ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿ ಮಹತ್ವದ ಮಾಹಿತಿ ಹಂಚಿಕೊಂಡ ರಾಘವೇಂದ್ರ ರಾಜ್ಕುಮಾರ್
ನಟ ಪುನೀತ್ ರಾಜ್ಕುಮಾರ್ ಅಗಲಿ ಇಂದಿಗೆ ಎರಡು ತಿಂಗಳು. ಇಂದು ಅಪ್ಪು ಕುಟುಂಬದವರು ಕಂಠೀರವ ಸ್ಟುಡಿಯೋದ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ರಾಘವೇಂದ್ರ ರಾಜ್ಕುಮಾರ್ ಹಾಗೂ ಕುಟುಂಬದವರು ಅಪ್ಪು ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ರಾಘವೇಂದ್ರ ರಾಜ್ಕುಮಾರ್ ಹಾಗೂ ನಾರಾಯಣ ನೇತ್ರಾಲಯದ ಹಿರಿಯ ನೇತ್ರತಜ್ಞ ಭುಜಂಗ ಶೆಟ್ಟಿ ಅವರು ನೇತ್ರದಾನದ ಸಹಾಯವಾಣಿಯನ್ನು ಲೋಕಾರ್ಪಣೆಗೊಳಿಸಿದರು.
ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ರಾಘವೇಂದ್ರ ರಾಜ್ಕುಮಾರ್, ''ಇಂದು ಅಪ್ಪು ಬಿಟ್ಟು ಹೋದ ಎರಡು ಕಣ್ಣುಗಳಿಂದ ನಾಲ್ಕು ಜನ ಪ್ರಪಂಚ ನೋಡುತ್ತಿದ್ದಾರೆ ಎಂಬುದು ನೆನಪಿಸಿಕೊಳ್ಳಲು ಎಷ್ಟು ಸಂತೋಷವಾಗುತ್ತದೆ. ಹಾಗೆಯೇ ಅಪ್ಪು ಹಾಕಿಕೊಟ್ಟಿರುವ ಈ ಹಾದಿಯಲ್ಲಿ ನಾವು ಸಾಗಬೇಕು ಜಗತ್ತಿನಿಂದ ಅಂಧತ್ವ ನಿವಾರಣೆ ಮಾಡಬೇಕು'' ಎಂದರು.

''ಅಪ್ಪು ತೀರಿ ಹೋದ ಮೇಲೆ ಕಣ್ಣು ದಾನ ಮಾಡುವವರ ಸಂಖ್ಯೆ ತೀವ್ರ ಗತಿಯಲ್ಲಿ ಹೆಚ್ಚಳವಾಗಿದೆ. ಅಷ್ಟೇ ಅಲ್ಲ ಕಣ್ಣು ದಾನ ಮಾಡಿದವರು ತೀರಿ ಹೊದಾಗ ಕರೆ ಮಾಡಿ ಕಣ್ಣು ಸಂಗ್ರಹಿಸಲು ಹೇಳುವಷ್ಟು ಜಾಗೃತಿ ಮೂಡಿದೆ. ಈ ರೀತಿಯ ಒಂದು ನೇತ್ರದಾನ ಕ್ರಾಂತಿ ಇಡೀಯ ರಾಷ್ಟ್ರದಲ್ಲಿ, ವಿಶ್ವದಲ್ಲಿ ಎಲ್ಲಿಯೂ ಆಗಿಲ್ಲ. ಆಗಿರುವುದು ಕರ್ನಾಟಕದಲ್ಲಿ ಮಾತ್ರವೇ. ಇದು ನಮ್ಮೆಲ್ಲರ ಹೆಮ್ಮೆ. ನಾವು ಅಂಧತ್ವವನ್ನು ತೊಲಗಿಸಬೇಕು. ಅದು ಅಪ್ಪು ಹಾಗೂ ನಮ್ಮ ತಂದೆಯವರಿಗೆ ಗೌರವ ನೀಡುವ ಸರಿಯಾದ ಕ್ರಮ'' ಎಂದರು ರಾಘವೇಂದ್ರ ರಾಜ್ಕುಮಾರ್.
'' 8884018800 ಸಂಖ್ಯೆಗೆ ಮಿಸ್ ಕಾಲ್ ಕೊಟ್ಟರೆ ನೇತ್ರದಾನ ಮಾಡುವ ಫಾರಂ ಸಿಗುತ್ತದೆ ಅದನ್ನು ಅಲ್ಲಿಯೇ ತುಂಬಿ ಸಲ್ಲಿಸಬಹುದು. ನೇತ್ರದಾನ ಮಾಡಿದ್ದಕ್ಕೆ ನಿಮಗೆ ಸರ್ಟಿಫಿಕೇಟ್ ಸಹ ಸಿಗುತ್ತದೆ. ಕೇವಲ ನೇತ್ರದಾನ ಮಾಡಿ ಸುಮ್ಮನಾಗುವಂತಿಲ್ಲ. ಕಾಲವಾದಾಗ ಕಣ್ಣು ದಾನ ಕಡ್ಡಾಯವಾಗಿ ಮಾಡುವಂತೆ ಸುತ್ತಲಿನವರಿಗೆ ಹೇಳಿಟ್ಟಿರಬೇಕು. ನಾನು ನನ್ನ ನೇತ್ರದಾನದ ಸರ್ಟಿಫಿಕೇಟ್ ಅನ್ನು ಫ್ರೇಮ್ ಹಾಕಿಸಿ ಮನೆಯಲ್ಲಿಟ್ಟಿದ್ದೀನಿ. ನಮ್ಮವರಿಗೆ ಸದಾ ಗೊತ್ತಾಗುತ್ತಿರಬೇಕು 'ಆ ದಿನ' ಬಂದಾಗ ನೇತ್ರದಾನದ ಪ್ರಕ್ರಿಯೆ ಪೂರ್ಣ ಮಾಡಬೇಕು ಎಂದು. ಅಪ್ಪಾಜಿ ಹುಟ್ಟುಹಬ್ಬದ ಸಂದರ್ಭದಲ್ಲಿ ನಾನು ಮತ್ತು ನನ್ನ ಅಣ್ಣ ದೇಹದಾನ ಮಾಡಿದ್ದೇವೆ'' ಎಂದರು ರಾಘಣ್ಣ.
''ಇಂಥಹಾ ಕಾರ್ಯಕ್ರಮಗಳ ಉದ್ಘಾಟನೆ ಮಾಡಿ ನಾವು ಹೆಸರು ಮಾಡಿಕೊಂಡು ಬಿಡುತ್ತೇವೆ. ಆದರೆ ಇದರ ಹಿಂದೆ ನಿಜವಾಗಿಯೂ ಇರುವುದು ವೈದ್ಯರು. ಈ ನೇತ್ರದಾನದ ಕೆಲಸ ಅವರದ್ದು, ಕೊರೊನಾ ಸಮಯದಲ್ಲಿ ಎಲ್ಲರೂ ಆಸ್ಪತ್ರೆಗಳಿಗೆ ಬಂದು, ಕೇಂದ್ರಗಳಿಗೆ ಬಂದು ನೇತ್ರದಾನ ಮಾಡಲು ಆಗುವುದಿಲ್ಲ. ಹಾಗಾಗಿ ಕುಳಿತ ಜಾಗದಿಂದಲೇ ನೇತ್ರದಾನ ಮಾಡಲು ಅನುಕೂಲ ಆಗಲೆಂದು ವೈದ್ಯರ ತಂಡ ಹೀಗೊಂದು ಪ್ರಯತ್ನ ಮಾಡಿದೆ. ಇದರ ಉಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು, ಆನ್ಲೈನ್ ಮೂಲಕ ನೇತ್ರದಾನಕ್ಕೆ ನೊಂದಣಿ ಮಾಡಿಕೊಳ್ಳಬೇಕು, ಅಂತಿಮ ದಿನದಂದು ಕಡ್ಡಾಯವಾಗಿ ನೇತ್ರದಾನ ಮಾಡುವಂತೆ ಹತ್ತಿರದವರಿಗೆ ಸೂಚನೆ ನೀಡಬೇಕು, ಆ ಮೂಲಕ ಕರ್ನಾಟಕದ ಜನರಿಂದ ಇಡೀಯ ದೇಶದಿಂದಲೇ ಅಂಧತ್ವ ದೂರವಾಗಬೇಕು'' ಎಂದರು ರಾಘವೇಂದ್ರ ರಾಜ್ಕುಮಾರ್.


Click it and Unblock the Notifications











