ಅಪ್ಪು ಅಗಲಿ ವರ್ಷ: ಪರಮಾತ್ಮನನ್ನು ಸೆಲೆಬ್ರಿಟಿಗಳು ನೆನಪಿಸಿಕೊಂಡಿದ್ದು ಹೀಗೆ
ಪುನೀತ್ ರಾಜ್ಕುಮಾರ್ ನಮ್ಮನ್ನಗಲಿ ಒಂದು ವರ್ಷವಾಗಿದೆ. ಈ ಒಂದು ವರ್ಷ ಕಣ್ಣೀರಿನಲ್ಲೇ ಕಳೆದಿದ್ದಾರೆ ಅಪ್ಪು ಅಭಿಮಾನಿಗಳು, ಅವರ ಸ್ನೇಹಿತರು, ಕುಟುಂಬದವರು.
ಇಂದು ಅಪ್ಪುವಿನ ಪುಣ್ಯಸ್ಮರಣೆ, ರಾಜ್ಯದಾದ್ಯಂತ ಹಲವು ಅಭಿಮಾನಿ ಸಂಘಗಳು ಅಪ್ಪು ನೆನಪಿನಲ್ಲಿ ಅನ್ನ ಸಂತರ್ಪಣೆ, ರಕ್ತದಾನ ಶಿಬಿರ ಇನ್ನೂ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕುಟುಂಬದವರು ಸಹ ಬೆಳಿಗ್ಗೆಯೇ ಅಪ್ಪು ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಅಪ್ಪುವಿನ ಚಿತ್ರರಂಗದ ಗೆಳೆಯರು, ಹಿತೈಷಿಗಳು ಸಹ ಇಂದು ತಮ್ಮ ಸಹೋದ್ಯೋಗಿಯನ್ನು, ಮಿತ್ರನನ್ನು ಪರಿ-ಪರಿಯಾಗಿ ನೆನಪು ಮಾಡಿಕೊಂಡಿದ್ದಾರೆ. ಯಾವ-ಯಾವ ಸೆಲೆಬ್ರಿಟಿಗಳು ರಾಜಕಾರಣಿಗಳು ಅಪ್ಪುವನ್ನು ಹೇಗೆ ನೆನಪು ಮಾಡಿಕೊಂಡಿದ್ದಾರೆ? ಬನ್ನಿ ನೋಡೋಣ.

ರಾಘಣ್ಣ ನೆನಪಿಸಿಕೊಂಡಿದ್ದು ಹೀಗೆ
ಪುನೀತ್ ರಾಜ್ಕುಮಾರ್ ಅವರ ಅಣ್ಣ ರಾಘವೇಂದ್ರ ರಾಜ್ಕುಮಾರ್ ಫೇಸ್ಬುಕ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ''29 ಅಕ್ಟೋಬರ್, ಕಂದ ನೀನು ಎಂದೆಂದಿಗೂ ಅಜರಾಮರ. ಜೀವನದಲ್ಲಿ ನಮ್ಮ ಗುರಿಯ ಕಡೆಗೆ ಪಯಣ ನಡೆಸೋಣ. ಗುರಿಹೊಂದಿ ಅದರ ಈಡೇರಿಕೆಗೆ ದುಡಿಯೋಣ'' ಎಂದು ಸ್ಪುರ್ತಿ ತುಂಬಿದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ 'ಗಂಧದ ಗುಡಿ' ಸಿನಿಮಾದ ಬಗ್ಗೆಯೂ ಪೋಸ್ಟ್ ಹಂಚಿಕೊಂಡಿದ್ದಾರೆ. ಕುಟುಂಬದ ಹಲವರು ಅಪ್ಪುವನ್ನು ನೆನಪಿಸಿಕೊಂಡಿದ್ದಾರೆ.

ದರ್ಶನ್ ನೆನಪಿಸಿಕೊಂಡಿದ್ದು ಹೀಗೆ
'ಕನ್ನಡಿಗರ ಮನದಾಳದಲ್ಲಿ ಪುನೀತ್ ರಾಜ್ ಕುಮಾರ್ ರವರು ಸದಾ ಜೀವಂತ. ದೈಹಿಕವಾಗಿ ನಮ್ಮನ್ನು ಅಗಲಿ ಒಂದು ವರ್ಷ ಕಳೆದರೂ, ತಮ್ಮ ಚಿತ್ರಗಳು ಹಾಗೂ ಕೆಲಸ ಕಾರ್ಯಗಳಿಂದ ಸದಾ ನಮ್ಮೊಡನೆ ಇದ್ದಾರೆ ಎಂಬ ಭಾವನೆ ಎಲ್ಲರಲ್ಲಿಯೂ ಇದೆ'' ಎಂದು ಟ್ವೀಟ್ ಮಾಡಿದ್ದಾರೆ ನಟ ದರ್ಶನ್, ನಿನ್ನೆ ಬಿಡುಗಡೆ ಆದ 'ಗಂಧದ ಗುಡಿ' ಸಿನಿಮಾದ ಬಗ್ಗೆಯೂ ದರ್ಶನ್ ಟ್ವೀಟ್ ಮಾಡಿ ಚಿತ್ರತಂಡಕ್ಕ ಶುಭ ಹಾರೈಸಿದ್ದರು.

ಪುನೀತ್ಗೆ ಎಂದಿಗೂ ಸಾವಿಲ್ಲ: ಅಪ್ಪು
ಪುನೀತ್ ರಾಜ್ಕುಮಾರ್ ಅವರ ಆತ್ಮೀಯ ಗೆಳೆಯ, ನಿರ್ದೇಶಕ ಸಂತೋಶ್ ಆನಂದ್ರಾಮ್ ಟ್ವೀಟ್ ಮಾಡಿದ್ದು, ''ನಿಮ್ಮನ್ನು ನಾವು ಮರೆತ ದಿನ ನೀವು ನಮ್ಮನ್ನು ಅಗಲಿದ ದಿನವಾಗುವುದು..ಆ ಲೆಕ್ಕದಲ್ಲಿ ನೀವು ಚಿರಾಯು. ಈ ದಿನ ನಿಮ್ಮನ್ನು ಬಿತ್ತಿದ ದಿನ! ಕೊನೆಯೇ ಇಲ್ಲ ಕಲೆಗೆ, ಸಾವಿಲ್ಲ ಸಾಧನೆಗೆ ನೀವು ಜೀವಿಸುವಿರಿ ನಮ್ಮೊಳಗೆ ಇನ್ನು, ನಿಮ್ಮನ್ನು ಪಡೆದ ನಾವೇ ಪುನೀತ'' ಎಂದಿದ್ದಾರೆ. ಪುನೀತ್ಗೆ ಎಂದಿಗೂ ಸಾವಿಲ್ಲ ಎಂದು ಸಹ ಸಂತೋಶ್ ಹೇಳಿದ್ದಾರೆ.

ಅಪ್ಪು ಅಭಿಮಾನಿ ರಿಷಬ್ ಶೆಟ್ಟಿ
''ಕರ್ನಾಟಕದ ಕಂದನಾಗಿ ಬೆಳೆದ ಅಪ್ಪು ಎಂಬ ಮುಗ್ಧ ಮಗು, ಮುಂದೊಂದು ದಿನ ನಮ್ಮೆಲ್ಲರ ಮನೆ, ಮನಗಳನ್ನು ರಾರಾಜಿಸುವ ಪವರ್ ಸ್ಟಾರ್ ಆಗಿ ಬೆಳೆದ ಶಿಖರದೆತ್ತರದ ಜೀವ. ವ್ಯಕ್ತಿಗಿಂತ ದೊಡ್ಡದು ವ್ಯಕ್ತಿತ್ವ ಎಂದು ತೋರಿಸಿದ ವಿಶ್ವಮಾನವ. ನಟನೆ, ನೃತ್ಯ, ನಿರ್ಮಾಣ ಇದನ್ನೆಲ್ಲ ಮೀರಿ ತನ್ನ ನಗುವಿನಿಂದ, ಮಾನವೀಯತೆಯಿಂದ ಮೆರೆದ ಶಕ್ತಿ. ಪ್ರಕೃತಿಗಳ ವಿಸ್ಮಯಗಳನ್ನು ಸೆರೆ ಹಿಡಿದು ಪರಿಸರ ಧ್ವಜವನ್ನು ಗಂಧದ ಗುಡಿಯಲ್ಲಿ ಎತ್ತಿ ಹಿಡಿದಿರುವ ಈ ಕೃತಿಯನ್ನು ನಾವೆಲ್ಲರೂ ಚಲನಚಿತ್ರಮಂದಿರಗಳಲ್ಲಿ ನೋಡಿ ಆನಂದಿಸೋಣ'' ಎಂದು ಟ್ವೀಟ್ ಮಾಡಿದ್ದಾರೆ ನಟ, ನಿರ್ದೇಶಕ ರಿಷಬ್ ಶೆಟ್ಟಿ. ತಮ್ಮನ್ನು ತಾವು ಅಪ್ಪು ಅಭಿಮಾನಿ ಎಂದು ಕರೆದುಕೊಂಡಿದ್ದಾರೆ.

ಹಲವರು ನೆನಪಿಸಿಕೊಂಡಿದ್ದಾರೆ
ಇವರಿಷ್ಟೆ ಅಲ್ಲ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಅಪ್ಪು ಅವರನ್ನು ಇಂದು ನೆನಪಿಸಿಕೊಂಡಿದ್ದಾರೆ. ಹಿರಿಯ ನಟ ಜಗ್ಗೇಶ್, ಆಪ್ತವಾದ ಬರಹವೊಂದನ್ನು ಅಪ್ಪು ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ರಾಜಕಾರಣಿಗಳು ಸಹ ಈ ದಿನ ಅಪ್ಪುವನ್ನು ನೆನಪಿಸಿಕೊಂಡಿದ್ದಾರೆ. ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಸಹ ಕನ್ನಡದಲ್ಲಿಯೇ ಟ್ವೀಟ್ ಮಾಡಿ ಅಪ್ಪು ಸ್ಮರಣೆ ಮಾಡಿದ್ದಾರೆ. ಕೋಟಿ-ಕೋಟಿ ಅಭಿಮಾನಿಗಳು ಅಪ್ಪುವನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ.


Click it and Unblock the Notifications











