ನಿಜವಾದ ಕನ್ನಡ ಸಿನಿಮಾ ನೋಡಿ: 'ಪುಷ್ಪ'ಗೆ ರಚಿತಾ ರಾಮ್ ಟಾಂಗ್
ಕರ್ನಾಟಕದಲ್ಲಿ ತೆಲುಗು ಸಿನಿಮಾ 'ಪುಷ್ಪ'ದ ಅದ್ಧೂರಿ ಬಿಡುಗಡೆ ಕನ್ನಡ ಸಿನಿಮಾಗಳಿಗೆ ಸಮಸ್ಯೆ ತಂದೊಡ್ಡಿದೆ. ಅದರಲ್ಲಿಯೂ ಕೇವಲ ಹೆಸರಿಗಷ್ಟೆ ಒಂದೆರಡು ಚಿತ್ರಮಂದಿರದಲ್ಲಿ ಕನ್ನಡ ಡಬ್ಬಿಂಗ್ ಆವೃತ್ತಿ ಬಿಡುಗಡೆ ಮಾಡಿ ರಾಜ್ಯದಾದ್ಯಂತ ಮೂಲ ಭಾಷೆಯಲ್ಲಿಯೇ ಸಿನಿಮಾ ಬಿಡುಗಡೆ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಕನ್ನಡದ ಕೆಲವು ನಟ-ನಟಿಯರು ಸಹ 'ಪುಷ್ಪ' ಸಿನಿಮಾ ದೊಡ್ಡ ಮಟ್ಟದಲ್ಲಿ ಕರ್ನಾಟಕದಲ್ಲಿ ಬಿಡುಗಡೆ ಆಗಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. 'ಪುಷ್ಪ' ಬದಲಾಗಿ ತಮ್ಮ ಸಿನಿಮಾ ನೋಡಬೇಕೆಂದು ಮನವಿ ಮಾಡಿದ್ದಾರೆ.
ರಚಿತಾ ರಾಮ್, ಅಜಯ್ ರಾವ್ ನಟನೆಯ 'ಲವ್ ಯು ರಚ್ಚು' ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇಂದು ನಡೆಯಿತು. ಕಾರ್ಯಕ್ರಮದಲ್ಲಿ ಸಹ ಪರೋಕ್ಷವಾಗಿ ನಟಿ ರಚಿತಾ ರಾಮ್ 'ಪುಷ್ಪ' ಸಿನಿಮಾದ ವಿರುದ್ಧ ಅಸಮಾಧಾನ ಹೊರಹಾಕಿದರು.
'ಪುಷ್ಪ' ಸಿನಿಮಾದ ಹೆಸರು ಹೇಳದೆಯೇ ಗುಡುಗಿದ ನಟಿ ರಚಿತಾ ರಾಮ್, ''ಕನ್ನಡಿಗರಾದ ನಾವು ವಿಶಾಲ ಹೃದಯದವರು ಹಾಗಾಗಿ ಎಲ್ಲ ಭಾಷೆಯ ಸಿನಿಮಾಗಳನ್ನೂ ನಾವು ಒಳಗೆ ಬಿಟ್ಟುಕೊಳ್ಳುತ್ತೇವೆ. ಬೇರೆಯವರಿಗೆ ಅವರ ಭಾಷೆಯ ಮೇಲೆ ಎಷ್ಟು ಪ್ರೀತಿ ಇದೆಯೋ ಅದಕ್ಕಿಂತಲೂ ಹೆಚ್ಚಿನ ಪ್ರೀತಿ ನಮಗೆ ನಮ್ಮ ಭಾಷೆ ಮೇಲೆ ಇರುತ್ತೆ. ಹಾಗಾಗಿ ನಮ್ಮ ಭಾಷೆಯ ಸಿನಿಮಾವನ್ನು ನಾವು ಯಾವತ್ತೂ ಬಿಟ್ಟುಕೊಡಬಾರದು ' ಎಂದರು.
''ಕರ್ನಾಟಕದಲ್ಲಿಯೇ ಕನ್ನಡ ಸಿನಿಮಾಗಳಿಗೆ ನೆಲೆ ಇಲ್ಲದಂತೆ ಆಗಿದೆ. ಹೆಸರಿಗಷ್ಟೆ ಡಬ್ಬಿಂಗ್ ಎಂದು ಹೇಳಿಕೊಂಡು ಪರಭಾಷೆಯ ಸಿನಿಮಾಗಳು ನೂರಾರು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿವೆ. ಕನ್ನಡ ಸಿನಿಮಾಗಳಿಗೆ ಕರ್ನಾಟಕದಲ್ಲಿಯೇ ಚಿತ್ರಮಂದಿರಗಳು ಸಿಗುತ್ತಿಲ್ಲ. ಚಿತ್ರಮಂದಿರಗಳಿಗಾಗಿ ಕನ್ನಡ ಸಿನಿಮಾಗಳು ಭೂತಗನ್ನಡಿ ಹಾಕಿಕೊಂಡು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ'' ಎಂದರು ರಚಿತಾ ರಾಮ್.
''ನಮ್ಮದು ಅಚ್ಚ ಕನ್ನಡ ಸಿನಿಮಾ. ನಿಜವಾದ ಕನ್ನಡ ಸಿನಿಮಾಗಳನ್ನು ನೋಡಿ ಬೆಂಬಲಿಸಿ'' ಎಂದು ರಚಿತಾ ರಾಮ್ ಮನವಿ ಮಾಡಿದರು. ಆ ಮೂಲಕ ಡಬ್ಬಿಂಗ್ ಸಿನಿಮಾಗಳನ್ನು ತಿರಸ್ಕರಿಸಿರೆಂದು ಪರೋಕ್ಷವಾಗಿ 'ಪುಷ್ಪ' ಸಿನಿಮಾಕ್ಕೆ ಟಾಂಗ್ ನೀಡಿದರು ರಚಿತಾ ರಾಮ್.

ನಟಿ ಆದಿತಿ ಪ್ರಭುದೇವ ಸಹ 'ಪುಷ್ಪ' ಸಿನಿಮಾದ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ''ನನಗೂ ಕೂಡ ತುಂಬಾ ನೋವಿದೆ. ನಮ್ಮ ನಾಡಲ್ಲಿ ನಮ್ಮ ಸಿನಿಮಾಗಳನ್ನ ನಾವು ಬೇರೆ ಭಾಷೆ ಸಿನಿಮಾಗಳಿಗಾಗಿ ತ್ಯಾಗ ಮಾಡಬೇಕಾಗಿದೆ. ಎನ್ನುವುದು ಬಹಳ ನೋವು ಉಂಟು ಮಾಡುತ್ತದೆ. ದೊಡ್ಡ ದೊಡ್ಡ ನಿರ್ದೇಶಕರು ಕೂಡ ಈ ಬಗ್ಗೆ ಮಾತನಾಡಿದ್ದರು, ಇದು ಹೀಗೆ ಮುಂದುವರೆದರೆ ಎಲ್ಲಿಗೆ ಬಂದು ನಿಲ್ಲುತ್ತೇವೆ ಗೊತ್ತಿಲ್ಲ" ಎಂದು ನಟಿ ಅದಿತಿ ಪ್ರಭುದೇವ ಹೇಳಿದ್ದಾರೆ. ಆದಿತಿ ಪ್ರಭುದೇವ ನಟನೆಯ 'ಆನಾ' ಸಿನಿಮಾ 'ಪುಷ್ಪ' ಸಿನಿಮಾ ಬಿಡುಗಡೆ ಆಗಿರುವ ಇದೇ ದಿನ ಬಿಡುಗಡೆ ಆಗಿದೆ.
'ಪುಷ್ಪ' ಸಿನಿಮಾದ ಕನ್ನಡ ಡಬ್ಬಿಂಗ್ ಆವೃತ್ತಿ ಕೇವಲ ಎರಡು ಚಿತ್ರಮಂದಿರಗಳಲ್ಲಿ ಮಾತ್ರವೇ ಬಿಡುಗಡೆ ಆಗಿತ್ತು. ಅದರಲ್ಲಿಯೂ ಒಂದು ಚಿತ್ರಮಂದಿರದಲ್ಲಿ ಶೋ ರದ್ದಾಯಿತು. ಆದರೆ ತೆಲುಗು ಆವೃತ್ತಿ ಮಾತ್ರ ಬೆಂಗಳೂರು ಒಂದರಲ್ಲಿಯೇ ಮೊದಲ ದಿನ ಸುಮಾರು 800 ಶೋ ಪ್ರದರ್ಶನ ಕಂಡಿದೆ. ಇದೇ ದಿನ ಬಿಡುಗಡೆ ಆದ ಕನ್ನಡದ 'ಆನಾ' ಸಿನಿಮಾ ಪ್ರೇಕ್ಷಕರ ಕೊರತೆಯಿಂದ ಸಂಕಷ್ಟ ಅನುಭವಿಸಿದೆ.
ಇನ್ನು ನಟಿ ರಚಿತಾ ರಾಮ್ ನಟಿಸಿರುವ 'ಲವ್ ಯು ರಚ್ಚು' ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದ್ದು, ಸಿನಿಮಾವು ಮರ್ಡರ್ ಮಿಸ್ಟರಿ ಕತೆಯನ್ನು ಹೊಂದಿದೆ. ಸಿನಿಮಾದ ಟ್ರೈಲರ್ ಅನ್ನು ಧ್ರುವ ಸರ್ಜಾ ಬಿಡುಗಡೆ ಮಾಡಿದ್ದಾರೆ. ಸಿನಿಮಾದಲ್ಲಿ ಅಜಯ್ ರಾವ್ ನಾಯಕ ನಟನಾಗಿ ನಟಿಸಿದ್ದು, ಶಂಕರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಗುರು ದೇಶಪಾಂಡೆ.


Click it and Unblock the Notifications











