗಳತ್ತ ಮುಖ ಮಾಡುವುದು ಉತ್ತಮ ಎನ್ನುವ ಅಭಿಪ್ರಾಯ ಕೂಡ ಇದೇ ಸಮಯದಲ್ಲಿ ಕೇಳಿ ಬರುತ್ತಿದೆ. ಕಂಡ ಎಲ್ಲ ಕನಸುಗಳು ನನಸಾದರೆ ಜೀವನಕ್ಕೆ ಅರ್ಥವೇ ಇರುವುದಿಲ್ಲ ಅನ್ನುವುದು ದೊಡ್ಡವರ ಮಾತು.ಗೊತ್ತಿಲ್ಲ ರಚನಾ ರೈ ಅವರ ತಲೆಯಲ್ಲಿ ಸದ್ಯಕ್ಕೆ ಈ ಮಾತು ಓಡುತ್ತಿರಬಹುದು. ದರ್ಶನ್ ಬಂಧನದ ಹಿನ್ನೆಲೆ ರಚನಾ ರೈ ಅವರ ಮನಸು ಕೂಡ ನೊಂದಿರಬಹುದು.


Click it and Unblock the Notifications











