ನಮಗೆ ಮೋಸ ಆಗಿದೆ, ನಾವು ಯಾರಿಗೂ ಮೋಸ ಮಾಡಿಲ್ಲ: ರಾಧಿಕಾ ಕುಮಾರಸ್ವಾಮಿ
ನಟಿ ರಾಧಿಕಾ ಕುಮಾರಸ್ವಾಮಿ ಹೆಸರು, ವಂಚನೆ ಪ್ರಕರಣ ಆರೋಪಿ ಸ್ವಾಮಿ ಅಲಿಯಾಸ್ ಯುವರಾಜ್ ಜೊತೆಗೆ ಥಳುಕು ಹಾಕಿಕೊಂಡಿದೆ.
ಆರ್ಎಸ್ಎಸ್ ಮುಖಂಡ ಎಂದು ಹೇಳಿಕೊಂಡು ಬಿಜೆಪಿಯ ದೊಡ್ಡ-ದೊಡ್ಡ ಮುಖಂಡರಿಗೆ ಕೋಟ್ಯಂತರ ರೂಪಾಯಿ ಹಣ ವಂಚಿಸಿದ್ದ ಸ್ವಾಮಿ ಅಲಿಯಾಸ್ ಯುವರಾಜ್ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು ಪ್ರಕರಣದ ತನಿಖೆ ವೇಳೆ ಸ್ವಾಮಿ ಖಾತೆಯಿಂದ ರಾಧಿಕಾ ಕುಮಾರಸ್ವಾಮಿ ಹಾಗೂ ಅವರ ಸಹೋದರ ನ ಖಾತೆಗೆ ಹಣ ವರ್ಗಾವಣೆ ಆಗಿರುವುದು ಬಹಿರಂಗವಾಗಿದೆ.
ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಸಹೋದರ ರವಿರಾಜ್ ಜೊತೆಗೆ ಸುದ್ದಿಗೋಷ್ಠಿ ನಡೆಸಿದ ರಾಧಿಕಾ ಕುಮಾರಸ್ವಾಮಿ ಸ್ವಾಮಿ ಹಾಗೂ ತಮ್ಮ ಪರಿಚಯ ಹಾಗೂ ತಮ್ಮ ಮೇಲೆ ಎದ್ದಿರುವ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಖಾತೆಗೆ 15 ಲಕ್ಷ ಹಣ ಬಂದಿದೆ ಅಷ್ಟೆ: ರಾಧಿಕಾ
'ಸಿನಿಮಾ ಮಾಡುವುದಾಗಿ ಸ್ವಾಮಿ ನಮ್ಮ ಬಳಿಗೆ ಬಂದಿದ್ದು, ಅವರ ಮಗಳ ಹೆಸರಿನಲ್ಲಿಯೇ ಬ್ಯಾನರ್ ಇತ್ತು. ಹಾಗಾಗಿ ನಾನು ಸಿನಿಮಾ ಮಾಡಲು ಒಪ್ಪಿಕೊಂಡೆ. ಅಡ್ವಾನ್ಸ್ ರೂಪದಲ್ಲಿ ಸ್ವಾಮಿಯು ತನ್ನ ಖಾತೆಯಿಂದ 15 ಲಕ್ಷ ಹಣವನ್ನು ಬೇರೆ ಖಾತೆಯಿಂದ 60 ಲಕ್ಷ ಹಣವನ್ನು ನನ್ನ ಖಾತೆಗೆ ವರ್ಗಾವಣೆ ಮಾಡಿದ್ದಾರೆ' ಎಂದು ಹೇಳಿದರು.

ಸ್ವಾಮಿಯ ಬಗ್ಗೆ ನಮಗೆ ಮಾಹಿತಿ ಇರಲಿಲ್ಲ: ರಾಧಿಕಾ
ಸ್ವಾಮಿಯ ಇತರೆ ಯಾವುದೇ ಕಾರ್ಯಗಳ ಬಗ್ಗೆ ನನಗೆ ಮಾಹಿತಿ ಇರಲಿಲ್ಲ. ಆತನ ಬಂಧನವಾದಾಗಲೇ ಆತನ ನಿಜ ರೂಪ ನನಗೆ ಗೊತ್ತಾಗಿದ್ದು. ಆತ ವಾಟ್ಸ್ಆಪ್ಗಳಲ್ಲಿ ದೊಡ್ಡ-ದೊಡ್ಡ ವ್ಯಕ್ತಿಗಳೊಂದಿಗೆ ಚಿತ್ರಗಳನ್ನು ಹಾಕಿಕೊಳ್ಳುತ್ತಿದ್ದರು. ಅವರು ಜೋತಿಷಿ ಆಗಿದ್ದ ಕಾರಣ ಹಲವು ವರ್ಷಗಳಿಂದ ಅವರ ಪರಿಚಯ ನನಗೆ ಇತ್ತು ಎಂದರು ರಾಧಿಕಾ.

ನಮಗೆ ಮೋಸ ಆಗಿದೆ, ನಾವು ಮೋಸ ಮಾಡಿಲ್ಲ: ರಾಧಿಕಾ
ನಾವು ಯಾರಿಗೂ ಮೋಸ ಮಾಡುವಂತಾ ಕಾರ್ಯವನ್ನು ಈವರೆಗೆ ಮಾಡಿಲ್ಲ. ಇನ್ನೂ ನಮಗೇ ಜೀವನದಲ್ಲಿ ಮೋಸ ಆಗಿದೆಯೇ ಹೊರತು ನಾವು ಈ ವರೆಗೆ ಯಾರಿಗೂ ಮೋಸ ಮಾಡಿಲ್ಲ. ರಾಜಕೀಯ ಉದ್ದೇಶದಿಂದ ಆತನಿಂದ ಹಣವನ್ನು ನಾವು ಪಡೆದಿಲ್ಲ, ನಾವು ಸಹ ಆತನಿಗೆ ಹಣ ನೀಡಿಲ್ಲ ಎಂದಿದ್ದಾರೆ ರಾಧಿಕಾ ಕುಮಾರಸ್ವಾಮಿ.
ನಮಗೂ ಎಂಜಿನಿಯರಿಂಗ್ ಕಾಲೇಜಿಗೂ ಸಂಬಂಧವಿಲ್ಲ: ರಾಧಿಕಾ
ಎಂಜಿನಿಯರಿಂಗ್ ಕಾಲೇಜೊಂದಕ್ಕೆ ಹಣ ವರ್ಗಾವಣೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರಾಧಿಕಾ ಕುಮಾರಸ್ವಾಮಿ. ದುರ್ಗಾಪರಮೇಶ್ವರಿ ಎಂಜಿನಿಯರಿಂಗ್ ಕಾಲೇಜಿಗೂ ನಮಗೂ ಯಾವುದೇ ಸಂಬಂಧವಿಲ್ಲ. ನಮ ಒಡೆತನದಲ್ಲಿ ಯಾವ ಕಾಲೇಜುಗಳು ಸಹ ಇಲ್ಲ. ಸ್ವಾಮಿಗೂ ನಮಗೂ ರಾಜಕೀಯವಾದ ಅಥವಾ ಬೇರೆ ಹಣಕಾಸು ಸಂಬಂಧ ಏನೂ ಇಲ್ಲ ಎಂದು ಪದೇ-ಪದೇ ಹೇಳಿದರು ರಾಧಿಕಾ ಕುಮಾರಸ್ವಾಮಿ.


Click it and Unblock the Notifications











