ರಾಜಕೀಯ ಆಯಾಮ ಬೇಡ, ಜನಸಾಮಾನ್ಯರ ಕೈಗೆ ಒಪ್ಪಿಸಿ ಎಂದ ರಚಿತಾ ರಾಮ್ ; #JusticeForNeha ಎಂದ ರಿಷಬ್ ಶೆಟ್ಟಿ..!
ಇನ್ನೂ ಬಾಳಿ ಬದುಕಬೇಕಿದ್ದ, ಬದುಕಿನ ಬಗ್ಗೆ ಹತ್ತಾರು ಕನಸನ್ನ ಕಂಡಿದ್ದ ನೇಹಾ ಹಿರೇಮಠ್ ಹತ್ಯೆಯ ಸುದ್ದಿ ಮತ್ತು ದಿಗ್ಭ್ರಮೆಗೊಳಿಸುವ ವಿಡಿಯೋ ನೋಡಿ, ಕರುನಾಡು ಬೆಚ್ಚಿ ಬಿದ್ದಿದೆ. ಆಕ್ರೋಶದ ಅಲೆ ಎದ್ದಿದೆ. ನೇಹಾ ಅವರನ್ನ ಕೊಂದ ಫಯಾಜ್ ಗೆ ತಕ್ಕ ಶಿಕ್ಷೆಯಾಗಬೇಕು ಎಂಬ ಕೂಗು ಕರುನಾಡಿನೆಲ್ಲೆಡೆ ಕೇಳಿ ಬರುತ್ತಿದೆ. ಕೇವಲ ಜನ ಸಾಮಾನ್ಯರಷ್ಟೇ ಅಲ್ಲ, ಸ್ಯಾಂಡಲ್ ವುಡ್ನ ಅನೇಕ ತಾರೆಯರು ಈ ಧ್ವನಿಗೆ ಧ್ವನಿಗೂಡಿಸಿದ್ದಾರೆ. ಆರೋಪಿ ಫಯಾಜ್ಗೆ ಅತ್ಯುಗ್ರ ಶಿಕ್ಷೆ ನೀಡುವಂತೆ ಆಗ್ರಹಿಸುತ್ತಿದ್ದಾರೆ. ಈ ಸಾಲಿಗೀಗ ರಚಿತಾ ರಾಮ್ ಮತ್ತು ರಿಷಬ್ ಶೆಟ್ಟಿ ಕೂಡ ಸೇರಿಕೊಂಡಿದ್ದಾರೆ
ನೇಹಾ ಹತ್ಯೆಯನ್ನ ಖಂಡಿಸಿ, ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಕಿಡಿ ಕಾರಿರುವ ರಚಿತಾ ರಾಮ್, ಈ ರೀತಿಯ ಕೃತ್ಯ ಮಾಡುವವರನ್ನು ಗಲ್ಲಿಗೇರಿಸುವ ಬದಲು ಅವರನ್ನು ಜನಸಾಮಾನ್ಯರ ಕೈಗೆ ಒಪ್ಪಿಸಿ ಎಂದು ಒತ್ತಾಯಿಸಿದ್ದಾರೆ.ಜಾತಿ, ಧರ್ಮ ಯಾವುದೇ ಆಗಿರಲಿ. ಮೊದಲು ನಾವು ಮಾನವರು. ನಾನು ಈ ಪೋಸ್ಟ್ ಹಾಕಲು ಕಾರಣ ಆಕೆಗೆ ಆಗಿರುವ ಅನ್ಯಾಯ. ತಪ್ಪು ಯಾರೇ ಮಾಡಿದರು ತಪ್ಪೆ ಎಂದು ಕೆಂಡ ಕಾರಿದ್ದಾರೆ ರಚಿತಾ ರಾಮ್

ಇನ್ನೂ ನೇಹಾ ಹಿರೇಮಠ್ ಹತ್ಯೆಯ ಸುತ್ತ ಮುತ್ತ ನಡೆಯುತ್ತಿರುವ ರಾಜಕೀಯ ಘರ್ಷಣೆಯ ಬಗ್ಗೆ ಕೂಡ ಕಿಡಿ ಕಾರಿರುವ ರಚಿತಾ ರಾಮ್, ಸರ್ಕಾರಕ್ಕೆ ಮನವಿಯನ್ನ ಮಾಡಿದ್ದಾರೆ. ಸರ್ಕಾರಕ್ಕೆ ರಾಜಕೀಯ ಆಯಾಮದಲ್ಲಿ ಈ ವಿಷಯವನ್ನು ತರಬೇಡಿ. ಆಗಿರೋದು ಅನ್ಯಾಯ. ಈಗ ನ್ಯಾಯ ಬೇಕಾಗಿದೆ ಅಷ್ಟೆ. ಈ ರೀತಿಯ ಕೃತ್ಯ ಮಾಡುವವರನ್ನು ಗಲ್ಲಿಗೇರಿಸುವ ಬದಲು ಅವರನ್ನು ಜನಸಾಮಾನ್ಯರ ಕೈಗೆ ಒಪ್ಪಿಸಿ ಎಂದು ಒತ್ತಾಯಿಸಿದ್ದಾರೆ.
ಕೇವಲ ರಚಿತಾ ರಾಮ್ ಮಾತ್ರ ಅಲ್ಲ, ರಿಷಬ್ ಶೆಟ್ಟಿ ಕೂಡ ನೇಹಾ ಹಿರೇಮಠ್ ಗೆ ನ್ಯಾಯ ಸಿಗಬೇಕೆಂದು ಆಗ್ರಹಿಸಿದ್ದಾರೆ. ನೇಹಾ ಹಿರೇಮಠ್ ಅವರ ಘಟನೆ ಅಮಾನವೀಯವಾಗಿದೆ. ಇಂತಹ ಘಟನೆ ಮರುಕಳಿಸದಂತೆ ಕಾನೂನು ಕ್ರಮಗಳನ್ನು ತಪ್ಪಿತಸ್ಥರ ಮೇಲೆ ಕೈಗೊಳ್ಳಬೇಕೆಂದು ವಿನಂತಿಸುತ್ತೆನೆ. ನೇಹಾ ಅವರ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿ ದೇವರು ಕೊಡಲಿ ಎಂದು ಪ್ರಾರ್ಥಿಸುತ್ತೇನೆ' ಎಂದಿದ್ದಾರೆ ರಿಷಬ್ ಶೆಟ್ಟಿ

ಫಯಾಜ್ ತಾಯಿ ಹೇಳಿದ್ದೇನು..?
ನೇಹಾ ಹಿರೇಮಠ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಫಯಾಜ್ ತಾಯಿ ಮಮ್ತಾಜ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ನನ್ನ ಮಗ ಮಾಡಿದ ತಪ್ಪಿಗೆ ನಾನು ಕರ್ನಾಟಕದ ಸಮಸ್ತ ಜನತೆಗೆ ಮತ್ತು ನೇಹಾಳ ತಂದೆ, ತಾಯಿಗೂ ಕ್ಷಮೆಯಾಚಿಸುತ್ತೇನೆ. ನೇಹಾಳ ಪೋಷಕರಿಗೆ ಆದಷ್ಟೇ ನೋವು ನನಗೂ ಆಗಿದೆ ಎಂದಿದ್ದಾರೆ. ಅವಳೂ ನನ್ನ ಮಗಳು ಇದ್ದಹಾಗೆ. ನನ್ನ ಮಗ ಮಾಡಿದ್ದು ತಪ್ಪು. ಫಯಾಜ್ ಐಎಎಸ್ ಅಧಿಕಾರಿ ಆಗಬೇಕೆಂದು ನಾನು ಕನಸುಕಂಡಿದ್ದೆ, ಆದರೇ ಈ ರೀತಿ ಆಗಿದ್ದು ಬಹಳ ಸಂಕಟ ಆಗುತ್ತಿದೆ. ನೇಹಾ ಸಹ ತುಂಬಾ ಒಳ್ಳೆಯ ಹುಡುಗಿ. ಶಿಕ್ಷಕಿಯಾಗಿ ನೂರಾರು ಮಕ್ಕಳಿಗೆ ನಾನು ಶಿಕ್ಷಣ ಕೊಡ್ತೀನಿ. ಕಾನೂನಿನ ಪ್ರಕಾರ ಆತ ಮಾಡಿದ ತಪ್ಪಿಗೆ ಈ ನೆಲದ ಕಾನೂನಿನಂತೆ ಸರಿಯಾದ ಶಿಕ್ಷೆಯಾಗಲಿ" ಎಂದು ಮಾಧ್ಯಮಗಳ ಮುಂದೆ ದುಃಖ ಭರಿತರಾಗಿ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಕರಣದ ಹಿನ್ನೆಲೆ..!
ಹುಬ್ಬಳ್ಳಿ ಕಾರ್ಪೋರೇಟರ್ ನಿರಂಜನ ಹಿರೇಮಠ ಅವರ ಪುತ್ರಿ ನೇಹಾ ಹಿರೇಮಠ ಅವರನ್ನು ಕಾಲೇಜಿನ ಕ್ಯಾಂಪಸ್ನಲ್ಲಿ ಆರೋಪಿ ಫಯಾಜ್ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ. ಪರೀಕ್ಷೆಗೆಂದು ಕಾಲೇಜಿಗೆ ತೆರಳಿದ್ದ ನೇಹಾ ಮೇಲೆ ಆರೋಪಿ ಫಯಾಜ್ ಏಕಾಎಕಿ ದಾಳಿ ನಡೆಸಿ ಚಾಕುನಿಂದ ಇರೀದಿದ್ದ. ಗಂಭೀರವಾಗಿ ಗಾಯಗೊಂಡಿದ್ದ ನೇಹಾರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲೇ ಅವರು ಸಾವನ್ನಪ್ಪಿದ್ದರು. ಆರೋಪಿ ಫಯಾಜ್ನ ಈ ಕೃತ್ಯ ಕಾಲೇಜು ಆವರಣದಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಘಟನೆ ಬಳಿಕ ಅದೇ ದಿನ ಹುಬ್ಬಳ್ಳಿ - ಧಾರವಾಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.


Click it and Unblock the Notifications











