ನನ್ನ ಮೌನ ತಪ್ಪಾಗಿ ಬಳಕೆ ಆಗ್ತಿದೆ; ಕೆಟ್ಟ ಕಾಮೆಂಟ್ ಮಾಡುವವರ ವಿರುದ್ಧ ರಚಿತಾ ಬೇಸರ
ನಟ ಅಜಯ್ ರಾವ್ ನಟನೆಯ 'ಐ ಲವ್ ಯೂ ರಚ್ಚು' ಸಿನಿಮಾದ ಚಿತ್ರೀಕರಣ ವೇಳೆ ವಿದ್ಯುತ್ ತಂತಿ ತಗುಲಿ ಫೈಟರ್ ವಿವೇಕ್ ಮೃತಪಟ್ಟ ಘಟನೆ ಇಡೀ ಚಿತ್ರರಂಗವನ್ನು ಬೆಚ್ಚಿಬೀಳಿಸಿತ್ತು. ಈ ಸಂಬಂಧ ಈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ನಿರ್ಮಾಪಕ ಗುರುದೇಶಪಾಂಡೆ ಪರಾರಿಯಾಗಿದ್ದು, ಪೊಲೀಸರ ಕೈಗೆ ಸಿಕ್ಕಿಲ್ಲ.
ಚಿತ್ರದ ನಾಯಕ ಅಜಯ್ ರಾವ್, ಮೃತ ವಿವೇಕ್ ಕುಟುಂಬದ ಜೊತೆ ಮಾತನಾಡಿ ಧೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ. ಆದರೆ ನಟಿ ರಚಿತಾ ರಾಮ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ತನ್ನದೆ ಸಿನಿಮಾದ ಚಿತ್ರೀಕರಣ ಸೆಟ್ನಲ್ಲಿ ದುರಂತ ನಡೆದಿದ್ದರೂ ರಚಿತಾ ಆ ಬಗ್ಗೆ ಯಾವುದೇ ಮಾತನಾಡದೆ, ತನ್ನ ಫೋಟೋವನ್ನು ಶೇರ್ ಮಾಡಿ ಸಂಭ್ರಮಿಸಿದ್ದರು. ಇದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ರಚಿತಾ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದರು.
ನೆಟ್ಟಿಗರ ಆಕ್ರೋಶದ ಬಳಿಕ ವಿವೇಕ್ ಸಾವಿಗೆ ಸಂತಾಪ ಸೂಚಿಸಿ ರಚಿತಾ ಟ್ವೀಟ್ ಮಾಡಿದ್ದರು. ಆದರೂ ರಚಿತಾ ವಿರುದ್ಧ ಕೆಟ್ಟ ಕಾಮೆಂಟ್ ಮಾಡಿ ಆಕ್ರೋಶ ಹೊರಹಾಕುತ್ತಿದ್ದರು. ಅಲ್ಲದೆ ರಚಿತಾ ಚಿತ್ರೀಕರಣ ಸೆಟ್ನಲ್ಲಿ ಇದ್ದರೋ ಇಲ್ಲವೋ ಎನ್ನುವ ಬಗ್ಗೆಯೂ ಮಾಹಿತಿ ಬಹಿರಂಗವಾಗಲಿಲ್ಲ. ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಹಾಗಾಗಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿತ್ತು.

ಇದೀಗ ರಚಿತಾ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಟ್ರೋಲ್ ಮಾಡುತ್ತಿರುವವರಿಗೆ ಡಿಂಪಲ್ ಕ್ವೀಟ್ ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾದ ಪೋಸ್ಟ್ ಶೇರ್ ಮಾಡಿದ್ದಾರೆ. ತನ್ನ ಮೌನ ಬಳಕೆಯಾಗ್ತಿದೆ ಎಂದು ಹೇಳಿದ್ದಾರೆ. ಇನ್ನು ಆ ದುರ್ಘಟನೆ ನಡೆದಾಗ ತಾನು ಆ ಸೆಟ್ನಲ್ಲಿ ಇರ್ಲಿಲ್ಲ ಎನ್ನುವುದು ಸತ್ಯ ಎಂದು ರಚಿತಾ ಬಹಿರಂಗ ಪಡಿಸಿದ್ದಾರೆ.
ಈ ಬಗ್ಗೆ ರಚಿತಾ ಪೋಸ್ಟ್ ನಲ್ಲಿ, "ಎಲ್ಲರಿಗೂ ನಮಸ್ಕಾರ...ನೀವೆಲ್ಲರೂ ಕ್ಷೇಮವಾಗಿದ್ದೀರಿ ಅಂತ ನಂಬಿದ್ದೀನಿ. ದಯವಿಟ್ಟು ಎಲ್ಲರೂ ಹುಷಾರಾಗಿರಿ ಅಂತ ನಿಮ್ಮೆಲ್ಲರಲ್ಲಿ ನಾನು ರೆಕ್ವೆಸ್ಟ್ ಮಾಡ್ತೀನಿ. ಲವ್ ಯು ರಚ್ಚು ಸೆಟ್ನಲ್ಲಿ ಒಂದು ನಡೀಬಾರದ ಘಟನೆ ನಡೆದಾಗಿಂದ, ಆ ಆಘಾತ ನನ್ನನ್ನು ಸೈಲೆಂಟ್ ಆಗಿರುವ ಹಾಗೆ ಮಾಡಿತ್ತು. ನನ್ನ ಮೌನ ಕೆಲವರಿಗೆ ತಪ್ಪಾಗಿ ಅರ್ಥವಾಗಿದೆ. ತಪ್ಪಾಗಿ ಬಳಕೆ ಆಗ್ತಾ ಇದೆ. ಇದು ನನಗೆ ನಿಜಕ್ಕೂ ನೋವು ಕೊಟ್ಟಿದೆ" ಬೇಸರ ವ್ಯಕ್ತಪಡಿಸಿದ್ದಾರೆ.
"ಆ ದುರ್ಘಟನೆ ನಡೆದಾಗ ನಾನು ಆ ಸೆಟ್ನಲ್ಲಿ ಇರ್ಲಿಲ್ಲ ಅದಂತೂ ಸತ್ಯ. ಆಗಸ್ಟ್ 2ನೇ ತಾರಿಖಿನಿಂದ ನಾನು ಶಬರಿ ಸಿನಿಮಾ ಶೂಟಿಂಗ್ ಗೋಸ್ಕರ್ ಮೈಸೂರಿನಲ್ಲಿದ್ದೆ. ಆ ಘಟನೆ ನಡೆದಾಗ ನಾನು ಆ ಜಾಗದಲ್ಲಿ ಇರ್ಲಿಲ್ಲ. ಸತ್ಯವನ್ನು ಒಂದೇ ಒಂದು ಸಲ, ಒಂದೇ ಒಂದು ಸಲ ಪುನರ್ ಪರಿಶೀಲಿಸಿದ್ರೆ ನನ್ ಬಗ್ಗೆ ಕೆಟ್ಟ ಕಾಮೆಂಟ್ ನನ್ನ ಬಗ್ಗೆ ಕೆಟ್ಟ ಕಮೆಂಟ್ಗಳನ್ನು ಬರೆಯುವ, ನನ್ನ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುವ ಪ್ರಮೇಯ ಒದಗಿಬರುತ್ತಿರಲಿಲ್ಲ ಅನ್ಸುತ್ತೆ" ಎಂದಿದ್ದಾರೆ.
"ಆ ಜಾಗದಲ್ಲಿ ನಾನು ಇರಲಿ, ಇಲ್ಲದಿರಲಿ. ನಮ್ಮ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಯೊಬ್ಬರು ದುರ್ಘಟನೆಗೆ ಬಲಿಯಾಗಿದ್ದಾರೆ ಎನ್ನುವ ನೋವು ನನ್ನನ್ನು ಕಾಡ್ತಿದೆ. ಆ ಕುಟುಂಬಕ್ಕೆ ಆಗಿರುವ ನಷ್ಟಕ್ಕೆ ನನ್ನ ವಿಷಾದವಿದೆ. ಈ ದುಃಖವನ್ನು ಭರಿಸುವ ಶಕ್ತಿ ಆ ಕುಟುಂಬಕ್ಕೆ ಭಗವಂತ ನೀಡಲಿ ಅಂತ ನಾನು ಬೇಡಿಕೊಳ್ತೀನಿ. ನನ್ನ ಬೆಳೆಸಿರುವ ಜನ ನನ್ನ ಬಗ್ಗೆ, ನನ್ನ ಮಾತುಗಳ ಬಗ್ಗೆ ನಂಬುತ್ತಾರೆ ಅಂತ ನಂಬಿದ್ದೀನೆ. ಆರೋಪಗಳು ಏನೇ ಇದ್ರೂ, ಸರಿ-ತಪ್ಪುಗಳ ಲೆಕ್ಕ ಆ ಭಗವಂತನ ಬಳಿ ಇರುತ್ತೆ ಅಂತಾನೂ ನಂಬಿದ್ದೀನೆ" ಎಂದು ರಚಿತಾ ರಾಮ್ ಪೋಸ್ಟ್ ಮಾಡಿದ್ದಾರೆ.


Click it and Unblock the Notifications











